ಪ್ರವಾಸಿಗರನ್ನು ಸೆಳೆಯಲು ಸಿಗಂದೂರು ಸಮೀಪ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ವಾಟರ್ ಏರೋ ಡ್ರೋಮ್ ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಜನೆ ಹಾಕಿದೆ. ‘ಉಡಾನ್’ ಯೋಜನೆಯಡಿ ವಾಟರ್ ಏರೋ ಡ್ರೋಮ್ ಸ್ಥಾಪಿಸಲು ಕರ್ನಾಟಕದ ಉಡುಪಿಯ ಬೈಂದೂರು, ಸೂಪ ಡ್ಯಾಮ್‌ನ ಗಣೇಶಗುಡಿ, ಕಬಿನಿ ಹಿನ್ನೀರು, ಕಾರವಾರದ ಕಾಳಿ ನದಿ ಸೇತುವೆ ಸಮೀಪ, ಉಡುಪಿಯ ಮಲ್ಪೆ, ಮಂಗಳೂರು ಮತ್ತು ಸಿಗಂದೂರು ಸಮೀಪ ಸ್ಥಳ ಗುರುತಿಸಲಾಗಿದೆ.

Water Aerodrome ೧

ರಾಜ್ಯದಲ್ಲಿ ವಾಟರ್ ಏರೋಡ್ರೋಮ್‌ಗಳಿಗೆ ಸ್ಥಾಪನೆಗೆ ಯೋಜಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕಬಿನಿ ಮತ್ತು ಮಂಗಳೂರಿನಲ್ಲಿ ವಾಟರ್ ಏರೋಡ್ರೋಮ್‌ಗೆ ಒಪ್ಪಂದ ಪತ್ರ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರುಳೀಧರ್ ಮೊಹೋಲ್ ಹೇಳಿದ್ದಾರೆ. ಈ ನಡುವೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಈ ಹಿಂದೆ ಲಾಂಚ್‌ನಲ್ಲಿ ಶರಾವತಿ ನದಿ ದಾಟಿ ಭಕ್ತರು ದೇಗುಲಕ್ಕೆ ಹೋಗಿ ಬರುತ್ತಿದ್ದರು. ಈಗ ಸಿಗಂದೂರು ಸೇತುವೆ ನಿರ್ಮಾಣವಾಗಿದ್ದು, ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಲಾಂಚ್‌ನಲ್ಲಿಯೇ ಹೊಟೇಲ್ ಆರಂಭಿಸುವ ಕುರಿತು ಚರ್ಚೆಗಳ ಚಾಲ್ತಿಯಲ್ಲಿವೆ. ಇತ್ತ ಕೇಂದ್ರ ಸರಕಾರ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರೋಡ್ರೋಮ್ ಸ್ಥಾಪಿಸುವ ಯೋಜನೆ ರೂಪಿಸಿದ್ದು, ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ.