Sunday, June 15, 2025
Sunday, June 15, 2025

ಆಂಧ್ರದಲ್ಲೂ ಅದ್ಭುತ ಪ್ರವಾಸಿ ತಾಣಗಳು!

ಪ್ರವಾಸಿಗರು ಸಾಮಾನ್ಯವಾಗಿ ಕೇರಳ,ಕರ್ನಾಟಕ ಮತ್ತು ತಮಿಳುನಾಡಿಗೆ ಮಾತ್ರ ಪ್ರವಾಸಕ್ಕೆ ಹೋಗುತ್ತಾರೆ. ಆಂಧ್ರಪ್ರದೇಶವನ್ನು ಬೇಕಂತಲೇ ಕೈ ಬಿಡುತ್ತಾರೆ. ಆದರೆ ಆಂಧ್ರದಲ್ಲೂ ಪ್ರೇಕ್ಷಣೀಯ ಸ್ಥಳಗಳಿವೆ.

ಪ್ರವಾಸವೆಂದರೆ ಸಾಮಾನ್ಯವಾಗಿ ಎಲ್ಲರೂ ಕರ್ನಾಟಕ,ತಮಿಳುನಾಡು ಮತ್ತು ಕೇರಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬೇಕಂತಲೇ ಆಂಧ್ರಪ್ರದೇಶವನ್ನು ಕೈಬಿಡುತ್ತಾರೆ. ಹಾಗೆ ನೋಡಿದರೆ ಆಂಧ್ರದಲ್ಲೂ ಹತ್ತಾರು ಪ್ರೇಕ್ಷಣೀಯ ಸ್ಥಳಗಳಿವೆ. ಪುರಾತನ ದೇವಾಲಯಗಳು, ಅಣೆಕಟ್ಟು, ಮ್ಯೂಸಿಯಂ, ಕಡಲ ತೀರ ಹೀಗೆ ಸಾಕಷ್ಟು ತಾಣಗಳು ಪ್ರವಾಸಿಗರ ಮನಸೂರೆಗೊಳಿಸುತ್ತವೆ. ಈ ಬೇಸಿಗೆಗೆ ಟ್ರಿಪ್‌ ಪ್ಲ್ಯಾನ್‌ ಮಾಡಿರುವವರು ಈ ಬಾರಿ ಎರಡು-ಮೂರು ದಿನಗಳ ಕಾಲ ನಿಶ್ಚಿಂತೆಯಿಂದ ಆಂಧ್ರಪ್ರದೇಶದತ್ತ ಹೋಗಿ ಬರಬಹುದು. ಅಲ್ಲಿನ ಪ್ರವಾಸಿ ತಾಣಗಳು ಬೇರೆಯದ್ದೇ ಅನುಭವವನ್ನು ನೀಡುತ್ತವೆ. ಅಂದಹಾಗೆ ಅತೀ ಕಡಿಮೆ ಅವಧಿಯಲ್ಲಿ ಪ್ರವಾಸಿಗರು ಭೇಟಿ ಕೊಡಬಹುದಾದ ಆಂಧ್ರದ ಕೆಲವು ತಾಣಗಳ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
ನಾಗಾರ್ಜುನ ಸಾಗರ್

ಆಂಧ್ರಪ್ರದೇಶದಲ್ಲಿ ನೋಡಬಹುದಾದ ಪ್ರವಾಸಿ ತಾಣಗಳಲ್ಲಿ ನಾಗಾರ್ಜುನ ಸಾಗರ್(Nagarjuna Sagar) ಅತ್ಯಂತ ಪ್ರಮುಖವಾದದ್ದು. ಇದು ಕೃಷ್ಣಾ ನದಿಯ ದಡದಲ್ಲಿದ್ದು, ಅತ್ಯದ್ಭುತವಾದ ಅಣೆಕಟ್ಟಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಅಣೆಕಟ್ಟು ಎಂತಲೂ ಕರೆಸಿಕೊಂಡಿದೆ. ನಾಗಾರ್ಜುನಕೊಂಡ ದ್ವೀಪ, ಪುರಾತನ ಬೌದ್ಧ ಅವಶೇಷಗಳು ಮತ್ತು ಮಠಗಳು 3ನೇ ಶತಮಾನಕ್ಕೂ ಹಿಂದಿನದ್ದು ಎಂದು ತಿಳಿದು ಬಂದಿದೆ. ಪ್ರಶಾಂತವಾದ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಪುರಾತತ್ತ್ವ ಜಾಗಗಳು ಆಕರ್ಷಿಸುತ್ತವೆ. ಇತಿಹಾಸದ ಬಗ್ಗೆ ಆಸಕ್ತಿ ಇದ್ದವರು ಮತ್ತು ಪರಿಸರ ಪ್ರೇಮಿಗಳು ತಪ್ಪದೇ ಈ ಜಾಗಕ್ಕೆ ಭೇಟಿ ಕೊಡಬೇಕು.

Nagarjuna


ಅರಕು ಕಣಿವೆ

ಆಂಧ್ರಪ್ರದೇಶದ ಅರಕು (Araku) ಕಣಿವೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಅಲ್ಲಿನ ವಾತಾವರಣ ಸದಾ ತಂಪಾಗಿರುತ್ತದೆ. ಚಾರಣ ಪ್ರಿಯರಿಗಂತೂ ಅರಕು ಕಣಿವೆ ದಿವ್ಯಾನುಭವವನ್ನು ನೀಡುತ್ತದೆ. ಅದು ಪೂರ್ವ ಘಟ್ಟಗಳ ನಡುವೆ ನೆಲೆಸಿರುವ ಅದ್ಭುತವಾದ ಗಿರಿಧಾಮವಾಗಿದೆ. ಅರಕು ಕಣಿವೆಯು ಪ್ರಶಾಂತ ಸೌಂದರ್ಯ, ಸೊಂಪಾದ ಹಸಿರು, ಕಾಫಿ ತೋಟಗಳು ಮತ್ತು ಜಲಪಾತಗಳಿಂದ ಸುತ್ತುವರಿದಿದೆ. ಈ ರಮಣೀಯ ತಾಣವು ಪ್ರಕೃತಿ ಪ್ರಿಯರಿಗೆ ನೆಮ್ಮದಿಯನ್ನು ಕೊಡುತ್ತದೆ. ಬೊರ್ರಾ ಗುಹೆಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಆಂಧ್ರ ಪ್ರವಾಸ ಕೈಗೊಳ್ಳುವವರು ಒಮ್ಮೆ ಈ ಜಾಗಕ್ಕೆ ಭೇಟಿ ಕೊಡಬಹುದು.

Araku kanive


ಕಾಕಿನಾಡ

ಕೇರಳ,ತಮಿಳುನಾಡು ಮತ್ತು ಕರ್ನಾಟಕದಲ್ಲಿರುವಂತೆಯೇ ಆಂಧ್ರ ಪ್ರದೇಶದಲ್ಲೂ ಹಿತವಾದ ಅನುಭವ ನೀಡುವ ಪ್ರಶಾಂತವಾದ ಕಡಲತೀರಗಳಿವೆ. ಆಂಧ್ರಪ್ರದೇಶದ ಕಾಕಿನಾಡ(Kaakinada) ಪೂರ್ವ ಕರಾವಳಿಯಲ್ಲಿ ರಮಣೀಯ ಕಡಲತೀರಗಳಿವೆ. ಹಚ್ಚ ಹಸಿರಿನ ವಾತಾವರಣವು ಪ್ರವಾಸಿಗರಿಗೆ ಇಷ್ಟವಾಗುತ್ತದೆ. ಇನ್ನು ಕಾಕಿನಾಡ ಮೀನೂಟಕ್ಕೆ ಹೆಸರುವಾಸಿಯಾಗಿದೆ. ಸಮುದ್ರದ ಆಹಾರವನ್ನು ಸೇವಿಸಲೆಂದೇ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಕಡಲತೀರದಲ್ಲಿ ಕಾಲು ಚಾಚಿಕೊಂಡು ಬಿಸಿ ಬಿಸಿಯಾದ ಕರಿದ ಮೀನನ್ನು ಸೇವಿಸುತ್ತಿದ್ದರೆ ವ್ಹಾವ್!‌ ಸ್ವರ್ಗಕ್ಕೆ ಮೂರೇ ಗೇಣು. ಅಲ್ಲಿಂದ ಸಮೀಪದಲ್ಲಿಯೇ ಇರುವ ಕೊರಿಂಗಾ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡುವುದನ್ನೂ ಪ್ರವಾಸಿಗರು ಮರೆಯಬಾರದು.

Andhra


ಲೇಪಾಕ್ಷಿ


ಕೇರಳವನ್ನು ದೇವರನಾಡು ಎಂದು ಕರೆಯಲಾಗುತ್ತದೆ. ಹಾಗೆ ನೋಡಿದರೆ ಆಂಧ್ರದಲ್ಲೂ ಸಹಸ್ರಾರು ಪುರಾತನ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಿವೆ. ಅದರಲ್ಲೂ ಲೇಪಾಕ್ಷಿ ದೇವಾಲಯ ಪೌರಾಣಿಕ ಹಿನ್ನೆಲೆಯಿಂದಾಗಿ ಭಕ್ತರನ್ನು ಸೆಳೆಯುತ್ತದೆ. ಆರಾಮದಾಯಕವಾಗಿ ಪ್ರವಾಸ ಮಾಡುವ ಇಚ್ಛೆ ಇದ್ದವರೂ ಲೇಪಾಕ್ಷಿ ದೇವಾಲಯಕ್ಕೆ ಬರುತ್ತಾರೆ. ಈ ಸ್ಥಳವನ್ನು ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಐತಿಹಾಸಿಕ ಪಟ್ಟಣವಾದ ಲೇಪಾಕ್ಷಿ ದೇವಾಲಯವು ಸೊಗಸಾದ ವಾಸ್ತುಶಿಲ್ಪ ಮತ್ತು ಪ್ರಾಚೀನ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಇನ್ನು ಅಲ್ಲಿಯೇ ಇರುವ ಸಾಂಪ್ರದಾಯಿಕ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಬಹುದು.

Lepakshi


ವಿಜಯವಾಡ


ವಿಜಯವಾಡ ಆಂಧ್ರಪ್ರದೇಶದ ಟಾಪ್‌ 5 ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಕೃಷ್ಣಾ ನದಿಯ ದಡದಲ್ಲಿರುವ ವಿಜಯವಾಡವು ಆಂಧ್ರಪ್ರದೇಶದ ಪ್ರಸಿದ್ದ ಸಾಂಸ್ಕೃತಿಕ ಕೇಂದ್ರವೂ ಹೌದು. ಇಲ್ಲಿನ ಕನಕ ದುರ್ಗ ದೇವಸ್ಥಾನವೂ ಆಸಕ್ತಿಕರವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಬಹಳ ಸುಂದರವಾದ ಭವಾನಿ ದ್ವೀಪದಲ್ಲಿ ಪ್ರವಾಸಿಗರು ದೋಣಿ ವಿಹಾರ ಮಾಡಬಹುದು. ಬಂಡೆಯಿಂದ ಕತ್ತರಿಸಿದ ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು. ಆಂಧ್ರಪ್ರದೇಶಕ್ಕೆ ಪ್ರವಾಸ ಕೈಗೊಳ್ಳುವವರು ವಿಜಯವಾಡಕ್ಕೆ ತಪ್ಪದೇ ಭೇಟಿ ನೀಡಬೇಕು. ಅಲ್ಲಿನ ಆಹಾರ ಸಂಸ್ಕೃತಿಯೂ ಚೆನ್ನಾಗಿದೆ.

Vijayawada

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಕೇರಳದಲ್ಲಿದೆ ಸಖತ್‌ ಪ್ರವಾಸಿ ತಾಣಗಳು!

Read Previous

ಕೇರಳದಲ್ಲಿದೆ ಸಖತ್‌ ಪ್ರವಾಸಿ ತಾಣಗಳು!

ರಾಜಸ್ಥಾನದಲ್ಲಿದೆ ಕರ್ಣಿ ಮಾತಾ ದೇವಸ್ಥಾನ; ಇಲ್ಲಿ ಇಲಿಗಳು ದೇವರ ಅವತಾರ...

Read Next

ರಾಜಸ್ಥಾನದಲ್ಲಿದೆ ಕರ್ಣಿ ಮಾತಾ ದೇವಸ್ಥಾನ; ಇಲ್ಲಿ ಇಲಿಗಳು ದೇವರ ಅವತಾರ...