ಉತ್ತರಾಖಂಡದ ಜಿಮ್ ಕಾರ್ಬೆಟ್ ಟೈಗರ್ ರಿಸರ್ವ್‌ನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಪರಿಸರ ಹಾನಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಸಂರಕ್ಷಿತ ಪ್ರದೇಶದ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಕಡ್ಡಾಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಜಿಮ್ ಕಾರ್ಬೆಟ್ ಕಾಡಿನ ಕೋರ್‌ ಏರಿಯಾದಲ್ಲಿ ಯಾವುದೇ ರೀತಿಯ ಬ್ಯುಸಿನೆಸ್‌ ಟೂರಿಸಂ ಚಟುವಟಿಕೆಗಳು, ಸಫಾರಿಯನ್ನು ಕೈಗೊಳ್ಳದಂತೆ ಆದೇಶಿಸಿದೆ. ಬಫರ್ ಪ್ರದೇಶಗಳಲ್ಲಷ್ಟೇ ನಿಯಂತ್ರಿತ ಸಫಾರಿಗಳಿಗೆ ಅವಕಾಶ ನೀಡಬೇಕು ಎಂದು ಸೂಚಿಸಿದೆ.

Jim corbett tiger reserve


ಇದಲ್ಲದೆ, ಕಾನೂನುಬಾಹಿರ ಕಟ್ಟಡಗಳು ಮತ್ತು ರೆಸಾರ್ಟ್‌ಗಳ ನಿರ್ಮಾಣದಿಂದ ಪರಿಸರಕ್ಕೆ ಉಂಟಾದ ಹಾನಿಯನ್ನು ವಿವರವಾಗಿ ಪರಿಶೀಲಿಸಲು ಒಂದು ತಜ್ಞ ಸಮಿತಿಯನ್ನು ರಚಿಸಲು ಕೋರ್ಟ್ ನಿರ್ದೇಶಿಸಿದೆ. NTCA, ಪರಿಸರ ಇಲಾಖೆ ಮತ್ತು ವನ್ಯಜೀವಿ ತಜ್ಞರು ಒಳಗೊಂಡ ಈ ಸಮಿತಿ, ಹಾನಿಯ ಮಟ್ಟವನ್ನು ಅಂದಾಜಿಸಿ, ಪುನರ್‌ಸ್ಥಾಪನೆಗೆ ಅಗತ್ಯ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕಾಗಿದೆ.

ಹಾನಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ, ಅವರಿಂದಲೇ ಪರಿಹಾರ ಮೊತ್ತ ವಸೂಲು ಮಾಡಿ, ಅದನ್ನು ಪರಿಸರ ಮರುಸ್ಥಾಪನೆಗೆ ಬಳಸುವಂತೆ ಆದೇಶಿಸಲಾಗಿದೆ.

ಟೈಗರ್ ರಿಸರ್ವ್‌ನಲ್ಲಿ ವಾಹನಗಳ ಸಂಖ್ಯೆಯನ್ನು ಮಿತಿಗೆ ಒಳಪಡಿಸುವುದು, ಶಬ್ದ-ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಭವಿಷ್ಯದ ಯಾವುದೇ ಪ್ರವಾಸೋದ್ಯಮ ಯೋಜನೆಗಳು ಪರಿಸರ ರಕ್ಷಣೆಗೆ ಹೊಂದಿಕೆಯಾಗುವಂತೆಯೇ ಇರಬೇಕೆಂಬುದು ಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ.