Thursday, June 12, 2025
Thursday, June 12, 2025

ಹಿಮಾಲಯದ ಚಾರಣಕ್ಕೆ ಹೊರಡುವ ಮುನ್ನ…

ಹಿಮಾಲಯ ಚಾರಣದ ಬಗ್ಗೆ ಹೇಳುವುದಾದರೆ, ಎಲ್ಲ ಋತುಗಳಲ್ಲೂ ಚಾರಣ ಮಾಡಬಹುದು. ಅವುಗಳಲ್ಲಿ ಮೂರು ಋತುಗಳು ಬೇಸಿಗೆ, ಶರತ್ಕಾಲ ಹಾಗೂ ಚಳಿಗಾಲ ಮಾತ್ರ ಚಾರಣಗಳಿಗೆ ಪ್ರತಿಕೂಲ ಸಮಯ. ಈ ಋತುಗಳಲ್ಲದೆ ಮಳೆಗಾಲದಲ್ಲೂ ಹೋಗಲು ಅನೇಕ ಚಾರಣದ ದಾರಿಗಳಿವೆ. ತ್ರಾಸದಾಯಕವಾದ ಆ ಚಾರಣದಲ್ಲಿ ಸುತ್ತಮುತ್ತಲ ಪ್ರಕೃತಿಯ ಸೌಂದರ್ಯವನ್ನು ನೋಡಲು ಆಗುವುದಿಲ್ಲ.

- ಕಿರಣ್ ವಟಿ

ಅದು ಚಾರಣವಾಗಲೀ, ಪ್ರವಾಸವಾಗಲಿ ಹೊರಡುವ ಮುನ್ನ ಬೇಕಾದ ಮುನ್ನೆಚ್ಚರಿಕೆಗಳನ್ನು ಕೇಳಿರುತ್ತೇವೆ, ಪಾಲಿಸಿಯೂ ಇರುತ್ತೇವೆ. ಅದರಲ್ಲಿ ಹೆಚ್ಚಾಗಿ ಊಟ, ಸ್ಥಳೀಯ ಸಾರಿಗೆ ವ್ಯವಸ್ಥೆ, ವಸತಿ, ಬಟ್ಟೆಗಳ ವಿಚಾರವಾಗಿಯೇ ಇರುತ್ತೆ. ಆದರೆ, ಭಾಗಶಃ ನಾವು ಮರೆಯುವುದು ಮುಖ್ಯವಾಗಿ ಅಲ್ಲಿನ ವಾತಾವರಣ.

ಚಾರಣದ ಬಗ್ಗೆಯೇ ಹೆಚ್ಚಾಗಿ ತಿಳಿಸಲಿರುವ ನಾನು ಈಗ ಹೇಳ ಹೊರಟಿರುವುದು ನಾವು ಹೋಗುವ ಸ್ಥಳಗಳ ವಾತಾವರಣದ ಬಗ್ಗೆ. ಸಾಕಷ್ಟು ಪ್ರವಾಸಿ ಅಥವಾ ಚಾರಣದ ಸಂಸ್ಥೆಗಳು “ಆಫ್‌ ಸೀಸನ್”‌ ಅಂತ ಹೇಳಿ ತೀರಾ ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಆದರೆ, ಆ ಸಮಯದಲ್ಲಿ ಅಲ್ಲಿ ನೋಡಲೇಬೇಕಾದ್ದದ್ದು ನೋಡಲು ಆಗುವುದಿಲ್ಲ. ಹೀಗಾಗಿ ಹಿಮಾಲಯದಲ್ಲಿ ಚಾರಣವನ್ನು ಯೋಜಿಸುವಾಗ, ಋತುವಿಗೆ ಸರಿಯಾದ ದಾರಿಯನ್ನು ಆಯ್ಕೆ ಮಾಡುವುದು ಹಲವಾರು ಕಾರಣಗಳಿಗಾಗಿ ನಿರ್ಣಾಯಕವಾಗಿದೆ. ವಿಭಿನ್ನ ಋತುಗಳಲ್ಲಿ ವಿಭಿನ್ನ ವನ್ಯಜೀವಿ ಮತ್ತು ಸಸ್ಯಗಳನ್ನು ಕಾಣಬಹುದು. ವಸಂತಕಾಲದಲ್ಲಿ, ನೀವು ರೋಡೋಡೆಂಡ್ರಾನ್‌ಗಳಂತಹ ಹೂವುಗಳ ಶ್ರೇಣಿಯನ್ನು ನೋಡಬಹುದಾದರೆ, ಶರತ್ಕಾಲವು ವಿಭಿನ್ನ ಬಣ್ಣಗಳ ಎಲೆಗಳನ್ನು ಹೊಂದಿರುವ ಹಿಮಾಲಯದ ಕಾಡುಗಳನ್ನು ನೋಡಬಹುದು. ಅದೃಷ್ಟವಿದ್ದರೆ ನಿರ್ದಿಷ್ಟ ಋತುಗಳಲ್ಲಿ ಕೆಲವು ವನ್ಯಜೀವಿಗಳನ್ನೂ ಕಾಣಬಹುದು.

himalaya view

ಋತುಗಳ ಮೇಲೆ ಅವಲಂಬನೆ

ಋತುಮಾನವನ್ನು ಅವಲಂಬಿಸಿ, ವಿಭಿನ್ನ ಚಾರಣ ಮಾರ್ಗಗಳನ್ನು ಬೇರೆಯ ಋತುಗಳಲ್ಲಿ ಹೋಗುವುದಕ್ಕಿಂತ ಹೆಚ್ಚು ಸುಲಭವಾಗಿ ತಲುಪಬಹುದು. ಉದಾಹರಣೆಗೆ, ಹಿಮದ ಶೇಖರಣೆಯಿಂದಾಗಿ ಚಳಿಗಾಲದಲ್ಲಿ ಎತ್ತರದ ಚಾರಣಗಳು ತುಂಬಾ ಕಷ್ಟಕರ ಅಥವಾ ಅಸಾಧ್ಯವಾಗಬಹುದು, ಆದರೆ ಅದೇ ಮಳೆಗಾಲದಲ್ಲಿ ಕಡಿಮೆ ಎತ್ತರದ ಹಾದಿಗಳನ್ನೂ ಸವಾಲಿನಂತೆ ಮಾಡುತ್ತದೆ. ತೀವ್ರ ಶೀತ ಅಥವಾ ಭಾರೀ ಮಳೆಯಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಚಾರಣವು ಹಿಮಪಾತ ಅಥವಾ ಫ್ರಾಸ್ಟ್‌ಬೈಟ್‌ ಹಾಗೂ ಹೈಪೋಥರ್ಮಿಯಾ ದಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಜೊತೆಗೆ ಜಾರು ಹಾದಿಗಳು ಅಥವಾ ಹಿಮಕುಸಿತಗಳಿಂದ ಉಂಟಾಗುವ ಅಪಘಾತಗಳನ್ನು ಹೆಚ್ಚಿಸುತ್ತದೆ.

ಕೆಲವು ಟ್ರೆಕ್ಕಿಂಗ್ ಮಾರ್ಗಗಳು ಬೇಸಿಗೆ ಹಾಗೂ ಶರತ್ಕಾಲಗಳಲ್ಲಿ ಚಾರಣಿಗರು ಮತ್ತು ಪ್ರವಾಸಿಗರಿಂದ ಹೆಚ್ಚು ಜನನಿಬಿಡವಾಗಿರುತ್ತವೆ. ವಸತಿ, ಮಾರ್ಗದರ್ಶಿಗಳು ಮತ್ತು ಪೋರ್ಟರ್‌ಗಳು ಹೆಚ್ಚು ಸುಲಭವಾಗಿ ಲಭ್ಯವಿರುತ್ತಾರೆ. ಮತ್ತು ಇದೇ ಸಮಯದಲ್ಲಿ ಬೇರೆ ಭಾಗಗಳಿಂದ ಬಂದಿರುವ ಚಾರಣಿಗರನ್ನು ಭೇಟಿ ಮಾಡುವ ಅವಕಾಶವಿದೆ. ಇದಕ್ಕೆ ವ್ಯತಿರಿಕ್ತವಾಗಿ, ಆಫ್-ಸೀಸನ್‌ಗಳಲ್ಲಿ, ಸೇವೆಗಳು ಸೀಮಿತವಾಗಿರಬಹುದು.

ಎಲ್ಲ ಋತುಗಳಿಗೂ ಹಿಮಾಲಯ ಸೈ

ಹಿಮಾಲಯ ಚಾರಣದ ಬಗ್ಗೆ ಹೇಳುವುದಾದರೆ, ಎಲ್ಲ ಋತುಗಳಲ್ಲೂ ಚಾರಣ ಮಾಡಬಹುದು. ಅವುಗಳಲ್ಲಿ ಮೂರು ಋತುಗಳು ಬೇಸಿಗೆ, ಶರತ್ಕಾಲ ಹಾಗೂ ಚಳಿಗಾಲ ಮಾತ್ರ ಚಾರಣಗಳಿಗೆ ಪ್ರತಿಕೂಲ ಸಮಯ. ಈ ಋತುಗಳಲ್ಲದೆ ಮಳೆಗಾಲದಲ್ಲೂ ಹೋಗಲು ಅನೇಕ ಚಾರಣದ ದಾರಿಗಳಿವೆ. ತ್ರಾಸದಾಯಕವಾದ ಆ ಚಾರಣದಲ್ಲಿ ಸುತ್ತಮುತ್ತಲ ಪ್ರಕೃತಿಯ ಸೌಂದರ್ಯವನ್ನು ನೋಡಲು ಆಗುವುದಿಲ್ಲ. ಹೀಗಾಗಿ ಉಳಿದ ಮೂರು ಋತುಗಳಲ್ಲೇ ಹೆಚ್ಚಿನ ಹಿಮಾಲಯ ಚಾರಣ ಮಾಡಲಾಗುವುದು.

ಬ್ರಹ್ಮಥಾಲ್‌, ಕೇದಾರಕಾಂಠ, ಸಂಢಕ್‌ಫೂ ದಂತಹ ಸುಲಭವಾದ ಚಾರಣಗಳು ಮೂಲತಃ ಚಳಿಗಾಲದಲ್ಲಿ 4-5 ದಿನಗಳ ಚಾರಣ, ಆಗ ಹೊಸದಾಗಿ ಬಿದ್ದ ಹಿಮ ಇರುವುದರಿಂದ ನಾವು ಕಾಲನ್ನು ಎಂದಿನಂತೆ ನಡೆಯಲಾಗದೆ ಸ್ವಲ್ಪ ಎತ್ತರಕ್ಕೆ ಎತ್ತಿ, ಗಟ್ಟಿಯಾಗಿ ಊರಿ, ಇಲ್ಲದಿದ್ದರೆ ಜಾರುತ್ತಾ ನಡೆಯಬೇಕಾಗುತ್ತದೆ. ಹಾಗಾಗಿ ನಡೆಯಲು ಶಕ್ತಿ ಮತ್ತು ಸಮಯ ಹೆಚ್ಚು ಬೇಕಾಗುತ್ತದೆ. ಅದೇ ದಾರಿ ಬೇಸಿಗೆಯಲ್ಲಿ ಕ್ರಮಿಸಲು ಇದಾವುದೇ ತೊಂದರೆಗಳಿಲ್ಲದೆ ಎರಡೇ ದಿನ ಸಾಕಾಗುತ್ತದೆ. ಚಳಿಗಾಲದಲ್ಲಿ ಈ ದಾರಿಗಳು ಅತ್ಯಂತ ಪ್ರಸಿದ್ಧವಾಗಿರಲು ಕಾರಣ ಅಲ್ಲಿ ಆಗ ಹಿಮ ಬೀಳುವ ಸಮಯ. ಇಡೀ ವಾತಾವರಣವೇ ಬೆಳ್ಳಗೆ ಕಾಣುತ್ತಿರುತ್ತದೆ. ಸ್ವಚ್ಛವಾದ ಆಕಾಶವಿದ್ದು ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ಅನುಭವಿಸಲೇ ಬೇಕು. ಅದನ್ನೇ ಬೇಸಿಗೆಯಲ್ಲಿ ಹತ್ತಲು ಹೋದರೆ ತೀರಾ ನಿರಾಶೆಯಾಗುವುದು ಖಚಿತ. ಯಾಕೆಂದರೆ ಆಗ ಆ ಜಾಗಗಳು ಒಣಗಿದ ನೆಲವಾಗಿರುತ್ತದೆ, ಧೂಳಿನಿಂದ ಕೂಡಿರುತ್ತದೆ.

trucking

ಅದ್ಭುತ ಹೂಗಳ ಪ್ರಪಂಚ

ಚಳಿಗಾಲದಲ್ಲೂ ಹೋಗಬಹುದಾದಂತಹ ರತನ್‌ ಟಾಪ್‌ ಮತ್ತು ಗೊಚೆಲಾ ಪಾಸ್‌ಗಳು ಬೇಸಿಗೆಯ ಚಾರಣಗಳು, ಕಾರಣವೇನೆಂದರೆ ಈ ಎರಡೂ ಸ್ಥಳಗಳಲ್ಲಿ ಅದ್ಭುತವಾದ “ರೋಡೋಡೆಂಡ್ರಾನ್”‌ ಹೂವುಗಳು ನೋಡಸಿಗುತ್ತದೆ. ಗೊಚೆಲಾ ಪಾಸ್‌ನ ಎರಡನೇ ದಿನದ ಚಾರಣದಲ್ಲಿ ಮರದನೆಲಹಾಸಿನ ರಸ್ತೆಯಲ್ಲಿ ನಡೆಯುವಾಗ ಸುತ್ತಲೂ ಅರಳಿರುವ ಅನೇಕ ವರ್ಣಗಳ ರೋಡೋ ಹೂವುಗಳನ್ನು ನೋಡುತ್ತಾ ನಡೆಯುವ ಅನುಭವೇ ಅದ್ಭುತ. ಆದರೆ, ಅನೇಕ ಸಂಸ್ಥೆಗಳು ಇದೇ ಜಾಗಕ್ಕೆ “ಆಫ್‌ ಸೀಸನ್”‌ಗಳಲ್ಲಿ ಅಂದರೆ ಹಿಮ ಬೀಳುವ ಸಮಯದಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ಆ ಸಮಯದಲ್ಲಿ ಇಲ್ಲಿ ನೋಡಲೇ ಬೇಕಾಗಿದ್ದ ಹೂವುಗಳು ನೋಡಲು ಸಿಗುವುದೇ ಇಲ್ಲ.

ಮಳೆಗಾಲದ ಚಾರಣದಲ್ಲಿ ಮುಖ್ಯವಾದದ್ದು “ವ್ಯಾಲೀ ಆಫ್‌ ಫ್ಲವರ್ಸ್”.‌ ಇದು ಜುಲೈ ಮಧ್ಯದಿಂದ ಆಗಸ್ಟ್‌ ಹದಿನೈದರ ನಡುವೆ ಹೋಗಲೇಬೇಕಾದ ಚಾರಣ. ಈ ಸಮಯದಲ್ಲಿ ಮಾತ್ರ ಇಲ್ಲಿಯ ಸುಂದರ ಹೂವುಗಳು ಅರಳುವುದು. ಆಮೇಲೆ ಹೂವುಗಳು ಒಣಗಿಬಿಡುತ್ತದೆ. ಇದು ಸುಲಭದ ಚಾರಣವಾಗಿದ್ದು ಮೂರರಿಂದ ನಾಲಕ್ಕು ದಿನಗಳಲ್ಲಿ ಕ್ರಮಿಸಬಹುದಾದದ್ದು. ಇಂತಹ ಸುಂದರ ಚಾರಣವನ್ನು ಸರಿಯಾದ ಸಮಯದಲ್ಲಿ ಹೋಗದೆ ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಹೋಗಿ ಹೂವುಗಳೇ ಕಾಣಲಿಲ್ಲ ಅಂತ ಹಿಂದಿರುಗಿ ಬಂದವರನ್ನೂ ಕಂಡಿದ್ದೇನೆ.

ಹಬ್ಬಗಳ ಸೊಬಗೂ

ಕೆಲವು ಪ್ರದೇಶಗಳಲ್ಲಿ, ಹಬ್ಬಗಳು ಮತ್ತು ಸ್ಥಳೀಯ ಕಾರ್ಯಕ್ರಮಗಳು ಚಾರಣ ಋತುಗಳೊಂದಿಗೆ ಹೊಂದಿಕೆಯಾಗುತ್ತವೆ. ಉದಾಹರಣೆಗೆ, ಶರತ್ಕಾಲದಲ್ಲಿ, ಟ್ರೆಕ್ಕಿಂಗ್ ಪ್ರದೇಶವು ದಶೈನ್ ಅಥವಾ ತಿಹಾರ್‌ನಂತಹ ಹಬ್ಬಗಳಿಂದ ಜೀವಂತವಾಗಿರಬಹುದು, ಇದು ಟ್ರೆಕ್ಕಿಂಗ್‌ಗೆ ಪೂರಕವಾಗಿ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ.

ಹಿಮಾಲಯದಲ್ಲಿ ಅತ್ಯುತ್ತಮ ಟ್ರೆಕ್ಕಿಂಗ್ ಅನುಭವಗಳ ಬಗ್ಗೆ ಹೇಳುವುದಾದರೆ, ನೀವು ಆಯ್ಕೆ ಮಾಡುವ ಋತುವಿನ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಹವಾಮಾನ, ಹಾದಿ ಪರಿಸ್ಥಿತಿಗಳು ಮತ್ತು ವೀಕ್ಷಿಸಲೇಬೇಕಾದ ಸ್ಥಳಗಳು ಮತ್ತು ಸುರಕ್ಷತೆಗಾಗಿ ಉತ್ತಮ ಅವಕಾಶಗಳನ್ನು ಯೋಜಿಸುವುದರಿಂದ ನಿಮ್ಮ ಚಾರಣವನ್ನು ಹೆಚ್ಚು ಖುಷಿಯಾಗಿ ಅನುಭವಿಸುವಂತೆ ಮಾಡುತ್ತದೆ. ಮತ್ತೊಂದು ಸೂಚನೆ, ಚಾರಣ ಪ್ರಾರಂಭಕ್ಕೂ ಎರಡು ಅಥವಾ ಮೂರುದಿನಗಳ ಮುಂಚಿತವಾಗಿ ಆ ಬೇಸ್‌ಕ್ಯಾಂಪ್‌ಗೆ ಹತ್ತಿರ ತಲುಪಿ, ಅದು ನಿಮ್ಮನ್ನು ಆ ಹವಾಮಾನಕ್ಕೆ ಒಗ್ಗಿಕೊಳ್ಳಲು (ಅಕ್ಲಮೈಟೈಸೇಷನ್‌) ಸಹಾಯವಾಗುತ್ತದೆ.

himalaya new

ಸಾರ್ವಕಾಲಿಕ ಋತುಪಟ್ಟಿ

ಚಳಿಗಾಲ (ಡಿಸೆಂಬರ್ ನಿಂದ ಫೆಬ್ರವರಿ): ಹಿಮದಿಂದ ಆವೃತವಾದ ಹಾದಿಗಳು, ಘನೀಕರಿಸುವ ತಾಪಮಾನ ಮತ್ತು ಹಗಲಿನ ಬೆಳಕು ಕಡಿಮೆ ಇರುವುದರಿಂದ ಅತ್ಯಂತ ತಂಪಾಗಿರುತ್ತದೆ. ನೀವು ತೀವ್ರ ಚಳಿಯ ಪರಿಸ್ಥಿತಿಗಳಿಗೆ ಸಿದ್ಧರಿಲ್ಲದಿದ್ದರೆ ನಿಮಗೆ ಇದು ಚಾರಣಗಳಿಗೆ ಸೂಕ್ತ ಸಮಯವಲ್ಲ.

ಬೇಸಿಗೆ (ವಸಂತ) (ಮಾರ್ಚ್ ನಿಂದ ಮೇ): ಇದು ಚಾರಣಕ್ಕೆ ಉತ್ತಮ ಋತುಗಳಲ್ಲಿ ಒಂದಾಗಿದೆ. ಹವಾಮಾನವು ಚೆನ್ನಾಗಿದ್ದು, ಆಹ್ಲಾದಕರ ತಾಪಮಾನ, ನೀಲಿ ಆಕಾಶ ಚಾರಣ ಅನುಭವವನ್ನು ಹೆಚ್ಚು ಖುಷಿಯಾಗಿಸುತ್ತದೆ. ಬೇಸಿಗೆಯ ಚಾರಣಗಳು ಅತ್ಯಂತ ಸುಂದರವಾದದ್ದು, ತುಂಬಾ ಚಳಿ ಇರುವುದಿಲ್ಲ, ಆಗಾಗ ಮಳೆ ಬಂದರೂ ಹದಿನೈದರಿಂದ ಇಪ್ಪತ್ತು ನಿಮಿಷಗಳು ಅಷ್ಟೇ. ಅದಕ್ಕಿಂತ ಹೆಚ್ಚಾಗಿ ಆಗತಾನೇ ಹಿಮ ಕರಗಿ ಗಿಡ ಮರಗಳು ಚಿಗುರಿ ಹೂ ಬಿಡುತ್ತಿರುತ್ತದೆ. ಹಿಮದಿಂದ ಆವೃತವಾದ ಶಿಖರಗಳು ಮತ್ತು ಸೊಂಪಾದ ಕಣಿವೆಗಳ ಉಸಿರುಕಟ್ಟುವ ದೃಶ್ಯಾವಳಿಗಳನ್ನು ನೋಡುತ್ತಾ ಬೃಹತ್‌ ದೇವದಾರು ವೃಕ್ಷಗಳ ಕಾನನದಲ್ಲಿ ನಡೆದುಕೊಂಡು ಹೋಗುವ ಸುಖವೇ ಬೇರೆ.

ಮಳೆಗಾಲ (ಜೂನ್ ನಿಂದ ಸೆಪ್ಟೆಂಬರ್): ಈ ಅವಧಿಯಲ್ಲಿ ಭಾರೀ ಮಳೆಯು ಹಾದಿಗಳನ್ನು ಜಾರುವ, ಅಪಾಯಕಾರಿ ಮತ್ತು ಸಂಚರಿಸಲು ಕಷ್ಟಕರವಾಗಿಸುತ್ತದೆ. ಕೆಲವು ಪ್ರದೇಶಗಳಲ್ಲಿ ಭೂಕುಸಿತಗಳ ಹೆಚ್ಚಿನ ಅಪಾಯವೂ ಇದೆ. ಈ ಋತುವಿನಲ್ಲಿ ಚಾರಣವಂತೂ ಅತ್ಯಂತ ಕಷ್ಟದ್ದು.‌

ಶರತ್ಕಾಲ (ಅಕ್ಟೋಬರ್ ನಿಂದ ನವೆಂಬರ್): ಮೋಡವಿಲ್ಲದ ಆಕಾಶ, ಸೌಮ್ಯ ತಾಪಮಾನ ಮತ್ತು ಬೆರಗುಗೊಳಿಸುವ ಪರ್ವತ ನೋಟಗಳನ್ನು ನೀಡುವ ಮತ್ತೊಂದು ಅತ್ಯುತ್ತಮ ಚಾರಣದ ಋತು ಇದು. ಒಳ್ಳೆಯ ಹವಾಮಾನದಿಂದಾಗಿ ಇದನ್ನು ಸಾಮಾನ್ಯವಾಗಿ ಚಾರಣಕ್ಕೆ ಒಳ್ಳೆಯ ಋತುವೆಂದು ಪರಿಗಣಿಸಬಹುದು.

ಈ ಋತುಗಳನ್ನು ಅನುಸರಿಸಿ ಹಲವಾರು ಚಾರಣದ ದಾರಿಗಳಿರುತ್ತದೆ. (ಈ ಚಾರಣದ ದಾರಿಗಳು ಸಾವಿರಾರು ವರ್ಷಗಳಿಂದ ಅಲ್ಲಿನ ಕುರುಬರು ತಮ್ಮ ಕುರಿಗಳ ಹಿಂಡನ್ನು ಕರೆದುಕೊಂಡು ಓಡಾಡುವ ದಾರಿಗಳಾಗಿರುತ್ತದೆ. ಹಿಮಾಲಯದ ವಾತಾವರಣದ ಅತ್ಯಂತ ಹೆಚ್ಚಿನ ಜ್ಞಾನ ಉಳ್ಳವರು ಅವರು). ಕೆಲವು ಚಾರಣದ ಹಾದಿಗಳು ಆ ಋತುವಿನಲ್ಲಿ ಮಾತ್ರ ಹೋಗುವಂಥದ್ದಾಗಿರುತ್ತದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..