ಸಿನಿಮಾಟೋಗ್ರಪಿ ಕಲಿತು ಚಿತ್ರರಂಗದಲ್ಲಿ ಹೆಸರು ಮಾಡಬೇಕು, ವಿಡಿಯೋ ಎಡಿಟಿಂಗ್‌ ಕಲಿಯಬೇಕು, ಫೊಟೋಗ್ರಫಿ, ವಿಡಿಯೋಗ್ರಫಿ ಮಾತ್ರವಲ್ಲದೆ ಆಲ್ಬಂ ಡಿಸೈನಿಂಗ್‌ ಕಲೆಯನ್ನು ಕರಗತಮಾಡಿಕೊಂಡು ಸ್ವಂತ ಉದ್ಯಮವನ್ನೇ ಪ್ರಾರಂಭಿಸಬೇಕು. ಡ್ರೋನ್‌ ಬಳಕೆಯಷ್ಟೇ ಅಲ್ಲದೆ ಇಂದಿನ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಂಡು ಅದರಿಂದಲೇ ಜೀವನ ರೂಪಿಸಿಕೊಳ್ಳಬೇಕು..ಹೀಗೆ ಇಂದಿನ ಯುವ ಜನಾಂಗ ಸಾಕಷ್ಟು ಯೋಜನೆಗಳೊಂದಿಗೆ ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಅಂಥವರಿಗಾಗಿಯೇ ಬಿಜಾಪುರದವರಾದ ಸದ್ದು ಅವರು, ನಮ್ಮ ಬೆಂಗಳೂರಿನಲ್ಲಿಯೇ ಕನ್ನಡದಲ್ಲಿ, ಕನ್ನಡದವರೇ ʻಬೆಂಗಳೂರು ಸಿನಿ ಕ್ರಿಯೇಷನ್‌ʼ ಎಂಬ ವಿಶಿಷ್ಟ ತರಬೇತಿ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.

ಇದನ್ನೂ ಓದಿ: ಜೋಳಿಗೆ ತುಂಬ ತಂದ ಚಾರಣದ ಕಥೆಗಳು

ಮೂಲತಃ ಬಿಜಾಪುರದ ಹನುಮಾಪುರದವರಾದ ಸದ್ದು, ಬಾಗಲಕೋಟೆಯಲ್ಲಿ ಬಿಕಾಂ ಪದವಿ ಪಡೆದವರು. ಅಮ್ಮನಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಸಿಎ ಮಾಡಲು ಮುಂದಾದರು. ಆದರೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆಯೇ ಕಾರಣವಾದ ನಂತರ ರಾತ್ರಿಯ ವೇಳೆ ಕೆಲಸಕ್ಕೆ ಸೇರಿ ಹಗಲು ಹೊತ್ತಿನಲ್ಲಿ ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಎಂಎ ಮಾಡಿಕೊಂಡರು. ಅಲ್ಲದೆ ಪತ್ರಿಕೋದ್ಯಮದಲ್ಲಿ ವೃತ್ತಿ ಜೀವನವನ್ನೂ ಪ್ರಾರಂಭಿಸಿದ್ದರು. ಆದರೆ ಅದ್ಯಾಕೋ ಅವರ ಕೈಹಿಡಿಯಲಿಲ್ಲ.

Untitled design - 2026-04-21T194033.470

ವರವಾದ ಕರೋನಾ ಕಾಲ

ಇದೇ ವೇಳೆ ಕರೋನಾ ಮಹಾಮಾರಿ ಎಲ್ಲೆಡೆ ಹರಡಲು ಪ್ರಾರಂಭವಾಗಿತ್ತು. ಹಾಗಾದರೆ ಮುಂದೇನು ಎಂಬ ಯೋಚನೆಯಲ್ಲೇ ಸ್ವಂತ ಊರು ಬಿಜಾಪುರಕ್ಕೆ ಮರಳಿದ್ದರು. ಅಲ್ಲಿ ವರ್ಷಗಳಿಂದ ಜತೆಗಿದ್ದ ಸ್ನೇಹಿತನೊಡನೆ ಸೇರಿ ಚಿತ್ರವೊಂದಕ್ಕೆ ಕ್ಯಾಮೆರಾಮನ್‌ ಆಗಿಯೂ ಕೆಲಸ ಪ್ರಾರಂಭಿಸಿದ್ದಲ್ಲದೇ ಪುಟ್ಟದಾಗಿ ಒಂದು ಸ್ಟುಡಿಯೋ ಕಂ ಎಡಿಟಿಂಗ್‌ ರೂಮ್‌ ಪ್ರಾಂಭಿಸಿದ್ದರು. ಎಡಿಟಿಂಗ್‌ ಕಲಿಯುವುದಕ್ಕೆ ಆಸಕ್ತಿ ತೋರಿದ ಸ್ನೇಹಿತರಿಗೆ ಇಲ್ಲಿ ತರಬೇತಿಗಳನ್ನೂ ಆಯೋಜಿಸಿ ಹೆಸರು ಮಾಡಿದರು. ನಂತರ ಸದ್ದು ಅವರು ಮತ್ತೆ ಬೆಂಗಳೂರಿನತ್ತ ಮುಖ ಮಾಡಿದರು.

ಮಹಾನಗರಿಯಲ್ಲಿ ʻಬೆಂಗಳೂರು ಸಿನಿ ಕ್ರಿಯೇಷನ್‌ʼ

ಬೆಂಗಳೂರಿಗೆ ಬಂದು ನಗರದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಸಮೀಪ ʻಬೆಂಗಳೂರು ಸಿನಿ ಕ್ರಿಯೇಷನ್‌ʼ ಸಂಸ್ಥೆಯನ್ನು ಕಟ್ಟಿರುವ ಸದ್ದು ಅವರು, ಪ್ರಿ ವೆಡ್ಡಿಂಗ್‌, ವೆಡ್ಡಿಂಗ್‌, ಬೇಬಿ ಫೊಟೋಶೂಟ್‌ ಸೇರಿದಂತೆ ಅನೇಕ ಶುಭ ಸಮಾರಂಭಗಳ ಫೊಟೋ, ವಿಡಿಯೋ ಚಿತ್ರೀಕರಣ, ಆಲ್ಬಂ ತಯಾರಿಸಿಕೊಟ್ಟಿರುವುದಲ್ಲದೇ, ವಿಡಿಯೋ ಎಡಿಟಿಂಗ್‌ ಸಹ ಮಾಡಿಕೊಟ್ಟಿದ್ದಾರೆ.

ಕಳೆದ ಮೂರೂವರೆ ವರ್ಷಗಳಿಂದಲೂ 1300ಕ್ಕೂ ವಿದ್ಯಾರ್ಥಿಗಳಿಗೆ ಛಾಯಾಗ್ರಹಣ, ವಿಡಿಯೋ ಎಡಿಟಿಂಗ್‌ ತರಬೇತಿ ನೀಡುವ ಮೂಲಕ ಅದೆಷ್ಟೋ ಯುವ ತಂತ್ರಜ್ಞರನ್ನು ಕರ್ನಾಟಕಕ್ಕಷ್ಟೇ ಅಲ್ಲದೆ ಆಂದ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರಕ್ಕೂ ಪರಿಚಯಿಸಿದ್ದಾರೆ. ಟ್ರೆಂಡ್‌ಗೆ ತಕ್ಕಂತೆ ಸದ್ಯ ಎಐ ತರಬೇತಿಯನ್ನೂ ನೀಡುತ್ತಿರುವುದು ಈ ಸಂಸ್ಥೆಯ ವಿಶೇಷ.

Untitled design - 2026-04-21T194024.529

ಸಾಧನೆಗೆ ಸಂದ ಪ್ರಶಸ್ತಿಗಳು..

ತಂತ್ರಜ್ಞಾನಗಳ ತರಬೇತಿಗಾಗಿ, ಸದ್ದು ಅವರ ಸಾಧನೆಗಳಿಗಾಗಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಬಿಗ್‌ ಎಫ್‌ಎಂ ನಿಂದ ಬಿಗ್‌ ಇಂಪಾಕ್ಟ್‌ ಪ್ರಶಸ್ತಿ, ರೇಡಿಯೋ ಸಿಟಿ ಯು ಬೆಂಗಳೂರು ಸಿನಿ ಕ್ರಿಯೇಷನ್‌ ಸಂಸ್ಥೆಗೆ ಸಿನಿಮಾಟೋಗ್ರಫಿ ಹಾಗೂ ವಿಡಿಯೋಗ್ರಫಿ ವಿಭಾಗದ ಸಾಧನೆಗಾಗಿ ʻಐಕಾನ್‌ ಪ್ರಶಸ್ತಿʼ ನೀಡಿ ಗೌರವಿಸಿದೆ. ಗ್ಯಾರೆಂಟಿ ನ್ಯೂಸ್‌ ನೀಡಿರುವ ʻಕೆಂಪೇಗೌಡ ನ್ಯಾಷನಲ್ ಅವಾರ್ಡ್‌ʼ ಗೆ ಇವರು ಭಾಜನರಾಗಿದ್ದಾರೆ. ಚಿತ್ರಸಂತೆಯಿಂದ ವರ್ಷದ ಕನ್ನಡಿಗ ಕರ್ನಾಟಕ ಅಚೀವರ್ಸ್‌ ಅವಾರ್ಡ್‌, ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ನಲ್ಲಿ ಬೆಸ್ಟ್‌ ಡಿಒಪಿ ಗಾಗಿ ಕಲಾ ಸೇವಾ ರತ್ನ ಅವಾರ್ಡ್‌ ಮುಡಿಗೇರಿಸಿಕೊಂಡಿದ್ದಾರೆ.

--

ಚಿಕ್ಕಂದಿನಿಂದಲೂ ಸಿನಿಮಾ ರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಸದ್ದು ಅವರು, ʻರತ್ನಾಪುರʼ ಸಿನಿಮಾದಲ್ಲಿ ಬಣ್ಣ ಹಚ್ಚಿಕೊಂಡು ವಿಲನ್‌ ಆಗಿಯೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇವರೇ ಈ ಸಿನಿಮಾದಲ್ಲಿ ಛಾಯಾಗ್ರಹಣವನ್ನೂ ಮಾಡಿರುವುದು ಹೆಮ್ಮೆಯ ವಿಚಾರ.

Untitled design - 2026-04-21T194008.139

--

ಕಳೆದ ಮೂರೂವರೆ ವರ್ಷಗಳಿಂದ ಅತ್ತಿಗುಪ್ಪೆ ಸಮೀಪ ಆಫೀಸ್‌ ಮಾಡಿಕೊಂಡು 1300ಕ್ಕೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದೇನೆ. ವಿಡಿಯೋ ಎಡಿಟಿಂಗ್‌, ಸಿನಿಮಾಟೋಗ್ರಪಿ, ಆಲ್ಬಂ ಡಿಸೈನಿಂಗ್‌, ಫೊಟೋಗ್ರಫಿ, ಡ್ರೋನ್‌ ಶೂಟ್‌ ಹೀಗೆ ಎಲ್ಲವನ್ನೂ ಹೇಳಿಕೊಡುತ್ತೇವೆ. ಎಐ ತರಬೇತಿಯನ್ನೂ ನೀಡುತ್ತಿದ್ದೇನೆ. ನಮ್ಮ ಸಂಸ್ಥೆಗೆ ತರಬೇತಿಗಾಗಿ ಸೇರಿಕೊಳ್ಳಬೇಕಾದರೆ ಇಂಥದ್ದೇ ವಿದ್ಯಾರ್ಹತೆ ಬೇಕೆಂದಿಲ್ಲ. ಆದರೆ ಬೇಕಿಸ್‌ ಕಂಪ್ಯೂಟರ್‌ ಜ್ಞಾನವಿದ್ದರೆ ಸಾಕು. ಕಲಿಕೆಗೆ ಬಂದವರಿಗೆ ಕ್ಯಾಮೆರಾ, ಗಿಂಬಲ್‌ ಹಾಗೂ ಸಿಸ್ಟಂಗಳನ್ನೂ ನಾವೇ ಕೊಡುವುದರಿಂದ ನಿಶ್ಚಿಂತೆಯಿಂದ ಕಲಿಕೆಯ ಬಗೆಗಷ್ಟೇ ಗಮನಹರಿಸಿದರೆ ಸಾಕು. ಮುಂದಿನ ದಿನಗಳಲ್ಲಿ ಬೆಂಗಳೂರು ಸಿನಿ ಕ್ರಿಯೇಷನ್ ಅನ್ನು ಸ್ಕಿಲ್‌ ಡೆವಲಪ್‌ಮೆಂಟ್‌ ಕಾಲೇಜು ಆಗಿ ಮಾರ್ಪಾಡು ಮಾಡಬೇಕು ಎಂಬುದು ನನ್ನ ಕನಸು. ಬಿಕಾಂ, ಬಿಎಸ್‌ಸಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಎಐ ಕ್ರ್ಯಾಷ್‌ ಕೋರ್ಸ್‌ ಮಾಡಬೇಕೆಂದುಕೊಂಡಿದ್ದೇನೆ. ಸದ್ಯ ಒಂದು ತಿಂಗಳು, ಮೂರು ತಿಂಗಳ ಕೋರ್ಸ್‌ ಹಾಗೂ ಆರು ತಿಂಗಳ ಕೋರ್ಸ್‌ ನಡೆಸುತ್ತಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಒಂದು ವರ್ಷದ ಕೋರ್ಸ್‌ ಮಾಡುವ ಉದ್ದೇಶವೂ ಇದೆ.

- ಸದ್ದು, ಸಂಸ್ಥಾಪಕರು, ಬೆಂಗಳೂರು ಸಿನಿ ಕ್ರಿಯೇಷನ್‌

ಬೆಂಗಳೂರು ಸಿನಿ ಕ್ರಿಯೇಷನ್ ಬೆಂಗಳೂರಿನ ವಿಜಯನಗರದಲ್ಲೂ ಒಂದು ಶಾಖೆಯನ್ನು ತೆರೆಯಲಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಹಣ, ಸಂಕಲನ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಇಲ್ಲಿ ಕನ್ನಡದಲ್ಲೇ ತರಬೇತಿ ನೀಡಲಾಗುತ್ತದೆ. ವಿಶೇಷವೆಂದರೆ ಚಿತ್ರರಂಗದ ಅನೇಕ ಅನುಭವಿ ತಂತ್ರಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸಿನಿಮಾ ಮೇಕಿಂಗ್‌ ಕುರಿತು ತಾಂತ್ರಿಕ ತರಬೇತಿ ನೀಡುತ್ತಾರೆ. ಈ ಶಾಖೆಯನ್ನು ನಟ ನವೀನ್‌ ಶಂಕರ್‌ ಛಾಯಾಗ್ರಾಹಕ ಮತ್ತು ಸಂಕಲನಕಾರ ಕ್ರೇಜಿಮೈಂಡ್ಸ್‌ ಶ್ರೀ ಮತ್ತು ಶಾಸಕ ಪ್ರಿಯ ಕೃಷ್ಣ ಉದ್ಘಾಟಿಸಿದ್ದರು. ‌