ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಕರ್ನಾಟಕದ ಭಕ್ತರಿಗೆ ಶೀಘ್ರದಲ್ಲೇ ಮತ್ತೊಂದು ಅನುಕೂಲ ಸಿಗುವ ಸಾಧ್ಯತೆ ಇದೆ. ಶಿವಮೊಗ್ಗ–ಬೆಂಗಳೂರು–ತಿರುಪತಿ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ ಆರಂಭಿಸುವ ಪ್ರಸ್ತಾವನೆಗೆ ರೈಲ್ವೇ ಮಂಡಳಿ ಸಕಾರಾತ್ಮಕ ಸ್ಪಂದನೆ ನೀಡಿದೆ.

ತಿರುಪತಿ ಲೋಕಸಭಾ ಕ್ಷೇತ್ರದ ಸಂಸದ ಮದ್ದಿಲ ಗುರುಮೂರ್ತಿ ಅವರು ತಿರುಪತಿಗೆ ಹೆಚ್ಚುವರಿ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಮಂಡಳಿ, ಶಿವಮೊಗ್ಗದಿಂದ ಬೆಂಗಳೂರಿನ ಮಾರ್ಗವಾಗಿ ತಿರುಪತಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಸೇವೆಯ ಪ್ರಸ್ತಾವನೆ ರೂಪಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂಓದಿ:ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಆರಂಭ

ಈ ರೈಲು ಸೇವೆ ಆರಂಭವಾದರೆ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ತಿರುಪತಿಗೆ ತೆರಳಲು ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು, ಕುಟುಂಬ ಸಮೇತ ಪ್ರವಾಸ ಮಾಡುವವರು ಹಾಗೂ ಕಡಿಮೆ ಸಮಯದಲ್ಲಿ ಪ್ರಯಾಣಿಸಲು ಬಯಸುವವರಿಗೆ ವೇಗದ ರೈಲು ಸೇವೆ ಪ್ರಯೋಜನಕಾರಿಯಾಗಬಹುದು.

ಪ್ರಸ್ತಾವಿತ ರೈಲು ಶಿವಮೊಗ್ಗ–ಬೆಂಗಳೂರು–ತಿರುಪತಿ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆಯಿದ್ದು, ಬೆಂಗಳೂರಿನ ಮೂಲಕ ಕರ್ನಾಟಕದ ವಿವಿಧ ಭಾಗಗಳ ಪ್ರಯಾಣಿಕರಿಗೂ ಸಂಪರ್ಕ ಕಲ್ಪಿಸಬಹುದು. ಆದರೆ ರೈಲಿನ ನಿಖರ ವೇಳಾಪಟ್ಟಿ, ನಿಲ್ದಾಣಗಳ ಪಟ್ಟಿ, ಪ್ರಯಾಣದ ಅವಧಿ ಮತ್ತು ಟಿಕೆಟ್ ದರದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

ಹೀಗಾಗಿ ಸದ್ಯಕ್ಕೆ ಇದು ಪ್ರಸ್ತಾವಿತ ಹೊಸ ವಂದೇ ಭಾರತ್ ಸೇವೆಯಾಗಿದ್ದು, ರೈಲ್ವೆ ಇಲಾಖೆಯ ಅಂತಿಮ ಅನುಮೋದನೆ ಮತ್ತು ಅಧಿಕೃತ ವೇಳಾಪಟ್ಟಿಗಾಗಿ ಪ್ರಯಾಣಿಕರು ಕಾಯಬೇಕಿದೆ. ಸೇವೆ ಆರಂಭವಾದರೆ ಮಲೆನಾಡು ಭಾಗದಿಂದ ತಿರುಪತಿ ಯಾತ್ರೆಗೆ ತೆರಳುವ ಭಕ್ತರಿಗೆ ಇದು ಮಹತ್ವದ ಸಾರಿಗೆ ಸೌಲಭ್ಯವಾಗಲಿದೆ.