ಕೇರಳದ ಕೊಟ್ಟಿಯೂರ್ ಕ್ಷೇತ್ರಕ್ಕೆ ನಟ ದರ್ಶನ್ ಭೇಟಿ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೇರಳದ ಕಣ್ಣೂರಿನ ಸಮೀಪವಿರುವ ಕೊಟ್ಟಿಯೂರು ಶಿವನ ದೇವಾಲಯಕ್ಕೆ ನಟ ದರ್ಶನ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡೆವಿಲ್ ಚಿತ್ರೀಕರಣ ಮುಕ್ತಾಯಗೊಂಡ ಬೆನ್ನಲ್ಲೇ ದರ್ಶನ್, ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ನೀರ್ ಜತೆಗೆ ಶಿವನ ದರ್ಶನವನ್ನು ಪಡೆದಿದ್ದಾರೆ.
ತಿರುವನಂತಪುರಂ: ನಟ ದರ್ಶನ್ ಅವರ ಟೆಂಪಲ್ ರನ್ ಮುಂದುವರೆದಿದೆ. ಈ ಬಾರಿ ಮತ್ತೊಮ್ಮೆ ಕೇರಳದ ಪ್ರಸಿದ್ದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅದು ಕೇರಳದ ಕಣ್ಣೂರು ಸಮೀಪದ ಇತಿಹಾಸ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ. ಕೇರಳದ ಕೊಟ್ಟಿಯೂರು ದೇವಸ್ಥಾನದ ವರ್ಷಾವಧಿ ಕಾರ್ಯಕ್ರಮ ಆರಂಭವಾಗಿದ್ದು, ನಟ ದರ್ಶನ್, ಪತ್ನಿ ವಿಜಯಲಕ್ಷ್ಮೀ ಹಾಗೂ ಆಪ್ತ ಧನ್ವೀರ್ ಅವರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಕೇರಳದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದ ದರ್ಶನ್, ಈಗ ಕೇರಳದ ಮತ್ತೊಂದು ಪ್ರಸಿದ್ದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕೊಟ್ಟಿಯೂರ್ ಕ್ಷೇತ್ರದಲ್ಲಿ ಅಕ್ಕರೆ ಕೊಟ್ಟಿಯೂರು ಮತ್ತು ಇಕ್ಕರೆ ಕೊಟ್ಟಿಯೂರು ಎಂಬ ಎರಡು ದೇವಾಲಯಗಳಿವೆ. ನಟ ದರ್ಶನ್(Actor Darshan) ಅಕ್ಕರೆ ಕೊಟ್ಟಿಯೂರುಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇಲ್ಲಿ ವೈಶಾಖ ಮಾಸದಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಇದೇ ಕಾರಣಕ್ಕೆ ಜೂನ್ 8 ರಿಂದ ಜುಲೈ 4 ರವರೆಗೆ ಮಾತ್ರ ಈ ದೇವಾಲಯ ತೆರೆದಿರುತ್ತದೆ. ಅಲ್ಲದೆ ಜೂನ್ 30ರ ನಂತರ ಇಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಿದೆ.

ಕೊಟ್ಟಿಯೂರಿನ ಶಿವ ದೇವಾಲಯದ ಐತಿಹ್ಯ
ಕೇರಳದ ಕಣ್ಣೂರು ಜಿಲ್ಲೆಯ ಭಾಗವಾಗಿರುವ ಮತ್ತು ತಲಶ್ಶೇರಿಯಿಂದ 60 ಕಿಲೋ ಮೀಟರ್ ದೂರದಲ್ಲಿರುವ ವಾವಲಿ ಅಥವಾ ಬಾವಲಿ ನದಿ ತಟದಲ್ಲಿರುವ ಕೊಟ್ಟಿಯೂರಿನ ಶಿವ ದೇವಾಲಯವು ತನ್ನ ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ವಿಶ್ವ ವಿಖ್ಯಾತವಾಗಿದ್ದು ದಕ್ಷಿಣ ಕಾಶಿ ಎಂದೂ ಸಹಾ ಪ್ರಸಿದ್ಧವಾಗಿದೆ.
ಇದೇ ಸ್ಥಳದಲ್ಲೇ ಪರ ಶಿವನ ಮೊದಲನೇ ಪತ್ನಿ ದಾಕ್ಷಾಯಿಣಿಯ ತಂದೆ ದಕ್ಷನು ಯಾಗವನ್ನು ಮಾಡಿ ಆ ಯಾಗಕ್ಕೆ ಸ್ಮಶಾನವಾಸಿ ಭಸ್ಮಧಾರಿ ಶಿವವನ್ನು ಆಹ್ವಾನಿಸದೇ ಇದ್ದಾಗ ಬೇಸರಗೊಂಡ ದಾಕ್ಷಾಯಿಣಿ ಅದೇ ಯಜ್ಞ ಕುಂಡದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಸ್ಮರಣೆಗಾಗಿ ಪ್ರತೀ ವರ್ಷ ವೈಶಾಖ ಮಾಸದಲ್ಲಿ ಕೇವಲ 28 ದಿನಗಳ ಕಾಲ ಇಲ್ಲಿರುವ ಒಂದು ದೇವಾಲಯವು ತೆರೆದಿದ್ದು ಅಲ್ಲಿ ನಡೆಯುವ ವೈಶಾಖ ಪೂಜೆಯ ಭಾಗವಾಗಲು ಪ್ರಪಂಚಾದ್ಯಂತ ಇರುವ ಲಕ್ಷಾಂತರ ಭಕ್ತಾದಿಗಳು ಇಲ್ಲಿ ಬರುತ್ತಾರೆ.