ಏಪ್ರಿಲ್ 22ರಿಂದ ಮೇ 14ರ ತನಕ ಜರುಗಿದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅದ್ದೂರಿ ಬ್ರಹ್ಮಕಲಶೋತ್ಸವ ಭಕ್ತಿ, ಸಂಪ್ರದಾಯ, ಸಂಘಟನೆ ಮತ್ತು ಜನಸಾಗರಕ್ಕೆ ಸಾಕ್ಷಿಯಾಯಿತು.ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಾಗಿರಲಿಲ್ಲ; ಅದು ಊರಿನ ಆತ್ಮವನ್ನೇ ಒಂದೇ ವೇದಿಕೆಯಲ್ಲಿ ಸೇರಿಸಿದ ಮಹೋತ್ಸವವಾಗಿತ್ತು.

ದೂರದೂರಿನಿಂದ ಬಂದ ಭಕ್ತರು, ವಾಹನಗಳಿಂದ ತುಂಬಿದ ರಸ್ತೆಗಳು, ರಾತ್ರಿ ಹೊತ್ತಿಗೂ ಕಡಿಮೆಯಾಗದ ಜನರ ಓಡಾಟ, ದೇವಸ್ಥಾನದ ಸುತ್ತ ಹರಡಿದ್ದ ದೀಪಾಲಂಕಾರ ಈ ಎಲ್ಲವೂ ಸೇರಿ ಪಡುಬಿದ್ರಿಯನ್ನು ಒಂದು ಆಧ್ಯಾತ್ಮಿಕ ನಗರವನ್ನೇ ಮಾಡಿಬಿಟ್ಟಿತ್ತು. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡುಬಿದ್ರಿಯ ಜನಜೀವನದ ಕೇಂದ್ರಬಿಂದು. ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ತಿಂಗಳುಗಳ ಹಿಂದೆಯೇ ಆರಂಭವಾಗಿದ್ದವು. ಡಾ. ಪ್ರಕಾಶ್ ಶೆಟ್ಟಿ ಬಂಜಾರ ಮತ್ತು ಧರ್ಮಪತ್ನಿ ಆಶಾ ಅವರ ಮುಂದಾಳತ್ವದಲ್ಲಿ ನಡೆದ ದೇವಸ್ಥಾನದ ಜೀರ್ಣೋದ್ಧಾರ, ಅಲಂಕಾರ, ಯಾಗಶಾಲೆ ನಿರ್ಮಾಣ, ಭಕ್ತರ ವ್ಯವಸ್ಥೆ, ಪ್ರತಿ ಕೆಲಸದಲ್ಲೂ ಊರಿನ ಜನರ ಪಾಲ್ಗೊಳ್ಳುವಿಕೆ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಇದನ್ನೂ ಓದಿ: ಪಡುಬಿದ್ರಿಯ ಒಡೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ

ಹಿರಿಯರು ತಮ್ಮ ಅನುಭವ ಹಂಚಿಕೊಂಡರೆ, ಯುವಕರು ಸ್ವಯಂಸೇವಕರಾಗಿ ದುಡಿದರು. ಮಹಿಳೆಯರು ಪೂಜೆ, ಪ್ರಸಾದ, ಅಲಂಕಾರದಲ್ಲಿ ತೊಡಗಿಕೊಂಡರು. ಈ ಉತ್ಸವದಲ್ಲಿ ನಾನು ಎಂಬುದು ಕಡಿಮೆ, ನಾವು ಎಂಬ ಭಾವನೆ ಹೆಚ್ಚಾಗಿ ಕಂಡಿತು.

Untitled design (51)

ಬ್ರಹ್ಮಕಲಶೋತ್ಸವದ ಅಂಗವಾಗಿ ಹಲವು ದಿನಗಳ ಕಾಲ ವಿಶೇಷ ಹೋಮ, ಹವನ, ಪೂಜೆಗಳು, ಧಾರ್ಮಿಕ ಸಭೆಗಳು ನಡೆದವು. ಬೆಳಗಿನ ಜಾವದಿಂದಲೇ ದೇವಸ್ಥಾನ ವಾತಾವರಣ ವೇದಮಂತ್ರಗಳಿಂದ ಮೊಳಗುತ್ತಿತ್ತು. ಯಾಗಶಾಲೆಯಲ್ಲಿನ ಅಗ್ನಿಹೋತ್ರ, ಕಲಶ ಪೂಜೆ, ದೇವರ ಅಭಿಷೇಕ, ಮಹಾಪೂಜೆ—ಪ್ರತಿ ವಿಧಿವಿಧಾನವೂ ಸಂಪ್ರದಾಯಬದ್ಧವಾಗಿ ನಡೆಯಿತು.

ಕೇವಲ ಪೂಜೆ ಮಾತ್ರವಲ್ಲ; ಪ್ರತಿಯೊಂದು ಕಾರ್ಯಕ್ರಮದಲ್ಲೂ ಶಿಸ್ತು ಮತ್ತು ವ್ಯವಸ್ಥೆ ಗಮನಸೆಳೆದವು. ಸಾವಿರಾರು ಜನರು ಇದ್ದರೂ ಎಲ್ಲೆಡೆ ಸಂಘಟಿತ ನಿರ್ವಹಣೆ ಕಂಡುಬಂತು.

ಜನರ ಮಹಾಪೂರ ಕಂಡ ಪಡುಬಿದ್ರಿ

ಈ ಉತ್ಸವದ ದೊಡ್ಡ ವಿಶೇಷವೆಂದರೆ ಅಪಾರ ಭಕ್ತರ ಸಂಖ್ಯೆ. ಕರ್ನಾಟಕದ ವಿವಿಧ ಜಿಲ್ಲೆಗಳಷ್ಟೇ ಅಲ್ಲ, ಮುಂಬಯಿ, ಬೆಂಗಳೂರು, ಗೋವಾ, ವಿದೇಶಗಳಿಂದಲೂ ಭಕ್ತರು ಆಗಮಿಸಿದ್ದರು.

ಅನ್ನಸಂತರ್ಪಣೆ: ಭಕ್ತಿಗೆ ಜತೆಯಾದ ಆತಿಥ್ಯ

ಧಾರ್ಮಿಕ ಕಾರ್ಯಕ್ರಮಗಳಷ್ಟೇ ಅಲ್ಲ, ಇಲ್ಲಿ ನಡೆದ ಅನ್ನಸಂತರ್ಪಣೆಯೂ ಅಪಾರ ಮೆಚ್ಚುಗೆ ಪಡೆಯಿತು. ಸಾವಿರಾರು ಭಕ್ತರಿಗೆ ಪ್ರತಿದಿನ ಊಟ ವ್ಯವಸ್ಥೆ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಸ್ವಯಂಸೇವಕರು ಅದನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು.ಒಂದು ದೇವಸ್ಥಾನ ಉತ್ಸವದ ಯಶಸ್ಸು ಅಲ್ಲಿ ಬಂದ ಭಕ್ತರಿಗೆ ದೊರೆಯುವ ಗೌರವದಲ್ಲೂ ಇರುತ್ತದೆ ಎಂಬುದನ್ನು ಪಡುಬಿದ್ರಿ ಮತ್ತೊಮ್ಮೆ ತೋರಿಸಿತು.

Untitled design (50)

ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಬ್ರಹ್ಮಕಲಶೋತ್ಸವ ಕೇವಲ ಧಾರ್ಮಿಕ ವಿಧಿಗಳಿಗೆ ಸೀಮಿತವಾಗಿರಲಿಲ್ಲ. ಸಂಜೆ ಹೊತ್ತಿಗೆ ದೇವಸ್ಥಾನದ ವಾತಾವರಣವೇ ಬದಲಾಗುತ್ತಿತ್ತು. ಭಜನೆ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಎಲ್ಲವೂ ಸೇರಿ ಉತ್ಸವವನ್ನು ಜನಪರವಾಗಿಸಿತು. ಹಿರಿಯರು ಭಕ್ತಿಗೀತೆಗಳಲ್ಲಿ ತಲ್ಲೀನರಾದರೆ, ಮಕ್ಕಳು ಉತ್ಸವದ ಬಣ್ಣಗಳಲ್ಲಿ ತೇಲುತ್ತಿದ್ದರು. ಸಂಗೀತ, ನಾಟಕ, ನೃತ್ಯ ಯಕ್ಷಗಾನ ಪ್ರದರ್ಶನಗಳಿಗೆ ಅಪಾರ ಜನಸಾಗರವೇ ಸಾಕ್ಷಿಯಾಯಿತು. ದೇವಸ್ಥಾನ ಉತ್ಸವಗಳು ಕೇವಲ ಭಕ್ತಿ ಕೇಂದ್ರಗಳಲ್ಲ; ಅವು ಸಮಾಜವನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ವೇದಿಕೆಗಳೂ ಹೌದು ಎಂಬುದನ್ನು ಈ ಬ್ರಹ್ಮಕಲಶೋತ್ಸವ ಮತ್ತೆ ನೆನಪಿಸಿತು.

ಬ್ರಹ್ಮಕಲಶೋತ್ಸವ ಯಶಸ್ವಿಯಾದ ಕುರಿತು ಪಡುಬಿದ್ರಿ ಶ್ರೀ ಮಹಾಲಿಂಗೆಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಎಂ ಅರ್ ಜಿ ಸಮೂಹ ಸಂಸ್ಥೆಗಳ ಚೇರ್ ಮನ್ ಆಗಿರುವ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ಹೇಳಿದ್ದು ಹೀಗೆ.

ಇದು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಕೃಪೆಯಲ್ಲಿ ಒಂದು ಸಂಕಲ್ಪ- ಒಂದು ಸಾಧನೆ. ಪಡುಬಿದ್ರಿ ಇದು ಕೇವಲ ಒಂದು ಊರಲ್ಲ ಇದು ನನ್ನ ಕುಟುಂಬದ ನೆನಪುಗಳ ನೆಲೆ. ನನ್ನ ಪತ್ನಿ ಆಶಾ ಪ್ರಕಾಶ್ ಶೆಟ್ಟಿ ಅವರ ಜನ್ಮಭೂಮಿ. ಈ ನೆಲವು ಅವರ ತಂದೆ ದಿವಂಗತ ಮಹಾಬಲ ಶೆಟ್ಟಿ ಅವರ ಪಾದಸ್ಪರ್ಶದಿಂದ ಪವಿತ್ರವಾಗಿದೆ. ಅವರ ಸಹೋದರರಾದ ದಿವಂಗತ ರಮೇಶ್ ಶೆಟ್ಟಿ ಮತ್ತು ದಿವಂಗತ ವಿಜಯ ಶೆಟ್ಟಿ ಅವರ ಸೇವೆ, ಸ್ಮರಣೆಗಳು ಇಂದಿಗೂ ಪಡುಬಿದ್ರಿಯ ಜನಮನಗಳಲ್ಲಿ ಜೀವಂತವಾಗಿವೆ. ಅವರ ಹೆಸರುಗಳು ಇಲ್ಲಿ ಮರೆಯಲಾಗದ ಅಧ್ಯಾಯಗಳಾಗಿವೆ. ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕೇವಲ ದೇವಾಲಯವಲ್ಲ; ಇದು ಭಕ್ತರ ಹೃದಯಗಳು ನೆಲೆಸಿರುವ ಪವಿತ್ರ ಕ್ಷೇತ್ರ.

ಈ ಕ್ಷೇತ್ರದ ಪುನರ್ ನಿರ್ಮಾಣದ ಕಾರ್ಯ ಕೇವಲ ಒಂದು ಕಟ್ಟಡ ನಿರ್ಮಾಣವಲ್ಲ, ಇದು ಒಂದು ಭಕ್ತಿ ಯಜ್ಞವಾಗಿತ್ತು.

Untitled design (44)

ಕೇವಲ ಹತ್ತು ತಿಂಗಳ ಅವಧಿಯಲ್ಲಿ ಮತ್ತು ಆರಂಭದ ಎರಡು ತಿಂಗಳುಗಳ ಅವಧಿಯಲ್ಲಿ ಹಳೆಯ ನಿರ್ಮಾಣವನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡಿ, ಈ ಮಹತ್ತರ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾದುದು ದೇವರ ಅನುಗ್ರಹ ಹಾಗೂ ಎಲ್ಲರ ಒಗ್ಗಟ್ಟಿನ ಫಲ. ಈ ಕಾರ್ಯವನ್ನು ನಾನು ಕೈಗೆತ್ತಿಕೊಳ್ಳಬೇಕು ಎಂಬುದು ನನ್ನ ಪತ್ನಿಯ ಸಂಕಲ್ಪವಾಗಿತ್ತು.

ಅವರ ಆಶಯವನ್ನು ಗೌರವಿಸಿ, ಈ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದು ಭಾವಿಸುತ್ತೇನೆ. ಕಂಬಳಕಟ್ಟ ರಾಘವೇಂದ್ರ ತಂತ್ರಿಗಳವರ ನೇತೃತ್ವದಲ್ಲಿ, ಎಲ್ಲಾ ವಿಧಿ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು, ಬ್ರಹ್ಮಕಲಶೋತ್ಸವ ಅತ್ಯಂತ ಶಾಸ್ತ್ರೋಕ್ತವಾಗಿ ನಡೆದಿದೆ. ಕ್ಷೇತ್ರದ ತಂತ್ರಿ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಎಲ್ಲಾ ವೈದಿಕ ಹಾಗೂ ತಾಂತ್ರಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿವೆ. ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮುಖ್ಯಸ್ಥರಾದ ಶ್ರೀ ರತ್ನಾಕರಾಜ ಅರಸು ಕಿನ್ನಕ್ಕ ಬಳ್ಳಾಳ್, ಶ್ರೀ ಪೇಟೆಮನೆ ಭವಾನೀಶಂಕರ ಹೆಗ್ಡೆ ಮತ್ತು ಶ್ರೀ ಕೊರ್ನಾಯ ಶ್ರೀಪತಿ ರಾವ್ ಅವರ ಮಾರ್ಗದರ್ಶನವೂ ಅಪಾರವಾಗಿದೆ. ಈ ಮಹಾಯಜ್ಞವು ಸುಗಮವಾಗಿ ನಡೆದಿರುವುದು ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವರ ಅನುಗ್ರಹವೇ. ದೂರದೂರದಿಂದ ಆಗಮಿಸಿದ ಅನೇಕ ಭಕ್ತರಿಗೆ, ಹಗಲು-ರಾತ್ರಿ ನಿರಂತರ ಸೇವೆ ಸಲ್ಲಿಸಿರುವ ನಿಸ್ವಾರ್ಥ ಸೇವಾ ವ್ರತಧಾರಿಗಳಾದ ಸ್ವಯಂಸೇವಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇಲ್ಲಿ ಭಕ್ತಿ ಮಾತ್ರ ಮುಖ್ಯ, ಬೇರೆ ಯಾವುದೂ ಅಲ್ಲ. ಪಡುಬಿದ್ರಿಯ ಒಡೆಯನಾದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಕೃಪೆಯೇ ಈ ಎಲ್ಲ ಕಾರ್ಯಗಳಿಗೆ ಮೂಲ; ನಾನು ನಿಮಿತ್ತ ಮಾತ್ರ. ಈ ಮಹಾಕಾರ್ಯದಲ್ಲಿ ಕೈಜೋಡಿಸಿದ ಗುತ್ತಿಗೆದಾರ ಸುಜಯ್ ಹಾಗೂ ಅವರ ತಂಡಕ್ಕೆ, ಶಿಲ್ಪಿ ವಿಷ್ಣುಮೂರ್ತಿ ಆಚಾರ್ಯರಿಗೆ ಮತ್ತು ಮರ ಕೆಲಸವನ್ನು ಅತ್ಯಂತ ನೈಪುಣ್ಯದಿಂದ ನೆರವೇರಿಸಿದ ಬೆಳ್ಮಣ್ ಸುಹಾಸ್ ಹೆಗ್ಡೆ ಅವರಿಗೆ ನನ್ನ ಅಭಿನಂದನೆಗಳು.

26ನೇ ಏಪ್ರಿಲ್ ರಂದು ನಡೆದ ಹಸಿರು ಹೊರಕಾಣಿಕೆಯ ಭವ್ಯ ಶೋಭಾಯಾತ್ರೆ ಇದು ತುಳುನಾಡಿನ ಇತಿಹಾಸದಲ್ಲಿ ದಾಖಲೆಯಾಗುವ ಮಹತ್ವದ ಕ್ಷಣವಾಗಿದೆ. ಈ ಮಹಾಯತ್ನವನ್ನು ಕೈಗೊಂಡ ಡಾ. ಬೆಳಪು ದೇವಿಪ್ರಸಾದ್ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು. ಈ ಕಾರ್ಯದಲ್ಲಿ ಮಹಿಳೆಯರು ಸಹ ಭಕ್ತಿಭಾವದಿಂದ ಕರಸೇವಕರಾಗಿ ಸೇರಿಕೊಂಡು, ಅಪ್ರತಿಮ ಸೇವೆಯನ್ನು ಸಲ್ಲಿಸಿರುವುದು ಅತ್ಯಂತ ಪ್ರೇರಣಾದಾಯಕವಾಗಿದೆ. ಈ ಮಹಾಕಾರ್ಯವನ್ನು ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡಿದ ನವೀನ್ ಶೆಟ್ಟಿ ಮತ್ತು ಪ್ರೇಮ್ ಶೆಟ್ಟಿ ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಜೀರ್ಣೋದ್ಧಾರ ಸಮಿತಿ, ಸರ್ವಸದಸ್ಯರು ಮತ್ತು ಬ್ರಹ್ಮಕಲಶೋತ್ಸವ ಪರವಾಗಿ, ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ. ಇದು ನನ್ನ ಕಾರ್ಯವಲ್ಲ, ಇದು ದೇವರ ಅನುಗ್ರಹ, ಭಕ್ತರ ಶಕ್ತಿ, ಮತ್ತು ಸಮುದಾಯದ ಒಗ್ಗಟ್ಟಿನ ಪ್ರತಿಫಲ. ಅನುವಂಶಿಕ ಮುಖ್ಯಸ್ಥರು, ಜೀರ್ಣೋದ್ಧಾರ ಸಮಿತ ಪದಾಧಿಕಾರಿಗಳು, ಬ್ರಹ್ಮ ಕಲಶೋತ್ಸವದ ಪದಾಧಿಕಾರಿಗಳು ಹಾಗೂ ಸರ್ವ ಭಕ್ತರ ನೆರವಿನಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಎಲ್ಲರಿಗೂ ಧನ್ಯವಾದಗಳು.