ಬಿಹಾರ ತನ್ನ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಹಾಗೂ ರಾಜ್ಯದ ಪ್ರಮುಖ ಪುರಾತತ್ವ ತಾಣಗಳನ್ನು ವಿಶ್ವ ದರ್ಜೆಯ ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲು ಬೃಹತ್ ಸಮಗ್ರ ಯೋಜನೆಯನ್ನು ರೂಪಿಸಿದೆ. ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ರಾಜ್ಯದ ಐತಿಹಾಸಿಕ ತಾಣಗಳ ವೈಜ್ಞಾನಿಕ ಸಮೀಕ್ಷೆ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹಂತ-ಹಂತದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಯೋಜನೆಯ ಭಾಗವಾಗಿ ವಿಶ್ವಪ್ರಸಿದ್ಧ ಬೋಧಗಯಾ, ಕೇಸರಿಯಾ ಸ್ತೂಪ, ಕೈಮೂರ್‌ನ ಮಾ ಮುಂಡೇಶ್ವರಿ ದೇವಾಲಯ ಹಾಗೂ ಸುಲ್ತಾನ್‌ಗಂಜ್‌ನಂಥ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಪ್ರವಾಸೋದ್ಯಮದ ಮೂಲಕ ಪ್ರಾದೇಶಿಕ ಆರ್ಥಿಕ ಸ್ವಾತಂತ್ರ್ಯದ ಹೊಸ ಪರಿಕಲ್ಪನೆ

ಪುರಾತತ್ವ ತಾಣಗಳಲ್ಲಿ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಪ್ರಾಚೀನ ಅವಶೇಷಗಳನ್ನು ಪತ್ತೆಹಚ್ಚಲು ಸರಕಾರವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಿದೆ. ಬೋಧಗಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಅಡಿಯಲ್ಲಿರುವ ಪ್ರಾಚೀನ ನಿರ್ಮಾಣಗಳನ್ನು ಪತ್ತೆಹಚ್ಚಲು ಲೈಡಾರ್ (LiDAR) ಮತ್ತು ಜಿಪಿಆರ್ (Ground Penetrating Radar) ತಂತ್ರಜ್ಞಾನ ಆಧಾರಿತ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಸಮೀಕ್ಷೆಗಳ ಮೂಲಕ ಲಭ್ಯವಾಗುವ ನಿಖರ ದತ್ತಾಂಶಗಳ ಆಧಾರದ ಮೇಲಷ್ಟೇ ವೈಜ್ಞಾನಿಕ ಉತ್ಖನನ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಇತ್ತೀಚೆಗೆ ಖ್ಯಾತ ಪುರಾತತ್ವ ತಜ್ಞ ಪದ್ಮಶ್ರೀ ಕೆ. ಕೆ. ಮೊಹಮ್ಮದ್ ಅವರನ್ನೊಳಗೊಂಡ ನಿಯೋಗವು ಸಲ್ಲಿಸಿದ ವರದಿಯ ಆಧಾರದ ಮೇಲೆ, ಕೈಮೂರ್ ಪ್ರದೇಶವನ್ನು ಹೊಸ 'ಹೆರಿಟೇಜ್ ಮತ್ತು ಇಕೋ-ಟೂರಿಸಂ ಸರ್ಕ್ಯೂಟ್' ಆಗಿ ಬೆಳೆಸಲು ಸಿದ್ಧತೆ ನಡೆಸಲಾಗಿದೆ. ನೈಸರ್ಗಿಕ ತಾಣಗಳಾದ ತಿಲ್ಹಾರ್ ಕುಂಡ್ ಮತ್ತು ಕರ್ಕಟಗಢ್ ಜಲಪಾತಗಳನ್ನು ಐತಿಹಾಸಿಕ ಅವಶೇಷಗಳೊಂದಿಗೆ ಸಂಯೋಜಿಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ತಾಣಗಳು ಬನಾರಸ್-ಕೋಲ್ಕತಾ ಎಕ್ಸ್‌ಪ್ರೆಸ್‌ವೇಗೆ ತೀರಾ ಹತ್ತಿರದಲ್ಲಿರುವುದರಿಂದ ಪ್ರವಾಸಿಗರಿಗೆ ಅತ್ಯಂತ ಸುಲಭ ಸಂಪರ್ಕ ಸಿಗಲಿದೆ.

ಅಲ್ಲದೆ, ಕೈಮೂರ್ ಸೇರಿದಂತೆ ರಾಜ್ಯದ ಪ್ರಮುಖ ಪುರಾತತ್ವ ತಾಣಗಳನ್ನು ವೈಜ್ಞಾನಿಕವಾಗಿ ಮರುಸ್ಥಾಪಿಸಿದ ನಂತರ, ಅವುಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರದ ಮೂಲಕ ಬಿಹಾರ ಸರಕಾರ ಶ್ರಮಿಸಲಿದೆ. ಈ ಸಮಗ್ರ ಯೋಜನೆಯು ಬಿಹಾರದ ಧಾರ್ಮಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಲಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ತರುವ ನಿರೀಕ್ಷೆಯಿದೆ.