ಚಳಿಗಾಲ ಕಳೆದು ಬೇಸಗೆಯತ್ತ ಋತು ಬದಲಾಗುತ್ತಿದೆ. ಬೆಂಗಳೂರು ನಗರದ ಗಾರ್ಡನ್ ಸಿಟಿ ಎಂಬ ಪುರಾತನ ಬಿರುದಿಗೆ ನ್ಯಾಯ ಸಿಗುವ ಹಾಗೆ ನಗರದ ಬೀದಿಬೀದಿಗಳು ಬಣ್ಣಬಣ್ಣದ ಹೂಗಳಿಂದ ಕಂಗೊಳಿಸುತ್ತಿವೆ. ರಸ್ತೆಯ ಇಕ್ಕೆಲಗಳಲ್ಲೂ ಹಳದಿ, ಕೆಂಪು, ನೀಲಿ, ಗುಲಾಬಿ ಬಣ್ಣದ ಹೂಗಳು ಬೆಂಗಳೂರಿಗೆ ಹೋಳಿ ಎರಚುತ್ತಿರುವಂತೆ ಕಾಣುತ್ತಿದೆ. ಡ್ರೋನ್ ಹೊಂದಿದ ಫೊಟೋಗ್ರಫರ್ ಗಳಿಗಂತೂ ಇದು ಸಂಭ್ರಮದ ಸುದ್ದಿ. ಡ್ರೋನ್ ನೂರಡಿ ಮೇಲೆ ಹಾರಿದರೆ ಸಾಕು, ಹೂಮಯವಾಗಿರುವ ಬೆಂಗಳೂರಿನ ಏರಿಯಲ್ ಶಾಟ್ ಗಳನ್ನು ಸೆರೆಹಿಡಿದುಕೊಂಡು ಬರುತ್ತವೆ. ಬೆಂಗಳೂರಿನ ಅಂದವನ್ನು ಹೆಚ್ಚಿಸುತ್ತಿರುವ ಈ ಹೂಗಳಿಗೂ, ಈ ಮರಗಳನ್ನು ಬೆಂಗಳೂರಿನ ನೆಲಕ್ಕೆ ತಂದ ಮಹನೀಯರಿಗೂ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು. ಆದರೆ ನಗರದ ಅಂದ ಹೆಚ್ಚಿಸುತ್ತಿರುವ ಈ ಹೂಗಳೇ ಮರುದಿನ ಅದೇ ನಗರದ ಅಂದಗೆಡುವುದಕ್ಕೂ ಕಾರಣವಾಗುತ್ತಿವೆ ಎಂಬುದು ಬೇಸರದ ಸಂಗತಿ. ಹಾಗಂತ ಹೂಗಳದ್ದಾಗಲೀ ಮರಗಳದ್ದಾಗಲೀ ತಪ್ಪಿಲ್ಲ. ಅವು ಪ್ರಕೃತಿಸಹಜವಾಗಿ ವರ್ತಿಸುತ್ತಿವೆ. ಈ ಹೊತ್ತಿನಲ್ಲಿ ಎಲೆ ಮತ್ತು ಹೂ ಉದುರುವುದು ಮತ್ತು ಹೊಸ ಚಿಗುರು ಹುಟ್ಟುವುದು ಪ್ರಕೃತಿ ನಿಯಮ. ಹಾಗೆ ನೋಡಿದರೆ ರಸ್ತೆಯ ಇಕ್ಕೆಲಗಳಲ್ಲಿ ಉದುರಿದ ಎಲೆ ಮತ್ತು ಹೂಗಳನ್ನು ನೋಡುವುದೂ ಕೂಡ ಒಂದು ಸೊಗಸು.

ದೇವರ ದರ್ಶನಕ್ಕೆ ಸರಕಾರದ ಸಹಕಾರ

ಹೂವಿನ ಹಾಸಿಗೆಯಂತೆ ಕಾಣುವ ಉದುರಿದ ಪುಷ್ಪಗಳು, ಗಾಳಿ ಬಂದಾಗಲೆಲ್ಲ ಉದುರುತ್ತಾ ಗಾಳಿಯಲ್ಲಿ ತಾರಾಡುವ ಹೂಗಳು ವಿಡಿಯೋಗ್ರಫರ್ಸ್, ರೀಲ್ಸ್ ಪ್ರಿಯರು ಮತ್ತು ಛಾಯಾಗ್ರಾಹಕರಿಗೆ ಹಬ್ಬದೂಟದಂತೆ ಕಾಣುತ್ತವೆ. ಹಾಗೆ ಉದುರಿರುವ ಎಲೆಹೂಗಳು ಮರುದಿನದ ಹೊತ್ತಿಗೆ ಅಂದ ಕಳೆದುಕೊಂಡಿರುತ್ತವೆ. ರಾತ್ರಿ ಬಿದ್ದ ಇಬ್ಬನಿಗೆ ಒದ್ದೆಯಾಗಿ

Untitled design (1)

ಕೊಳೆಯಲು ಶುರುವಾಗುತ್ತದೆ. ಮರುದಿನ ಬೆಳಗ್ಗೆ ಬರುವ ಬಿಸಿಲಿಗೆ ಒಣಗಿ ಕಸವಾಗಿರುತ್ತದೆ. ರಸ್ತೆಬದಿಯಲ್ಲೆಲ್ಲ ಒಣಎಲೆ ಹೂಗಳ ರಾಶಿ ಕೆಲವೊಮ್ಮೆ ವಾಸನೆಗೆ ಕಾರಣವಾಗುತ್ತದೆ. ಸೊಳ್ಳೆಗಳಿಗೂ ತಾಣವಾಗುತ್ತದೆ. ರಸ್ತೆಗಳ ಅಂದಗೆಡಿಸುತ್ತದೆ. ಎಲ್ಲಕ್ಕಿಂತ ಅಪಾಯದ ವಿಷಯ ಏನೆಂದರೆ, ಒಣಗಿದ ಎಲೆ ಹೂ ರಾಶಿಗಳಿಗೆ ಕಿಡಿಗೇಡಿ ಯಾರಾದರೂ ಒಂದು ಕಡ್ಡಿ ಗೀರಿ ಎಸೆದ ಅಂದರೆ ಅದು ದೊಡ್ಡ ಬೆಂಕಿ ಅನಾಹುತಕ್ಕೆ ಕಾರಣವಾಗಬಹುದು. ರಸ್ತೆಬದಿಯಲ್ಲಿ ಕಾರ್ ನಿಲ್ಲಿಸುವ ರೂಢಿ ಬೆಂಗಳೂರಿಗರದ್ದು. ಇಂಥ ಕಸದ ಪಕ್ಕವೋ ಕಸದ ಮೇಲೆಯೋ ಕಾರ್ ನಿಲ್ಲಿಸಿ ಅಲ್ಯಾರೋ ಸಿಗರೇಟ್ ಸೇದಿ ಎಸೆದದ್ದು ಬೆಂಕಿಯಾಗಿ ಹೊತ್ತಿತೆಂದರೆ ಅಪಾಯ ಮತ್ತು ನಷ್ಟವನ್ನು ಊಹಿಸಿ. ಹಾಗಾದರೆ ಆಗಬೇಕಿರೋದೇನು? ಬಿಬಿಎಂಪಿ ಪ್ರತಿ ದಿನ ಉದುರೆಲೆಗಳ ಮತ್ತು ಉದುರಿದ ಹೂಗಳ ವಿಲೇವಾರಿ ಮಾಡಬೇಕು. ಕಸ ವಿಲೇವಾರಿ ನಡೆದ ಹಾಗೆಯೇ ಇದನ್ನೂ ಎತ್ತಬೇಕು. ಖಂಡಿತ ಇದು ಪೌರಕಾರ್ಮಿಕರಿಗೆ ಹೆಚ್ಚುವರಿ ಕೆಲಸವೇ. ಆದರೆ ಕೋವಿಡ್ ನಂತರ ವರ್ಷಗಳಲ್ಲಿ ಬಿಬಿಎಂಪಿ ಕಾರ್ಮಿಕರು ದೊಡ್ಡ ಬಲೆಯಂಥ ಬಟ್ಟೆ ತಂದು ಕಸ ಎತ್ತಿ ರಸ್ತೆ ಶುಚಿಗೊಳಿಸುತ್ತಿದ್ದರು. ಈ ಬಾರಿ ಆ ಕೆಲಸವಾಗುತ್ತಿಲ್ಲ. ಪ್ರತಿ ರಸ್ತೆಗಳಲ್ಲೂ ಎಲೆಗಳ ರಾಶಿ ಒಟ್ಟುಗೂಡುತ್ತಿದೆ. ಇದು ಅಂದಗೆಡಿಸುವ ಜತೆಗೆ ಅಪಾಯಕ್ಕೂ ದಾರಿಯಾಗುತ್ತಿದೆ. ಸರಕಾರ ಇದನ್ನು ಸಣ್ಣ ವಿಷಯವೆಂದು ನಿರ್ಲಕ್ಷಿಸದೇ ಕಾರ್ಯಪ್ರವೃತ್ತವಾಗಬೇಕು.