ಮೂರು ದಿನದ ಐಐಟಿಎಂ ಪ್ರವಾಸಿ ಮೇಳಕ್ಕೆ ಬೆಂಗಳೂರಿನಲ್ಲಿಂದು ಚಾಲನೆ
ಪ್ರವಾಸೋದ್ಯಮ, ಪ್ರಯಾಣ, ಆತಿಥ್ಯ ಮತ್ತು ವಿರಾಮ ರಜೆಗಳಿಗೆ ಸಂಬಂಧಿಸಿದ ಉದ್ಯಮಗಳನ್ನು ಒಂದೇ ಸೂರಿನಡಿ ತರುವ ಐಐಟಿಎಂ ಈ ವರ್ಷ ರಜತ ಸಂಭ್ರಮದಲ್ಲಿದೆ. ಪ್ರವಾಸಿಗರಿಗೆ ಮಾರ್ಗದರ್ಶಿಯಾಗುವ ಜತೆಗೆ ಐಐಟಿಎಂ ಪ್ರವಾಸೋದ್ಯಮದ ವಿವಿಧ ವಿಭಾಗಗಳ ಪ್ರತಿನಿಧಿಗಳ ನಡುವೆ ಸಂಪರ್ಕ ಕೊಂಡಿಯಂತೆಯೂ ಕೆಲಸ ಮಾಡುತ್ತಿದೆ.
ಬೆಂಗಳೂರು: ಮೂರು ದಿನಗಳ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿ ಮೇಳ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್(ಐಐಟಿಎಂ) ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಅರುಣಾಚಲ ಪ್ರದೇಶದ ಪ್ರವಾಸೋದ್ಯಮ ಸಚಿವರಾದ ಪಸಂಗ್ದೋರ್ಜಿ ಸೋನಾ ಮೇಳವನ್ನು ಉದ್ಘಾಟಿಸಿದ್ದು, ಮೊದಲ ದಿನವೇ ವಿವಿಧ ರಾಜ್ಯಗಳು ಮತ್ತು ವಿದೇಶಗಳ ಪ್ರವಾಸೋದ್ಯಮ ಸಂಸ್ಥೆಗಳು, ಪ್ರಯಾಣ, ಹೋಟೆಲ್ ಮತ್ತು ಆತಿಥ್ಯ ಕ್ಷೇತ್ರದ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿದ್ದವು.
ರಜತ ಸಂಭ್ರಮದಲ್ಲಿ ಐಐಟಿಎಂ
ಪ್ರವಾಸೋದ್ಯಮ, ಪ್ರಯಾಣ, ಆತಿಥ್ಯ ಮತ್ತು ವಿರಾಮ ರಜೆಗಳಿಗೆ ಸಂಬಂಧಿಸಿದ ಉದ್ಯಮಗಳನ್ನು ಒಂದೇ ಸೂರಿನಡಿ ತರುವ ಐಐಟಿಎಂ ಈ ವರ್ಷ ರಜತ ಸಂಭ್ರಮದಲ್ಲಿದೆ. ಪ್ರವಾಸಿಗರಿಗೆ ಮಾರ್ಗದರ್ಶಿಯಾಗುವ ಜತೆಗೆ ಐಐಟಿಎಂ ಪ್ರವಾಸೋದ್ಯಮದ ವಿವಿಧ ವಿಭಾಗಗಳ ಪ್ರತಿನಿಧಿಗಳ ನಡುವೆ ಸಂಪರ್ಕ ಕೊಂಡಿಯಂತೆಯೂ ಕೆಲಸ ಮಾಡುತ್ತಿದೆ. ಟ್ರಾವೆಲ್ ಏಜೆಂಟರು, ಟೂರ್ ಆಪರೇಟರ್ಗಳು, ಹೋಟೆಲ್ ಮತ್ತು ರೆಸಾರ್ಟ್ಸ್, ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ತಂತ್ರಜ್ಞಾನ ಸಂಸ್ಥೆಗಳು, ಆನ್ಲೈನ್ ಟ್ರಾವೆಲ್ ಪೋರ್ಟಲ್ಗಳು ಇತ್ಯಾದಿ ಈ ಪ್ರವಾಸಿ ಮೇಳದಲ್ಲಿ ಭಾಗವಹಿಸಲಿವೆ.

25 ರಾಜ್ಯಗಳು, 20 ಅಂತರಾಷ್ಟ್ರೀಯ ತಾಣಗು, 800ಕ್ಕೂ ಹೆಚ್ಚು ಪ್ರದರ್ಶಕರು
ಈ ಬಾರಿಯ ಮೇಳದಲ್ಲಿ 25 ರಾಜ್ಯಗಳು ಮತ್ತು 20 ಅಂತರಾಷ್ಟ್ರೀಯ ತಾಣಗಳ 800ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ. ಧಾರ್ಮಿಕ ಯಾತ್ರೆಗಳು, ಸಾಹಸ, ಸಂಸ್ಕೃತಿ, ವನ್ಯಜೀವಿ ಪ್ರವಾಸೋದ್ಯಮ ಇತ್ಯಾದಿ ವೈವಿಧ್ಯಮಯ ಕ್ಷೇತ್ರಗಳ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ.. ಕರ್ನಾಟಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮೈಸೂರು ದಸರಾ ಉತ್ಸವ ಮತ್ತು ರಾಜ್ಯದ ಸಂಸ್ಕೃತಿ ಮತ್ತು ವಾಸ್ತುಶಿಲ್ಪಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ.ಆರ್.ರಾಜೇಂದ್ರ, ಜಂಗಲ್ಲಾಡ್ಜಸ್ ಆಂಡ್ ರೆಸಾರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾಂತ್ ಶಂಕಿನಮಠ, ಕರ್ನಾಟಕ ಟೂರಿಸಂ ಸೊಸೈಟಿ ಹಾಗೂ ಹೋಟೆಲ್ ಮತ್ತು ರೆಸ್ಟೋರಂಟ್ ಒಕ್ಕೂಟದ ಅಧ್ಯಕ್ಷ ಶ್ಯಾಮರಾಜು, ಕರ್ನಾಟಕ ಹೋಟೆಲ್ ಅಸೋಸಿಯೇಷನ್ನ ಅಧ್ಯಕ್ಷ ಜಿ.ಕೆ. ಶೆಟ್ಟಿ, ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ನ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.