ಕಳೆದ ನಾಲ್ಕು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರತದ ಮಾನ ಹರಾಜಾಗುತ್ತಿದೆ. ಫ್ರಾನ್ಸ್‌ನ ಪ್ಯಾರಿಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೈಗೆ ಬಣ್ಣ ಹಚ್ಚಿಕೊಂಡು ಮೈಮ್ ಮಾಡುವ ಕಲಾವಿದನೊಂದಿಗೆ ಅನುಚಿತವಾಗಿ ವರ್ತಿಸಿರುವ ಮಹಾರಾಷ್ಟ್ರ ಮೂಲದ ಸಮೂಹವೊಂದು ಭಾರತದ ಘನತೆಗೆ ಮಸಿ ಬಳಿದಿದೆ. ಆಗಿದ್ದಿಷ್ಟು. ನಮ್ಮಲ್ಲಿ ಗಾಂಧೀಜಿ ವೇಷದಲ್ಲಿ ಮೈಗೆ ಸಿಲ್ವರ್ ಬಣ್ಣ ಬಳಿದುಕೊಂಡು ನಿಲ್ಲುವ ಕಲಾವಿದರನ್ನು ನೀವು ನೋಡಿರುತ್ತೀರಿ. ಅಂಥದ್ದೇ ಒಬ್ಬ ಕಲಾವಿದ ಪ್ಯಾರಿಸ್‌ನ ರಸ್ತೆಯಲ್ಲಿ ನಿಂತು ಪ್ರದರ್ಶನ ನೀಡುತ್ತಿದ್ದಾನೆ. ಪ್ರವಾಸಕ್ಕೆ ಹೋಗಿರುವ ಮಹಾರಾಷ್ಟ್ರದ ಮಂದಿ ಅವನ ಪಕ್ಕ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಆಗಿದ್ದರೆ ಓಕೆ. ಅವನ ಪಕ್ಕ ನಿಂತು ಜೈ ಭವಾನಿ, ಜೈ ಮಹಾರಾಷ್ಟ್ರ, ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಅಂತೆಲ್ಲ ಕೂಗುತ್ತಾ ಅವನ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಾ ರೀಲ್ಸ್ ಮಾಡಲಾರಂಭಿಸಿದ್ದಾರೆ. ಅವನು ವಿನಂತಿ ಮಾಡಿಕೊಂಡರೂ, ಬಿಡದೇ ಇವರ ಮಹಾರಾಷ್ಟ್ರ ಪ್ರೇಮ, ಮರಾಠಾ ಪ್ರೇಮದ ಪ್ರದರ್ಶನ ಮಾಡಿದ್ದಾರೆ. ಒಂದು ಗುಂಪು ಮಾಡುವ ಹಾವಳಿಗೆ ಇಡೀ ದೇಶ ಕೆಟ್ಟ ಇಮೇಜ್‌ಗೆ ಒಳಗಾಗಬೇಕಾಗುತ್ತದೆ.

ಇದನ್ನೂ ಓದಿ: ಈ ವೇಗಕ್ಕೆ ಬ್ರೇಕ್ ಬೀಳದಿರಲಿ

ಫ್ರಾನ್ಸ್‌ ಅನ್ನು ಮಹಾರಾಷ್ಟ್ರ,ಕರ್ನಾಟಕ, ಮುಂಬಯಿ,ದೆಹಲಿ ಅಂತ ಪ್ರತ್ಯೇಕವಾಗಿ ಕಾಣುವುದಿಲ್ಲ. ಅವರು ದೂಷಿಸುವುದು ಇಂಡಿಯಾ-ಇಂಡಿಯನ್ಸ್ ಅಂತ. ಉಪೇಂದ್ರ ತನ್ನ ಎ ಸಿನಿಮಾದಲ್ಲಿ ಹೇಳಿದ ಹಾಗೆ, ಇಂಡಿಯಾ ಈಸ್ ಗ್ರೇಟ್ ಬಟ್ ಇಂಡಿಯನ್ಸ್ ಆರ್ ನಾಟ್ ಗ್ರೇಟ್ ಅನ್ನುತ್ತಿದ್ದಾರೆ ಫ್ರೆಂಚರು. ಫ್ರೆಂಚರು ಭಾರತಕ್ಕೆ ವ್ಯಾಪಾರಕ್ಕಂತ ಬಂದು ಇಲ್ಲಿನ ಮಂದಿಗೆ ಎಷ್ಟೆಲ್ಲಾ ಕಾಟ ಕೊಟ್ಟಿದ್ದಾರೆ. ಅದರ ಮುಂದೆ ಇದೆಲ್ಲ ಯಾವ ಲೆಕ್ಕ ಅಂತ ಅನ್ನಬಹುದು. ಆದರೆ ನೊಣ ತಿಂದು ಜಾತಿ ಕೆಡಿಸ್ಕೊಂಡ್ರು ಎಂಬಂತಾಗಬಾರದು ಅಲ್ವೇ?

ನಮ್ಮ ದೇಶಭಕ್ತಿ, ಧರ್ಮಭಕ್ತಿ, ರಾಜ್ಯಪ್ರೇಮ, ಭಾಷಾಪ್ರೇಮ ತೋರಿಸೋಕೂ ಒಂದು ವಿಧಾನ ಇದೆ. ಜೈ ಶ್ರೀರಾಂ, ಅಲ್ಲಾಹ್ ಹು ಅಕ್ಬರ್, ಭಾರತ್ ಮಾತಾಕೀ ಜೈ, ಹೀಗೆ ಅನ್ಯದೇಶಕ್ಕೆ ಹೋಗಿ ಕೂಗೋದು, ಅನ್ಯದೇಶದ ಗೋಡೆಗಳ ಮೇಲೆ ಬರೆಯೋದು ನಮ್ಮ ದೇಶಕ್ಕಾಗಲೀ ನಮಗಾಗಲೀ ಮೆಡಲ್ ಕೊಡಿಸುವುದಿಲ್ಲ. ಅನ್ಯದೇಶದಲ್ಲಿ ಎಷ್ಟು ಘನತೆಯಿಂದ ವರ್ತಿಸುತ್ತೀರಿ ಎನ್ನುವುದರ ಮೇಲೆ ನಮ್ಮ ದೇಶದ ಗೌರವ ನಿರ್ಧಾರವಾಗುತ್ತದೆ. ಈಗಾಗಲೇ ಭಾರತದ ಪಾಸ್‌ಪೋರ್ಟ್ ತೂಕ ಕಡಿಮೆಯಾಗಲು ಇಂಥ ದುರ್ವರ್ತನೆಯೇ ಕಾರಣ ಎಂದು ಒಂದು ವರ್ಗ ಬಾಯಿಬಡಿದುಕೊಳ್ಳಲು ಶುರು ಮಾಡಿದೆ. ಭಾರತದ ಪಾಸ್‌ಪೋರ್ಟ್ ತೂಕ ಕಡಿಮೆಯೇನೂ ಆಗಿಲ್ಲ. ಹಾಗೂ ಅಲ್ಪಸ್ವಲ್ಪ ಕಡಿಮೆಯಾಗಿದ್ದರೆ ಅದಕ್ಕೆ ಅಸಲಿ ಕಾರಣ ಏನೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಅದೇನೇ ಇರಲಿ, ಭಾರತೀಯರು ಹೊರಗಿನಿಂದ ನಮ್ಮ ದೇಶಕ್ಕೆ ಬರುವ ಪ್ರವಾಸಿಗರೊಂದಿಗೆ ಘನತೆಯಿಂದ ವರ್ತಿಸುವುದು ಮತ್ತು ಹೊರದೇಶಕ್ಕೆ ಹೋದಾಗ ಸಭ್ಯತೆ ಗಡಿ ದಾಟದಿರುವುದು ಮೂಲಭೂತ ಗುಣವಾಗಬೇಕು. ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಸನ್ನಡತೆ ಕೂಡ ಇದೆ ಎಂಬುದು ನೆನಪಿರಲಿ.