ಸ್ಥಗಿತಗೊಂಡ ಅಮರನಾಥ ಯಾತ್ರೆ ಪುನರಾಂಭ
ನಿರಂತರ ಮಳೆ ಹಾಗೂ ಭೂ ಕುಸಿತದಿಂದ ಗುರುವಾರ ಒಂದು ದಿನ ಅಮರನಾಥ ಯಾತ್ರೆ ಸ್ಥಗಿತೊಂಡಿತ್ತು. ಇದೀಗ, ರಸ್ತೆ ದುರಸ್ತಿ ಬಳಿಕ ಮತ್ತೆ ಆರಂಭವಾಗಿದೆ.
ಜಮ್ಮು: ಕಣಿವೆನಾಡಿನ ಹಲವೆಡೆ ಕಳೆದ 36 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಭೂ ಕುಸಿತದಿಂದ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಮತ್ತೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 7,900 ಯಾತ್ರಿಕರ ಎರಡು ಬ್ಯಾಚ್ಗಳು ಪಹಲ್ಗಾಮ್ ಮತ್ತು ಬಾಲ್ಟಾಲ್ನ ಎರಡು ಬೇಸ್ ಕ್ಯಾಂಪ್ನಿಂದ ಹಿಮಲಿಂಗ ದರ್ಶನಕ್ಕೆ ತೆರಳಿವೆ.

ಭಾರೀ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಲ್ಲಿ ಓರ್ವ ಮಹಿಳಾ ಯಾತ್ರಿಕರು ಸಾವನ್ನಪ್ಪಿದ್ದರು. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಗುರುವಾರದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಆರ್ಒ ಹಾಗೂ ಸೇನಾ ಸಿಬ್ಬಂದಿ ರಸ್ತೆ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು, ಮತ್ತೆ ಯಾತ್ರೆ ಆರಂಭಿಸಲಾಗಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಅಧಿಕಾರಿಗಳು, ಪಹಲ್ಗಾಮ್ ಮತ್ತು ಬಾಲ್ಟಾಲ್ ಎರಡು ಬೇಸ್ ಕ್ಯಾಂಪ್ನಿಂದ ಇಂದು ಮತ್ತೆ ಯಾತ್ರೆ ಆರಂಭವಾಗಿದೆ. 7,908 ಯಾತ್ರಿಕರ 16ನೇ ಬ್ಯಾಚ್ಗೆ ಸಿಆರ್ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣೆ ಒದಗಿಸಿದ್ದಾರೆ. ಬ್ಯಾಚ್ನಲ್ಲಿ 5,957 ಪುರುಷರು, 1,613 ಮಹಿಳೆಯರು ಮತ್ತು 26 ಮಕ್ಕಳು ಮತ್ತು 310 ಸಾಧು ಮತ್ತು ಸಾಧ್ವಿಗಳು ಇದ್ದಾರೆ. ಭಗವತಿನಗರದ ಮೂಲ ಶಿಬಿರದಿಂದ 261 ವಾಹನಗಳಲ್ಲಿ ಬೆಳಗಿನ ಜಾವ 3.30ರಿಂದ 4.25ರ ನಡುವೆ ಯಾತ್ರೆ ಪುನಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಆನ್ಲೈನ್ ನೋಂದಣಿ ಹೊರತಾಗಿ, ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದ್ದು, ಭಾರಿ ಜನದಟ್ಟಣೆ ಕಂಡು ಬಂದಿದೆ. ಸುಮಾರು 4,000ಕ್ಕೂ ಹೆಚ್ಚು ಯಾತ್ರಿಕರು ನೇರ ನೋಂದಣಿ ಮಾಡಿಕೊಳ್ಳಲು ಜಮ್ಮುವಿಗೆ ಆಗಮಿಸಿದ್ದರು. ಅವರನ್ನು ವಿವಿಧ ವಸತಿ ಕೇಂದ್ರಗಳಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗಿದೆ.
ಜುಲೈ 3ರಿಂದ ಪ್ರಾರಂಭವಾದ ಯಾತ್ರೆಯಲ್ಲಿ ಇದುವರೆಗೆ ಸುಮಾರು 2.50 ಲಕ್ಷ ಯಾತ್ರಿಕರು ಗುಹಾಂತರ ದೇಗುಲದ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆಗೆ 4 ಲಕ್ಷ ಜನರು ಆನ್ಲೈನ್ ಮೂಲಕ ನೋಂದಣಿ ಮಾಡಿದ್ದಾರೆ. 38 ದಿನಗಳ ಸಾಗುವ ಯಾತ್ರೆಯು ಆಗಸ್ಟ್ 9ರಂದು ಕೊನೆಯಾಗಲಿದೆ.