ಬಂಡೆಗಳ ನಡುವೆ ಸುಂದರ ಜಲಪಾತ
ನಮ್ಮ ರಾಜ್ಯದ ಸಹ್ಯಾದ್ರಿ ಪರ್ವತಗಳ ಅಂಚಿನಿಂದಹಲವು ಜಲಪಾತಗಳು ಕೆಳಗಿನ ಕರಾವಳಿ ಜಿಲ್ಲೆಗಳೀಗೆ ನೆಗೆದು, ಸುಂದರ ದೃಶ್ಯವನ್ನು ಸೃಷ್ಟಿಸುತ್ತವೆ; ಅಂತಹ ಒಂದು ಜಲಪಾತಕ್ಕೆ ನಡೆಸಿದ ಚಾರಣದ ಅನುಭವ ಇಲ್ಲಿದೆ. - ಸೌಮ್ಯ ಕಾರ್ಕಳ
ಮುಂಜಾನೆ ಬೇಗ ಎದ್ದು ಚಾರಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಬ್ಯಾಗ್ ನಲ್ಲಿ ತುಂಬಿಸಿ, 5 ಗಂಟೆಗೆ ಸರಿ ಸುಮಾರಾಗಿ, ಮನೆ ಬಿಟ್ಟು ಬೆಳುವಾಯಿ ಜಂಕ್ಷನ್ ಎಂಬ ಜಾಗಕ್ಕೆ ಬಂದು ಇಳಿದೆವು. ನಾವು ಯಾರ ಜೊತೆ ಈ ಬಾರಿ ಚಾರಣ ಮಾಡುತ್ತ ಇದ್ದೀವಿ ಎಂದು ಅಕ್ಕನ ಜೊತೆ ಕೇಳಿದಾಗ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಎಂಬ ಸಂಸ್ಥೆಯ ಹೆಸರು ಕೇಳಿಸಿತು. ಆ ಸಂಸ್ಥೆಯ ಬೆಳುವಾಯಿ ಘಟಕ ಈಗ ಪ್ರಾರಂಭವಾಗಿದೆ; ಸುತ್ತಮುತ್ತಲಿನ ಚಾರಣ ಪ್ರಿಯರಿಗೆ ಇದು ಉಪಯೋಗವಾಗಲಿ ಎಂಬ ಉದ್ದೇಶ ಇವರದ್ದು. ಬೆಳುವಾಯಿಂದ ಬಸ್ ಮೂಲಕ ಹೊರಟೆವು. ಆಸುಪಾಸು ಊರುಗಳಲ್ಲಿ ಹೊಸ ಮುಖಗಳು ಪರಿಚಯವಾಗತೊಡಗಿತ್ತು. ಒಂದು ಕಡೆ ಬಸ್ ನಿಲ್ಲಿಸಿ, ಚಾ, ತಿಂಡಿ ತಿಂದೆವು; ಬಂಡಾಜೆ ಫಾಲ್ಸ್ ಕಡೆ ಪ್ರಯಾಣ ಮುಂದುವೆರೆಯಿತು.
ಬೆಳ್ತಂಗಡಿ ವನ್ಯಜೀವಿ ವಲಯಯದ ನಡುವೆ ಬರುವ ಬಂಡಾಜೆ ಜಲಪಾತ ತಲುಪಲು ಸುಮಾರು 8+8=16 ಕಿ.ಮೀ ರಷ್ಟು ಚಾರಣವಿರುತ್ತದೆ. ಬಸ್ ಇಳಿದು, ಅದೇ ಊರಿನ ಶಂಕರಣ್ಣ ಎಂಬ ಗೈಡ್ಜತೆ ನಮ್ಮ ಚಾರಣ ಆರಂಭವಾಯಿತು. ಮೊದಲಿಗೆ ಕಚ್ಚಾ ರಸ್ತೆ, ನಂತರ ಕಡಿದಾದ ಏರುದಾರಿ; ಕಾಲ್ದಾರಿಯು ಕೆಲವು ಕಡೆ ತೀರಾ ಮಸುಕಾಗಿತ್ತು; ಸುತ್ತಲೂ ಕಾಡು. ದಟ್ಟ ಮರಗಳ ನಡುವೆ ಕಾಲ್ದಾರಿ ಸಾಗುವಾಗ, ಹಸಿರಿನ ಸುರಂಗದ ನಡುವೆ ಚಾರಣ ಮಾಡುತ್ತಿದ್ದೇವೋ ಎನ್ನುವ ಅನುಮಾನ; ಆದರೆ ಅದೊಂದು ಅಪರೂಪದ ಅನುಭವ. ನಮ್ಮ ಗುರಿಯು ಜಲಪಾತವನ್ನು ನೋಡುವುದಾದರೂ, ದಾರಿಯಲ್ಲಿ ಸಿಗುವ ಇಂತಹ ಕಾಡಿನ ಅನುಭವವೂ ಅನನ್ಯ, ವಿಶೇಷ. ಅಲ್ಲಲ್ಲಿ ಹಕ್ಕಿಗಳ ಕೂಗು ಕೇಳಿಸುತ್ತಿತ್ತು, ಆದರೆ ಮುಗಿಲೆತ್ತರದ ಮರಗಳ ನಡುವೆ ಕುಳಿತ ಅವುಗಳನ್ನು ಕಾಣುವುದು ಕಷ್ಟಸಾಧ್ಯ.

ಕಡಿದಾದ ದಾರಿ
ಚಿಕ್ಕಮಗಳೂರು ಜಿಲ್ಲೆಯ ಸಹ್ಯಾದ್ರಿಯ ತುದಿಯಾದ ಬಲ್ಲಾಳರಾಯನ ದುರ್ಗದಿಂದಾಚೆಯ ಒಂದು ಪರ್ವತ ಕಮರಿಯಲ್ಲಿ ಬಂಡಾಜೆ ಹಳ್ಳ ಜನಿಸುತ್ತದೆ; ಕಡಿದಾದ ಪ್ರಪಾತದಲ್ಲಿ ನೆಗೆದು ಬಂಡಾಜೆ ಜಲಪಾತ ಅಥವಾ ಬಂಡಾಜೆ ಅರ್ಬಿಯನ್ನು ಸೃಷ್ಟಿಸುತ್ತದೆ. ಇದೊಂದು ಸುಂದರ ತಾಣ; ಇಲ್ಲಿಗೆ ಬರಲು ಎರಡು ದಾರಿಗಳಿವೆ. ಬಲ್ಲಾಳರಾಯನ ದುರ್ಗದ ದಿಕ್ಕಿನಿಂದ, ಪರ್ವತ ಶಿಖರಗಳ ತುದಿಯಲ್ಲೇ ನಡೆದು ಈ ಜಲಪಾತದ ತುದಿಗೆ ಬರಬಹುದು. ಇತ್ತ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬೆಟ್ಟ ಗುಡ್ಡಗಳ ಸೆರಗಿನಲ್ಲಿ ನುಸುಳಿ ಮೇಲೇರುವ ಕಾಲ್ದಾರಿಯಿಂದಲೂ ಚಾರಣ ಮಾಡಿ ಬರಬಹುದು. ಇದು ಪಾಚಿಕಟ್ಟಿದ ಬಂಡೆ, ಕಡಿದಾದ ಬಂಡೆಗಳ ತಾಣವಾಗಿರುವುದರಿಂದ, ಬಹು ಎಚ್ಚರಿಕೆ ಯಿಂದ ಇಲ್ಲಿ ಚಾರಣ ಮಾಡುವುದು ಅತಿ ಅಗತ್ಯ.
'ಶಂಕರಣ್ಣ ಇನ್ನು ಎಷ್ಟು ದೂರ ಇದೆ, ನಮಗೆ ನಡೆಯಲು ಆಗುತ್ತ ಇಲ್ಲ' ಎಂದು ಚಾರಣಿಗರ ಕೂಗು! 'ಇಲ್ಲೇ ಹತ್ತಿರಲದಲ್ಲೇ ಬಂತು!' ಎಂದು ಯಾಮಾರಿಸಿ ಕರೆದುಕೊಂಡು ಹೋಗೋ ಶಂಕರಣ್ಣ. ನಡೆಯಲಿಕ್ಕೇ ಆಗುವುದಿಲ್ಲ ಎಂದು ಕುಳಿತಾಗ, 'ಅಲ್ನೋಡಿ ಜಲಪಾತದ ಸದ್ದು ಕೇಳಿಸ್ತಾ ಉಂಟು, ಇನ್ನು ಅರ್ಧ ಕಿ.ಮೀ. ಸಹ ಇಲ್ಲ' ಎಂದು ಹುರಿದುಂಬಿಸಿ, ನಮ್ಮೆಲ್ಲರನ್ನು ನಡೆಸಿ ಸಾಗಿಸುವ ಶಂಕರಣ್ಣ, ಅದೊಂದು ಕಲೆಯಲ್ಲಿ ಪರಿಣಿತ! ಆದರೆ, ಆ ಕಲೆಯು, ಪ್ರಕೃತಿ ಪ್ರೀತಿಯ ಸೆಲೆ ಉಳ್ಳದ್ದು ಎಂದು ತಿಳಿಯುವುದೇ ಸಂತಸ. ಶಂಕರಣ್ಣವರ ರೀತಿಯ ನಿಸ್ವಾರ್ಥ ಗೈಡ್ ನಿಂದಾಗಿ, ನಮ್ಮಂತಹ ಸಾಮಾನ್ಯರು ಆ ಕಷ್ಟದ ದಾರಿಯನ್ನು ನಡೆಯುತ್ತಿದ್ದೆವು ಎಂದರೆ ಅತಿಶಯೋಕ್ತಿಯಲ್ಲ!

ಆ ಕಾಡಿನ ನಡುವೆ ನಡುವೆ ಸಾಗುವ ಕಷ್ಟಕರವಾದ ದಾರಿಯನ್ನು ಅನುಸರಿಸಿ, ಒಟ್ಟು 16 ಕಿ.ಮೀ ಕಾಲ್ನಡಿಗೆ ಮೂಲಕ, ಎದೆ ಉಸಿರು ಬಿಡುತ್ತ ಸಾಗಿದೆವು; ಸ್ವಲ್ಪ ಹೊತ್ತು ವಿಶಾಂತ್ರಿ ಪಡೆದು, ಯಾರು ನಮಗಾಗಿ ಕಾಯುವರು ಇಲ್ಲ, ಬೇರೆಯವರು ಹಿಡಿದ ದಾರಿಯೊಂದಿಗೆ ಸಾಗಲೇಬೇಕು ಎಂದು ಅತು, ನಡೆದೆವು. ಬಂಡಾಜೆ ಜಲಪಾತದ ಬಳಿ ತಲುಪುವಾಗ 2 ಗಂಟೆ ಸಮಯ. ಇಷ್ಟು ದೂರ ಕಷ್ಟಪಟ್ಟು ನಡೆದದ್ದಕ್ಕೂ, ಅಲ್ಲಿ ಕಂಡ ಜಲಪಾತದ ನೋಟದ ಸೌಂದರ್ಯ ಮನತಣಿಸಿದ್ದಕ್ಕೂ ಸಾರ್ಥಕ ಎನಿಸಿತು; ಕೊನೆಗೂ ಮನೋಹರವಾದ ಫಾಲ್ಸ್ ಕಂಡು ಮೈ ಮನ ಬೆರಗಾಗಿತ್ತು.
ಜನಪದ ಕಥೆ
ಬಂಡಾಜೆ ಜಲಪಾತದ ಕುರಿತು ಒಂದು ಜನಪದ ಕಥೆಯಿದೆ; ಇದನ್ನು ಶಂಕರಣ್ಣ ಹೇಳಿದರು. ಬಲ್ಲಾಳರಾಯನ ದುರ್ಗದ ತುದಿಯಲ್ಲಿ ಜನಿಸುವ ಪುಟ್ಟ ನದಿಯೊಂದು ಚಿಕ್ಕಮಗಳೂರು ಜಿಲ್ಲೆಯತ್ತ ಹರಿದು ಸಾಗುತ್ತಿತ್ತಂತೆ; ನಮ್ಮ ಊರಿನ ಕಡೆ, ಅಂದರೆ ತುಳುನಾಡ ಕಡೆ ನೀರಿನ ಕೊರತೆ ಕಂಡು, ಅದನ್ನು ತುಳುನಾಡಿನ ಕಡೆ ಹರಿಯುವಂತೆ ಮಾಡಿ ಸಾರ್ಥಕತೆ ಮೆರೆದ ತುಳುನಾಡಿನ ದೈವ ಕಲ್ಕುಡ ಮಹಿಮೆಯನ್ನು ಸ್ಥಳೀಯರಾದ ಶಂಕರಣ್ಣ ವಿವರಿಸಿದರು. ಬಂಡಾಜ ಜಲಪಾತದಂತಹ ಸುಂದರ ಫಾಲ್ಸ್ನ್ನು ನೊಡುವುದರ ಜತೆ, ಇಂತಹ ಜನಪದ ಕಥೆಗಳನ್ನು ಅಲ್ಲೇ ನಿಂತು ಕೇಳಿದಾಗ, ಆ ನಮ್ಮ ಚಾರಣಕ್ಕೆ ಹಲವು ಆಯಾಮಗಳು ದೊರಕುತ್ತವೆ, ನಮ್ಮ ಅನುಭವ ಶ್ರೀಮಂತವಾಗುತ್ತದೆ.

ಜಲಪಾತದಿಂದ ಹರಿದು ಬರುವಂತಹ ನೀರನ್ನು ಇದೇ ಊರಿನ ಸಮೀಪ ಇರುವ ದೈವ ದೇವರ ಗುಡಿಗೆ ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ 16 ಕಿ.ಮೀ. ಕಾಲ್ನಡಿಗೆ ಮೂಲಕ ನಡೆದು ನೀರನ್ನು ತಂದು ದೈವಕ್ಕೆ ಅರ್ಪಿಸಿ, ಒಂದು ವರ್ಷ ತನಕ ಆ ನೀರನ್ನು ಚೆಲ್ಲದೆ, ಗುಡಿಯಲ್ಲಿ ಇಡುತ್ತಾರೆ ಎಂದು ಶಂಕರಣ್ಣ ವಿವರಿಸಿದರು. ನಾವು ಜಲಪಾತ ನೋಡೋಕೆ ಮಾತ್ರ ಹೋಗುತ್ತಿದ್ದೇವೆ ಎಂದು ಹೊರಟವರು. ಆ ಸ್ಥಳದ ಜನಪದ ಕಥೆಗಳನ್ನೂ ಕೇಳಿದಾಗ ಮನಸ್ಸು ಮುದಗೊಂಡಿತು. ತೀವ್ರವಾದ ಒಂದು ಪ್ರಪಾತಕ್ಕೆ ಜಲಪಾತ ನೆಗೆಯುತ್ತದೆ; ಅಲ್ಲಿನ ಬಂಡೆಗಳ ವಿನ್ಯಾಸ ನಿಜಕ್ಕೂ ವಿಚಿತ್ರ, ಸುಂದರ. ಜಲಪಾತದ ಬಳಿ ಕುಳಿತು, ತಂದಿದ್ದ ತಿಂಡಿಯನ್ನು ತಿಂದು, ಫೋಟೋ ತೆಗೆಸಿಕೊಂಡು, ಅಲ್ಲಿಂದ ವಾಪಸ್ ಇಳಿದು ಬರುವ ಸರಿ ಸುಮಾರು 5 ಗಂಟೆ ದಾಟಿತ್ತು. ಚಾರಣದಲ್ಲಿ ಪರಿಚಯವಾಗಿದ್ದ ಹೊಸ ಸ್ನೇಹಿತ ರೊಂದಿಗೆ ಮಾತನಾಡುತ್ತಾ, ಪ್ರಕೃತಿಯ ಅನುಭವವನ್ನು ಹಂಚಿ ಕೊಳ್ಳುತ್ತಾ ಮನೆ ಸೇರಿದಾಗ, ಸೂರ್ಯ ಮುಳುಗಿದ್ದ.