Friday, June 13, 2025
Friday, June 13, 2025

ಸಾರ್ವಜನಿಕ ಪ್ರಾಮಾಣಿಕತೆ

ಜಪಾನಿನ ಮುಖ್ಯ ಶಕ್ತಿ, ಅಂತಃಸತ್ವವಿರುವುದು ನಾಗರಿಕರ ಶಿಸ್ತು, ಪ್ರಾಮಾಣಿಕತೆ ಮತ್ತು ವಿಶ್ವಾಸದಲ್ಲಿ. ಅಲ್ಲಿ 'ಗುಂಪಿನಲ್ಲಿ ಗೋವಿಂದ' ಸಂಸ್ಕೃತಿಗೆ ಆಸ್ಪದವೇ ಇಲ್ಲ. ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ನೀತಿಗಳ ಮೂಲಕ ಅವರು ಮಕ್ಕಳಿಗೆ ಎಳವೆಯಲ್ಲೇ ಪ್ರಾಮಾಣಿಕತೆ ಪಾಠ ಮಾಡುತ್ತಾರೆ. - ವಿಶ್ವೇಶ್ವರ ಭಟ್

ನಾನು ಜಪಾನಿನಲ್ಲಿದ್ದಾಗ ನಮ್ಮ ಗೈಡ್ ಹೇಳಿದ ಒಂದು ಪ್ರಸಂಗ ಕೇಳಿ ಆಶ್ಚರ್ಯವಾಯಿತು. 2024ರ ಅಕ್ಟೋಬರ್‌ನಲ್ಲಿ ಜಪಾನಿನಲ್ಲಿ ಇಟಿಎಸ್‌ (ETC- Electronic Toll Collection) ವ್ಯವಸ್ಥೆಯಲ್ಲಿ ಹಠಾತ್ ತಾಂತ್ರಿಕ ದೋಷ ಉಂಟಾಗಿ ಕೆಲವು ಹೆದ್ದಾರಿ ಟೋಲ್ ಗೇಟ್‌ಗಳು ಸುಮಾರು 38 ಗಂಟೆಗಳ ಕಾಲ ಸಂಪೂರ್ಣವಾಗಿ ಸ್ಥಗಿತವಾದವು. ಈ ಅನಿರೀಕ್ಷಿತ ತಾಂತ್ರಿಕ ವೈಫಲ್ಯದ ಕಾರಣದಿಂದಾಗಿ ಎಲ್ಲ ಟೋಲ್ ಗೇಟ್ ಗಳ ದ್ವಾರಗಳನ್ನು ತೆರೆಯಬೇಕಾಯಿತು. ಅಷ್ಟೇ ಅಲ್ಲ, ವಾಹನ ಚಾಲಕರಿಗೆ ಉಚಿತವಾಗಿ ಸಂಚಾರ ಮಾಡಲು ಅವಕಾಶ ನೀಡಲಾಯಿತು. ಯಾವ ಕಾರಣಕ್ಕೂ ಸಂಚಾರ ವ್ಯತ್ಯಯವಾಗಬಾರದು ಎಂಬ ಅಂಶಕ್ಕೆ ಪ್ರಾಮುಖ್ಯ ನೀಡಲಾಯಿತು.

ಅದೃಷ್ಟವಶಾತ್, ಈ ತುರ್ತು ಪರಿಸ್ಥಿತಿಯನ್ನು ಯಾವುದೇ ಗೊಂದಲವಿಲ್ಲದೇ ಅತ್ಯಂತ ಸಮರ್ಥವಾಗಿ ನಿಭಾಯಿಸಲಾಯಿತು. ಇದರಿಂದ ವಾಹನ ಚಾಲಕರಿಗೆ ಯಾವ ಸಮಸ್ಯೆ ಆಗಲಿಲ್ಲ. ಜಪಾನಿನ ಹೆದ್ದಾರಿ ವ್ಯವಸ್ಥೆ ಬಹುಮುಖ್ಯವಾಗಿ ಇಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ETC) ಮೇಲೆ ಅವಲಂಬಿತವಾಗಿದೆ. ಕಾರುಗಳಲ್ಲಿ ಇರುವ ಸಾಧನ (Device) ಟೋಲ್ ಗೇಟ್‌ ಗಳ ಬಳಿ ಬರುವ ವೇಳೆ ಸ್ವಯಂಚಾಲಿತವಾಗಿ ಹಣ ಪಾವತಿ ಮಾಡುವ ವ್ಯವಸ್ಥೆ ಇದಾಗಿದೆ. ಆದರೆ ಅಕ್ಟೋಬರ್‌ನಲ್ಲಿ ಈ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ 'ನೆಕ್ಸ್ ಕೋ' ಕಂಪನಿಯ ಸರ್ವ‌ರ್ ಗಳಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ, ಈ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಯಿತು. ಪರಿಣಾಮವಾಗಿ, ದೇಶಾದ್ಯಂತ ಎಲ್ಲ ಹೆದ್ದಾರಿ ಟೋಲ್ ಗೇಟ್‌ಗಳು ಕೈಚಾಲಿತವಾಗಿ (ಮ್ಯಾನ್ಯುಯಲ್) ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಎದುರಾಯಿತು. ‌

34_top

ಈ ತಾಂತ್ರಿಕ ದೋಷದಿಂದ ಅನೇಕ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ತಬ್ಧವಾಗುವ ಸಾಧ್ಯತೆ ಇದ್ದರೂ, ಅಧಿಕಾರಿಗಳು-ತಕ್ಷಣ ಟೋಲ್ ಗೇಟ್‌ಗಳ ದ್ವಾರಗಳನ್ನು ತೆರೆದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಆದೇಶಿಸಿದರು. ಹೆದ್ದಾರಿಗಳ ಮೇಲೆ ಸಂಚಾರ ಸುಗಮವಾಗಿಡಲು, ವಾಹನ ಚಾಲಕರನ್ನು ತಡೆಯದೇ ಸರಾಗವಾಗಿ ಹೋಗಲು ಅವಕಾಶ ನೀಡಲಾಯಿತು. ವಾಹನ ಚಾಲಕರಿಗೆ 'ಮೊದಲು ನೀವು ಸಂಚರಿಸಿ, ನಂತರ ಟೋಲ್ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು' ಎಂದು ತಿಳಿಸಲಾಯಿತು. ಹೀಗೆ ನಿರ್ಬಂಧವಿಲ್ಲದೇ ಹೆದ್ದಾರಿಯಲ್ಲಿ ಸಂಚರಿಸಿದವರು ಟೋಲ್ ಪಾವತಿಸಲೇಬೇಕು ಎಂಬ ಒತ್ತಾಯವಿರಲಿಲ್ಲ. ಅದು ಕಡ್ಡಾಯವೂ ಆಗಿರಲಿಲ್ಲ. ಯಾರಾದರೂ ಹಣ ಪಾವತಿಸುವುದಿದ್ದರೆ, ಪಾವತಿಸಬಹುದು ಎಂದು ಸೂಚಿಸಲಾಗಿತ್ತು.

ಅಚ್ಚರಿಯ ವಿಷಯವೆಂದರೆ, 24 ಸಾವಿರಕ್ಕಿಂತ ಹೆಚ್ಚು ಮಂದಿ ಸ್ವಇಚ್ಛೆಯಿಂದ ಆನ್‌ಲೈನ್ ಮೂಲಕ ಪಾವತಿಸಿದ್ದರು. ಇದರಿಂದಾಗಿ ಜಪಾನಿನ ನಾಗರಿಕ ಸಂಸ್ಕೃತಿಯಲ್ಲಿ ಅಡಕವಾಗಿರುವ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಮೂಹಿಕ ಬದ್ಧತೆ ಮತ್ತೊಮ್ಮೆ ಸಾಬೀತಾಯಿತು. ಅವರು ಹಣ ನೀಡದಿದ್ದರೆ ಏನೂ ಆಗುತ್ತಿರಲಿಲ್ಲ. ಅವರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿರಲಿಲ್ಲ. ಆದರೂ ಅವರು ಸ್ವಯಂಪ್ರೇರಿತರಾಗಿ ಹಣ ಪಾವತಿಸುವ ಮೂಲಕ ತಮ್ಮ ಪ್ರಾಮಾಣಿಕತೆ ಮತ್ತು ನಾಗರಿಕ ಕರ್ತವ್ಯವನ್ನು ಮೆರೆದರು.

853161c297deb3590daccc93c7e9bfe0d4994e2f

ಜಪಾನಿನ ಮುಖ್ಯ ಶಕ್ತಿ ಮತ್ತು ಅಂತಃಸತ್ವವಿರುವುದು ನಾಗರಿಕರ ಶಿಸ್ತು, ಪ್ರಾಮಾಣಿಕತೆ ಮತ್ತು ವಿಶ್ವಾಸದಲ್ಲಿ. ಅಲ್ಲಿ 'ಗುಂಪಿನಲ್ಲಿ ಗೋವಿಂದ' ಸಂಸ್ಕೃತಿಗೆ ಆಸ್ಪದವೇ ಇಲ್ಲ. ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ನೀತಿಗಳ ಮೂಲಕ ಅವರು ಮಕ್ಕಳಿಗೆ ಎಳವೆಯಲ್ಲೇ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಕಲಿಸುವುದು ಈ ನಿದರ್ಶನದಲ್ಲೂ ಮತ್ತೊಮ್ಮೆ ಕಾರ್ಯರೂಪಕ್ಕೆ ಬಂದಿತು. ಪ್ರಾಮಾಣಿಕತೆಗೆ ಯಾವುದೇ ನಿಯಮ ಅಥವಾ ಬಲವಂತವಿಲ್ಲ. ಅದು ಯಾರದೋ ಒತ್ತಡಕ್ಕೆ ಮಣಿಯುವುದಲ್ಲ. ಅದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಅದು ವ್ಯಕ್ತಿಯ ಅಂತರಂಗದಲ್ಲಿ ಅಡಕವಾಗಿರಲೇಬೇಕಾದ ಆದರ್ಶ ಗುಣ. ಜನರು ತಮ್ಮಿಚ್ಛೆಯಿಂದ ಹಣ ಪಾವತಿಸಿದ ಈ ಪ್ರಸಂಗ ಇಡೀ ವಿಶ್ವದ ಗಮನ ಸೆಳೆಯಿತು.

ಈ ಘಟನೆಯ ನಂತರ, ಜಪಾನಿನ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರಾಮಾಣಿಕ ನಡೆಯ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. 'ಇದು ನಮ್ಮ ದೇಶದ ನೈತಿಕ ಶಕ್ತಿಯ ಸಾರ್ವಜನಿಕ ಪ್ರಕಟಣೆಯ ಸಂಕೇತ' ಎಂದು ಅನೇಕರು ಅಭಿಪ್ರಾಯಪಟ್ಟರು. ಈ ಘಟನೆ ಕೇವಲ ತಾಂತ್ರಿಕ ವೈಫಲ್ಯವಷ್ಟೇ ಅಲ್ಲ, ಜನಸಾಮಾನ್ಯರ ನಡವಳಿಕೆಯ ವಿಶಿಷ್ಟ ಅಭಿವ್ಯಕ್ತಿಯೂ ಹೌದು. ಇದು ಕೇವಲ ಒಂದು ತಾಂತ್ರಿಕ ಸಮಸ್ಯೆಯ ಪರಿಹಾರವಲ್ಲ, ಬದಲಿಗೆ ಸಮಾಜದ ಪ್ರಾಮಾಣಿಕತೆಯ ಪರೀಕ್ಷೆ ಕೂಡ ಆಗಿತ್ತು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!