ಇಸ್ರೇಲಿನ ರಾಜಧಾನಿ ಜೆರುಸಲೆಮ್ ನಗರದ ಮಧ್ಯಭಾಗದಲ್ಲಿರುವ, ಯಹೂದಿಯರ ಪವಿತ್ರ ಸ್ಥಳವಾದ 'ವೆಸ್ಟರ್ನ್ ವಾಲ್' ಗೂ, ನನಗೂ ಅವಿನಾಭಾವ ಸಂಬಂಧ. ನಾನು ಪ್ರತಿ ಸಲ ಇಸ್ರೇಲಿಗೆ ಹೋದಾಗಲೆಲ್ಲ ಅಲ್ಲಿಗೆ ಹೋಗಿದ್ದೇನೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮೊದಲ ಬಾರಿಗೆ 2017 ರ ಜುಲೈನಲ್ಲಿ ಇಸ್ರೇಲಿಗೆ ಭೇಟಿ ನೀಡಿದಾಗ, ದಿನವಿಡೀ ಬಿಡುವಿಲ್ಲದ ಕಾರ್ಯಕ್ರಮ ಹಾಗೂ ಆ ಕಾರ್ಯಕ್ರಮಗಳ ವರದಿ ಮಾಡಿ ಆಫೀಸಿಗೆ ಕಳಿಸುವ ತರಾತುರಿ. ಅದಾದ ಬಳಿಕ, ಜೆರುಸಲೆಮ್ ನಿಂದ ಟೆಲ್ ಅವಿವ್ ಗೆ ಪಯಣ. ಅಲ್ಲಿಂದ ವಿಮಾನವೇರಿ ಬೆಂಗಳೂರಿಗೆ ಬರಬೇಕು. ಈ ಮಧ್ಯೆ ನನಗೆ ನಾಲ್ಕು ಗಂಟೆ ಸಮಯವಿತ್ತು. ನಾನು ಒಂದು ಟ್ಯಾಕ್ಸಿ ಮಾಡಿಕೊಂಡು ಪುನಃ ಜೆರುಸಲೆಮ್ ಗೆ ಹೋಗಿ, ವೆಸ್ಟರ್ನ್ ವಾಲ್ ಗೆ ಹಣೆಹಚ್ಚಿ ಪ್ರಾರ್ಥನೆ ಬಂದೆ. ನಾನು ಇಲ್ಲಿ ತನಕ ಇಸ್ರೇಲಿಗೆ ಹನ್ನೊಂದು ಬಾರಿ ಹೋಗಿದ್ದೇನೆ. ಅಷ್ಟೂ ಸಲ ಅಲ್ಲಿಗೆ ಹೋಗದೇ ಬಂದಿಲ್ಲ.

ಇಸ್ರೇಲಿಗೆ ಯಾರೇ ಹೋಗಲಿ, ಅವರು ವೆಸ್ಟರ್ನ್ ವಾಲ್ ಗೆ ಹೋಗದೇ ಬರುವುದಿಲ್ಲ. ಅದು ಅಮೆರಿಕ ಅಧ್ಯಕ್ಷರಿರಬಹುದು, ಕ್ರಿಶ್ಚಿಯನ್ ಧರ್ಮಗುರು ಪೋಪ್ ಇರಬಹುದು, ಹಾಲಿವುಡ್ ನಟ-ನಟಿಯರಿರಬಹುದು...ವೆಸ್ಟರ್ನ್ ವಾಲ್ ಗೆ ಭೇಟಿ ನೀಡದೇ ಅವರ ಇಸ್ರೇಲ್ ಪ್ರವಾಸ ಪೂರ್ತಿಯಾಗುವುದಿಲ್ಲ. ಹಾಗಂತ ಅದೇನು ಅದ್ಭುತ ಎನಿಸುವ ಸುಂದರ, ಮನಮೋಹಕ ಪ್ರೇಕ್ಷಣೀಯ ಸ್ಥಳವೇನೂ ಅಲ್ಲ. ಅಷ್ಟಕ್ಕೂ ಅದೊಂದು ದೊಡ್ಡ ಗೋಡೆ. ವಿಶ್ವದ ಅಚ್ಚರಿಗಳಲ್ಲಿ ಒಂದಾದ ಚೀನಾ ಗೋಡೆಯಂಥ ಬೃಹತ್, ರಮಣೀಯ ಗೋಡೆಯೂ ಅಲ್ಲ. ಆದರೂ ವೆಸ್ಟರ್ನ್ ವಾಲ್, ಎಲ್ಲ ಗೋಡೆಗಳಿಗಿಂತ ಪ್ರಮುಖವಾದುದು ಮತ್ತು ಪವಿತ್ರವಾದುದು. ಇದು ಯಹೂದಿಗಳಿಗೆ ಪರಮ ಪವಿತ್ರ ತಾಣವಾದರೂ, ವಿಶ್ವದೆಲ್ಲೆಡೆ ಅಧ್ಯಾತ್ಮ, ಸಂಘರ್ಷ ಮತ್ತು ಶಾಂತಿಯ ಸಂಕೇತವೆಂದೇ ಪರಿಗಣಿತವಾಗಿದೆ. ಈ ಪುರಾತನ ಕಲ್ಲಿನ ಗೋಡೆ, ಸಾವಿರಾರು ವರ್ಷಗಳ ಇತಿಹಾಸ, ತ್ಯಾಗ, ಬಲಿದಾನ, ಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ತನ್ನೊಡಲಿನಲ್ಲಿ ಹೊತ್ತುಕೊಂಡಿದೆ.

ಗೋಡೆಯ ಒರಟಾದ ಕಲ್ಲುಗಳನ್ನು ಮುಟ್ಟುವ ಪ್ರತಿ ಕೈ, ಅದರ ಒಡಲಿನಲ್ಲಿ ಅಡಗಿರುವ ಪ್ರಾರ್ಥನೆಗಳಲ್ಲಿ ಕೂಡಿಕೊಂಡಿರುವ ಭಾವನೆಗಳ ಸಾಗರದಲ್ಲಿ ತೇಲಿಸಿದ ದಿವ್ಯ ಅನುಭವವನ್ನು ಮಾಡಿಸುತ್ತದೆ. ಅದರಲ್ಲೂ ವಿಶೇಷವಾಗಿ ವಿಶ್ವದೆಲ್ಲೆಡೆ ಇರುವ ಯಹೂದಿಯರಿಗೆ ಈ ತಾಣ ತಲತಲಾಂತಯಾರಗಳಿಂದ ದೈವಿಕತೆ, ಸಂಪ್ರದಾಯ ಮತ್ತು ಪರಂಪರೆಯೊಂದಿಗೆ ಸಂವಾದಿಸುವ ಆತ್ಮ ಸೇತುವಾಗಿದೆ. ಇದು ಜಗತ್ತಿನಲ್ಲಿಯೇ ಯಹೂದಿಯರ ಬಯಲು ಪೂಜಾಮಂದಿರ (ಓಪನ್ ಸಿನಗಾಗ್) ಎಂದು ಕರೆಯಿಸಿಕೊಂಡಿದೆ.

Western Wall 2

ಜೆರುಸಲೆಮ್‌ನಲ್ಲಿರುವ ವೆಸ್ಟರ್ನ್ ವಾಲ್ ಸುತ್ತ ಮುತ್ತಲ ಪ್ರದೇಶ ಅದರಲ್ಲೂ ವಿಶೇಷವಾಗಿ 'ಟೆಂಪಲ್ ಮೌಂಟ್',ವಿಶ್ವದ ಮೂರು (ಯಹೂದಿ, ಕ್ರಿಶ್ಚಿಯನ್ ಮತ್ತು ಮುಸ್ಲಿಂ) ಏಕದೇವತಾವಾದಿ ಧರ್ಮಗಳಿಗೆ, ಅದರಲ್ಲೂ ವಿಶೇಷವಾಗಿ ಯಹೂದಿ ಮತ್ತು ಇಸ್ಲಾಂ ಧರ್ಮಿಯರಿಗೆ ಪವಿತ್ರ ಸ್ಥಳ. ಹೀಗಾಗಿ ಜೆರುಸಲೆಮ್ ಇವರೆಲ್ಲರಿಗೂ Holy land. ಈ ತಾಣದ ಮೇಲೆ ಪ್ರಭುತ್ವ ಸಾಧಿಸಲು ಈ ಮೂರೂ ಧರ್ಮೀಯರು ಎರಡು ಸಾವಿರ ವರ್ಷಗಳಿಂದ ನಿರಂತರ ಪ್ರಯತ್ನಿಸುತ್ತಿರುವುದರಿಂದ ಈ ತಾಣ ಕೇವಲ ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರವಷ್ಟೇ ಅಲ್ಲ, ರಾಜಕೀಯ ಸಂಘರ್ಷಗಳ ಕೇಂದ್ರವಾಗಿರುವುದೂ ಸತ್ಯ. ಈ ತಾಣ ಪ್ರಾರ್ಥನೆಯನ್ನು ಕಂಡಂತೆ, ಘನಘೋರ ಹೊಡೆದಾಟ, ಯುದ್ಧ, ರಕ್ತಪಾತಗಳಿಗೂ ಪ್ರತ್ಯಕ್ಷದರ್ಶಿಯಾಗಿರುವುದು ವಿಪರ್ಯಾಸ.

ಇದು ಅಸಂಖ್ಯ ನಂಬಿಕೆಗಳ ಕಲ್ಲುಗಳಿಂದ ಕಟ್ಟಿದ ಗೋಡೆ. ಇದನ್ನು ಯಹೂದಿಗಳು 'ಪಾವನ ಪ್ರಾರ್ಥನೆಗಳ ಗೋಡೆ' ಎಂದು ಕರೆಯುತ್ತಾರೆ, ನಂಬುತ್ತಾರೆ. ಯಹೂದಿಯರು ಹೀಬ್ರೂ ಭಾಷೆಯಲ್ಲಿ ಕೊಟೆಲ್ (Kotel) ಎಂದು ಕರೆಯುತ್ತಾರೆ. ಈ ಗೋಡೆಗೆ ಹಣೆಹಚ್ಚಿ ತಮ್ಮ ಕಷ್ಟಗಳನ್ನು ತೋಡಿಕೊಂಡರೆ, ಮನಸಾರೆ ಪ್ರಾರ್ಥಿಸಿದರೆ, ಇದು ಅವುಗಳೆಲ್ಲವನ್ನೂ ಪರಿಹರಿಸಿ, ಕೇಳಿದ್ದನ್ನು ಕೊಡುತ್ತದೆ ಎಂದು ನಂಬುತ್ತಾರೆ. ಕೆಲವರು ಈ ಗೋಡೆ ಮುಂದೆ ಗೊಳೋ ಎಂದು ಅಳುತ್ತಾರೆ. ಇನ್ನು ಕೆಲವರು ಈ ಗೋಡೆ ಮುಂದೆ ಶರೀರ ಬಗ್ಗಿಸಿ ಅಂಬೋ ಎಂದು ಶರಣಾಗುತ್ತಾರೆ. ಇನ್ನು ಕೆಲವರಿಗೆ ಇದು ಬರೀ ಕಲ್ಲಿನ ಗೋಡೆಯಲ್ಲ, ಸಾಕ್ಷಾತ್ ಭಗವಂತ! ಸಹಸ್ರಾರು ವರ್ಷಗಳಿಂದ, ಈ ಗೋಡೆಯು ಅನೇಕ ಸಾಮ್ರಾಜ್ಯಗಳ ಪತನ ಮತ್ತು ಏಳಿಗೆಯನ್ನು ಕಂಡಿದೆ. ರಾಜರ ಅಟ್ಟಹಾಸ ಮತ್ತು ವಿನಾಶಕ್ಕೆ ಸಾಕ್ಷಿಯಾಗಿದೆ. ರೋಮನ್ನರಿಂದ ಹಿಡಿದು ಒಟ್ಟೋಮನ್ ಸಾಮ್ರಾಜ್ಯದವರೆಗೂ, ಈ ಗೋಡೆ ಕಷ್ಟ, ಸಂಕೋಲೆ, ಸಂಘರ್ಷ ಮತ್ತು ಹೋರಾಟಗಳ ಮಧ್ಯೆಯೂ ಅಚಲವಾಗಿ ನಿಂತಿದೆ. ಇದು ಯಹೂದಿಗಳ ಸಾಮರ್ಥ್ಯ, ಚೇತರಿಕೆ ಮತ್ತು ಸಹಿಷ್ಣುತೆಯ ದೃಢ ಸಂಕಲ್ಪವಾಗಿಯೂ ನಿಂತಿದೆ.

ಈ ಗೋಡೆ ಸಾಮಾನ್ಯ ಗೋಡೆಯಲ್ಲ. ಕ್ರಿ.ಪೂ 826 ರಲ್ಲಿ ರಾಜ ಸೊಲೊಮನ್ ಮೊದಲ ಪವಿತ್ರ ದೇವಾಲಯ(First Jewish Temple))ವನ್ನು ನಿರ್ಮಿಸಿದಾಗ, ಅದು ಯಹೂದಿ ರಾಷ್ಟ್ರದ ಹೃದಯವಾಗಬೇಕೆಂದು ಆತ ಬಯಸಿದ್ದ. ಜನರು ದೇವರೊಂದಿಗೆ ಮಾತನಾಡಲು ಪ್ರೇರಿತರಾಗುವ ಸ್ಥಳವಾಗಬೇಕು ಮತ್ತು ಯಾರೂ ಒಂಟಿತನವನ್ನು ಅನುಭವಿಸದ ಸ್ಥಳವಾಗಬೇಕು ಎಂದು ಬಯಸಿದ್ದ. ದೇವಾಲಯದ ಉದ್ಘಾಟನೆಯ ಸಮಯದಲ್ಲಿ ಆತ 'ದೇವರೇ, ಈ ಸ್ಥಳದಲ್ಲಿ ಹೇಳಲಾಗುವ ಪ್ರಾರ್ಥನೆಗಳನ್ನು ಗಮನವಿಟ್ಟು ಕೇಳು' ಇಂದು ಪ್ರಾರ್ಥಿಸಿಕೊಂಡಿದ್ದ. ಸೊಲೊಮನ್‌ನ ಪ್ರಾರ್ಥನೆಗಳಿಗೆ ದೇವರು ಸಕಾರಾತ್ಮಕವಾಗಿ ಸ್ಪಂದಿಸಿದ. ದೇವರ ಉಪಸ್ಥಿತಿಯು ದೇವಾಲಯವನ್ನು ಪಾವನಗೊಳಿಸಿ ಜೀವಂತಗೊಳಿಸಿತು. 'ಹೆರೋಡ್ ದಿ ಗ್ರೇಟ್'‌, ದ್ವಿತೀಯ ದೇವಾಲಯವನ್ನು ನಿರ್ಮಿಸಿದನು. ವೆಸ್ಟರ್ನ್ ವಾಲ್, ಟೆಂಪಲ್ ಮೌಂಟ್‌ನ ರಕ್ಷಣಾ ಗೋಡೆಯಾಗಿತ್ತು. ಕ್ರಿ.ಶ. 70ರಲ್ಲಿ ರೋಮನ್ನರು ಈ ದೇವಾಲಯವನ್ನು ನಾಶಪಡಿಸಿದರು, ಆದರೆ ಅವರಿಗೆ ಈ ಗೋಡೆಯನ್ನು ಕೆಡವಲು ಮತ್ತು ನಾಶಪಡಿಸಲು ಸಾಧ್ಯವಾಗದ್ದರಿಂದ ಅದು ಉಳಿದುಕೊಂಡಿತು. ಈ ಗೋಡೆಯಲ್ಲಿ ಭಗವಂತ ನೆಲೆಸಿರುವುದರಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು ಇಂದು ನಂಬಲಾಗಿದೆ.

ಕ್ರಿ.ಶ. 135ರ ಬಾರ್ ಕೊಖ್ಬಾ ದಂಗೆಯ ನಂತರ ಯಹೂದಿಗಳನ್ನು ಜೆರುಸಲೆಮ್ ನಿಂದ ಹೊಡೆದೋಡಿಸಲಾಯಿತು. ಬೈಜಾಂಟೈನ್ ಕಾಲದಲ್ಲಿ (ಕ್ರಿ.ಶ. 324-638), ಯಹೂದಿಗಳು ವರ್ಷಕ್ಕೊಮ್ಮೆ ಮಾತ್ರ ಸ್ಥಳಕ್ಕೆ ಭೇಟಿ ನೀಡಬಹುದಿತ್ತು. ಮುಸ್ಲಿಂ ಆಳ್ವಿಕೆಯಲ್ಲಿ (ಕ್ರಿ.ಶ. 638-1517), ಯಹೂದಿಗಳು ಗೋಡೆಯ ಬಳಿ ಪ್ರಾರ್ಥನೆ ಮಾಡಲು ಅನುಮತಿ ಪಡೆದರು. ಒಟ್ಟೋಮನ್ ಸಾಮ್ರಾಜ್ಯದಲ್ಲಿ (1517-1917), ಸುಲೇಮನ್ ದಿ ಮ್ಯಾಗ್ನಿಫಿಸೆಂಟ್ ಯಹೂದಿಗಳಿಗೆ ಪ್ರಾರ್ಥನಾ ಹಕ್ಕನ್ನು ದಯಪಾಲಿಸಿದ. ಬ್ರಿಟಿಷರ ಕಾಲದಲ್ಲಿ (1917-1948), ಗೋಡೆಯ ಬಳಿ ಸತತ ಉದ್ವಿಗ್ನ ಪರಿಸ್ಥಿತಿ ನೆಲೆಯೂರಿತ್ತು. ವಿಶೇಷವಾಗಿ 1929ರ ದಂಗೆಯಲ್ಲಿ ವೆಸ್ಟರ್ನ್ ವಾಲ್ ಆವರಣದಲ್ಲಿ 133 ಯಹೂದಿಗಳು ಮತ್ತು 116 ಅರಬರು ಮರಣಹೊಂದಿದರು.

1930ರಲ್ಲಿ ಯಹೂದಿಗಳಿಗೆ ಪುನಃ ಪ್ರಾರ್ಥನಾ ಹಕ್ಕನ್ನು ನೀಡಲಾಯಿತು. ಆದರೆ ಆವರಣದ ಮಾಲೀಕತ್ವವನ್ನು ಮುಸ್ಲಿಮರು ಉಳಿಸಿಕೊಂಡಿತು. 1948 ರಲ್ಲಿ ಇಸ್ರೇಲ್ ಸ್ವತಂತ್ರ ರಾಷ್ಟ್ರವಾಗಿ ಉದಯವಾದರೂ, ಅಂದಿನಿಂದ 1967 ರವರೆಗೆ ವೆಸ್ಟರ್ನ್ ವಾಲ್ ಇರುವ ಜಾಗವನ್ನು ಜೋರ್ಡಾನ್ ವಶಪಡಿಸಿಕೊಂಡಿತ್ತು. ಸುಮಾರು ಹತ್ತೊಂಬತ್ತು ವರ್ಷಗಳವರೆಗೆ ಯಹೂದಿಗಳಿಗೆ ಗೋಡೆಗೆ ಪ್ರವೇಶವನ್ನು ನಿರಾಕರಿಸಲಾಯಿತು. 1967ರಲ್ಲಿ ನಡೆದ 'ಆರು ದಿನಗಳ ಯುದ್ಧ'ದಲ್ಲಿ ಇಸ್ರೇಲ್ ಗೋಡೆಯನ್ನು ವಶಪಡಿಸಿಕೊಂಡಿತು. ಆ ವೇಳೆ ಗೋಡೆಗೆ ಹೊಂದಿಕೊಂಡಿದ್ದ ಮೊರೊಕ್ಕನ್ ಕ್ವಾರ್ಟರ್ ಅನ್ನು ಧ್ವಂಸಮಾಡಿ ಆ ಜಾಗದಲ್ಲಿ 'ವೆಸ್ಟರ್ನ್ ವಾಲ್ ಪ್ಲಾಜಾ' ನಿರ್ಮಿಸಿತು.

ವೆಸ್ಟರ್ನ್ ವಾಲ್ ಗೆ ಅತಿ ಸನಿಹದಲ್ಲೇ ಇಸ್ಲಾಂ ಧರ್ಮದ ಮೂರನೇ ಅತ್ಯಂತ ಪವಿತ್ರ ಸ್ಥಳವಾದ ಅಲ್-ಅಕ್ಸಾ ಮಸೀದಿಯಿದೆ. ಮುಸ್ಲಿಮರು ಟೆಂಪಲ್ ಮೌಂಟ್ ನ್ನು ಹರಾಮ್ ಅಲ್-ಷರೀಫ್ ಇಂದು ಕರೆಯುತ್ತಾರೆ. ಮುಸ್ಲಿಮರು ಈ ಗೋಡೆಯನ್ನು 'ಅಲ್-ಬುರಾಕ್ ಗೋಡೆ' ಎಂದು ಕರೆಯುತ್ತಾರೆ. ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ಪ್ರವಾದಿ ಮುಹಮ್ಮದ್ ಅವರು ತಮ್ಮ ರಾತ್ರಿ ಪ್ರಯಾಣದ ಸಮಯದಲ್ಲಿ ಮೆಕ್ಕಾದಿಂದ ಜೆರುಸಲೆಮ್ ಗೆ ಬಂದಾಗ, ತಮ್ಮ ರೆಕ್ಕೆಗಳಿರುವ ಕುದುರೆಯಾದ ಅಲ್-ಬುರಾಕ್ ಅನ್ನು ಇದೇ ಗೋಡೆಗೆ ಕಟ್ಟಿ ಸ್ವರ್ಗಕ್ಕೆ ಹೋದರು ಎಂದು ನಂಬಲಾಗಿದೆ. ಹೀಗಾಗಿ, ಇದು ಮುಸ್ಲಿಮರಿಗೂ ಧಾರ್ಮಿಕವಾಗಿ ಮಹತ್ವದ ಸ್ಥಳವಾಗಿದೆ. ಯಹೂದಿಗಳಿಗೆ, ಇದು ಅವರ ಎರಡನೇ ದೇವಾಲಯ ಧ್ವಂಸವಾದ ಬಳಿಕ ಉಳಿದಿರುವ ಏಕೈಕ ಪವಿತ್ರತಾಣವಾಗಿದೆ.

Western Wall 1

ಹಲವು ಇತಿಹಾಸಕಾರರ ಪ್ರಕಾರ, ಈ ಮಸೀದಿಯನ್ನು ಉಮಯ್ಯದ್ ಖಲೀಫಾ ಅಬ್ದ್ ಅಲ್-ಮಲಿಕ್ ಸುಮಾರು 705ನೇ ಇಸವಿಯಲ್ಲಿ ನಿರ್ಮಿಸಿದ. ಈ ಸ್ಥಳವು ಯಹೂದಿ ಮತ್ತು ಕ್ರೈಸ್ತರಿಗೂ ಪವಿತ್ರವಾಗಿದೆ. ಇದು ಯಹೂದಿಯರ ಪ್ರಾಚೀನ ದೇವಾಲಯಗಳಿದ್ದ ಸ್ಥಳವಾಗಿದೆ. ಈ ಕಾರಣದಿಂದಾಗಿ, ಈ ಸ್ಥಳವು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಪ್ರಮುಖ ವಿವಾದದ ಕೇಂದ್ರಬಿಂದುವಾಗಿದೆ. ಅಲ್-ಅಕ್ಸಾ ಮಸೀದಿಯ ಸಂಕೀರ್ಣವು ಕೇವಲ ಮಸೀದಿಯ ಕಟ್ಟಡವಲ್ಲ, ಇದರಲ್ಲಿ ಡೋಮ್ ಆಫ್ ದಿ ರಾಕ್ (Dome of the Rock), ಮಿನಾರೆಟ್‌ಗಳು ಮತ್ತು ಹಲವಾರು ಇತರ ರಚನೆಗಳೂ ಸೇರಿವೆ. ಈ ಸ್ಥಳದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದಿಂದಾಗಿ ಇದು ಪ್ರಪಂಚದಾದ್ಯಂತ ಮುಸ್ಲಿಮರಿಗೆ ಅತ್ಯಂತ ಪ್ರಮುಖ ತೀರ್ಥಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ.

ವೆಸ್ಟರ್ನ್ ವಾಲ್ ನಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಿ ನಂತರ ಸಮಾಧಿ ಮಾಡಲಾದ ಚರ್ಚ್ ಆಫ್ ದಿ ಹೋಲಿ ಸೆಫಲ್ಕರ್ (Church of the Holy Sepulchre) ಇದೆ. ಮೂರು ವರ್ಷಗಳ ಬಳಿಕ ಏಸು ಸಮಾಧಿಯಿಂದ ಪುನರುತ್ಥಾನಗೊಂಡಿದ್ದು ಇದೇ ಸ್ಥಳದಲ್ಲಿ ಎಂದು ಕ್ರಿಶ್ಚಿಯನ್ನರು ಬಲವಾಗಿ ನಂಬುತ್ತಾರೆ. ಈ ಕಾರಣಕ್ಕಾಗಿಯೇ ಇದು ಪ್ರಪಂಚದಾದ್ಯಂತ ಇರುವ ಕ್ರಿಶ್ಚಿಯನ್ನರಿಗೆ ಅತ್ಯಂತ ಮಹತ್ವದ ತೀರ್ಥಯಾತ್ರಾ ಕೇಂದ್ರವಾಗಿದೆ. ಹೀಗಾಗಿ ವೆಸ್ಟರ್ನ್ ವಾಲ್ ಸುತ್ತಮುತ್ತಲ ಪ್ರದೇಶ ಮೂರು ಧರ್ಮಗಳಲ್ಲಿ ನಂಬಿಕೆಯಿರುವವರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಹೀಗಾಗಿ ಇದರ ಒಡೆತನ, ಆಡಳಿತ, ಅತಿಕ್ರಮಣಕ್ಕೆ ಸಂಬಂಧಪಟ್ಟಂತೆ ಸಣ್ಣ-ಪುಟ್ಟ ವ್ಯತ್ಯಾಸವಾದರೂ ಮೂರು ಧರ್ಮೀಯರು ಕಿತ್ತಾಡಿಕೊಳ್ಳುತ್ತಾರೆ ಮತ್ತು ಅದು ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತದೆ. ಈ ಮೂರು ಧರ್ಮಗಳಲ್ಲಿ ನಂಬಿಕೆಯಿರುವ ದೇಶಗಳು ಪರಸ್ಪರ ಒಟ್ಟಾಗಿ ಕಿತ್ತಾಡುತ್ತವೆ. ಇದು ಸಹಜವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ.

ವೆಸ್ಟರ್ನ್ ವಾಲ್ ಗೆ ಭೇಟಿ ನೀಡುವವರು ಗೋಡೆಯ ಬಿರುಕುಗಳಲ್ಲಿ ಕಾಗದದ ಚೀಟಿಗಳನ್ನು ಇಡುವುದು ಒಂದು ಸಾಮಾನ್ಯ ಸಂಪ್ರದಾಯ. ಈ ಚೀಟಿಗಳಲ್ಲಿ ಜನ ತಮ್ಮ ಪ್ರಾರ್ಥನೆ, ಆಸೆ, ಕೋರಿಕೆ, ಬೇಡಿಕೆ ಮತ್ತು ದುಃಖಗಳನ್ನು ದೇವರಿಗೆ ವೇದಿಸಿಕೊಳ್ಳುತ್ತಾರೆ. ಯಹೂದಿ ಸಂಪ್ರದಾಯದ ಪ್ರಕಾರ, ಈ ಗೋಡೆಯು ದೇವಾಲಯದ ಪವಿತ್ರ ಸ್ಥಳದ ಸಮೀಪವಿರುವುದರಿಂದ, ಇಲ್ಲಿ ಸಲ್ಲಿಸುವ ಪ್ರಾರ್ಥನೆಗಳು ನೇರವಾಗಿ ದೇವರಿಗೆ ತಲುಪುತ್ತವೆ ಎಂದು ನಂಬಲಾಗುತ್ತದೆ. ಜನರು ತಾವು ಬರೆದ ಚೀಟಿಯನ್ನು ಗೋಡೆಯ ಬಿರುಕಿನಲ್ಲಿ ಇಡುವುದರಿಂದ, ಅದು ತಮ್ಮ ಪ್ರಾರ್ಥನೆಯನ್ನು ದೇವರ ಬಳಿಗೆ ಕಳುಹಿಸುವ ಒಂದು ಮಾರ್ಗವೆಂದು ಭಾವಿಸುತ್ತಾರೆ.

ಈ ಸಂಪ್ರದಾಯವು ಯಹೂದಿ ಧರ್ಮದ ಒಂದು ರಹಸ್ಯ ಪಂಥವಾದ 'ಕಬಾಲಾ'ದಿಂದ ಬಂದಿರಬಹುದು ಎಂದು ಕೆಲವರು ನಂಬುತ್ತಾರೆ. ಕಬಾಲಾದ ಪ್ರಕಾರ, ದೇವರಿಗೆ ಹತ್ತಿರವಿರುವ ಸ್ಥಳಗಳಲ್ಲಿ ಬರೆದ ಪದಗಳಿಗೆ ಹೆಚ್ಚಿನ ಶಕ್ತಿ ಇರುತ್ತದೆ. ಅನೇಕ ಜನರು ತಮ್ಮ ವೈಯಕ್ತಿಕ ನೋವು, ಆಸೆ ಅಥವಾ ಪ್ರಾರ್ಥನೆಗಳನ್ನು ಬರೆದು ಚೀಟಿಯನ್ನು ಗೋಡೆಯಲ್ಲಿ ಇಡುವುದರಿಂದ ಮಾನಸಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ನೆಮ್ಮದಿ ಪಡೆಯುತ್ತಾರೆ. ಇದು ಒಂದು ರೀತಿಯಲ್ಲಿ ತಮ್ಮ ಚಿಂತೆಗಳನ್ನು ದೇವರಿಗೆ ಅರ್ಪಿಸುವ ಸಂಕೇತವಾಗಿದೆ. ಗೋಡೆಯ ಬಿರುಕುಗಳಲ್ಲಿ ತುಂಬಿದ ಚೀಟಿಗಳನ್ನು ನಿಯಮಿತವಾಗಿ ತೆಗೆದುಹಾಕಲಾಗುತ್ತದೆ. ಈ ಚೀಟಿಗಳನ್ನು ಎಸೆಯಲಾಗುವುದಿಲ್ಲ, ಬದಲಾಗಿ ಅವುಗಳನ್ನು ಗೌರವಯುತವಾಗಿ ಸಂಗ್ರಹಿಸಿ, ಜೆರುಸಲೆಮ್ ನ ಆಲಿವ್ ಪರ್ವತದ ಮೇಲಿರುವ ಸಮಾಧಿ ಸ್ಥಳದಲ್ಲಿ ದಫನ ಮಾಡಲಾಗುತ್ತದೆ. ಏಕೆಂದರೆ ಇವುಗಳಲ್ಲಿ ದೇವರ ಹೆಸರು ಮತ್ತು ಪವಿತ್ರ ಪ್ರಾರ್ಥನೆಗಳು ಇರುವುದರಿಂದ ಅವುಗಳನ್ನು ಕಸದಂತೆ ಪರಿಗಣಿಸುವುದಿಲ್ಲ.

ಜೆರುಸಲೆಮ್ ಮತ್ತು ವೆಸ್ಟರ್ನ್ ವಾಲ್ ಮೇಲೆ ಪ್ರಭುತ್ವವನ್ನು ಸಾಧಿಸಲು ಯಹೂದಿಯರು ಮತ್ತು ಮುಸ್ಲಿಮರು ಎರಡು ಸಾವಿರ ವರ್ಷಗಳಿಂದ ಹೋರಾಡುತ್ತಲೇ ಇದ್ದಾರೆ. ಅಂದು ಶುರುವಾದ ಯುದ್ಧ ಇವತ್ತಿನ ತನಕವೂ ನಡೆದುಕೊಂಡು ಬಂದಿದೆ. ಹೀಗಾಗಿ ವೆಸ್ಟರ್ನ್ ವಾಲ್ ಪ್ರದೇಶವನ್ನು ಜಗತ್ತಿನಲ್ಲಿಯೇ ಅತ್ಯಂತ ಆಯಕಟ್ಟಿನ, ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸುತ್ತಾರೆ. ಚರ್ಚ್ ಆಫ್ ದಿ ಹೋಲಿ ಸೆಫಲ್ಕರ್ ಈ ಪ್ರದೇಶದಿಂದ ಅರ್ಧ ಕಿಮೀ ದೂರದಲ್ಲಿರುವುದರಿಂದ ಕ್ರಿಶ್ಚಿಯನ್ ರು ಈ ಸಂಘರ್ಷದಿಂದ ಹೊರಗುಳಿಯದಿದ್ದರೂ ನೇರಾನೇರ ಭಾಗವಹಿಸುತ್ತಿಲ್ಲ. ಹೀಗಾಗಿ ಯಹೂದಿಯರು ಮತ್ತು ಮುಸ್ಲಿಮರ ಮಧ್ಯೆ ಕಾದಾಟವಾದಾಗಲೆಲ್ಲ ಕ್ರಿಶ್ಚಿಯನ್ ರು ದೊಡ್ಡಣ್ಣನ ಪಾತ್ರವಹಿಸುತ್ತಾರೆ. ಯಹೂದಿಯರು ಮತ್ತು ಮುಸ್ಲಿಮರ ಮಧ್ಯೆ ನಡೆದ ಎಲ್ಲ ಸಂಘರ್ಷಗಳ ಮೂಲಬೇರು, ವೆಸ್ಟರ್ನ್ ವಾಲ್ ಮತ್ತು ಆಲ್ ಅಕ್ಸಾ ಮಸೀದಿಯ ಆವರಣದ ಪ್ರಭುತ್ವ ಸಾಧಿಸುವ ಪೈಪೋಟಿಯ ಆಳಕ್ಕಿಳಿದಿರುವುದು ಇತಿಹಾಸದ ಕಠೋರ ಸತ್ಯ ಮತ್ತು ದುರಂತ ಕಥೆ.

ಅದೇನೇ ಇರಲಿ, ಕಲ್ಲುಗಳ ನಡುವೆ ಅಡಗಿದ ಕೋಟ್ಯಂತರ ಪ್ರಾರ್ಥನೆಗಳನ್ನು ಹೊತ್ತ ವೆಸ್ಟರ್ನ್ ವಾಲ್, ಹೃದಯದ ಭಾಷೆ ಮಾತನಾಡುವ ಕಲ್ಲಿನ ಗೋಡೆ. ಇಸ್ರೇಲ್‌ ಸಾಗಿಬಂದ ಮಾರ್ಗವನ್ನು ಪ್ರತಿಬಿಂಬಿಸುತ್ತಾ ಈ ಗೋಡೆ, ಇತಿಹಾಸಕ್ಕೆ ಕನ್ನಡಿಯಾಗಿದೆ. ಗೋಡೆ ಮತ್ತು ಜನರ ನಡುವಿನ ಭಾವನಾತ್ಮಕ ಸಂಪರ್ಕಕ್ಕೆ ಗೋಡೆ ಮೌನ ಮತ್ತು ಮಾತಿಗೆ ಸಾಕ್ಷಿಯಾಗಿದೆ.

ಗಂಡಸರಿಗೆ-ಹೆಂಗಸರಿಗೆ ಪ್ರತ್ಯೇಕ ಪ್ರಾರ್ಥನೆ

ವೆಸ್ಟರ್ನ್ ವಾಲ್ ನಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಪ್ರಾರ್ಥನೆ ಮಾಡುವಂತಿಲ್ಲ. ಇದಕ್ಕಾಗಿ ಅವರಿಗೆ ಪ್ರತ್ಯೇಕ ವಿಭಾಗಗಳಿವೆ. ಈ ವ್ಯವಸ್ಥೆಯನ್ನು 'ಮೆಹಿಟ್ಜಾ' (Mechitzah) ಎಂದು ಕರೆಯಲಾಗುತ್ತದೆ. ಇದರ ಜತೆಗೆ, ಮಹಿಳೆಯರಿಗೆ ಪ್ರಾರ್ಥನೆಯಲ್ಲಿ ಟೋಪಿ ಧರಿಸಲು ಅಥವಾ ಟೋರಾ ಸ್ಕ್ರೋಲ್ (ಪವಿತ್ರ ಗ್ರಂಥ) ಹಿಡಿಯಲು ಅವಕಾಶವಿಲ್ಲ. ಕೆಲವು ಮಹಿಳಾ ಹಕ್ಕುಗಳ ಗುಂಪುಗಳು, ಉದಾಹರಣೆಗೆ "ವುಮೆನ್ ಆಫ್ ದಿ ವಾಲ್" (Women of the Wall), ಈ ನಿಯಮಗಳನ್ನು ಪ್ರಶ್ನಿಸಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಇದು ಅನೇಕ ಬಾರಿ ಸಂಪ್ರದಾಯವಾದಿ ಯಹೂದಿಗಳೊಂದಿಗೆ ಘರ್ಷಣೆಗಳಿಗೆ ಕಾರಣವಾಗಿದೆ. 2013ರಲ್ಲಿ ಮತ್ತು ನಂತರದ ವರ್ಷಗಳಲ್ಲಿ, ಈ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ಘಟನೆಗಳೂ ನಡೆದಿವೆ.

ಯಹೂದಿ ಧರ್ಮದ ಆರ್ಥೊಡಾಕ್ಸ್ ಪದ್ಧತಿಯ ಪ್ರಕಾರ, ಪ್ರಾರ್ಥನೆಯ ಸಮಯದಲ್ಲಿ ಪುರುಷರ ಮತ್ತು ಮಹಿಳೆಯರ ನಡುವೆ ಯಾವುದೇ ದೈಹಿಕ ಅಥವಾ ದೃಷ್ಟಿ ಸಂಪರ್ಕ ಇರಬಾರದು. ಪ್ರಾರ್ಥನೆಯ ಮೇಲೆ ಗಮನ ಕೇಂದ್ರೀಕರಿಸಲು ಇದು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಪುರಾತನ ಕಾಲದಿಂದಲೂ ಸಿನಗಾಗ್ (ಯಹೂದಿ ದೇವಾಲಯ) ಗಳಲ್ಲಿ ಈ ರೀತಿಯ ಪ್ರತ್ಯೇಕತೆಯ ಸಂಪ್ರದಾಯವನ್ನು ಅನುಸರಿಸಿಕೊಂಡು ಬರಲಾಗಿದೆ. ಪ್ರಾರ್ಥನಾ ಸ್ಥಳದ ಪಾವಿತ್ರ್ಯವನ್ನು ಕಾಪಾಡಲು ಈ ನಿಯಮವನ್ನು ಪಾಲಿಸಲಾಗುತ್ತದೆ.

ವೆಸ್ಟರ್ನ್ ವಾಲ್ ನಲ್ಲಿ ಈ ವಿಭಾಗವನ್ನು ಒಂದು ಗೋಡೆ ಅಥವಾ ಪರದೆಯ ಮೂಲಕ ಪ್ರತ್ಯೇಕಿಸಲಾಗಿರುತ್ತದೆ. ಪುರುಷರ ವಿಭಾಗವು ದೊಡ್ಡದಾಗಿದ್ದು, ಮಹಿಳೆಯರ ವಿಭಾಗವು ಪುರುಷರ ವಿಭಾಗಕ್ಕಿಂತ ಚಿಕ್ಕದಾಗಿದೆ.

ಈ ನಿಯಮವು ಕೆಲವು ಆಧುನಿಕ ಯಹೂದಿ ಸಮುದಾಯಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೆಲವು ಪಂಗಡಗಳು ಲಿಂಗ ಸಮಾನತೆಗಾಗಿ ಒಟ್ಟಾಗಿ ಪ್ರಾರ್ಥಿಸಲು ಅವಕಾಶ ನೀಡಬೇಕು ಎಂದು ವಾದಿಸುತ್ತಿವೆ. ಆದರೆ ವೆಸ್ಟರ್ನ್ ವಾಲ್‌ನ ನಿಯಂತ್ರಣವು ಆರ್ಥೊಡಾಕ್ಸ್ ಯಹೂದಿ ಸಮುದಾಯದ ಕೈಯಲ್ಲಿರುವುದರಿಂದ ಒಟ್ಟಾಗಿ ಪ್ರಾರ್ಥನೆಗೆ ಅದು ಅವಕಾಶ ನೀಡುತ್ತಿಲ್ಲ.

**

ಹಣೆ ಚಚ್ಚಿಕೊಳ್ಳುವುದು

ವೆಸ್ಟರ್ನ್ ವಾಲ್‌ಗೆ ಬರುವ ಯಹೂದಿಗಳು ಗೋಡೆಗೆ ಹಣೆ ಬಡಿದುಕೊಳ್ಳುವುದು ಅಥವಾ ತಲೆ ಬಗ್ಗಿಸಿ ಪ್ರಾರ್ಥನೆ ಮಾಡುವುದು ಒಂದು ಆಚರಣೆ. ಯಹೂದಿ ಧರ್ಮದಲ್ಲಿ, ದೇವರ ಮುಂದೆ ಮತ್ತು ಪವಿತ್ರ ಸ್ಥಳದಲ್ಲಿ ವಿನಮ್ರತೆಯನ್ನು ತೋರಿಸುವುದು ಮುಖ್ಯ. ಈ ರೀತಿ ತಲೆ ಬಾಗಿಸುವುದು ದೇವರಿಗೆ ಸಲ್ಲಿಸುವ ಗೌರವ ಮತ್ತು ತನ್ನ ಅಲ್ಪತೆಯನ್ನು ಒಪ್ಪಿಕೊಳ್ಳುವ ಕ್ರಿಯೆ. ಈ ಗೋಡೆಯನ್ನು ದೇವರ ಉಪಸ್ಥಿತಿ (Shekhinah) ಇರುವ ಸ್ಥಳವೆಂದು ನಂಬಲಾಗಿದೆ. ಹೀಗಾಗಿ, ಪ್ರಾರ್ಥನೆ ಮಾಡುವಾಗ ದೇವರಿಗೆ ಮತ್ತಷ್ಟು ಹತ್ತಿರವಾಗುವ ಭಾವನೆಯನ್ನು ಪಡೆಯಲು ಈ ರೀತಿ ತಲೆ ಬಾಗಿಸುತ್ತಾರೆ. ಇದು ಕೇವಲ ಗೋಡೆಗೆ ತಲೆ ಬಾಗಿಸುವುದಲ್ಲ, ಬದಲಾಗಿ ಅದರಿಂದ ಬರುವ ಅಧ್ಯಾತ್ಮಿಕ ಶಕ್ತಿಯನ್ನು ತಮ್ಮೊಳಗೆ ತುಂಬಿಕೊಳ್ಳುವ ಒಂದು ಪ್ರಯತ್ನವಾಗಿದೆ.

ಈ ಗೋಡೆಯು ಎರಡನೇ ದೇವಾಲಯದ ನಾಶವನ್ನು ಪ್ರತಿನಿಧಿಸುತ್ತದೆ. ದೇವಾಲಯದ ನಾಶದ ದುಃಖವನ್ನು ನೆನಪಿಸಿಕೊಳ್ಳಲು ಮತ್ತು ತಮ್ಮ ಪಾಪಗಳಿಗಾಗಿ ವಿಷಾದ ವ್ಯಕ್ತಪಡಿಸಲು ಈ ರೀತಿ ಮಾಡುತ್ತಾರೆ. ಇದು ಒಂದು ರೀತಿಯಲ್ಲಿ, ಯಹೂದಿ ಇತಿಹಾಸದ ನೋವನ್ನು ವೈಯಕ್ತಿಕವಾಗಿ ಅನುಭವಿಸುವ ವಿಧಾನ.

ಈ ಎಲ್ಲ ಕ್ರಿಯೆಗಳು ಕೇವಲ ಒಂದು ಧಾರ್ಮಿಕ ಆಚರಣೆಯಾಗದೇ, ಯಹೂದಿ ಜನರ ನಂಬಿಕೆ, ಇತಿಹಾಸ ಮತ್ತು ಭಾವನಾತ್ಮಕತೆಯ ಸಂಕೇತಗಳಾಗಿವೆ. ಗೋಡೆಗೆ ತಲೆ ಬಾಗಿಸುವ ಈ ಕಾರ್ಯವನ್ನು 'ಡಾವೆನಿಂಗ್' (davening) ಅಥವಾ 'ಶುಕ್ಲಿಂಗ್' (shuckling) ಎಂದು ಕರೆಯುತ್ತಾರೆ. ಇದು ಯಹೂದಿಗಳ ಒಂದು ಪುರಾತನ ಪ್ರಾರ್ಥನಾ ಪದ್ಧತಿ.

**

ವೆಸ್ಟರ್ನ್ ವಾಲ್ ಮತ್ತು ರಬ್ಬಿಗಳ ಸಂಬಂಧ

ರಬ್ಬಿಗಳು (ರಬೈ ಅಂತನೂ ಕರೆಯುತ್ತಾರೆ) ಯಹೂದಿ ಧರ್ಮದಲ್ಲಿ ಧಾರ್ಮಿಕ ಶಿಕ್ಷಕರು ಮತ್ತು ನಾಯಕರು. ಅವರಿಗೆ ಪವಿತ್ರ ಗ್ರಂಥಗಳು, ಸಂಪ್ರದಾಯಗಳು ಮತ್ತು ಕಾನೂನುಗಳ ಬಗ್ಗೆ ಆಳವಾದ ಜ್ಞಾನ ಮತ್ತು ಅಪಾರ ನಂಬಿಕೆ. ವೆಸ್ಟರ್ನ್ ವಾಲ್ ಯಹೂದಿಗಳಿಗೆ ಅತ್ಯಂತ ಪವಿತ್ರವಾದ ಸ್ಥಳವಾಗಿರುವುದರಿಂದ, ರಬ್ಬಿಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

  • ಧಾರ್ಮಿಕ ಮಾರ್ಗದರ್ಶನ: ವೆಸ್ಟರ್ನ್ ವಾಲ್ ಬಳಿ ಪ್ರಾರ್ಥನೆ ಮಾಡಲು ಬರುವ ಜನರಿಗೆ ರಬ್ಬಿಗಳು ಮಾರ್ಗದರ್ಶನ ನೀಡುತ್ತಾರೆ. ಯಾವ ರೀತಿಯಲ್ಲಿ ಪ್ರಾರ್ಥನೆ ಮಾಡಬೇಕು, ಯಾವ ಆಚರಣೆಗಳನ್ನು ಪಾಲಿಸಬೇಕು, ಮತ್ತು ಯಾವ ಪ್ರಾರ್ಥನೆಗಳನ್ನು ಹೇಳಬೇಕು ಎಂಬುದರ ಬಗ್ಗೆ ಅವರು ತಿಳಿಸುತ್ತಾರೆ.
  • ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ನಾಯಕತ್ವ: ರಬ್ಬಿಗಳು ವೆಸ್ಟರ್ನ್ ವಾಲ್‌ನಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗಳು, ಸಮಾರಂಭಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ನಾಯಕತ್ವ ವಹಿಸುತ್ತಾರೆ. ಉದಾಹರಣೆಗೆ, ಬಾರ್ ಮಿಟ್ಜ್ವಾ (Bar Mitzvah) ಅಥವಾ ಬ್ಯಾಟ್ ಮಿಟ್ಜ್ವಾ (Bat Mitzvah) ನಂಥ ವಿಶೇಷ ಸಮಾರಂಭಗಳು ಈ ಗೋಡೆಯ ಬಳಿ ನಡೆಯುತ್ತವೆ. ಈ ಸಂದರ್ಭಗಳಲ್ಲಿ ರಬ್ಬಿಗಳು ನಾಯಕತ್ವ ವಹಿಸುತ್ತಾರೆ.
  • ಸಮಸ್ಯೆಗಳ ಪರಿಹಾರ: ವೆಸ್ಟರ್ನ್ ವಾಲ್ ಬಳಿ ಬರುವ ಜನರಿಗೆ ವೈಯಕ್ತಿಕ ಮತ್ತು ಅಧ್ಯಾತ್ಮಿಕ ಸಮಸ್ಯೆಗಳ ಬಗ್ಗೆ ರಬ್ಬಿಗಳು ಸಲಹೆಗಳನ್ನು ನೀಡುತ್ತಾರೆ. ಅನೇಕರು ತಮ್ಮ ಕಷ್ಟಗಳು ಮತ್ತು ಚಿಂತೆಗಳನ್ನು ಹಂಚಿಕೊಳ್ಳಲು ರಬ್ಬಿಗಳನ್ನು ಭೇಟಿ ಮಾಡುತ್ತಾರೆ.
  • ಶೈಕ್ಷಣಿಕ ಪಾತ್ರ: ವೆಸ್ಟರ್ನ್ ವಾಲ್‌ನ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಬಗ್ಗೆ ರಬ್ಬಿಗಳು ಜನರಿಗೆ ಕಲಿಸುತ್ತಾರೆ. ಯಹೂದಿ ಮಕ್ಕಳಿಗೆ ಮತ್ತು ಪ್ರವಾಸಿಗರಿಗೆ ಈ ಸ್ಥಳದ ಬಗ್ಗೆ ಮಾಹಿತಿ ನೀಡುವ ಮೂಲಕ, ಯಹೂದಿ ಧರ್ಮದ ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡುತ್ತಾರೆ.

ವೆಸ್ಟರ್ನ್ ವಾಲ್ ಕೇವಲ ಯಹೂದಿಗಳಿಗೆ ಪ್ರಾರ್ಥನಾ ಸ್ಥಳವೊಂದೇ ಅಲ್ಲ, ಬದಲಾಗಿ ಅವರ ಧರ್ಮ ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಈ ಕೇಂದ್ರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು, ಪ್ರಾರ್ಥನೆಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಯಹೂದಿ ಜನರನ್ನು ಆಧ್ಯಾತ್ಮಿಕವಾಗಿ ಮುನ್ನಡೆಸುವುದು ರಬ್ಬಿಗಳ ಜವಾಬ್ದಾರಿಯಾಗಿದೆ.

**

ಗೋಡೆ ಜತೆ ಮಾತು

ವೆಸ್ಟರ್ನ್ ವಾಲ್ ಬಗ್ಗೆ ಇರುವ ಒಂದು ತಮಾಷೆಯ ಪ್ರಸಂಗ.

ಒಬ್ಬ ಯಹೂದಿ ವ್ಯಕ್ತಿ ವೆಸ್ಟರ್ನ್ ವಾಲ್‌ನ ಬಳಿ ತುಂಬಾ ಸಮಯದಿಂದ ಪ್ರಾರ್ಥನೆ ಮಾಡುತ್ತಿದ್ದ. ಅಲ್ಲಿದ್ದ ಒಬ್ಬ ಪ್ರವಾಸಿಗ ಅವನನ್ನು ಕೇಳಿದ - 'ನೀವು ಇಷ್ಟು ಹೊತ್ತು ಏನು ಪ್ರಾರ್ಥಿಸುತ್ತಿದ್ದೀರಿ?'

ಅದಕ್ಕೆ ಆ ವ್ಯಕ್ತಿ, 'ನನ್ನ ಮಕ್ಕಳಿಗೆ ಒಳ್ಳೆಯದಾಗಲಿ, ಮೊಮ್ಮಕ್ಕಳು ಆರೋಗ್ಯವಾಗಿರಲಿ ಮತ್ತು ನನ್ನ ನೆರೆಹೊರೆಯವರ ಜತೆ ನಾನು ಉತ್ತಮ ಸಂಬಂಧ ಹೊಂದುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ' ಎಂದ.

ಪ್ರವಾಸಿಗ ಆಶ್ಚರ್ಯದಿಂದ, 'ಹಾಗಾದರೆ, ನಿಮಗೆ ಏನಾದರೂ ಫಲ ಸಿಕ್ಕಿದೆಯೇ?' ಎಂದು ಕೇಳಿದ.

ಆ ಯಹೂದಿ ನಿಟ್ಟುಸಿರು ಬಿಡುತ್ತಾ ಹೇಳಿದ - 'ಇಲ್ಲ, ನಾನು ಇಷ್ಟು ವರ್ಷಗಳ ಕಾಲ ಗೋಡೆ ಜತೆಗೆ ಮಾತಾಡುತ್ತಿದ್ದೇನೆ ಎಂಬುದು ಮನವರಿಕೆಯಾಗಿದೆ'.

**

ರಾಜಕೀಯ ಪ್ರತಿಭಟನೆಗಳು ಮತ್ತು ಘರ್ಷಣೆಗಳು

* ವೆಸ್ಟರ್ನ್ ವಾಲ್ ಸುತ್ತಮುತ್ತಲಿನ ಪ್ರದೇಶವು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಕೇಂದ್ರಬಿಂದು. 2000ರ ದಶಕದ ಆರಂಭದಲ್ಲಿ ನಡೆದ ಎರಡನೇ ಇಂಟಿಫಾಡಾ (ಪ್ಯಾಲೆಸ್ಟೀನಿಯನ್ ದಂಗೆ) ಸಮಯದಲ್ಲಿ, ಈ ಪ್ರದೇಶದಲ್ಲಿ ಅನೇಕ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ.

* 2021ರ ಮೇ ತಿಂಗಳಲ್ಲಿ, ಜೆರುಸಲೆಮ್ ನ ಹಳೆಯ ನಗರದಲ್ಲಿ ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿ ಪೊಲೀಸರ ನಡುವೆ ನಡೆದ ಘರ್ಷಣೆಗಳು ಈ ಪ್ರದೇಶದ ಮೇಲೆಯೂ ಪರಿಣಾಮ ಬೀರಿದ್ದವು. ಪ್ಯಾಲೆಸ್ಟೀನಿಯನ್ನರ ಮೇಲೆ ಇಸ್ರೇಲಿ ಪೊಲೀಸರು ಆಶ್ರು ವಾಯು ಮತ್ತು ಗ್ರೆನೇಡ್‌ಗಳನ್ನು ಬಳಸಿದ್ದು, ಕೆಲವು ಗ್ರೆನೇಡ್‌ಗಳು ವೆಸ್ಟರ್ನ್ ವಾಲ್‌ನಲ್ಲಿ ಪ್ರಾರ್ಥಿಸುತ್ತಿದ್ದವರ ಮೇಲೂ ಬಿದ್ದಿದ್ದವು.

* ಗೋಡೆಯ ಬಳಿ ಕೆಲವೊಮ್ಮೆ ವೈಯಕ್ತಿಕ ದುರಂತಗಳು ಸಂಭವಿಸಿವೆ. ಉದಾಹರಣೆಗೆ, ಗೋಡೆಯ ಬಳಿ ಪ್ರಾರ್ಥನೆ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಗಳು ನಡೆದಿವೆ.

**

ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭೇಟಿ

ಇಸ್ರೇಲ್‌ನ ಹೊಸದಾಗಿ ಅಧಿಕಾರ ವಹಿಸಿಕೊಂಡ ಪ್ರಧಾನಿಗಳು ಮತ್ತು ರಾಷ್ಟ್ರಪತಿಗಳು ತಮ್ಮ ಅಧಿಕಾರಾವಧಿಯ ಆರಂಭದಲ್ಲಿ ವೆಸ್ಟರ್ನ್ ವಾಲ್‌ಗೆ ಭೇಟಿ ನೀಡುವುದು ಒಂದು ಸಂಪ್ರದಾಯ. ಇದನ್ನು ಕೇವಲ ಒಂದು ಶಿಷ್ಟಾಚಾರದ ಭೇಟಿ ಎಂದು ಪರಿಗಣಿಸದೇ, ಈ ಸ್ಥಳಕ್ಕೆ ಅವರು ಸಲ್ಲಿಸುವ ಗೌರವದ ದ್ಯೋತಕ. ಇದು ದೇಶದ ನಾಯಕರು ಯಹೂದಿ ಜನರ ಇತಿಹಾಸ ಮತ್ತು ನಂಬಿಕೆಗಳಿಗೆ ತಮ್ಮ ಬದ್ಧತೆಯನ್ನು ತೋರಿಸುವ ಒಂದು ನಡೆ. ಈ ಭೇಟಿಯು, ದೇಶದ ಹಿಂದಿನ ನಂಬಿಕೆ, ಇತಿಹಾಸ ಮತ್ತು ಭವಿಷ್ಯದ ನಡುವೆ ಸೇತುವೆಯನ್ನು ನಿರ್ಮಿಸುವ ಪ್ರಯತ್ನದ ಸಂಕೇತ.

ವೆಸ್ಟರ್ನ್ ವಾಲ್ ಇಸ್ರೇಲಿ ಜನರ ಇತಿಹಾಸ, ನಂಬಿಕೆ ಮತ್ತು ರಾಷ್ಟ್ರೀಯ ಅಸ್ಮಿತೆಯ ಕೇಂದ್ರಬಿಂದು. ಆದ್ದರಿಂದ, ದೇಶದ ಪ್ರಮುಖ ಘಟನೆಗಳು, ಧಾರ್ಮಿಕ ಮತ್ತು ರಾಷ್ಟ್ರೀಯ ಸಮಾರಂಭಗಳು ಇಲ್ಲಿ ನಡೆಯುವುದು ಸಹಜ.

ವೆಸ್ಟರ್ನ್ ವಾಲ್‌ಗೆ ಭೇಟಿ ನೀಡಿದ ವಿದೇಶಿ ಗಣ್ಯರ ಪಟ್ಟಿ ತುಂಬ ದೊಡ್ಡದಿದೆ. ಏಕೆಂದರೆ ಇದು ಕೇವಲ ಧಾರ್ಮಿಕ ಸ್ಥಳವಾಗದೇ ಜಾಗತಿಕ ರಾಜಕೀಯ ಮತ್ತು ಸಂಸ್ಕೃತಿಯಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದೆ.

ಹಿಂದೆ, ರಾಜಕೀಯ ಸೂಕ್ಷ್ಮತೆಯ ಕಾರಣದಿಂದಾಗಿ ಅನೇಕ ದೇಶಗಳ ನಾಯಕರು ಈ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸುತ್ತಿದ್ದರು. ಏಕೆಂದರೆ ಇದು ವಿವಾದಾತ್ಮಕ ಪ್ರದೇಶವೆಂದು ಪರಿಗಣಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಅನೇಕ ಪ್ರಮುಖ ವಿದೇಶಿ ಗಣ್ಯರು ಇಲ್ಲಿಗೆ ಭೇಟಿ ನೀಡುವ ಪ್ರವೃತ್ತಿ ಹೆಚ್ಚಾಗಿದೆ.

ಸೈನಿಕರ ಪ್ರತಿಜ್ಞಾ ಸ್ವೀಕಾರ : ಇಸ್ರೇಲಿ ರಕ್ಷಣಾ ಪಡೆಗಳ (Israel Defense Forces - IDF) ಸೈನಿಕರು ಮತ್ತು ಕೆಲವು ವಿಶೇಷ ಘಟಕಗಳ ಯೋಧರು, ತಮ್ಮ ಪ್ರಮಾಣ ವಚನ ಸಮಾರಂಭವನ್ನು ವೆಸ್ಟರ್ನ್ ವಾಲ್‌ನ ಬಳಿ ನಡೆಸುತ್ತಾರೆ. ಇದು ಅವರ ಸೇವೆಗೆ ಒಂದು ಪ್ರಮುಖ ಮತ್ತು ಗಂಭೀರವಾದ ಆರಂಭವೆಂದು ಪರಿಗಣಿಸಲಾಗುತ್ತದೆ. ಸೈನಿಕರು ತಮ್ಮ ದೇಶ ಮತ್ತು ಯಹೂದಿ ಜನರ ರಕ್ಷಣೆಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ ಮತ್ತು ಈ ಪವಿತ್ರ ಸ್ಥಳದಲ್ಲಿ ಪ್ರತಿಜ್ಞೆ ಮಾಡುವುದು ಅವರಿಗೆ ದೈವಿಕ ಶಕ್ತಿ ಮತ್ತು ಬದ್ಧತೆಯನ್ನು ನೀಡುತ್ತದೆ ಎಂದು ನಂಬಲಾಗಿದೆ.