ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..
ಬಾಲಿವುಡ್ನಲ್ಲಿ ತೆರೆಕಂಡಿದ್ದ ಶೋಲೆ ಸಿನಿಮಾದಲ್ಲಿ ಗಬ್ಬರ್ ಸಿಂಗ್ ಎಂಬ ಡಯಾಯಿತನ ಅಡಗುತಾಣವಾಗಿ ಕಾಣಿಸಿಕೊಂಡಿದ್ದು ರಾಮನಗರ ಬೆಟ್ಟ. ಈ ಸಿನಿಮಾ ತೆರೆಕಂಡ ನಂತರ ರಾಮನಗರದ ಬೆಟ್ಟಗಳು ಶೋಲೇ ಹಿಲ್ಸ್ ಎಂಬುದಾಗಿಯೂ ಖ್ಯಾತಿಯನ್ನು ಪಡೆದುಕೊಂಡಿದೆ.
ರಸ್ತೆಗಳ ಇಕ್ಕೆಲಗಳಲ್ಲೂ ಬೃಹದಾಕಾದರ ಬಂಡೆಗಳು.. ತನ್ನ ಒಡಲಿನಲ್ಲಿ ಇತಿಹಾಸವನ್ನು ಹೊತ್ತು ವನಸಿರಿಯನ್ನು ಮೈಗಂಟಿಸಿಕೊಂಡು ನಿಂತಿರುವ ಬೆಟ್ಟ ಗುಡ್ಡಗಳು..ಅವುಗಳ ತುತ್ತತುದಿಯಲ್ಲಿ ಕಾಣಸಿಗುವ ವರ್ಷಗಳ ಇತಿಹಾಸವಿರುವ ದೇಗುಲಗಳು.. ಪ್ರಕೃತಿಯ ಇಂತಹ ನೈಜ ಕೆತ್ತನೆಗಳನ್ನು ನೋಡಬೇಕಾದರೆ ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ 48 ಕಿ.ಮೀ ದೂರವಿರುವ ರಾಮನಗರಕ್ಕೆ ಭೇಟಿ ನೀಡಬೇಕು.
ಟಿಪ್ಪುಸುಲ್ತಾನ್ ಆಳ್ವಿಕೆಯ ಸಂದರ್ಭದಲ್ಲಿ ʻಶಂಸೆರಾಬಾದ್ʼ ಎಂದು ಕರೆಯಲ್ಪಡುತ್ತಿದ್ದ ಈ ಪಟ್ಟಣವನ್ನು ನಂತರ ಕೆಂಗಲ್ ಹನುಮಂತಯ್ಯನವರು ʻರಾಮನಗರʼ ಎಂದು ಮರುನಾಮಕರಣ ಮಾಡಿದರು. ರೇಷ್ಮೆ ಕೃಷಿಗಾಗಿ ಹೆಸರುವಾಸಿಯಾದ ರಾಮನಗರ ಜಿಲ್ಲೆ ʻಸಿಲ್ಕ್ ಟೌನ್ʼ ಇಲ್ಲವೇ ʻಸಿಲ್ಕ್ ಸಿಟಿʼ ಎಂಬ ಹೆಸರನ್ನು ಪಡೆದುಕೊಂಡಿದೆ.
ಇವೆಲ್ಲದರ ಜೊತೆಗೆ ಪ್ರಸಿದ್ಧ ಹಿಂದಿ ಸಿನಿಮಾ ಶೋಲೆ, ಈ ಬೆಟ್ಟಗಳ ಸುತ್ತಲೂ ಚಿತ್ರೀಕರಣಗೊಂಡಿದ್ದು, ಗಬ್ಬರ್ ಸಿಂಗ್ ಎಂಬ ಡಯಾಯಿತನ ಅಡಗುತಾಣವಾಗಿ ಕಾಣಿಸಿಕೊಂಡಿದ್ದ ಈ ಪ್ರದೇಶವನ್ನು ತೆರೆಯ ಮೇಲೆ ಕಂಡ ಚಿತ್ರಪ್ರೇಮಿಗಳು ಒಂದು ಕ್ಷಣಕ್ಕೆ ಈ ಸನ್ನಿವೇಶವನ್ನು ಚಂಬಲ್ ಕಣಿವೆಯಲ್ಲಿ ಚಿತ್ರೀಕರಿಸಿರಬಹುದೇ ಎಂದು ಯೋಚಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಸಿನಿಮಾ ತೆರೆಕಂಡ ನಂತರ ರಾಮನಗರದ ಬೆಟ್ಟಗಳು ಶೋಲೇ ಹಿಲ್ಸ್ ಎಂಬುದಾಗಿಯೂ ಖ್ಯಾತಿಯನ್ನು ಪಡೆದುಕೊಂಡಿದೆ. ಬೆಟ್ಟ ಗುಡ್ಡಗಳ ಊರಾದ ರಾಮನಗರ ಜಿಲ್ಲೆಯು ತನ್ನೊಳಗೆ ಹೊತ್ತುಕೊಂಡಿರುವ ಹತ್ತು ಹಲವು ಬೆಟ್ಟಗಳ ಪರಿಚಯ ಇಲ್ಲಿದೆ..
ಸಾವನ ದುರ್ಗ :
ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂಬ ಖ್ಯಾತಿ ಪಡೆದಿರುವ ಸಾವನದುರ್ಗ ಬೆಟ್ಟವು ಬೆಂಗಳೂರಿನಿಂದ ಪಶ್ಚಿಮಕ್ಕೆ 50 ಕಿಮೀ ದೂರದಲ್ಲಿದೆ. ಸಾವನದುರ್ಗದ ಇತಿಹಾಸವು 14ನೇ ಶತಮಾನಕ್ಕೆ ಹಿಂದಿನದ್ದು. 3ನೇ ಹೊಯ್ಸಳ ರಾಜ ಬಲ್ಲಾಳ ಈ ಬೆಟ್ಟಕ್ಕೆ ಸಾವಂತಿ ಎಂದು ಹೆಸರಿಟ್ಟಿದ್ದರಂತೆ. ನಂತರ ಸಾವನದುರ್ಗ ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ಅಧೀನದಲ್ಲಿತ್ತು. ಚಕ್ರವರ್ತಿಗಳು ನಿರ್ಮಿಸಿದ ಕೋಟೆಗಳ ಅವಶೇಷಗಳನ್ನು ಬೆಟ್ಟದ ಮೇಲೆ ಕಾಣಬಹುದು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರಸ್ವಾಮಿ, ನರಸಿಂಹಸ್ವಾಮಿ ದೇವಸ್ಥಾನಗಳಿವೆ. ಬೆಟ್ಟ ಬಹಳ ಕಡಿದಾಗಿದ್ದು, ಸಾಹಸಿಗಳು ಮಾತ್ರ ಏರಬಹುದಾಗಿದೆ.
ರೇವಣ ಸಿದ್ದೇಶ್ವರ ಬೆಟ್ಟ :
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ಗ್ರಾಮದ ಸಮೀಪದಲ್ಲಿ ಕಾಣಸಿಗುವ ಏಕಶಿಲಾ ಬೆಟ್ಟವಿದು. ಬೆಂಗಳೂರಿನಿಂದ 60 ಕಿಮೀ ದೂರವಿರುವ ಈ ಜಾಗದಲ್ಲಿ ರೇವಣ ಸಿದ್ದೇಶ್ವರರೆಂಬ ಯತೀಶ್ವರರು ಅನೇಕ ಕಾಲದಿಂದಲೂ ನೆಲೆಸಿ, ಸತ್ಕಾರ್ಯಗಳನ್ನು ಮಾಡುತ್ತಾ ಸಿದ್ದಗಿರಿಯನ್ನಾಗಿಸಿದ್ದರಿಂದ ಈ ಪ್ರವಾಸಿ ತಾಣಕ್ಕೆ `ರೇವಣಸಿದ್ದೇಶ್ವರ ಬೆಟ್ಟ' ಎಂಬ ಹೆಸರು ಬಂತು. ಈ ಬೆಟ್ಟದ ಸುತ್ತಲೂ ಅನೇಕ ದೇವಾಲಯಗಳಿದ್ದು, ಮುಖ್ಯದ್ವಾರದಲ್ಲಿ ಗುಹಾಂತರ ದೇವಾಲಯ ಹಾಗೂ ಅಲ್ಲೇ ಉದ್ಭವವಾದುದೆಂದು ಹೇಳಲಾಗುವ ಅರ್ಧ ಅಡಿ ರೇವಣಸಿದ್ದೇಶ್ವರರ ಶಿಲಾಲಿಂಗವಿದೆ. ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಇಲ್ಲಿ ಕೆಲ ಕಾಲ ವಾಸವಿದ್ದು, ಈ ವೇಳೆ ಭೀಮನು ಬೆಟ್ಟದ ಮೇಲೆ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರಿಂದ ಈ ಬೆಟ್ಟಕ್ಕೆ `ಭೀಮೇಶ್ವರ ಬೆಟ್ಟ' ಎಂಬ ಹೆಸರು ಬಂತೆಂಬ ಪ್ರತೀತಿಯೂ ಇದೆ.
ರಾಮದೇವರ ಬೆಟ್ಟ:
ದಕ್ಷಿಣದ ಚಿತ್ರಕೂಟ ಎಂದೇ ಪ್ರಖ್ಯಾತವಾಗಿರುವ ರಾಮದೇವರ ಬೆಟ್ಟವು ಬೆಂಗಳೂರಿನಿಂದ 50 ಕಿಮೀ ದೂರದಲ್ಲಿದ್ದು, ರಾಮನಗರದಿಂದ 4 ಕಿಮೀ ಅಂತರದಲ್ಲಿದೆ. ಬೆಟ್ಟದ ಪ್ರಾರಂಭದಲ್ಲಿ ಆಂಜನೇಯನ ಉದ್ಭವ ಮೂರ್ತಿಯ ಜೊತೆಗೆ ಏಕಶಿಲೆಯಲ್ಲಿ ಕೆತ್ತಲಾದ ಶ್ರೀರಾಮ ದೇವರು, ಸೀತಾ ಲಕ್ಷಣ ಸಮೇತರಾಗಿರುವುದನ್ನು ಕಾಣಬಹುದು. ಬೆಟ್ಟದ ಮೇಲೆ ಪಟ್ಟಾಭಿರಾಮನ ಪುರಾತನ ದೇವಾಲಯ, ರಾಮೇಶ್ವರ ದೇವಾಲಯ ಹಾಗೂ ಆಂಜನೇಯನ ದೇವಾಲಯಗಳಿವೆ. ಪಟ್ಟಾಭಿರಾಮ ದೇಗುಲದ ಮುಂಭಾಗದಲ್ಲಿರುವ ಬೃಹದಾಕಾರದ ಏಳು ಬಂಡೆಗಳು ಸಪ್ತ ಋಷಿಗಳ ಸಂಕೇತವೆಂದು ಹೇಳಲಾಗುತ್ತದೆ. ವನವಾಸದ ಸಂದರ್ಭದಲ್ಲಿ ಶ್ರೀರಾಮನು ಸೀತಾ ಲಕ್ಷ್ಮಣರ ಜೊತೆಯಲ್ಲಿ ಒಂದು ವರ್ಷಕ್ಕೂ ಹೆಚ್ಚುಕಾಲ ಈ ಬೆಟ್ಟದಲ್ಲಿ ತಂಗಿದ್ದರು ಎಂಬ ಪ್ರತೀತಿ ಇದೆ. ಪಟ್ಟಾಭಿರಾಮ ದೇಗುಲದ ಆವರಣದಲ್ಲಿ ಒಂದು ಕೊಳವಿದ್ದು, ವನವಾಸದ ಸಂದರ್ಭದಲ್ಲಿ ಸೀತಾ ಮಾತೆಗೆ ಬಾಯಾರಿಕೆಯಾಗಿದ್ದರಿಂದ ಶ್ರೀರಾಮನು ಬಾಣ ಹೊಡೆದು ಪಾತಾಳಗಂಗೆಯನ್ನು ಹೊರತೆಗೆದನು ಎಂದು ಪುರಾಣದಲ್ಲಿ ಹೇಳಲಾಗಿದೆ. ಇದನ್ನೇ ರಾಮತೀರ್ಥ ಎನ್ನಲಾಗುತ್ತದೆ. ಇಲ್ಲಿಯ ವಿಸ್ಮಯವೆಂದರೆ ಈ ಪ್ರದೇಶದಲ್ಲಿ ಕಾಗೆಗಳು ಕಾಣಸಿಗುವುದಿಲ್ಲ. ವನವಾಸದ ಸಂದರ್ಭದಲ್ಲಿ ಕಾಕಾಸುರನು ಸೀತಾಮಾತೆಯನ್ನು ಕೆಣಕಿದಾಗ, ಕೋಪಗೊಂಡ ಶ್ರೀರಾಮನು ಕಾಕಾಸುರನ ಕಣ್ಣನ್ನು ಬಾಣದಿಂದ ಹೊಡೆದು ಕಿತ್ತು ಹಾಕುತ್ತಾನೆ. ಅಂದಿನಿಂದ ಈ ಸ್ಥಳದಲ್ಲಿ ಕಾಗೆಗಳು ಹಾರಾಡುವುದಿಲ್ಲ ಎಂಬ ಐತಿಹ್ಯವಿದೆ. ಈ ಬೆಟ್ಟದ ಮತ್ತೊಂದು ವಿಶೇಷವೇನೆಂದರೆ, ದೇಶದ ಏಕೈಕ ರಣಹದ್ದು ಸಂರಕ್ಷಣಾ ತಾಣವಾಗಿದೆ. ರಾಮಾಯಣದ ಕಾಲದ ಜಟಾಯು ಪಕ್ಷಿಯ ಆವಾಸ ಸ್ಥಾನವಾಗಿರುವುದರಿಂದ ಇಂದಿಗೂ ಸಹ ಹೆಚ್ಚಿನ ಸಂಖ್ಯೆಯ ರಣಹದ್ದುಗಳು ಇಲ್ಲಿ ಕಾಣಸಿಗುತ್ತವೆ. ಸಮುದ್ರ ಮಟ್ಟದಿಂದ 1000 ಅಡಿಗಳಿಗಿಂತ ಎತ್ತರದಲ್ಲಿರುವ ಈ ಬೆಟ್ಟ ಚಾರಣ ಪ್ರಿಯರಿಗೆ ಉತ್ತಮ ಆಯ್ಕೆವಾಗಿದೆ.
ಕಬ್ಬಾಳು ಬೆಟ್ಟ:
ರಾಮನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಬ್ಬಾಳು ಬೆಟ್ಟ ಕನಕಪುರದಿಂದ 10 ಕಿ.ಮೀ. ದೂರದಲ್ಲಿದೆ. ನೆಲಮಟ್ಟದಿಂದ 1300 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ತುಂಬಾ ಕಡಿದಾಗಿದ್ದು, ಇಲ್ಲೊಂದು ಪುರಾತನ ಕೋಟೆಯಿದೆ. ಹಿಂದೆ ಈ ಕೋಟೆಯಲ್ಲಿ ಅಪರಾಧಿಗಳನ್ನು ಬಂಧಿಸಿಡುತ್ತಿದ್ದರು ಎನ್ನಲಾಗುತ್ತದೆ. ಇಲ್ಲಿ ಕಬ್ಬಾಳಮ್ಮ ದೇವಿಯ ಸುಂದರವಾದ ದೇವಾಲಯವಿದ್ದು, ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳು ಹಾಗೂ ವಸತಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಧಾರ್ಮಿಕ ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ಸ್ಥಳವಾಗಿದೆ.
ನರಸಿಂಹಸ್ವಾಮಿ ಬೆಟ್ಟ:
ಮೈಸೂರು ಕಡೆಯಿಂದ ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ರಾಮನಗರಕ್ಕೆ 10 ಕಿಮೀ ಮೊದಲೇ ಬಲಕ್ಕೆ ತೆರಳಿದಾಗ ಕೇವಲ 2 ಕಿಮೀ ದೂರದಲ್ಲಿ ಈ ಬೆಟ್ಟವಿದ್ದು ಚಾರಣ ಪ್ರಿಯರ ನೆಚ್ಚಿನ ಪ್ರವಾಸಿ ತಾಣವಾಗಿದೆ. ಬೆಟ್ಟದ ಮೇಲಿರುವ 1200 ವರ್ಷ ಹಳೆಯದಾದ ಕೃಷ್ಣಶಿಲೆಯ ವಿಗ್ರಹ, ನರಸಿಂಹಸ್ವಾಮಿ ದೇವಾಲಯ ಈಗ ಆಧುನೀಕರಣಗೊಂಡಿದ್ದರೂ ಪ್ರವಾಸಿಗರನ್ನು ಆಕರ್ಷಿಸುವಂತಿದೆ. ಇಲ್ಲಿ ಕಣ್ವ ಮಹರ್ಷಿಗಳು ಘೋರ ತಪಸ್ಸು ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀನರಸಿಂಹಸ್ವಾಮಿಯು ಅಲ್ಲಿದ್ದ ಕಲ್ಲಿನ ಕಂಬದಿಂದ ಪ್ರತ್ಯಕ್ಷನಾಗಿ ಕಣ್ವರಿಗೆ ದರ್ಶನವಿತ್ತರೆಂಬ ಕಥೆಯನ್ನು ದೇವಾಲಯದ ಭಕ್ತರು ಹೇಳುತ್ತಾರೆ.
ನಾರಾಯಣಗಿರಿ ಬೆಟ್ಟ:
ಬೆಂಗಳೂರಿನಿಂದ 76 ಕಿಮೀ ದೂರದಲ್ಲಿರುವ ಜಲಮಂಗಲ ಗ್ರಾಮದಲ್ಲಿ ಕಾಣಸಿಗುವ ಏಕಶಿಲೆ ನಾರಾಯಣಗಿರಿ ಬೆಟ್ಟ. ಈ ಶಿಖರವು ಲಕ್ಷ್ಮಿ-ನಾರಾಯಣ ದೇವಸ್ಥಾನಕ್ಕೆ ನೆಲೆಯಾಗಿದೆ. ಕಣ್ಣಹಾಯಿಸಿದಲ್ಲೆಲ್ಲಾ ಹಸಿರು, ರಾಶಿ ರಾಶಿ ಕಲ್ಲು ಮತ್ತು ಪ್ರಶಾಂತತೆಯ ನೆಲೆಬೀಡಿನಂತಿರುವ ನಾರಾಯಣಗಿರಿ ಬೆಟ್ಟ ವಾರಾಂತ್ಯದ ವಿಹಾರಕ್ಕೆ ಸೂಕ್ತವಾದ ಸ್ಥಳ. ಈ ಪರ್ವತಗಳ ಮೇಲ್ಭಾಗದಲ್ಲಿ ಸಣ್ಣ ನೀರಿನ ಕೊಳಗಳನ್ನು ಕಾಣಬಹುದು. ಸಮುದ್ರ ಮಟ್ಟದಿಂದ 3845 ಅಡಿ ಎತ್ತರದಲ್ಲಿರುವ ಈ ಬೆಟ್ಟದ ಮೇಲ್ಭಾಗದಲ್ಲಿ ಪುಟ್ಟದಾದ ದೇವಾಲಯವಿದ್ದು ಗ್ರಾಮಸ್ಥರೇ ಅಚ್ಚುಕಟ್ಟಾಗಿ ಕಾಪಾಡಿಕೊಳ್ಳುತ್ತಿದ್ದಾರೆ.
ಕಾಲಭೈರವೇಶ್ವರ ಸ್ವಾಮಿ ಬೆಟ್ಟ :
ಬೆಂಗಳೂರಿನಿಂದ ಸರಿಸುಮಾರು 50 ಕಿಮೀ ಆರೋಹಳ್ಳಿಯಿಂದ 13ಕಿಮೀ ದೂರದಲ್ಲಿರುವ ಅಣ್ಣಹಳ್ಳಿ ಸಮೀಪದ ಕಾಲಭೈರೇಶ್ವರ ಸ್ವಾಮಿ ಬೆಟ್ಟವು ಅಷ್ಟಾಗಿ ಜನರಿಗೆ ಚಿರಪರಿಚಿತವಾಗಿಲ್ಲ. ಕಾಲಭೈರೇಶ್ವರ ಸ್ವಾಮಿ ಬೆಟ್ಟವು ಅಣ್ಣಹಳ್ಳಿ ಸರೋವರದಿಂದ ಆವೃತವಾಗಿದ್ದು, ಬೆಟ್ಟದ ಮೇಲ್ಬಾಗದಲ್ಲಿ ಕಾಲಭೈರವೇಶ್ವರನ ಗುಡಿಯೊಂದಿದೆ. ಪ್ರಕೃತಿ ರಮಣೀಯವಾಗಿರುವ ಈ ಬೆಟ್ಟವು ಚಾರಣಕ್ಕೆ ಯೋಗ್ಯವಾದ ಸ್ಥಳವಾಗಿದ್ದು,ಟ್ರಕ್ಕಿಂಗ್ ನಿಯಮಗಳನ್ನು ಪಾಲಿಸಿದರೆ ಸಾಕು ಅಷ್ಟೇ.
ಜಲ ಸಿದ್ದೇಶ್ವರ ಬೆಟ್ಟ:
ರಾಮನಗರದಿಂದ 4 ಕಿಮೀ ದೂರದಲ್ಲಿರುವ ಜಲ ಸಿದ್ದೇಶ್ವರ ಬೆಟ್ಟವು ವಿಶೇಷವಾದ ಪುರಾತನ ಗುಹಾಂತರ ದೇಗುಲವನ್ನು ಹೊಂದಿದ್ದು, ಈ ಗುಹೆಯ ಒಳಗಡೆಯಿರುವ ಬಂಡೆಯೊಳಗಿನ ಹನ್ನೊಂದು ರಂದ್ರಗಳ ಮೂಲಕ ಹರಿದು ಬರುವ ನೀರು ಅಲ್ಲಿರುವ ಹನ್ನೊಂದು ಲಿಂಗಗಳ ಮೇಲೆ ಬೀಳುವುದೇ ಈ ಬೆಟ್ಟದ ವೈಶಿಷ್ಟ್ಯ. ಈ ಬೆಟ್ಟಕ್ಕೆ ಜಲ ಸಿದ್ದೇಶ್ವರ ಬೆಟ್ಟ ಎಂಬ ಹೆಸರು ಬರಲು ಕಾರಣವೂ ಇದೇ ಐತಿಹ್ಯ. ಮಳೆ ಬಾರದ ಸಂದರ್ಭದಲ್ಲಿ ಈ ಜಲಸಿದ್ದೇಶ್ವರನನ್ನು ಪೂಜಿಸಿ, ಸೋಮವಾರದಂದು ಕುಂಭಾಭಿಷೇಕ ಮಾಡುವುದರಿಂದ ಮಳೆ ಬರುವುದೆಂಬ ನಂಬಿಕೆಯೂ ಇಲ್ಲಿನ ಜನರಲ್ಲಿದೆ.
ಭೀಮನ ಕಿಂಡಿ ಬೆಟ್ಟ:
ಕಷ್ಟಕರವಾದ ಚಾರಣವನ್ನು ಮಾಡಬಯಸುವ ಟ್ರೆಕ್ಕಿಂಗ್ ಪ್ರಿಯರು ಹೋಗಲೇಬೇಕಾದ ಸ್ಥಳವೆಂದರೆ ಕನಕಪುರ ತಾಲ್ಲೂಕಿನ ಕಂಚಗಾರನಹಳ್ಳಿ ಸಮೀಪವಿರುವ ಭೀಮನಕಿಂಡಿ ಬೆಟ್ಟ. ಮಹಾಭಾರತದ ಭೀಮನಿಗೂ ಈ ಬೆಟ್ಟಕ್ಕೂ ಸಂಬಂಧವಿದೆ ಎಂದು ಹೇಳಲಾಗುತಿದ್ದು, ಪಾಂಡವರು ತಮ್ಮ ತಾಯಿಯ ಜೊತೆಗೆ ಇಲ್ಲಿ ಬಂದು ವಾಸವಿದ್ದರು ಎಂಬ ಇತಿಹಾಸವೂ ಇದೆ. ಬೆಟ್ಟದ ಮೇಲೆ ಭೀಮ ಉಳುಮೆ ಮಾಡಿತ್ತಿದ್ದು, ಈ ವೇಳೆ ಕುಂತಿ ಊಟವನ್ನು ಹೊತ್ತು ತರುತ್ತಿದ್ದಳಂತೆ. ಆಗ ಬಂಡೆಯೊಂದು ಅಡ್ಡವಾಗಿ ಬಂದಿದ್ದರಿಂದ ಅದನ್ನು ತನ್ನ ಗದೆಯಿಂದ ಒಡೆದು ಸುಂದರವಾದ ಕಮಾನು ನಿರ್ಮಿಸಿದನೆಂಬ ನಂಬಿಕೆ ಇಲ್ಲಿನವರದ್ದು.

ಬಿಳಿಕಲ್ ಬೆಟ್ಟ:
ಬೆಟ್ಟದ ಮೇಲೆ ಕುಳಿತು ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಸವಿಯಬಯಸುವ ಮಂದಿ, ಬೆಂಗಳೂರಿನಿಂದ 70 ಕಿಮೀ ದೂರದಲ್ಲಿರುವ ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟಕ್ಕೆ ಭೇಟಿಕೊಡಲೇಬೇಕು. ಬೃಹತ್ ಗ್ರಾನೈಟ್ ಬಂಡೆ ದೇವಾಲಯಕ್ಕೆ ಅಡಿಪಾಯವಾಗಿದ್ದು, ನೆಲದಿಂದ 3780 ಅಡಿ ಎತ್ತರದಲ್ಲಿ ಈ ಬೆಟ್ಟವಿದೆ.
ಅಚ್ಚಲು ಬೆಟ್ಟ:
ಬೆಂಗಳೂರಿನಿಂದ ಸುಮಾರು 75 ಕಿಮೀ ದೂರದ ಅಚ್ಚಲು ಗ್ರಾಮದಲ್ಲಿರುವ ಈ ಬೆಟ್ಟ ಬೃಹದಾಕಾರದ ನಂದಿ ವಿಗ್ರಹ ಹಾಗೂ ಮುನೇಶ್ವರ ದೇವಾಲಯವನ್ನು ಹೊಂದಿದೆ. ನೆಲಮಟ್ಟದಿಂದ ಸುಮಾರು 1000 ಅಡಿ ಎತ್ತರವಿರುವ ಈ ಬೆಟ್ಟವು ಚಾರಣಕ್ಕೆ ಹೇಳಿಮಾಡಿಸಿದಂತಹ ಸ್ಥಳ. ಬೆಟ್ಟದಲ್ಲಿ ರಾಜರ ಆಳ್ವಿಕೆ ಹಾಗೂ ಜನವಸತಿ ಇತ್ತು ದಕ್ಕೆ ಕೋಟೆ, ಕೆತ್ತನೆಗಳು, ಒರಳಗಲ್ಲು, ಬೇಸಿಗೆಯಲ್ಲೂ ತಂಪಾಗಿರುವ ಸಿಹಿ ನೀರಿನ ಕಲ್ಯಾಣಿ, ಹೊನ್ನಾರುತ್ತಮ್ಮ ದೇವಾಲಯಗಳೇ ಸಾಕ್ಷಿ.
ತಿಮ್ಮಪ್ಪನ ಬೆಟ್ಟ :
ರಾಮನಗರದ ಜಿಲ್ಲೆಯಿಂದ 9 ಕಿಮೀ ದೂರದಲ್ಲಿರುವ ಕೂಟಗಲ್ ಗ್ರಾಮದಲ್ಲಿ ತಿಮ್ಮಪ್ಪನ ಬೆಟ್ಟವಿದೆ. ಕಣ್ವ ಮಹರ್ಷಿಗಳು ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಬರುವ ವೇಳೆ ಈ ಜಾಗದಲ್ಲೂ ತಪ್ಪಸ್ಸಿಗೆ ಕುಳಿತಿದ್ದು, ಮಹಾ ವಿಷ್ಣುವು ದಕ್ಷಿಣಾಭಿಮುಖವಾಗಿ ದರ್ಶನ ನೀಡಿದ್ದರಂತೆ. ಈ ಕಾರಣದಿಂದಾಗಿ ಕಣ್ವ ಮಹರ್ಷಿಗಳು ದಕ್ಷಿಣಾಭಿಮುಖವಾಗಿಯೇ ಸಾಲಿಗ್ರಾಮ ರೂಪದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ, ಮೋಕ್ಷ ಪಡೆದರು ಎಂಬ ಐತಿಹ್ಯವಿದೆ.
ಯತಿರಾಯಸ್ವಾಮಿ ಬೆಟ್ಟ:
ರಾಮನಗರದಿಂದ ಸುಮಾರು 10ಕಿಮೀ ದೂರದ ಕೂನುಮುದ್ದನಹಳ್ಳಿ ಸಮೀಪವಿರುವ ಯತಿರಾಯಸ್ವಾಮಿ ಬೆಟ್ಟವು ಶ್ರೀ ಯತಿಸ್ವಾಮಿ ದೇಗುಲವ ಮೂಲಕ ಖ್ಯಾತಿಗೊಂಡಿದೆ. ದೇವಸ್ಥಾನದಲ್ಲಿರುವ ಹಲ್ಲಿಯೊಂದು ಭಕ್ತರ ಆಗಮನದ ಸೂಚನೆ ನೀಡಿದರೆ ಮಾತ್ರ ಆ ದಿನದಂದು ದೇವಸ್ಥಾನವನ್ನು ಅಲ್ಲಿನ ಅರ್ಚಕರು ತೆರೆಯುತ್ತಾರೆ ಎಂಬ ನಂಬಿಕೆಯೂ ಇದೆ.
ವಾಡೆ ಮಲ್ಲೇಶ್ವರ ಬೆಟ್ಟ:
12ನೇ ಶತಮಾನದಲ್ಲಿ ಬೆಳಕಿಗೆ ಬಂದ ವಾಡೆ ಮಲ್ಲೇಶ್ವರ ಬೆಟ್ಟವು, ಚಾರಣಿಗರನ್ನು ಇಂದಿಗೂ ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಬೆಟ್ಟ ಏರುವ ನಡುವೆ ಬಂಡೆಗಳ ನಡುವೆ ಚಿಕ್ಕದಾದ ಒಂದು ದೇಗುಲವಿದ್ದು, ಬಂಡೆಯಡಿಯಲ್ಲಿರುವ ಈ ಶಿವಲಿಂಗಕ್ಕೆ ಪ್ರತೀ ಸೋಮವಾರ ಹಾಗೂ ಶುಕ್ರವಾರದಂದು ವಿಶೇಷ ಪೂಜೆ ನಡೆಯುತ್ತದೆ. ಬೆಂಗಳೂರಿನಿಂದ ಒಂದು ದಿನದ ಸುಲಭದ ಚಾರಣ ಮಾಡಬೇಕು ಎಂದುಕೊಂಡವರು ತಪ್ಪದೇ ಭೇಟಿ ನೀಡಬೇಕಿರುವ ಸ್ಥಳವಿದು.
ಹೆಸರೇ ಹೇಳುವಂತೆ ಇದು ಬೃಹದಾಕಾರದ ಬಂಡೆಗಳು, ಬೆಟ್ಟಗಳ ತಾಣವಾಗಿದ್ದು, ಇನ್ನೂ ಅನೇಕ ಸಣ್ಣ ಪುಟ್ಟ ಬೆಟ್ಟಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಕೂನಗಲ್ ಗ್ರಾಮದಲ್ಲಿರುವ ಬೆಟ್ಟ, ಕೃಷ್ಣಗಿರಿ ಬೆಟ್ಟ, ಸಿದ್ದೇಶ್ವರ ಸ್ವಾಮಿ ಬೆಟ್ಟ, ಬೆಟ್ಟದ ತಿಮ್ಮಪ್ಪ ಸ್ವಾಮಿ ಬೆಟ್ಟ, ರಾಮೇಶ್ವರ ಬೆಟ್ಟ, ಗವಿ ಸಿದ್ದೇಶ್ವರ ಬೆಟ್ಟ ಹೀಗೆ ಸಾಲು ಸಾಲು ಬೆಟ್ಟಗಳಿಗೆ ಚಾರಣಪ್ರಿಯರು ಭೇಟಿ ನೀಡಬಹುದು. ಆದರೆ ಚಾರಣದ ನಡುವೆ ಪ್ರಕೃತಿಮಾತೆಯ ಸುಂದರ ಒಡಲನ್ನು ಕಲುಷಿತಗೊಳ್ಳಿಸದಿರಿ ಎಂಬುದೇ ಸದಾಶಯ.