ಜಗದ ಗಮನ ಸೆಳೆಯುತ್ತಿದೆ ವಿಶ್ವ ಗೀತಾ ಪರ್ಯಾಯ
ದ್ವೈತ ಸಿದ್ದಾಂತ ಪ್ರತಿಪಾದಕರಾದ ಮಧ್ವಾಚಾರ್ಯರಿಂದ ಇಲ್ಲಿನ ಶ್ರೀ ಕೃಷ್ಣನ ವಿಗ್ರಹದ ಸ್ಥಾಪನೆಯಾಗಿದೆ. ಈ ವಿಗ್ರಹದ ಹಿನ್ನೆಲೆ ದ್ವಾರಕೆಯ ಬಳಿಗೆ ನಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ಈಗ ನೆಲೆಸಿರುವ ಮೂಲ ದೇವರು ಸಹಸ್ರಮಾನಗಳಿಂದ ಗೋಪಿಚಂದನದಲ್ಲಿ ಸಮುದ್ರದ ಆಳದಲ್ಲಿ ಮುಳುಗಿತ್ತು ಎನ್ನಲಾಗಿದ್ದು, ಮಧ್ವಾಚಾರ್ಯರ ದಿವ್ಯ ದೃಷ್ಟಿಯಿಂದ ಮಲ್ಪೆಯ ಬಳಿ ಮುಳುಗುತ್ತಿದ್ದ ಒಂದು ಹಡಗಿನಲ್ಲಿ ಈ ವಿಗ್ರಹ ದೊರಕಿತು. ಅದನ್ನು ಮಧ್ವಾಚಾರ್ಯರು ತಂದು ತಾವೇ ಸ್ಥಾಪನೆಯನ್ನು ಮಾಡಿದರು ಎನ್ನಲಾಗಿದೆ.
ಪರಶುರಾಮರು ಹೇಳಿರುವಂತೆ ಕರ್ನಾಟಕದ ಸಪ್ತ ಮುಕ್ತಿದಾಯಕ ಕ್ಷೇತ್ರಗಳಲ್ಲಿ ಉಡುಪಿಯು ಬಹುಮುಖ್ಯ ಕ್ಷೇತ್ರವಾಗಿದೆ. ಇಲ್ಲಿಗೆ ಭೇಟಿ ನೀಡುವವರ ಪಾಪಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಆಸ್ತಿಕ ಅಥವಾ ನಾಸ್ತಿಕ ಯಾರಾಗಿದ್ದರೂ ಸರಿ, ಉತ್ತುಂಗದ ಸಂಭ್ರಮದಲ್ಲಿರುವ ಉಡುಪಿಯನ್ನು ನೋಡಬೇಕು ಎಂದರೆ ಪರ್ಯಾಯ ಆಚರಣೆಯ ದಿನಗಳು ಇದಕ್ಕೆ ಬಹು ಉತ್ತಮ ಸಮಯಾವಕಾಶ. ಈ ಸಮಯದಲ್ಲಿ ಉಡುಪಿ ಸುವರ್ಣಯುಗದಂತೆ ಕಂಗೊಳಿಸುತ್ತಿರುತ್ತದೆ.
ಸನ್ನಿಧಿಯಲ್ಲಿವೆ ಸುಂದರ ತಾಣಗಳು
ಉಡುಪಿ ಎಂದ ಕೂಡಲೆ ಎಲ್ಲರಿಗೂ ಶ್ರೀ ಕೃಷ್ಣನ ಸನ್ನಿಧಿ ಎನ್ನುವುದೊಂದು ಬಹುಬೇಗ ಅರಿವಿಗೆ ಬರುತ್ತದೆ. ಆದರೆ ಇದರ ಜತೆಗೆ ಅಲ್ಲಿ ನೋಡಬಹದಾದ ಬಹು ಮಹತ್ವದ ಹಲವು ಹಲವು ವಿಷಯವಸ್ತುಗಳಿವೆ. ಅವುಗಳನ್ನು ಒಂದೊಂದಾಗಿ ನೋಡಲು ಹೊರಟರೆ ಅಖಂಡ ಒಂದು ದಿನ ಉಡುಪಿಯ ಪ್ರವಾಸದಲ್ಲೇ ಪೂರ್ಣವಾಗುತ್ತದೆ. ಮಾರ್ಗದರ್ಶಿ ಬೇಕು ಎಂದರೆ ಇದೋ ಇಲ್ಲಿದೆ ನೋಡಿ.
ಚಂದ್ರಮೌಳೇಶ್ವರ ದೇವಾಲಯ:
ಈ ದೇವಾಲಯವೂ ಅತಿ ಪುರಾತನ ದೇವಾಲಯವಾಗಿದೆ. ಚಂದ್ರನು ರುದ್ರನನ್ನು ಕುರಿತು ಇಲ್ಲಿ ಧ್ಯಾನ ಮಾಡಿದ್ದು, ದೇವರು ಪ್ರತ್ಯಕ್ಷನಾಗಿದ್ದರಿಂದ ಈ ದೇವಾಲಯಕ್ಕೆ ಚಂದ್ರಮೌಳೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.
ಅನಂತೇಶ್ವರ ದೇವಸ್ಥಾನ:
ಇದು ಉಡುಪಿಯಲ್ಲಿರುವ ಮತ್ತು ಶ್ರೀ ಕೃಷ್ಣ ಮಠಕ್ಕಿಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಲಿಂಗ ರೂಪದಲ್ಲಿ ಇಲ್ಲಿ ಭಗವಂತ ನೆಲೆಸಿದ್ದು, ಪಾಂಡವರು ಈ ಲಿಂಗವನ್ನು ಪೂಜಿಸಿದ್ದರು ಎಂದು ನಂಬಲಾಗಿದೆ. ಇದು ಶೈವ ಮತ್ತು ವೈಷ್ಣವರಿಬ್ಬರ ಆರಾಧ್ಯ ದೈವವಾಗಿದೆ. ಉಡುಪಿಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಮೊದಲು ರಥ ಬೀದಿಯಲ್ಲಿರುವ ಚಂದ್ರ ಮೌಳೇಶ್ವರ ನಂತರ ಅನಂತೇಶ್ವರ ದೇವಾಲಯದಲ್ಲಿ ದರ್ಶನ ಪಡೆದು ನಂತರ ಶ್ರೀ ಕೃಷ್ಣನ ದರ್ಶನ ಪಡೆಯುವುದು ವಾಡಿಕೆ.
ಕನಕನ ಗೋಪುರ, ಕನಕನ ಕಿಂಡಿ:
ರಥ ಬೀದಿಯಿಂದ ಶ್ರೀ ಕೃಷ್ಣನ ದೇವಾಲಯಕ್ಕೆ ಬರುವಾಗ ಎದುರಿಗೆ ಕನಕನ ಗೋಪುರ, ಕನಕನ ಕಿಂಡಿ ದೂರದಿಂದಲೇ ಕಾಣುತ್ತದೆ. ಕನಕ ದಾಸರಿಗೆ ಕೃಷ್ಭ ದರ್ಶನ ನೀಡಿದ ಕಿಂಡಿಯಿದು. ಇದರ ಮುಂದೆಯೇ ಸಣ್ಣ ಗೋಪುರವನ್ನು ನಿರ್ಮಿಸಲಾಗಿದ್ದು, ಕನಕರನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಗೋಪುರ, ಕಿಂಡಿಗಳು ಭಕ್ತ ಮತ್ತು ಭಗವಂತನ ನಡುವಿನ ಭಾಂದವ್ಯದ ದ್ಯೋತಕವಾಗಿ ಶತಮಾನಗಳಿಂದ ಇಲ್ಲಿ ಸಂದೇಶ ಸಾರುತ್ತಿವೆ. ಜಾತಿ, ಧರ್ಮ, ವರ್ಣ, ಮತ್ತಿತರ ಭೇದಗಳನ್ನು ದೂರಕ್ಕೆ ದೂಡಿದ ಉಡುಪಿ ಮಠಗಳ ಧರ್ಮವನ್ನು ಸಾರುತ್ತಿವೆ.
ಮಧ್ವ ಸರೋವರ:
ಶ್ರೀ ಕೃಷ್ಣ ಮಠದ ಮುಖ್ಯ ದೇವಾಲಯಕ್ಕೆ ತೀರಾ ಸಮೀಪದಲ್ಲಿ ಮಧ್ವ ಸರೋವರವಿದೆ. ಇದನ್ನು ಮಧ್ವಾಚಾರ್ಯರು ನಿರ್ಮಿಸಿದರು ಎನ್ನಲಾಗಿದ್ದು, ಚೌಕಾಕಾರದ ಈ ಪವಿತ್ರ ಮತ್ತು ಸುಂದರ ಪುಷ್ಕರಣಿಯ ಮಧ್ಯೆದಲ್ಲಿ ಮಧ್ವಾಚಾರ್ಯರ ಮೂರ್ತಿಯಿದೆ. ಈ ಸರೋವರದ ಒಳಹೋಗುತ್ತಿದ್ದಂತೆ ಬಲಬದಿಯಲ್ಲಿ ಗಂಗೆಯ ಪುಟ್ಟ ದೇವಸ್ಥಾನವಿದೆ. ವರ್ಷದ ಕೆಲವು ವಿಶೇಷ ದಿನಗಳಲ್ಲಿ ಇಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಸುಂದರ ಅಲಂಕೃತ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಮೆರವಣಿಗೆಯ ಜತೆಗೆ ತೆಪ್ಪೋತ್ಸವ ಮಾಡುವಾಗ ನೋಡುವ ಕಣ್ಗಳಿಗೆ ಹಬ್ಬ.

ಚಂದ್ರಶಾಲೆಯಲ್ಲಿರುವ ಮುಖ್ಯಪ್ರಾಣ ದೇವರು ಅಂದರೆ ಆಂಜನೇಯ ಸ್ವಾಮಿ, ಮಧ್ವಾಚಾರ್ಯರು ಕುಳಿತುಕೊಳ್ಳುತ್ತಿದ್ದ ದಿವ್ಯವಾದ ಸಿಂಹಾಸನ, ಸುಬ್ರಹ್ಮಣ್ಯ ದೇವಸ್ಥಾನ, ಗೋಶಾಲೆ, ಬೃಂದಾವನಗಳ ಸಮುಚ್ಚಯ, ರಾಜಾಂಗಣ, ಗೀತಾ ಮಂದಿರ, ಪಲಿಮಾರು ಮಠ, ಅಡ್ಮಾರು ಮಠ, ಕೃಷ್ಣಾಪುರ ಮಠ, ಪುತ್ತಿಗೆ ಮಠ, ಶಿರೂರು ಮಠ, ಸೋದೆ ಮಠ, ಕಾಣಿಯೂರು ಮಠ, ಪೇಜಾವರ ಮಠ, ಕನಕದಾಸರ ದೇವಾಲಯ ಹೀಗೆ ನೋಡಬೇಕಾದದ್ದು ಸಾಕಷ್ಟಿವೆ. ಎಲ್ಲವನ್ನು ನೋಡಿದರೆ ಮಾತ್ರ ಉಡುಪಿಗೆ ಬಂದ ನಿಜವಾದ ಅನುಭವ ನಿಮಗಾಗುತ್ತದೆ.
ಸ್ಥಳ ಪುರಾಣಗಳ ಪ್ರಕಾರ
ದ್ವೈತ ಸಿದ್ದಾಂತ ಪ್ರತಿಪಾದಕರಾದ ಮಧ್ವಾಚಾರ್ಯರಿಂದ ಇಲ್ಲಿನ ಶ್ರೀ ಕೃಷ್ಣನ ವಿಗ್ರಹದ ಸ್ಥಾಪನೆಯಾಗಿದೆ. ಈ ವಿಗ್ರಹದ ಹಿನ್ನೆಲೆ ದ್ವಾರಕೆಯ ಬಳಿಗೆ ನಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ಈಗ ನೆಲೆಸಿರುವ ಮೂಲ ದೇವರು ಸಹಸ್ರಮಾನಗಳಿಂದ ಗೋಪಿಚಂದನದಲ್ಲಿ ಸಮುದ್ರದ ಆಳದಲ್ಲಿ ಮುಳುಗಿತ್ತು ಎನ್ನಲಾಗಿದ್ದು, ಮಧ್ವಾಚಾರ್ಯರ ದಿವ್ಯ ದೃಷ್ಟಿಯಿಂದ ಮಲ್ಪೆಯ ಬಳಿ ಮುಳುಗುತ್ತಿದ್ದ ಒಂದು ಹಡಗಿನಲ್ಲಿ ಈ ವಿಗ್ರಹ ದೊರಕಿತು. ಅದನ್ನು ಮಧ್ವಾಚಾರ್ಯರು ತಂದು ತಾವೇ ಸ್ಥಾಪನೆಯನ್ನು ಮಾಡಿದರು ಎನ್ನಲಾಗಿದೆ.
ಮುಂದಿನ ಶತಮಾನಗಳಲ್ಲಿ ಭಕ್ತ ಕನಕ ದಾಸರು ಇಲ್ಲಿ ಕೃಷ್ಣನ ದರ್ಶನಕ್ಕೆ ಬಂದಾಗ ಜಾತಿಯ ಕಾರಣಕ್ಕೆ ಅವರಿಗೆ ಇಲ್ಲಿ ಪ್ರವೇಶ ಸಿಗಲಿಲ್ಲ. ಇದರಿಂದ ನೊಂದ ಕನಕರು ದೇವಾಲಯದ ಹಿಂದೆ ಹೋಗಿ ಭಗವಂತನನ್ನು ಕೀರ್ತನೆಗಳನ್ನು ಹಾಡಿ ದರ್ಶನ ನೀಡುವಂತೆ ಕೇಳಿಕೊಂಡರು. ಆಗ ಗರ್ಭಗುಡಿಯ ಹಿಂದಿನ ಗೋಡೆಗಳಲ್ಲಿ ಕಿಟಿಕಿಯೊಂದು ಮೂಡಿ ದೇವರು ದರ್ಶನ ನೀಡಿದನಂತೆ. ಇದೇ ಕಾರಣಕ್ಕೆ ಅಲ್ಲಿ ಕನಕನ ಕಿಂಡಿ ಮತ್ತು ಗೋಪುರಗಳನ್ನು ಗಮನಿಸಬಹುದು.

ನ. 28 : ಲಕ್ಷ ಕಂಠ ಗೀತಾ ಪಾರಾಯಣ ( ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನ)
ನ. 30 : ಸಂತ ಸಂಗಮ / ಭಜನೋತ್ಸವ ( ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅಧತ್ಯನಾಥ್ ಆಗಮನ)
ನವೇಂಬರ್ 8ರಿಂದ ಗೀತಾ ಮಹಾಯಾಗ, ಕೋಟಿ ಗೀತಾ ಲೇಖನ ಯಜ್ಞ, ಅಖಂಡ ಉದಯಾಸ್ತಮಾನ ಗೀತಾ ಪಾರಾಯಣ, ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ, ಗೀತಾ ಪ್ರಸ್ತುತಿ ಮತ್ತು ವಸ್ತು ಪ್ರದರ್ಶನ, ವಿವಿಧ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಡಿಸೆಂಬರ್ 7ರವರೆಗೆ ಮುಂದುವರೆಯಲಿವೆ.
ವಿಶ್ವ ಗೀತಾ ಸ್ಪರ್ಧೆ
ವಿಶ್ವ ಗೀತಾ ಸ್ಪರ್ಧೆ ಹೆಸರಿನಲ್ಲಿ ಅಂತಾರಾಷ್ಟ್ರೀಯ ಗೀತಾ ರಸಪ್ರಶ್ನೆ ಸ್ಪರ್ಧೆ ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಡೆಯಲಿದೆ. ಆನ್ಲೈನ್ ಸುತ್ತು ಡಿಸೆಂಬರ್ 15ಕ್ಕೆ ಮತ್ತು ವೀಡಿಯೊ ಸುತ್ತು ಡಿಸೆಂಬರ್ 25ಕ್ಕೆ ಕೊನೆಗೊಳ್ಳುತ್ತದೆ. ಬಹುಮಾನ ವಿತರಣೆಯು ಜನೆವರಿ 10- 2026ರಂದು ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು http://gitacontest.vbquest.com/register/ ಮೂಲಕ ನೀವೂ ರಿಜಿಸ್ಟರ್ ಮಾಡಿಕೊಳ್ಳಬಹುದು.
ಒಟ್ಟು 5ಲಕ್ಷ ಬಹುಮಾನ ಮೊತ್ತ