Thursday, June 12, 2025
Thursday, June 12, 2025

ಪ್ರವಾಸಿ ಪ್ರಪಂಚ - ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯದ ಹೊಸ ಆಯಾಮ

ಪ್ರವಾಸ (Travel), ಪ್ರವಾಸೋದ್ಯಮ (Tourism) ಮತ್ತು ಆತಿಥ್ಯ (Hospitality) ಕ್ಷೇತ್ರ ನಮ್ಮ ಮನೆಯ ಮೊಗಸಾಲೆಯಿಂದ ಹಿಡಿದು, ಜಗತ್ತನ್ನು ಸುತ್ತಿ ಮುಗಿಲಿಗೆ ಚಾಚಿದ ಅನಂತ ಲೋಕ. ಇಲ್ಲಿ ಎಲ್ಲರೂ ಪಯಣಿಗರೇ. ಕಾಲ ಯಾರನ್ನೂ ಕೂರಲು ಬಿಡುವುದಿಲ್ಲ. ಹಾಗಿದ್ದರೂ ಪ್ರವಾಸೋದ್ಯಮಕ್ಕೊಂದು ತನ್ನದೇ ಆದ ಪತ್ರಿಕೆ ಇರಲಿಲ್ಲ. ಇಂಗ್ಲಿಷಿನಲ್ಲಿ ಮ್ಯಾಗಜಿನ್ ಗಳಿದ್ದಿರಬಹುದು, ಪಾಕ್ಷಿಕಗಳಿದ್ದಿರಬಹುದು. ಕನ್ನಡದಲ್ಲಿ ಅಡಕೆ, ಜೇನು, ಜಿರಳೆ, ಜ್ಯೇಷ್ಠ ಮದ್ದಿನ ಬಗೆಗೆಲ್ಲಾ ಪತ್ರಿಕೆಗಳಿವೆ. ಆದರೆ ಪ್ರವಾಸೋದ್ಯಮಕ್ಕೆ ಸೀಮಿತವಾದ ಮಾಧ್ಯಮ ನೆಲೆ ಇರಲಿಲ್ಲ

ಮನುಷ್ಯ ತಾಯಿಯ ಕತ್ತಲೆಯ ಗರ್ಭದಿಂದ ಈ ಭೂಮಿಗೆ ಬಂದಿದ್ದೇ, ಒಬ್ಬ ಪ್ರವಾಸಿಗನಾಗಿಯೇ. ನಂತರ ಆತ ಅಲೆಮಾರಿಯಾದ, ಪಯಣಿಗನಾದ, ಯಾತ್ರಿಕನಾದ, ಪಥಿಕನಾದ, ಸಹಪಥಿಕನಾದ, ಚಾರಣಿಗನಾದ. ಮೂಲತಃ ಮನುಷ್ಯ ಜಂಗಮ. ಆತನಿಗೆ ಕುಳಿತಲ್ಲಿ ಕುಳಿತು, ನಿಂತಲ್ಲಿ ನಿಂತು ಗೊತ್ತಿಲ್ಲ. ಆತ ನಿತ್ಯ ಅಲೆಮಾರಿ. ಸ್ಥಾವರತ್ವ ಆತನ ಗುಣವಲ್ಲ. ಆತನ ಜೀವತಂತುಗಳಲ್ಲಿ ಕ್ಷಣಕ್ಷಣಕ್ಕೂ ಹರಿಯುವುದು ಪ್ರವಾಸಿತನ. ಬದುಕಿದ್ದಾಗ ಅಲೆಯುವುದನ್ನೇ ಮೂಲ ಗುಣವಾಗಿಸಿಕೊಂಡ ಮನುಷ್ಯ, ಈ ಲೋಕದ ಕಾಯಕ ಮುಗಿಸಿ ಪರಲೋಕಕ್ಕೆ ಪಯಣ ಬೆಳೆಸುತ್ತಾನೆ. ಅಂದರೆ ಹುಟ್ಟಿದಂದಿನಿಂದ ಸಾಯುವ ತನಕ ಮತ್ತು ಸತ್ತ ನಂತರ ಆತ ನಿತ್ಯ ಸಂಚಾರಿಯೇ. ಇದು ಮನುಷ್ಯನ ಇಹ-ಪರ ಲೋಕಗಳ ನಡುವಿನ ಸುದೀರ್ಘ ಪ್ರವಾಸ. ಇದರ ಪ್ರಪ್ರಥಮ ಕಥನವೇ ‘ಗರುಡ ಪುರಾಣ’. ಮಹಾಭಾರತ ಯುದ್ಧದ ನಂತರ ಧರ್ಮರಾಯ ತನ್ನ ಪತ್ನಿ ಮತ್ತು ಸಹೋದರರೊಂದಿಗೆ ಕೈಗೊಂಡ ಸ್ವರ್ಗಾರೋಹಣವೇ ಮೊದಲ ಚಾರಣ. ದೇವತೆಗಳ ಹಾಗೆಯೇ ಮನುಷ್ಯನೂ ತ್ರಿಲೋಕ ಸಂಚಾರಿಯೇ. 'ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ' ಎಂಬ ವಚನವಾಣಿಯೇ ಮನುಷ್ಯನ ಚಲನಶೀಲತೆಯ ತತ್ಪರ ರೂಪ.    

ಒಂದು ಕ್ಷಣ ಯೋಚಿಸಿ, ಮನುಷ್ಯನ ಜೀವನವೇ ಒಂದು ಮಹಾಯಾನ. ನಿರಂತರ ಪಯಣದೊಂದಿಗೆ ಅನ್ವೇಷಣೆಯನ್ನು ಕಾಯಕ ಮಾಡಿಕೊಂಡ ಮನುಷ್ಯ ನಿತ್ಯ ಪ್ರವಾಸಿ. ಅದು ಆತನ ಆಲೋಚನೆ, ಅಂತರಂಗ ಮತ್ತು ಅಂತಃಸತ್ವಗಳಲ್ಲಿ ನಿರಂತರ ಜಿನುಗು. ಮನುಷ್ಯನ ಆ ಮೂಲಗುಣವನ್ನು ಅನಾವರಣಗೊಳಿಸುವ, ಅದರ ಸಾತತ್ಯವನ್ನು ಅಂದವಾಗಿ ಕಟ್ಟಿಕೊಡುವ, ಮಹತ್ವವನ್ನು ಉನ್ನತೀಕರಿಸುವ, ಸಾರ್ಥಕತೆಯನ್ನು ಸಮ್ಮಿಲನಗೊಳಿಸುವ ಒಂದು ಪತ್ರಿಕೆ ಕನ್ನಡ ಭಾಷೆಯಲ್ಲಿ ಇಲ್ಲಿಯ ತನಕ ಇರಲಿಲ್ಲ. 

ಪ್ರವಾಸ (Travel), ಪ್ರವಾಸೋದ್ಯಮ (Tourism) ಮತ್ತು ಆತಿಥ್ಯ (Hospitality) ಕ್ಷೇತ್ರ ನಮ್ಮ ಮನೆಯ ಮೊಗಸಾಲೆಯಿಂದ ಹಿಡಿದು, ಜಗತ್ತನ್ನು ಸುತ್ತಿ ಮುಗಿಲಿಗೆ ಚಾಚಿದ ಅನಂತ ಲೋಕ. ಇಲ್ಲಿ ಎಲ್ಲರೂ ಪಯಣಿಗರೇ. ಕಾಲ ಯಾರನ್ನೂ ಕೂರಲು ಬಿಡುವುದಿಲ್ಲ. ಹಾಗಿದ್ದರೂ ಪ್ರವಾಸೋದ್ಯಮಕ್ಕೊಂದು ತನ್ನದೇ ಆದ ಪತ್ರಿಕೆ ಇರಲಿಲ್ಲ. ಇಂಗ್ಲಿಷಿನಲ್ಲಿ ಮ್ಯಾಗಜಿನ್ ಗಳಿದ್ದಿರಬಹುದು, ಪಾಕ್ಷಿಕಗಳಿದ್ದಿರಬಹುದು. ಕನ್ನಡದಲ್ಲಿ ಅಡಕೆ, ಜೇನು, ಜಿರಳೆ, ಜ್ಯೇಷ್ಠ ಮದ್ದಿನ ಬಗೆಗೆಲ್ಲಾ ಪತ್ರಿಕೆಗಳಿವೆ. ಆದರೆ ಪ್ರವಾಸೋದ್ಯಮಕ್ಕೆ ಸೀಮಿತವಾದ ಮಾಧ್ಯಮ ನೆಲೆ ಇರಲಿಲ್ಲ.  

ಈ ಚಿಂತನೆಯ ಮೂಸೆಯಲ್ಲಿ ಜನ್ಮ ತಾಳಿದ್ದು 'ಪ್ರವಾಸಿ ಪ್ರಪಂಚ'! 

ಕನ್ನಡದ ಖ್ಯಾತ ಪತ್ರಕರ್ತ ಮತ್ತು ಕನ್ನಡ ಹೋರಾಟಗಾರ ದಿವಂಗತ, ನಾಡೋಜ ಡಾ.ಪಾಟೀಲ ಪುಟ್ಟಪ್ಪ (ಪಾಪು) ಅವರು 'ವಿಶ್ವವಾಣಿ' ದಿನಪತ್ರಿಕೆಯ ಜತೆಗೆ, 'ಪ್ರಪಂಚ' ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದರು. ನಂತರ ಅವರು 'ವಿಶ್ವವಾಣಿ'ಯ ಕರ್ಣಧಾರತ್ವವನ್ನು ನನಗೆ ವಹಿಸಿದರು. ಅವರ ಜೀವಿತ ಅವಧಿಯಲ್ಲೇ, ಒಂದು ಕಾಲಕ್ಕೆ ಮನೆ ಮಾತಾಗಿದ್ದ 'ಪ್ರಪಂಚ' ನಿಂತು ಹೋಗಿತ್ತು. 'ವಿಶ್ವವಾಣಿ' ಜತೆಗೆ ಪಾಪು ಅವರ ಕೂಸಾದ 'ಪ್ರಪಂಚ'ವೂ ಇದ್ದರೆ ಸೂಕ್ತವೆಂದು, ಪ್ರವಾಸೋದ್ಯಮಕ್ಕೆ ಸೀಮಿತವಾದ ಈ ಪತ್ರಿಕೆಯ ಕನಸು ಕಂಡಾಗ, ಮನಸ್ಸಿನಲ್ಲಿ ಅರಳಿದ ಶೀರ್ಷಿಕೆ 'ಪ್ರವಾಸಿ ಪ್ರಪಂಚ'. ಈ ಹೆಸರು ಕನ್ನಡೇತರರಿಗೂ ಸುಲಭವಾಗಿ ಅರ್ಥವಾಗುವಂಥದ್ದು ಎಂಬುದು ವಿಶೇಷ. ಹಾಗೆ ಈ ಎರಡು ಪದಗಳ ಮೊದಲ ಅಕ್ಷರ 'ಪ್ರ' ಆಗಿರುವುದು ಸಹ. ಈ 'ಪ್ರ-ಪ್ರ'ಗಳು ಈ ಪತ್ರಿಕೆಯನ್ನು ಕನ್ನಡದ ಪ್ರಪ್ರಥಮ ಪ್ರಯೋಗ ಮತ್ತು ಪ್ರಯತ್ನವಾಗಿಸಿದೆ. 

ಕನ್ನಡದಲ್ಲಿ ಪ್ರವಾಸಕ್ಕೆ ಸಂಬಂಧಿಸಿದ 'ಸಂಚಾರಿ' ಎಂಬ ಮಾಸಿಕ ಕೆಲಕಾಲ ಪ್ರಕಟವಾಗಿತ್ತಂತೆ. ಆದರೆ ಬ್ರಾಡ್ ಶೀಟ್ ಮಾದರಿಯ ನಮ್ಮ ಪತ್ರಿಕೆ ಕನ್ನಡದಲ್ಲೊಂದೇ ಅಲ್ಲ, ಭಾರತೀಯ ಪತ್ರಿಕೋದ್ಯಮದಲ್ಲಿಯೇ ಏಕೈಕ, ವಿನೂತನ ಹಾಗೂ ಮೊದಲ ಪ್ರಯೋಗ. ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಇದೊಂದು ಹೊಸ ಪ್ರಯತ್ನ ಮತ್ತು ಹೊಸ ಸಾಹಸ. ಪ್ರತಿ ವಾರ ಸರ್ವ ವರ್ಣಮಯ ಇಪ್ಪತ್ತು-ಇಪ್ಪತ್ನಾಲ್ಕು ಪುಟಗಳು, ಬ್ರಾಡ್ ಶೀಟ್ ಆಕಾರ, ಓದಲು ಸುಲಭವೆನಿಸುವ ಮುದ್ದಾದ ಅಕ್ಷರ ಜೋಡಣೆ, ಸೊಗಸಾದ ವಿನ್ಯಾಸ, ವಿಶಾಲ ಫೋಟೋಗಳೊಂದಿಗಿನ ಸಮೃದ್ಧ ಹೂರಣ... ಹಸಿದವನ ಮುಂದೆ ಕೊಟ್ಟೆಕಡುಬು ಇಟ್ಟಂತೆ!

ಪ್ರತಿ ಸಂಚಿಕೆಯಲ್ಲೂ ಹತ್ತಾರು ಲೇಖನ, ವಿಶೇಷ ವರದಿ, ಅಂಕಣ, ವಿಶ್ಲೇಷಣೆ, ಅನುಭವ, ಅಪರೂಪದ ಅಗತ್ಯ ಮಾಹಿತಿ, ನುಡಿಚಿತ್ರ ಬರಹ, ಚಿತ್ರ ಮಾಹಿತಿ, ಕ್ವಿಜ್, ಪುಟ್ಟ ಪುಟ್ಟ ಮಾಹಿತಿಕೋಶಗಳು ಹೀಗೆ ಪತ್ರಿಕೆ ಅಂಗೈಯಲ್ಲೇ ಜಗತ್ತನ್ನು ಅರಳಿಸುವುದರಲ್ಲಿ ಸಂದೇಹವಿಲ್ಲ. ಪುಟದಿಂದ ಪುಟಕ್ಕೆ ಜೀಕುತ್ತಿದ್ದರೆ, ಗಣಪತಿ ನಿಂತಲ್ಲೇ ಮೂರು ಸಲ ಸುತ್ತಿ ವಿಶ್ವದರ್ಶನ ಪಡೆದಂತೆ, ಕುಳಿತಲ್ಲೇ ವಿಶ್ವ ಪರ್ಯಟನೆ ಮಾಡಿದ ಅನುಭವ ನಿಮ್ಮದು. 

'ಪ್ರವಾಸಿ ಪ್ರಪಂಚ' ಕೇವಲ ಮುದ್ರಿತ ಪತ್ರಿಕೆಯಷ್ಟೇ ಅಲ್ಲ. ಜತೆಗೆ ವೆಬ್ ಸೈಟ್, ಡಿಜಿಟಲ್ ಚಾನೆಲ್ ಮತ್ತು ಸೋಶಿಯಲ್ ಮೀಡಿಯಾದಂಥ ಪ್ರಬಲ ಮತ್ತು ಸರ್ವವ್ಯಾಪಿ ಪ್ಲಾಟ್ ಫಾರ್ಮ್ ನಲ್ಲಿಯೂ ಲಭ್ಯ. ಪ್ರತಿ ಅರ್ಧ ಗಂಟೆಗೊಮ್ಮೆ ವೆಬ್ ಸೈಟ್ ನಲ್ಲಿ ಹೊಸ ಹೊಸ ಸುದ್ದಿ ಧಾರೆ. ಡಿಜಿಟಲ್ ಚಾನೆಲ್ ನಲ್ಲೂ ಜಗತ್ತಿನ ಸ್ವಾರಸ್ಯಕರ ಪ್ರವಾಸಿಲೋಕ, ಅನುಭವಗಳ ನಿತ್ಯ ದೃಶ್ಯ ಪ್ರವಾಹ. ಸೋಶಿಯಲ್ ಮೀಡಿಯಾದಲ್ಲೂ ಯಾತ್ರೆ-ಯಾತ್ರಿಕರು, ಪ್ರವಾಸ-ಪ್ರವಾಸಿಗರ ಹವಾ ಹವಾ. ನಮ್ಮ ರಾಜ್ಯ, ಹೊರ ರಾಜ್ಯ, ಹೊರ ದೇಶಗಳೆಲ್ಲ ನಮ್ಮ ಕಣ್ಮುಂದೆಯೇ ಅಕ್ಷರ, ದೃಶ್ಯಗಳ ಕಾಮನಬಿಲ್ಲಿನಲ್ಲಿ ಸಾಕಾರ.  

ಯಾವ ಉತ್ಪ್ರೇಕ್ಷೆಯೂ ಇಲ್ಲ, 'ಪ್ರವಾಸಿ ಪ್ರಪಂಚ' ನಿಮ್ಮನ್ನು ಹೊಸ ಓದಿನ ಯಾತ್ರೆಗೆ ಅಣಿಗೊಳಿಸುವ ಒಂದು ಮಹತ್ವಾಕಾಂಕ್ಷೆಯ ವಿಭಿನ್ನ ಪ್ರಯತ್ನ. Travel far enough, you meet yourself ಎಂಬಂತೆ, ನಿಮ್ಮನ್ನು ನೀವು ಖುಷಿಯಿಂದ ಸಂದಿಸುವ ತಾಣವಿದು. Don’t tell me how educated you are, tell me how much you travelled ಎಂಬ ಮಾತಿನಂತೆ, ಇದು ಕೇವಲ ಪ್ರವಾಸಿ ತಾಣಗಳ ಬಗೆಗಿನ ಬ್ರೋಷರ್ ಪತ್ರಿಕೆ ಅಲ್ಲ. ಇದೊಂದು ಅನನ್ಯ ಮಾಹಿತಿ ಆಗರ. ಇದು ಕೇವಲ ಟೂರಿಸ್ಟ್ ಸ್ಥಳಗಳ ವಿವರವಿರುವ ಪತ್ರಿಕೆಯಲ್ಲ. ಮನಸ್ಸನ್ನು ಹಸನುಗೊಳಿಸಿ, ಬದುಕನ್ನು ಹಗುರಗೊಳಿಸುವ ಪತ್ರಿಕೆ.  

ಅಚ್ಚರಿಗೊಳಿಸುವ ಮಾಹಿತಿ ಒಳಗೊಂಡ ಪ್ರವಾಸಿ ಕಥನಗಳು, ಅನುಭವಿ ಪ್ರವಾಸಿಗಳ ಪ್ರವಾಸಾನುಭವಗಳು, ಖ್ಯಾತ ಪ್ರವಾಸಿಗರ, ಟ್ರಾವೆಲ್ ಏಜೆನ್ಸಿಗಳ ಮತ್ತು ಇನ್ ಫ್ಲುಯೆನ್ಸರ್ ಗಳ ಸಂದರ್ಶನ, ಟ್ರಾವೆಲ್ ಬ್ಲಾಗರ್ಸ್, ಟೂರಿಸಂ ಪರಿಣತರು, ಛಾಯಾಚಿತ್ರಗ್ರಾಹಕರುಗಳ ಸಂವಾದ, ಪ್ರವಾಸೋದ್ಯಮದ ಟ್ರೆಂಡಿಂಗ್ ಸುದ್ದಿಗಳ ತಾಜಾ ಅಪ್ಡೇಟ್ ಗಳು, ಜಗತ್ತಿನ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳ ಒಳನೋಟ ಬೀರುವ ಪ್ರತ್ಯಕ್ಷ ನುಡಿಚಿತ್ರಗಳು, ಬೇರೆ ಬೇರೆ ದೇಶಗಳ ಜನಪದ, ಸಂಸ್ಕೃತಿ, ಸಂಗೀತ ಮತ್ತು ಪ್ರಾದೇಶಿಕ ಹಬ್ಬಗಳ ಪರಿಚಯ, ಹೆಚ್ಚು ಖರ್ಚಿಲ್ಲದ ಬಡ್ಜೆಟ್ ಸ್ನೇಹಿ ಪ್ರವಾಸಗಳ ಮಾಹಿತಿ, ಲಕ್ಸುರಿ ಪ್ರವಾಸಗಳನ್ನು ಕೈಗೊಳ್ಳುವ ಕುರಿತು ವಿವರ, ಟ್ರಾವೆಲ್ ಗೈಡ್ ಗಳ ಜತೆ ಮಾತುಕತೆ, ಟ್ರಾವೆಲ್ ಏಜೆಂಟ್ ಗಳೊಂದಿಗೆ ಹರಟೆ, ದೇಶ-ವಿದೇಶಗಳ ವಿಶಿಷ್ಟ ಆಹಾರಗಳ ಪರಿಚಯ, ಪ್ರವಾಸಿ ತಾಣಗಳ ರೆಸ್ಟೋರೆಂಟ್ ಗಳ ಬಾಣಸಿಗ (ಶೆಫ್) ಮತ್ತು ಆಹಾರ ಪರಿಣತರ ಸಂದರ್ಶನ, ವನ್ಯಜೀವಿ ಹಾಗೂ ಸಾಹಸಮಯ ಪ್ರವಾಸೋದ್ಯಮ ಅನಾವರಣ, ಚಾರಣ, ಸ್ಕೂಬಾ ಡೈವಿಂಗ್, ರಿವರ್ ರಾಫ್ಟಿಂಗ್ ಮುಂತಾದ ಸಾಹಸಮಯ ಪ್ರವಾಸಿ ಜಾಗಗಳ ನೋಟ, ವೈಲ್ಡ್ ಲೈಫ್ ಸಫಾರಿ ಮತ್ತು ವನ್ಯಜೀವಿಗಳ ಅಪರೂಪದ ಚಿತ್ರಗಳು... ಇದು ನಿಜಕ್ಕೂ ಪ್ರವಾಸಿಗರ ಮಾಹಿತಿಯೋಕುಳಿ! 

ಪ್ರವಾಸೋದ್ಯಮ ಕುರಿತು ಕನ್ನಡದಲ್ಲಿ ಹೀಗೂ ಒಂದು ಪತ್ರಿಕೆ ಮಾಡಬಹುದಾ ಎಂಬ ರೀತಿಯಲ್ಲಿ 'ಪ್ರವಾಸಿ ಪ್ರಪಂಚ'ವನ್ನು ರೂಪಿಸಿದ್ದೇವೆ. ಆ ನಿಟ್ಟಿನಲ್ಲಿ ಮೊದಲ ಸಂಚಿಕೆ ಒಂದು ಪುಟ್ಟ ಟೀಸರ್. ಸಂಚಿಕೆಯಿಂದ ಸಂಚಿಕೆಗೆ 'ಪ್ರವಾಸಿ ಪ್ರಪಂಚ' ಸಾಲು ಸಾಲು ಮೋಡಗಳಂತೆ ದಟ್ಟೈಸಿ, ಹೃನ್ಮನಗಳಿಗೆ ಒಂದು ಅಪೂರ್ವ ಹಿತಾನುಭವದ ತಂಪೆರೆಯುವುದರಲ್ಲಿ ಎರಡು ಮಾತಿಲ್ಲ. 

ಇಂದು ಪ್ರವಾಸೋದ್ಯಮ ಕ್ಷೇತ್ರ ಯಾವುದೇ ದೇಶದ ಆರ್ಥಿಕ ಶಕ್ತಿಯನ್ನು ನಿರ್ಧರಿಸುವ ಹಾಗೂ ನಿರ್ದೇಶಿಸುವ ಕೂಡುಕಾಲದಲ್ಲಿದೆ. ಇದಕ್ಕೆ ಇಂಬು ನೀಡುವ ಆಶಯದೊಂದಿಗೆ, 'ಪ್ರವಾಸಿ ಪ್ರಪಂಚ'ವೂ ಸಹಪಥಿಕನಾಗಿದೆ. ಇದು ಪ್ರವಾಸೋದ್ಯಮದಲ್ಲಿ ಭಾಗೀದಾರರಾಗಿರುವ ಎಲ್ಲರನ್ನೂ ಒಂದೆಡೆ ಸೇರಿಸುವ ಶೃಂಗ ವೇದಿಕೆಯಾಗಿಯೂ, ಉದ್ಯಮದ ಧ್ವನಿಯಾಗಿಯೂ, ಒತ್ತಾಸೆಗಳ ಕಹಳೆಯಾಗಿಯೂ, ಕೆಲಸ ಮಾಡುತ್ತದೆ. 

'ಪತ್ರಿಕೋದ್ಯಮದಲ್ಲಿ ಸಕಾರಾತ್ಮಕತೆ' ಬದಲು 'ಸಕಾರಾತ್ಮಕತೆಯೇ ಪತ್ರಿಕೋದ್ಯಮ' ಆಗಬೇಕೆಂದು ಬಯಸುವವರಿಗೆ, 'ಪ್ರವಾಸಿ ಪ್ರಪಂಚ' ಆದರ್ಶವೂ ಹೌದು, ಮೇಲ್ಪಂಕಿಯೂ ಹೌದು. ಕಾರಣ ಈ ಪತ್ರಿಕೆಯಲ್ಲಿ ಹಗರಣ, ಹನಿಟ್ರ್ಯಾಪ್, ಪೆನ್ ಡ್ರೈವ್, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಟೀಕೆ, ವಿವಾದ, ಆರೋಪ.. ಹೀಗೆ ಯಾವುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮೂರು 'ಸಿ'ಗಳೆಂದೇ ಪ್ರಖ್ಯಾತವಾದ - ಸಿನಿಮಾ, ಕ್ರೈಮ್, ಕ್ರಿಕೆಟ್ - ಸುದ್ದಿಯಿಲ್ಲದೆಯೂ ಪತ್ರಿಕೆಯನ್ನು ಮಾಡಬಹುದು ಎಂಬುದನ್ನು 'ಪ್ರವಾಸಿ ಪ್ರಪಂಚ' ಸುಸ್ಪಷ್ಟವಾಗಿ ಸಾಬೀತು ಮಾಡಲಿದೆ. 

ಬುದ್ಧಿ-ಭಾವ-ಕೋಶವನ್ನು ಪೊರೆಯುವ, 'ಮಾಲಿನ್ಯರಹಿತ ಉದ್ಯಮ' ಎಂದೇ ಹೆಸರಾದ ಪ್ರವಾಸೋದ್ಯಮವನ್ನು ಉತ್ತೇಜಿಸುವುದರಲ್ಲಿ ದೇಶದ ಅಭಿವೃದ್ಧಿಯೂ ಅಡಗಿದೆ. ಅಂಥ ಉದ್ಯಮಕ್ಕೆ ಸಂವೇದಿಯಾಗಿ, ಹಿತಸ್ಪರ್ಶಿಯಾಗಿ, ದಾರಿದೀಪವಾಗಿ 'ಪ್ರವಾಸಿ ಪ್ರಪಂಚ' ನಿಲ್ಲಲಿದೆ. ಇಂಥ ವಿಶಿಷ್ಟ ಮತ್ತು ವಿಶೇಷ ಆಶಯಗಳನ್ನು ಹೊಂದಿರುವ 'ಪ್ರವಾಸಿ ಪ್ರಪಂಚ'ಕ್ಕೆ ನಿಮ್ಮ ಶ್ರೀರಕ್ಷೆ ಇರಲಿ. ಈ ಪತ್ರಿಕೆಯ ಗೆಲುವಿನಲ್ಲಿ ಪ್ರವಾಸಿಗನ, ಪ್ರವಾಸೋದ್ಯಮದ ಗೆಲುವೂ ಅಡಗಿದೆ. ಕುಳಿತು ಕೆಟ್ಟವರಿದ್ದಾರೆ, ಆದರೆ ತಿರುಗಿ ಕೆಟ್ಟವರಿಲ್ಲ. ಇಂದು ಇಡೀ ಜಗತ್ತೇ ಪ್ರವಾಸ ಹೊರಟಿದೆ. ಇದು ತಿರುಗಾಲ ತಿಪ್ಪರ ಕಾಲ. ಅಂಥವರ ಬೆಳಕಿನ ಬಿಂಬವಾಗಿರುವ 'ಪ್ರವಾಸಿ ಪ್ರಪಂಚ'ಕ್ಕೆ ನೀವೇ ಆಸರೆ. 

ಸಂತೋಷ, ನೆಮ್ಮದಿಯನ್ನು ಖರೀದಿಸುವುದು ಅಸಾಧ್ಯ. ಆದರೆ 'ಪ್ರವಾಸಿ ಪ್ರಪಂಚ'ದೊಂದಿಗೆ ಇವೆರಡನ್ನೂ ಖರೀದಿಸಬಹುದು! 

ಇನ್ನು ಮುಂದೆ ಪ್ರವಾಸದಲ್ಲಿ ನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವು. Work hard, travel harder. ನಮ್ಮೆಲ್ಲರ ಪ್ರಯಾಣ ಸುಖಮಯವಾಗಿರಲಿ.  

- ವಿಶ್ವೇಶ್ವರ ಭಟ್

Vishweshwar Bhat

Vishweshwar Bhat

Editor in Chief

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್

Read Previous

ವಿಧಾನಸೌಧ ಇನ್ಮುಂದೆ ಪ್ರವಾಸಿಗರಿಗೆ ಮುಕ್ತ: ಪ್ರವಾಸೋದ್ಯಮ ಇಲಾಖೆಯಿಂದ ಗೈಡೆಡ್ ಟೂರ್

ವರ್ಜಿನ್ ಅಟ್ಲಾಂಟಿಕ್ ನಿಂದ ಏರ್ ಟ್ಯಾಕ್ಸಿ ಪ್ರಾರಂಭ

Read Next

ವರ್ಜಿನ್ ಅಟ್ಲಾಂಟಿಕ್ ನಿಂದ ಏರ್ ಟ್ಯಾಕ್ಸಿ ಪ್ರಾರಂಭ