ಕೆಎಎಲ್ ಏರ್ವೇಸ್ ವಿವಾದ
ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು ಸ್ಪೈಸ್ಜೆಟ್ ಸಲ್ಲಿಸಿದ ಪಾವತಿ ಯೋಜನೆಯನ್ನು ದಾಖಲಿಸಿಕೊಂಡಿದ್ದು, 45 ದಿನಗಳೊಳಗೆ ₹50 ಕೋಟಿ ನ್ಯಾಯಾಲಯದ ರಿಜಿಸ್ಟ್ರಿಗೆ ಠೇವಣಿ ಮಾಡಬೇಕು ಹಾಗೂ ಬಳಿಕದ 90 ದಿನಗಳೊಳಗೆ ಉಳಿದ ₹90 ಕೋಟಿ ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ವಿಮಾನಯಾನ ಸಂಸ್ಥೆ ಸ್ಪೈಸ್ಜೆಟ್ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ಕೆಎಎಲ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಪ್ರವರ್ತಕ ಕಲಾನಿಧಿ ಮಾರನ್ ಅವರಿಗೆ 140 ಕೋಟಿ ರು. ಪಾವತಿಸುವುದಾಗಿ ದೆಹಲಿ ಹೈಕೋರ್ಟ್ಗೆ ಲಿಖಿತ ಭರವಸೆ ನೀಡಿದ್ದಾರೆ. ಮಧ್ಯಸ್ಥಿಕೆ (ಆರ್ಬಿಟ್ರೇಷನ್) ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ನ್ಯಾಯಾಲಯವು ಹಣ ಪಾವತಿಸಲು ಸ್ಪಷ್ಟ ಕಾಲಮಿತಿಯನ್ನೂ ನಿಗದಿಪಡಿಸಿದೆ.
ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು ಸ್ಪೈಸ್ಜೆಟ್ ಸಲ್ಲಿಸಿದ ಪಾವತಿ ಯೋಜನೆಯನ್ನು ದಾಖಲಿಸಿಕೊಂಡಿದ್ದು, 45 ದಿನಗಳೊಳಗೆ 50 ಕೋಟಿ ರು. ನ್ಯಾಯಾಲಯದ ರಿಜಿಸ್ಟ್ರಿಗೆ ಠೇವಣಿ ಮಾಡಬೇಕು ಹಾಗೂ ಬಳಿಕದ 90 ದಿನಗಳೊಳಗೆ ಉಳಿದ 90 ಕೋಟಿ ರು. ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಇದನ್ನೂ ಓದಿ: ಈ ಏರ್ಲೈನ್ಸ್ ದಶಕಗಳ ವೈಬ್ಗೆ ಕರೆದುಕೊಂಡು ಹೋಗುತ್ತೆ!
ಮೊದಲ ಕಂತಿನ ಹಣವನ್ನು ನಿಗದಿತ ಅವಧಿಯಲ್ಲಿ ಠೇವಣಿ ಇಟ್ಟು ತನ್ನ ಬದ್ಧತೆಯನ್ನು ತೋರಿಸಬೇಕೆಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ನಿಗದಿಪಡಿಸಿ, ಪಾವತಿ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದೆ.
ಇದೇ ವೇಳೆ, ಮಧ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಿ ಸ್ಪೈಸ್ಜೆಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ್ದು, ಪಾವತಿ ಸಂಬಂಧಿತ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸಿದ ಬಳಿಕವೇ ಆ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಹೆಚ್ಚುವರಿ ಕಾಲಾವಕಾಶದ ಮನವಿ, ಮಧ್ಯಸ್ಥಿಕೆ ತೀರ್ಪಿನ ಮೊತ್ತವನ್ನು ಠೇವಣಿ ಇಡಬೇಕೆಂಬ ದೆಹಲಿ ಹೈಕೋರ್ಟ್ನ ಹಿಂದಿನ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಸಲ್ಲಿಸಲಾಗಿತ್ತು. ಈ ವಿವಾದವು ಕೆಎಎಲ್ ಏರ್ವೇಸ್ ಮತ್ತು ಕಲಾನಿಧಿ ಮಾರನ್ ಪರವಾಗಿ ನೀಡಲಾದ ಮಧ್ಯಸ್ಥಿಕೆ ತೀರ್ಪಿನಿಂದ ಉದ್ಭವಿಸಿದ್ದು, ಹಲವು ವರ್ಷಗಳಿಂದ ಎರಡೂ ಪಕ್ಷಗಳ ನಡುವೆ ಕಾನೂನು ಹೋರಾಟ ಮುಂದುವರಿದಿದೆ.