ಕಸಾರಾ ಘಾಟ್ನಲ್ಲಿ ಭೂಕುಸಿತ: ತಾತ್ಕಾಲಿಕ ನಿರ್ಬಂಧ
ಭಾರೀ ಮಳೆಯ ಪರಿಣಾಮ ಗುಡ್ಡಗಾಡು ಪ್ರದೇಶದಲ್ಲಿ ಮಣ್ಣು ಮತ್ತು ಬಂಡೆಗಳು ಜಾರುವ ಅಪಾಯ ಹೆಚ್ಚಿರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಪರಿಸ್ಥಿತಿ ಸಂಪೂರ್ಣ ಸುರಕ್ಷಿತವಾಗುವವರೆಗೆ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡಬಾರದು.
ಮಹಾರಾಷ್ಟ್ರದ ಕಸಾರಾ ಘಾಟ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಪ್ರಮುಖ ಕೋಟೆಗಳು ಹಾಗೂ ಜಲಪಾತಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ.
ಭಾರೀ ಮಳೆಯ ಪರಿಣಾಮ ಗುಡ್ಡಗಾಡು ಪ್ರದೇಶದಲ್ಲಿ ಮಣ್ಣು ಮತ್ತು ಬಂಡೆಗಳು ಜಾರುವ ಅಪಾಯ ಹೆಚ್ಚಿರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಪರಿಸ್ಥಿತಿ ಸಂಪೂರ್ಣ ಸುರಕ್ಷಿತವಾಗುವವರೆಗೆ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ಪ್ರದೇಶದ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಭೂಕುಸಿತದ ಅಪಾಯ ಕಡಿಮೆಯಾದ ನಂತರವೇ ಪ್ರವಾಸಿ ತಾಣಗಳನ್ನು ಪುನಃ ಸಾರ್ವಜನಿಕರಿಗೆ ತೆರೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮಳೆಗಾಲದಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭೂಕುಸಿತ, ಬಂಡೆ ಉರುಳುವಿಕೆ ಹಾಗೂ ಹಠಾತ್ ಪ್ರವಾಹದಂತಹ ಘಟನೆಗಳು ಸಾಮಾನ್ಯವಾಗಿರುವುದರಿಂದ ಪ್ರವಾಸಿಗರು ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.