ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಖ್ಯಾತಿ ಪಡೆದಿರುವ ಹಾಗೂ ಓದುಗರ ದೊಡ್ಡ ಬಳಗವನ್ನು ಹೊಂದಿರುವ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯಲೋಕ ಮತ್ತು ನಿಸರ್ಗ ಪ್ರೀತಿಯನ್ನು ಒಳಗೊಂಡ ‘ತೇಜಸ್ವಿ ವಿಸ್ಮಯ’ ಥೀಮ್‌ನಡಿ ಈ ಬಾರಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಗಣರಾಜ್ಯೋತ್ಸವದ ಅಂಗವಾಗಿ ಜನವರಿ 15 ರಿಂದ 26ರವರೆಗೆ ಈ ಪ್ರದರ್ಶನ ನಡೆಯಲಿದೆ.

ತೇಜಸ್ವಿ ಅವರು ನಿಸರ್ಗದ ಭಾಗವಾಗಿ ಬದುಕಿದವರಾಗಿದ್ದುದರಿಂದ, ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಬೆಟ್ಟದ ಮಾದರಿಯಲ್ಲಿ ನಿಸರ್ಗದ ಪ್ರತಿರೂಪ ನಿರ್ಮಿಸಲಾಗುವುದು. ನಿಸರ್ಗದತ್ತವಾಗಿ ತೇಜಸ್ವಿಯವರ ಮುಖ ಕಾಣುವಂತೆ ಮಾಡಿ, ಅದರ ಮಧ್ಯೆ ಜಲಪಾತ, ಝರಿಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಮೀನುಗಾರಿಕೆ, ಜೇನುಗೂಡುಗಳ ಮೇಲಿನ ಅವರ ಆಸಕ್ತಿ, ಹಾಗೂ ಅವರಿಗೆ ಪ್ರಿಯವಾದ ಶ್ವಾನ, ಪ್ರಾಣಿ, ಪಕ್ಷಿ ಮತ್ತು ಕೀಟಗಳನ್ನು ಹೂವುಗಳಲ್ಲಿ ನಿರ್ಮಿಸಲಾಗುತ್ತಿದೆ.

Lal bagh flower show

ಉದ್ಯಾನದ ಆಯ್ದ ಭಾಗಗಳಲ್ಲಿ ತೇಜಸ್ವಿಯವರ ಕ್ಯಾರಿಕೇಚರ್‌ಗಳ ಸೆಲ್ಫಿ ಪಾಯಿಂಟ್‌ಗಳು, ಅವರ ಕಾದಂಬರಿಗಳ ಪಾತ್ರಗಳ ಪರಿಚಯ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜತೆಗೆ, 11 ದಿನಗಳ ಕಾಲ ತೇಜಸ್ವಿಯವರ ಜೀವನ ಮತ್ತು ಸಾಹಿತ್ಯವನ್ನು ಆಧರಿಸಿದ ನಾಟಕಗಳು ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರೆಡ್ ಹಾಟ್ ಪೋಕರ್‌, ಆಲ್‌ಸ್ಟ್ರೋಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್‌, ಸೈಕ್ಲೊಮನ್‌, ಕ್ಯಾಲಾ ಲಿಲ್ಲಿ ಸೇರಿದಂತೆ ಶೀತ ವಲಯದ ಅಪರೂಪದ ಹೂವಿನ ತಳಿಗಳು ಪ್ರದರ್ಶನದ ಮತ್ತೊಂದು ಆಕರ್ಷಣೆಯಾಗಿವೆ.

ಈ ಫಲಪುಷ್ಪ ಪ್ರದರ್ಶನವನ್ನು ‘ತೇಜಸ್ವಿ ವಿಸ್ಮಯ’ ಶೀರ್ಷಿಕೆಯಡಿ ಆಯೋಜಿಸಲು ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಒಡನಾಟ ಹೊಂದಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ತಿಳಿಸಿದ್ದಾರೆ.