ಪಶ್ಚಿಮ ಬಂಗಾಳದ ಕಾಲಿಂಪಾಂಗ್‌ನಲ್ಲಿ ರವೀಂದ್ರನಾಥ ಟ್ಯಾಗೋರ್‌ ಅವರ ನೆಚ್ಚಿನ ತಾಣವಾಗಿದ್ದ ಐತಿಹಾಸಿಕ ಗೌರೀಪುರ ಹೌಸ್‌ ಶೀಘ್ರದಲ್ಲೇ ಹೊಸ ಪ್ರವಾಸಿ ಆಕರ್ಷಣೆಯಾಗಿ ತೆರೆದುಕೊಳ್ಳಲಿದೆ.

1 (7)

ಕಾಲಿಂಪಾಂಗ್ ಪಟ್ಟಣದ ವಾರ್ಡ್‌ 18ರ ಅಪ್ಪರ್ ಕಾರ್ಟ್‌ ರಸ್ತೆಯಲ್ಲಿರುವ ಈ ಎರಡು ಅಂತಸ್ತಿನ ಪಾರಂಪರಿಕ ಕಟ್ಟಡವು 1990ರ ದಶಕದ ಆರಂಭದಿಂದ ನಿರ್ಲಕ್ಷ್ಯಕ್ಕೊಳಗಾಗಿತ್ತು. ಇದೀಗ ರಾಜ್ಯ ಲೋಕೋಪಯೋಗಿ ಇಲಾಖೆ, ರಾಜ್ಯ ಪಾರಂಪರಿಕ ಆಯೋಗ ಹಾಗೂ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ಜಂಟಿಯಾಗಿ ಇದರ ಪುನಶ್ಚೇತನ ಕಾರ್ಯ ಕೈಗೊಂಡಿವೆ.

ಸುಮಾರು 2.8 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ನೆಲಹಾಸು, ಶೌಚಾಲಯ ಮತ್ತು ನೈರ್ಮಲ್ಯ ವ್ಯವಸ್ಥೆ ಸುಧಾರಣೆ, ಚಾವಣಿ ಹಾಗೂ ಮರದ ಸೀಲಿಂಗ್‌ ದುರಸ್ತಿ ಮತ್ತು ಹೊರಭಾಗಕ್ಕೆ ಬಣ್ಣ ಬಳಿಯುವ ಕೆಲಸಗಳು ಸೇರಿವೆ. ಈಗಾಗಲೇ ಸುಮಾರು ಶೇ.80ರಷ್ಟು ಪುನಶ್ಚೇತನ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ.

ಗೌರೀಪುರದ ಜಮೀನ್ದಾರರು ನಿರ್ಮಿಸಿದ್ದ ಈ ಮನೆಯಲ್ಲಿ ಟ್ಯಾಗೋರ್‌ 1938ರಿಂದ 1940ರ ನಡುವೆ ಹಲವು ಬಾರಿ ತಂಗಿದ್ದರು. 1938ರಲ್ಲಿ ತಮ್ಮ 78ನೆಯ ಹುಟ್ಟುಹಬ್ಬವನ್ನು ಇಲ್ಲಿಯೇ ಆಚರಿಸಿ ‘ಜನ್ಮದಿನ’ ಕವಿತೆಯನ್ನು ವಾಚಿಸಿದ್ದರು. ಆ ವಾಚನವನ್ನು ಆಲ್‌ ಇಂಡಿಯಾ ರೇಡಿಯೊ, ಕೊಲ್ಕತ್ತಾ ನೇರ ಪ್ರಸಾರ ಮಾಡಿತ್ತು.

ಅರುಣಾಚಲೇಶ್ವರ ಮತ್ತು ರಮಣ ಮಹರ್ಷಿಗಳ ಕ್ಷೇತ್ರದರ್ಶನ

ಭವಿಷ್ಯದಲ್ಲಿ ಇಲ್ಲಿ ಟ್ಯಾಗೋರ್‌ಗೆ ಸಂಬಂಧಿಸಿದ ವಸ್ತುಗಳ ವಸ್ತುಸಂಗ್ರಹಾಲಯ ಸ್ಥಾಪಿಸುವ ಹಾಗೂ ಸ್ಥಳೀಯ ಮಾರ್ಗದರ್ಶಕರಿಗೆ ತರಬೇತಿ ನೀಡುವ ಯೋಜನೆಯೂ ಇದೆ. ಇದರಿಂದ ಕಾಲಿಂಪಾಂಗ್‌ನ ಪ್ರವಾಸೋದ್ಯಮಕ್ಕೆ ಐತಿಹಾಸಿಕ ಮತ್ತು ಸಾಹಿತ್ಯಿಕ ಆಯಾಮ ಮತ್ತಷ್ಟು ಸೇರ್ಪಡೆಯಾಗಲಿದೆ.