ಒಡಿಶಾ ಸರಕಾರ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ರಾಜ್ಯದ ಕರಾವಳಿ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ 8,300.79 ಕೋಟಿ ರು. ವೆಚ್ಚದಲ್ಲಿ 160.18 ಕಿಮೀ. ಉದ್ದದ ರಾಮೇಶ್ವರ–ಪರದೀಪ ಕರಾವಳಿ ಹೆದ್ದಾರಿ ನಿರ್ಮಿಸಲು ಮುಂದಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯು ರಾಜ್ಯದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.

Untitled design - 2026-07-21T174045.157

ಈ ಹೆದ್ದಾರಿ ಖುರ್ದಾ, ಪುರಿ, ಕೇಂದ್ರಪಾಡಾ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳ ಮೂಲಕ ಸಾಗಲಿದ್ದು, ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸಲಿದೆ. ರಾಮೇಶ್ವರದಿಂದ ಕೋಣಾರ್ಕ್‌ವರೆಗೆ ನಾಲ್ಕು ಪಥಗಳ ನಿಯಂತ್ರಿತ ಪ್ರವೇಶದ ಹೆದ್ದಾರಿ ಹಾಗೂ ಕೋಣಾರ್ಕ್‌ನಿಂದ ಪರದೀಪವರೆಗೆ ಎರಡು ಪಥಗಳ ರಸ್ತೆ ನಿರ್ಮಾಣವಾಗಲಿದೆ. ಗಂಟೆಗೆ 100 ಕಿಮೀ. ವೇಗಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಈ ರಸ್ತೆ ಸುರಕ್ಷಿತ ಮತ್ತು ವೇಗವಾದ ಸಂಚಾರಕ್ಕೆ ನೆರವಾಗಲಿದೆ.

ಯೋಜನೆ ಪೂರ್ಣಗೊಂಡ ಬಳಿಕ ರಾಮೇಶ್ವರದಿಂದ ಪರದೀಪದ ನಡುವಿನ ಪ್ರಯಾಣದ ಅವಧಿ ಸುಮಾರು 2.5 ಗಂಟೆಗಳಷ್ಟು ಕಡಿಮೆಯಾಗಲಿದೆ. ಇದರಿಂದ ಕಡಲತೀರ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ ಹಾಗೂ ಪ್ರಕೃತಿ ಆಧಾರಿತ ಪ್ರವಾಸಕ್ಕೆ ಉತ್ತೇಜನ ದೊರೆಯಲಿದ್ದು, ಕರಾವಳಿಯ ಜೀವವೈವಿಧ್ಯ ಪ್ರದೇಶಗಳಿಗೆ ಸುಲಭ ಪ್ರವೇಶ ಸಾಧ್ಯವಾಗಲಿದೆ. ಜತೆಗೆ ಸರಕು ಸಾಗಣೆ, ಸ್ಥಳೀಯ ಉದ್ಯೋಗಾವಕಾಶಗಳು ಹಾಗೂ ಕರಾವಳಿ ಪ್ರದೇಶಗಳ ಆರ್ಥಿಕ ಚಟುವಟಿಕೆಗಳೂ ವೃದ್ಧಿಯಾಗುವ ನಿರೀಕ್ಷೆಯಿದೆ.