ಅಫ್ಘಾನಿಸ್ತಾನ ಶಾಪಗ್ರಸ್ತ ನೆಲ. ಮಹಾಭಾರತದ ಶಕುನಿ ಗಾಂಧಾರಿ ಕೂಡ ಒಂದು ರೀತಿಯಲ್ಲಿ ಶಾಪಗ್ರಸ್ತರೇ. ಕುರುಡ ದೊರೆಯನ್ನು ಮದುವೆಯಾಗಿ ಬಂದಾಗ ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ರೀತಿ, ತಂಗಿಯ ಮಕ್ಕಳಿಗೆ ಅಧಿಕಾರ ದಕ್ಕಲಿ ಎಂದುಕೊಂಡ ಶಕುನಿಯ ವಂಚನೆ ಇತ್ಯಾದಿಗಳು ಗಾಂಧಾರದ ಬಗ್ಗೆ ನಮ್ಮಲ್ಲಿ ತುಸು ದೂರ ಸೃಷ್ಟಿಸಿರಲಿಕ್ಕೂ ಸಾಕು. ಆದರೆ ಅಫ್ಘಾನಿಸ್ತಾನವನ್ನು ಲೇಖಕ ಗೋಪಾಲಕೃಷ್ಣ ಕುಂಟಿನಿ ನಮ್ಮ ಹತ್ತಿರಕ್ಕೆ ತಂದಿದ್ದಾರೆ. ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಅಡಿಕೆ ತೋಟದಲ್ಲಿ ಕುಳಿತುಕೊಂಡು ಜಿಯೊಪಾಲಿಟಿಕ್ಸ್‌ ಬಗ್ಗೆ ಬರೆಯುತ್ತಿರುವ ಕುಂಟಿನಿಯ ಈ ಕೃತಿ ಇಷ್ಟವಾಗುವಂತಿದೆ. ಅವರದು ಪಳಗಿದ ಪತ್ರಕರ್ತನ ಕಣ್ಣು, ಕಿವಿ. ಅಫ್ಘಾನ ದೊಡ್ಡ ಸಾಮ್ರಾಜ್ಯಗಳ ಖಬರಸ್ತಾನವಾಗಿದ್ದು ಹೇಗೆ, ರಷ್ಯ- ಅಮೆರಿಕ ಎಲ್ಲರೂ ಇಲ್ಲಿ ಬಾಲ ಮಡಚಿಕೊಂಡ ರೀತಿ, 7 ಲಕ್ಷದಷ್ಟಿದ್ದ ಹಿಂದೂ-ಸಿಕ್ಖರು 700ಕ್ಕಿಳಿದ ಬಗೆ ಇದೆಲ್ಲ ಚಿತ್ರಿಸುತ್ತಾರೆ. ಜತೆಗೇ ಅವರದು ಸೂಕ್ಷ್ಮ ಕತೆಗಾರನ ಪ್ರಜ್ಞೆ. ಹೀಗಾಗಿ ಅಫ್ಘಾನಿಸ್ತಾನವನ್ನು ಬರಿಯ ಬಾಂಬುಗಳು ಸಿಡಿಯುವ ದೇಶವಾಗಿ ನೋಡದೆ, ಕವಿತ್ವದ, ಜಲಾಲುದ್ದೀನ್‌ ರೂಮಿಯ, ಬಾಮಿಯಾನ್‌ ಬುದ್ಧರ, ನೂರ್‌ ಜಹಾನ್‌ಳ, ರಬಿಯಾ ಬಾಲ್ಖಿಯ, ಸೊಹ್ರಾಬ್‌ ರುಸ್ತುಮರ, ಅಫೀಮಿನ ಅಮಲಿನ ದೇಶವಾಗಿಯೂ ನೋಡುತ್ತಾರೆ.

ಇದನ್ನೂ ಓದಿ: ಬೆಳ್ಳಿಪರದೆಯ ಮೇಲೆ ಅಮೆರಿಕಾದ ದರ್ಶನ

ಲೇಖಕರು ಭಾರತೀಯರಿಗೆ ಆಪ್ತವಾಗಬಹುದಾದ ಬಾಮಿಯಾನ್‌ ಬುದ್ಧರ ಏರಿಳಿತಗಳನ್ನು ಸೊಗಸಾಗಿ ಬಣ್ಣಸುತ್ತಾರೆ. ಹಿಂದುಕುಶ್ ಪರ್ವತದ ಹೊದ್ದಿಗೆ ತಾಗಿಕೊಂಡಂತೆ ಇರುವ ಊರು ಬಾಮಿಯಾನ್. ಒಂದಾನೊಂದು ಕಾಲದಲ್ಲಿ ಸಿಲ್ಕ್ ರೋಡ್ ಹಾದಿಯ ಈ ಊರು ಚೀನಾ, ಪರ್ಷಿಯಾ, ಭಾರತ, ರೋಮ್ ಸೇರಿದಂತೆ ಎಲ್ಲ ಅಂತಾರಾಷ್ಟ್ರೀಯ ಸಂಚಾರಿಗಳಿಗೆ ತಂಗುದಾಣವಾಗಿತ್ತು. ಅತ್ತ ಬಾಮಿಯಾನ್ ನದಿ, ಇತ್ತ ಹಿಂದುಕುಶ್ ಸಾಲು, ನಡುವೆ ಹಸಿರು ನಾಡು ಬಾಮಿಯಾನ್, ವ್ಯಾಪಾರ ವ್ಯವಹಾರ ಕೇಂದ್ರವೂ ಆಗಿ ಬೆಳೆಯುತ್ತಾ ಬಂದ ಬಾಮಿಯಾನ್ ಸಾಂಸ್ಕೃತಿಕ ತಾಣವಾಗಿ ಬೆಳೆಯಿತು. ಕುಶಣರು ಗಾಂಧಾರವನ್ನು ಆಳುತ್ತಿದ್ದಾಗ ಬೌದ್ಧಧರ್ಮ ಉಚ್ಛಾಯಕ್ಕೆ ಬಂತು. ಬಾಮಿಯಾನ್‌ನ ಸಾಂಸ್ಕೃತಿಕ ನಗರಿಯ ವೈಭವವನ್ನು ಹೆಚ್ಚಿಸಲು ಆರನೆಯ ಶತಮಾನದಲ್ಲಿ ಬೆಟ್ಟದಲ್ಲಿ ಸುರಂಗ ತೋಡಿ, ಬುದ್ದನ ಎರಡು ಮೂರ್ತಿಗಳನ್ನು ಕೆತ್ತಿದರು. ಜೊತೆಗೆ ನೂರಾರು ವರ್ಣಚಿತ್ರಗಳು, ಚಿಕ್ಕ ಚಿಕ್ಕ ಬುದ್ಧನ ಪ್ರತಿಮೆಗಳು. 174 ಮತ್ತು 115 ಅಡಿ ಎತ್ತರದ ಮಹಾಮೂರ್ತಿಗಳು ಬಾಮಿಯಾನ್‌ನ ಪ್ರತಿಷ್ಠೆಯ ಸಂಕೇತವಾದವು. ಅಂದಿನಿಂದ ಐದುನೂರು ವರ್ಷಕಾಲ ಬಾಮಿಯಾನ್ ಬುದ್ಧ ಜಗತ್ತಿನ ಹೆಮ್ಮೆಯಾಗಿ ಕಂಗೊಳಿಸುತ್ತಿದ್ದ.

2001ರಲ್ಲಿ ತಾಲಿಬಾನಿಗಳು ಈ ಬುದ್ಧನ ಮೇಲೆ ಕಣ್ಣುಹಾಕಿದರು. ಮೂರ್ತಿಪೂಜೆ ಇಸ್ಲಾಂನದ್ದಲ್ಲ. ನಮ್ಮ ಇಸ್ಲಾಂ ದೇಶದಲ್ಲಿ ಮೂರ್ತಿಗಳಿರುವುದು ಸಲ್ಲ ಎಂದು ಘೋಷಿಸಿದರು. ಸತತ 25 ದಿನಗಳ ಕಾಲ ಧ್ವಂಸಕಾರ್ಯದ ಕೆಲಸ ಮಾಡಿ, ಕೊನೆಗೊಮ್ಮೆ ಡೈನಮೆಟ್ ಇಟ್ಟು ಎರಡೂ ಮೂರ್ತಿಗಳನ್ನು ಉಡಾಯಿಸಿದರು. ಬುದ್ಧ ಚೂರುಚೂರಾಗಿ ಬೀಳುವುದನ್ನು ಅಲ್ ಜಝೀರಾ ಪ್ರಸಾರ ಮಾಡಿತು ಎಂದು ಬರೆಯುವ ಲೇಖಕರು, ಯಾವತ್ತೂ ಅಫ್ಘಾನಿಸ್ತಾನದ ಮುಸಲ್ಮಾನರಿಗೆ ಬುದ್ಧ ಬೇಡವೆನಿಸಿರಲಿಲ್ಲ. ಅವರೆಂದೂ ಅವನ ತಂಟೆಗೆ ಹೋಗಲೂ ಇಲ್ಲ. ಬಾಮಿಯಾನ್ ಆ ಬುದ್ಧನ ಕಾರಣಕ್ಕೆ ಪ್ರವಾಸಿ ತಾಣವಾಗಿತ್ತು. ಬುದ್ಧನನ್ನು ನೋಡಲು ಬಂದವರಿಗೆ ಮುಸಲ್ಮಾನ ಹುಡುಗರು ಗೈಡ್‌ಗಳಾಗಿ ತಮ್ಮ ಹೆಮ್ಮೆಯ ತಾಣವನ್ನು ಪರಿಚಯಿಸುತ್ತಿದ್ದರು ಎಂದು ಕೂಡ ಉಲ್ಲೇಖಿಸಲು ಮರೆಯುವುದಿಲ್ಲ.

Untitled design - 2026-05-11T161612.859

ಹೆಣ್ಣು ಇಲ್ಲಿ ಬೀದಿಯಲ್ಲಿ ಕಾಣಿಸುವುದಿಲ್ಲ. ಕಾಣಿಸಿದರೆ ಛಡಿಯೇಟು ಅಥವಾ ಕಲ್ಲೇಟು ಖಚಿತ. ಅವರು ಕಲಿಯುವಂತಿಲ್ಲ. ಕಲಿಸುವಂತಿಲ್ಲ. ಇಲ್ಲಿ ಸಂಗೀತ ಹರಾಮ್‌. ಕಾರಿನ ಸ್ಟೀರಿಯೋದಲ್ಲಿ ಸಂಗೀತ ಕೇಳಿಸಿದರೆ ಕಾರಿಗೇ ಬೆಂಕಿ ಹಚ್ಚುತ್ತಾರೆ. ಯಾರಾದರೂ ಹೆಣ್ಣು ಮಕ್ಕಳು ಓದುತ್ತಾರೆ ಬರೆಯುತ್ತಾರೆ ಎಂದು ಗೊತ್ತಾದರೆ ಮನೆಯಿಂದ ಹೊರಗೆಳೆದು ತಂದು ಬರ್ಬರವಾಗಿ ಸಾಯಿಸುತ್ತಾರೆ. ಲೇಖಕರು, ಕಲಾವಿದರು ಇಲ್ಲಿ ಬದುಕುವಂತಿಲ್ಲ. ಇಂಥ ಬರ್ಬರ ತಾಲಿಬಾನ್‌ ಆಡಳಿತ ಇಲ್ಲಿ ಬಂದುದಾದರೂ ಹೇಗೆ ಎಂಬ ಬಗ್ಗೆ ಇಲ್ಲಿ ವಿಸ್ತೃತವಾದ ವಿವರ ಇದೆ.

ಇಲ್ಲಿ ಬಂದೂಕು ಹಿಡಿದ ಗಂಡಸರ ಹಾಗೇ ಸಿಡಿದು ನಿಲ್ಲುವ ಹೆಂಗಸರ ಆವೃತ್ತಿಗಳೂ ಇವೆ. ನರ್ಗೀಸ್‌ ಎಂಬ ಹೆಣ್ಣುಮಗಳ ಮಾತು ಕೇಳಿ: 'ನಾವು ಅಫಘಾನಿ ಹೆಣ್ಮಕ್ಕಳು ನಿಮ್ಮೆಲ್ಲರಂತೆ ತುಂಬು ಭರವಸೆ ಮತ್ತು ತುಂಬು ಆಕಾಂಕ್ಷೆಗಳಿಂದ ಜನ್ಮ ತಾಳಿದ್ದೇವೆ. ಆದರೆ ಅದನ್ನೆಲ್ಲಾ ಹೂತುಹಾಕಲಾಯಿತು. ನಾವು ಬಾಗಿಲು ತೆರೆಯುವ ಘಳಿಗೆಗಾಗಿ ಕಾಯುತ್ತಾ ಇದ್ದೇವೆ. ಇಂದಲ್ಲ ನಾಳೆ ಅವಕಾಶಗಳು ಮರಳುತ್ತವೆ ಎಂದು ನಂಬಿದ್ದೇವೆ. ಕಾಯುವ ಕಾಲಚಕ್ರದ ತಿರುಗಣೆಯಲ್ಲಿ ಸುತ್ತುತ್ತಾ ಇದ್ದೇವೆ. ಎಷ್ಟು ಕಾಲ ಕಾಯುವುದು? ಯಾರಿಗೆ ಗೊತ್ತು? ನಮ್ಮ ಬದುಕಿನ ಅಂದದ ಘಳಿಗೆಗಳು ಈ ಕಾಯುವುದರಲ್ಲಿ ಮುಗಿದು ಹೋಗುತ್ತದಾ? ನಾನು ಸತ್ತಾದರೂ ಹೋದೇನು, ಬಸುರಿಯಾಗಲಾರೆ. ಖಂಡಿತವಾಗಿಯೂ ನಾನು ಹೆರುವುದಿಲ್ಲ. I will never allow myself to bring a child into this world, in this geographical prison, only for their dreams to remain just dreams. I refuse to let them grow up in a place where their potential is crushed before they even have the chance to discover it.'

ಪುಸ್ತಕ ಮಾಹಿತಿ

ಲೇಖಕ: ಗೋಪಾಲಕೃಷ್ಣ ಕುಂಟಿನಿ

ಸಾವಣ್ಣ ಪ್ರಕಾಶನ

ಪುಟ 136

ಬೆಲೆ 200