• ವಿಜಯಕುಮಾರ್ ಕಟ್ಟೆ

ಮಂದಹಾಸ ಬೀರುವ ಮುದ್ದು ಕೃಷ್ಣನಿಗೆ ಅಭಿಮುಖವಾಗಿ ವೇದವ್ಯಾಸರ, ಆರ್ಚಾಯ ಮಧ್ವರ ಹಾಗೂ ಶ್ರೀಪಾದರಾಜರ ಪ್ರತಿಮೆಗಳಿವೆ. ಮುಖ್ಯ ದ್ವಾರದ ಬಳಿ ದಾಸಶ್ರೇಷ್ಠ ಕನಕ- ಪುರಂದರ ಪ್ರತಿಮೆಗಳಿವೆ. ದರ್ಶನ ಮಾತ್ರದಿಂದ ಶಾಂತಿ, ನೆಮ್ಮದಿಯ ಅನುಭವ ನಮ್ಮದಾಗುತ್ತದೆ. ಇಷ್ಟೆಲ್ಲಾ ಮಹತ್ವದಿಂದ ಕೂಡಿದ ಈ ಸ್ಥಳದ ಇತಿಹಾಸವು ಪ್ರಸಿದ್ಧ ವಿಜಯನಗರದ ಕಾಲಕ್ಕೆ ತಳುಕು ಹಾಕಿಕೊಂಡಿದೆ.

ನಾದಲೋಲ ವೇಣುಗೋಪಾಲನ ಪವಿತ್ರ ಸನ್ನಿಧಾನದ ನೆಲೆಯಾದ ಕಾಕೋಳು ಬೆಂಗಳೂರಿನಿಂದ 40 ಕಿಮೀ ದೂರದಲ್ಲಿದೆ. ಇದು ಧಾರ್ಮಿಕ, ಪೌರಾಣಿಕ ಸೊಗಡಿನ ಪ್ರಶಾಂತತೆಯ ತಾಣ.

'ಪೀತಾಂಬರ' ಕಿರೀಟವನ್ನು ಧರಿಸಿರುವ ಚತುರ್ಭುಜ ವೇಣುಗೋಪಾಲನ ಪ್ರತಿಮೆಯು ಇಲ್ಲಿನ ಪ್ರಮುಖ ಆಕರ್ಷಣೆ. ಈ ದಿವ್ಯ ಮೂರ್ತಿಯನ್ನು ಕಂಡವರು ಭಾವಪರವಶರಾಗುವುದು ಖಂಡಿತ. ದಾಸ ಸಾಹಿತ್ಯದ ಆದ್ಯಪ್ರವರ್ತಕ ಶ್ರೀ ಶ್ರಿಪಾದರಾಜರು ಭಾಗವತದಲ್ಲಿ ಭಗವಂತನು ಸಕಲ ದೇವತೆಗಳಿಗೆ ದರ್ಶನ ನೀಡಿದ ಮೂಲರೂಪದಂತೆ ಈ ಮನಮೋಹಕ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಶ್ರೀಕೃಷ್ಣನನ್ನು ಬೃಂದಾವನದಲ್ಲಿ ಕೆತ್ತಲಾಗಿದೆ. ಅದು ಕೃಷ್ಣನು ಗೋಪಾಲನಾಗಿ ಕೊಳಲು ನುಡಿಸುವ ದೃಶ್ಯ. ಈ ಅಪ್ರತಿಮ ವಿಗ್ರಹವು ಸುಮಾರು ಆರುನೂರು ವರ್ಷಗಳಷ್ಟು ಪುರಾತನದು ಎನ್ನಲಾಗಿದೆ.

Untitled design (95)

ಕೃಷ್ಣನ ಮೂರ್ತಿಯ ಇಕ್ಕೆಲಗಳಲ್ಲಿ ಗೋವುಗಳು ಕೊಳಲಿನ ನಾದಕ್ಕೆ ಪರವಶವಾಗಿರುವ ಮೋಹಕ ದೃಶ್ಯವಿದೆ. ಬೃಂದಾವನದಲ್ಲಿ ಕೃಷ್ಣನ ಈ ಚತುರ್ಭುಜ ರೂಪ ಭಗವಂತನ ನಾಲ್ಕು ಅವತಾರಗಳ ಸಂಕೇತವಾಗಿದೆ. ಕೃಷ್ಣ ತನ್ನ ಎಡ ಭಾಗದಲ್ಲಿ ಕೊಳಲನ್ನು ನುಡಿಸುವ ಭಂಗಿ ವಿಶೇಷವಾಗಿದೆ. ಪಕ್ಕದಲ್ಲಿ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿತ ವರಪ್ರದ ಮೋದ ಮಾರುತಿಯನ್ನು ಕಾಣಬಹುದು.

ಮಂದಹಾಸ ಬೀರುವ ಮುದ್ದು ಕೃಷ್ಣನಿಗೆ ಅಭಿಮುಖವಾಗಿ ವೇದವ್ಯಾಸರ, ಆರ್ಚಾಯ ಮಧ್ವರ ಹಾಗೂ ಶ್ರೀಪಾದರಾಜರ ಪ್ರತಿಮೆಗಳಿವೆ. ಮುಖ್ಯ ದ್ವಾರದ ಬಳಿ ದಾಸಶ್ರೇಷ್ಠ ಕನಕ- ಪುರಂದರ ಪ್ರತಿಮೆಗಳಿವೆ. ದರ್ಶನ ಮಾತ್ರದಿಂದ ಶಾಂತಿ, ನೆಮ್ಮದಿಯ ಅನುಭವ ನಮ್ಮದಾಗುತ್ತದೆ. ಇಷ್ಟೆಲ್ಲಾ ಮಹತ್ವದಿಂದ ಕೂಡಿದ ಈ ಸ್ಥಳದ ಇತಿಹಾಸವು ಪ್ರಸಿದ್ಧ ವಿಜಯನಗರದ ಕಾಲಕ್ಕೆ ತಳುಕು ಹಾಕಿಕೊಂಡಿದೆ. ಈ ಸ್ಥಳ ಮೂಲತಃ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿತ್ತು.

ಇದನ್ನೂಓದಿ:ಬೌದ್ಧ ಭೂಮಿಯಲ್ಲಿ ಮೊಳಗುವ ಶಂಖನಾದ

ಕಾಕಾಸುರನ ಪಾಪ ಪರಿಹಾರವಾದ ಸ್ಥಳ

ರಾಮಾಯಣದ ಪ್ರಕಾರ, ಕಾಕಾಸುರನು ಸೀತೆಯ ಮೇಲೆ ದಾಳಿ ಮಾಡಿದಾಗ, ರಾಮನು ದರ್ಬೆಯನ್ನೇ ಆಯುಧ ಮಾಡಿಕೊಂಡು ಅವನನ್ನು ಶಿಕ್ಷಿಸಿದನು. ಆಗ ತನ್ನ ಪಾಪದ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕಾಕಾಸುರನು ಒಂದು ಕೊಳದಲ್ಲಿ ಸ್ನಾನ ಮಾಡಿದನು. ಕಾಕಾಸುರನು ಶಾಪ ವಿಮೋಚನೆಗಾಗಿ ಸ್ನಾನಮಾಡಿದ ಆ ಕೊಳವಿದ್ದ ಸ್ಥಳವೇ ಕಾಕೋಳು. ಹೀಗೆನ್ನುತ್ತದೆ ಸ್ಥಳ ಪುರಾಣ. ಕಾಕೋಳು ಎಂದರೆ ಸುಖ ಸಮೃದ್ಧಿಯಿಂದ ಕೂಡಿದ ಸ್ಥಳವೆಂಬ ಅರ್ಥವೂ ಇದೆ.

ಪ್ರತಿಷ್ಠಾಪನೆಯ ಹಿನ್ನೆಲೆ

ಅರ್ಕಾವತಿ ನದಿಯ ಪಶ್ಚಿಮ ದಂಡೆಯಲ್ಲಿರುವ ಚಿಕ್ಕದಾಪುರದಲ್ಲಿ ವೇಣುಗೋಪಾಲನನ್ನು ದಾಸ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀಪಾದರಾಜರು ಪ್ರತಿಷ್ಠಾಪಿಸಿದರು. ಅರ್ಕಾವತಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿದಾಗ, ಅದರ ದಡದಲ್ಲಿನ ದೇವಸ್ಥಾನಗಳು ಮುಳುಗಿದವು. ಆಗ ನದಿಯ ನೀರಿನಲ್ಲಿ ಮುಳುಗಿದ್ದ ವೇಣುಗೋಪಾಲನ ಮೂರ್ತಿಯನ್ನು1930ರಲ್ಲಿ ಈ ಊರಿನ ಹಿರಿಯರು ಪುನಃ ಪ್ರತಿಷ್ಠಾಪನೆ ಮಾಡಿದರು. ಇಂದಿಗೂ ಮೂಲ ವಿಗ್ರಹ ಪ್ರತಿಷ್ಠಾಪನೆಯ ಸ್ಮರಣಾರ್ಥವಾಗಿ ಬ್ರಹ್ಮ ರಥೋತ್ಸವವನ್ನು ಪ್ರತಿವರ್ಷ ಚೈತ್ರಮಾಸದ ತೃತೀಯದಿಂದ ರಾಮ ನವಮಿಯವರೆಗೆ ಅತ್ಯಂತ ಭವ್ಯವಾಗಿ ಮತ್ತು ಅದ್ಭುತವಾಗಿ ಆಚರಿಸಲಾಗುತ್ತಿದೆ.

ಪ್ರವಾಸೋದ್ಯಮಕ್ಕಿದೆ Xಪರ್ಟ್ ಗಳ ಅಗತ್ಯ

ತೊಟ್ಟಿಲು ಸೇವೆ

ದಂಪತಿ ಇಲ್ಲಿ ಶ್ರೀಪತಿಗೆ ತೊಟ್ಟಿಲು ಪೂಜೆ ಮಾಡಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬುದು ಜನರ ನಂಬಿಕೆ. ಹಾಗಾಗಿ ಇಲ್ಲಿ ಶ್ರೀಕೃಷ್ಣ ಸಂತಾನ ವೇಣುಗೋಪಾಲ ಎಂಬ ಹೆಸರಿನಿಂದಲೇ ಪ್ರಸಿದ್ಧ. ದೇವಾಲಯ ಪ್ರದಕ್ಷಿಣೆಯ ವೇಳೆ ಗರುಡಗಂಬ, ಬಲಿಪಾದ, ಯಾಗಶಾಲೆ, ಪಾಂಚಜನ್ಯ ಸಭಾಂಗಣ, ಪಾಕಶಾಲೆ, ಪಕ್ಕದಲ್ಲಿ ನಾಗ ಮಂಟಪ ಮತ್ತು ದಕ್ಷಿಣೇಶ್ವರ ಗುಡಿಯನ್ನು ಕಾಣಬಹುದು.

Untitled design (96)

ಪ್ರಾಚೀನತೆಯ ಸೊಗಡಿನೊಂದಿಗೆ ಶಾಂತಿ, ನಿರಾಳತೆ, ಸಂಪ್ರದಾಯ ಮತ್ತು ಆಧ್ಯಾತ್ಮಿಕ ಸ್ಪರ್ಶದ ಭಾವನೆಯೊಂದಿಗೆ ಅತಿ ಮಧುರವಾದ ಹಿತ ನೀಡುವ ಈ ಸ್ಥಳಕ್ಕೆ ಒಮ್ಮೆ ಹೋಗಿಬನ್ನಿ.

ದಾರಿ ಹೇಗೆ?

ಯಲಹಂಕ- ದೊಡ್ಡಬಳ್ಳಾಪುರ ರಸ್ತೆಯ ಮಾರ್ಗವಾಗಿ ರಾಜಾನುಕುಂಟೆ ತಲುಪಿದರೆ, ಅಲ್ಲಿಂದ ದೂರದಲ್ಲಿ ಕಾಕೋಳು ತಲುಪಬಹುದು.

ಹತ್ತಿರದ ಪ್ರವಾಸಿ ತಾಣಗಳು

ಅಕ್ಕಯ್ಯಮ್ಮ ಬೆಟ್ಟ , ಘಾಟಿ ಸುಬ್ರಹ್ಮಣ್ಯ, ಬ್ಯಾತದ ಮಹಾಲಕ್ಷ್ಮೀ, ಚಿಕ್ಕ ಮದುರೆಯ ಶನೈಶ್ಚರ, ಹೊನ್ನೆನಹಳ್ಳಿ ವ್ಯಾಸರಾಜ ಪ್ರತಿಷ್ಠಿತ ಹನುಮ, ಐವರುಕಂಡಪುರದ ಈಶ್ವರ ದೇಗುಲ.