ಬೆಂಗಳೂರು–ಮಂಗಳೂರು ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭಿಸುವ ಯೋಜನೆಗೆ ಮತ್ತಷ್ಟು ವೇಗ ದೊರೆತಿದೆ. ಈ ಮಾರ್ಗದಲ್ಲಿ ರೈಲ್ವೆ ಇಲಾಖೆ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ. ಪ್ರಯಾಣಿಕರಿಲ್ಲದೆ 16 ಬೋಗಿಗಳ ವಂದೇ ಭಾರತ್ ರೈಲನ್ನು ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ವರೆಗೆ ಸಂಚರಿಸಿ ಪರೀಕ್ಷೆ ನಡೆಸಲಾಗಿದೆ.

ಘಾಟ್ ಪ್ರದೇಶ ಸೇರಿದಂತೆ ಸವಾಲಿನ ಮಾರ್ಗದಲ್ಲಿ ರೈಲಿನ ವೇಗ, ಪ್ರಯಾಣದ ಅವಧಿ, ಬ್ರೇಕಿಂಗ್ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಹಳಿ ಸ್ಥಿತಿ ಹಾಗೂ ವಿವಿಧ ನಿಲ್ದಾಣಗಳಲ್ಲಿನ ಸಂಚಾರ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕಾರ್ಯಾಚರಣೆ, ಎಂಜಿನಿಯರಿಂಗ್, ಮೆಕ್ಯಾನಿಕಲ್, ಟ್ರಾಕ್ಷನ್ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಪ್ರಾಯೋಗಿಕ ಸಂಚಾರವನ್ನು ಮೇಲ್ವಿಚಾರಣೆ ಮಾಡಿದರು.

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 2.25ಕ್ಕೆ ಮಂಗಳೂರು ತಲುಪುವ ಸಾಧ್ಯತೆಯಿದೆ. ಹಾಸನ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್‌ನಲ್ಲಿ ನಿಲುಗಡೆ ಇರಬಹುದು. ಮರುಪ್ರಯಾಣದಲ್ಲಿ ಮಧ್ಯಾಹ್ನ 3ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 11ಕ್ಕೆ ಯಶವಂತಪುರ ತಲುಪುವ ನಿರೀಕ್ಷೆಯಿದೆ.

ಆದರೆ ಅಂತಿಮ ವೇಳಾಪಟ್ಟಿ, ಮಾರ್ಗ ಮತ್ತು ನಿಲ್ದಾಣಗಳ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಪ್ರಾಯೋಗಿಕ ಸಂಚಾರದ ಫಲಿತಾಂಶ ಪರಿಶೀಲಿಸಿದ ಬಳಿಕ ರೈಲ್ವೆ ಸಚಿವಾಲಯ ಅಂತಿಮ ನಿರ್ಧಾರ ಕೈಗೊಳ್ಳಲಿದೆ.