Friday, June 13, 2025
Friday, June 13, 2025

ದಾಂಡೇಲಿ..ಜಲ ಸಾಹಸಕ್ಕೆ, ಪ್ರಕೃತಿಪ್ರಿಯರಿಗೆ ನೆಚ್ಚಿನ ತಾಣ !

ದಾಂಡೇಲಿ..ಪ್ರಕೃತಿ ರಮಣೀಯವಾದ ಈ ಸುಂದರ ಪರಿಸರಕ್ಕೆ ಭೇಟಿ ನೀಡಬೇಕೆಂದುಕೊಂಡಿದ್ದಿರಾ? ತುಂಬಿ ಮೈದುಂಬಿ ಹರಿಯುವ ಕಾಳಿ ನದಿ, ಧುಮ್ಮಿಕ್ಕಿ ಹರಿಯುವ ಸಾತೊಡ್ಡಿ ಹಾಗೂ ಮಾಗೋಡು ಜಲಪಾತಗಳು, ವನ್ಯ ಜೀವಿಗಳ ಅಭಯಾರಣ್ಯ ಹೀಗೆ ಸಾಕಷ್ಟು ಪ್ರವಾಸಿ ಸ್ಥಳಗಳನ್ನು ಹೊಂದಿರುವ ದಾಂಡೇಲಿ, ಜಲ ಸಾಹಿಸಿಗರಿಗೂ ನೆಚ್ಚಿನ ತಾಣ.

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ ದಾಂಡೇಲಿ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದ್ದು, ಪ್ರಕೃತಿ ಪ್ರೇಮಿಗಳಿಗೂ ಸ್ವರ್ಗವನ್ನೇ ಸೃಷ್ಟಿಸಿದೆ. ಸಮುದ್ರ ಮಟ್ಟದಿಂದ 1551 ಅಡಿಗಳಷ್ಟು ಎತ್ತರವಿರುವ ದಾಂಡೇಲಿಯ ಬಗ್ಗೆ ನೀವು ತಿಳಿಯಲೇ ಬೇಕಿರುವ ಅನೇಕ ವಿಚಾರಗಳು ಇಲ್ಲಿವೆ.

ಇಲ್ಲಿ ದಟ್ಟವಾದ ದಂಡಕಾರಣ್ಯ ಇರುವುದರಿಂದ ದಾಂಡೇಲಿ ಪಟ್ಟಣವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬುದಾಗಿ ಇನ್ನೊಂದು ನಂಬಿಕೆ ಇದೆ. ದಂಡಕನಾಯಕ ಎಂಬ ರಾಜನು ಇಲ್ಲಿರುವ ಪ್ರಕೃತಿ ಸೌಂದರ್ಯವನ್ನು ನೋಡಿ ಈ ಅರಣ್ಯಕ್ಕೆ ತನ್ನದೇ ಹೆಸರು ಇರಲಿ ಎಂದು ನಿರ್ಧರಿಸಿ ಇಟ್ಟ ಆತನ ಹೆಸರು ಕಾಲಕ್ರಮೇಣ ದಾಂಡೇಲಿ ಎಂದಾಯಿತು ಎಂಬ ಮತ್ತೊಂದು ಐತಿಹ್ಯವನ್ನು ಇಲ್ಲಿ ಸ್ಥಳೀಯರು ಹೇಳುತ್ತಾರೆ.

ದಾಂಡೇಲಿ ವನ್ಯಜೀವಿ ಅಭಯಾರಣ್ಯ:

ರಾಜ್ಯದಲ್ಲಿರುವ ಎರಡನೇ ಅತಿ ದೊಡ್ಡ ವನ್ಯಜೀವಿ ಧಾಮ ಎಂಬ ಹಿರಿಮೆ ದಾಂಡೇಲಿಗಿದ್ದು, ಭಾರೀ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. 2007 ರಲ್ಲಿ ದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ಈ ವನ್ಯಜೀವಿ ಧಾಮವು ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ, ಕರಡಿ, ನರಿ, ಲಂಗೂರ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಿದೆ. ಅಳಿವಿನಂಚಿನಲ್ಲಿರುವ ಮತ್ತು ಅಪರೂಪದ ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಈ ಅರಣ್ಯ ಪ್ರದೇಶವು ನೆಲೆ ನೀಡಿದ್ದು, ಸುಮಾರು 200ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಸಂಕುಲವನ್ನು ಈ ಅರಣ್ಯಧಾಮದಲ್ಲಿ ವೀಕ್ಷಿಸಬಹುದು.

ಈ ನಿಸರ್ಗಧಾಮದ ದಟ್ಟಾರಣ್ಯದಲ್ಲಿ ಚಾರಣ, ಸಾಹಸದ ಬೋಟಿಂಗ್ ಕ್ರೀಡೆಗಳಲ್ಲಿ ಪ್ರವಾಸಿಗರು ಭಾಗವಹಿಸಬಹುದಾಗಿದ್ದು, ಅಕ್ಟೋಬರ್ ನಿಂದ ಜೂನ್ ತಿಂಗಳುಗಳಲ್ಲಿ ಭೇಟಿ ನೀಡಲು ಸೂಕ್ತ ಸಮಯ. ಗೈಡ್ಸ್ ಗಳ ಸಹಾಯದೊಂದಿಗೆ ಇಡೀ ಅರಣ್ಯವನ್ನು ತೆರೆದ ಜೀಪಿನಲ್ಲಿ ಪ್ರವಾಸಿಗರು ನೋಡಬಹುದು.

kali+tiger+reserve+dandeli

ಅಣಶಿ ರಾಷ್ಟ್ರೀಯ ಉದ್ಯಾನವನ:

ನೀವು ವನ್ಯಜೀವಿ ತಾಣಗಳನ್ನು ಮೆಚ್ಚಿಕೊಳ್ಳುವವರಾಗಿದ್ದರೆ ಅಣಶಿ ರಾಷ್ಟ್ರೀಯ ಉದ್ಯಾನವನವನ್ನು ಭೇಟಿ ಮಾಡಲೇಬೇಕು. ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಒಂದು ಭಾಗವಾಗಿರುವ ಈ ಅಣಶಿ ರಾಷ್ಟ್ರೀಯ ಉದ್ಯಾನವನವನ್ನು ಏಷ್ಯಾದಲ್ಲೇ ಕಪ್ಪು ಚಿರತೆಗಳಿರುವ ಏಕೈಕ ಸ್ಥಳ ಎಂದು ಗುರುತಿಸಲಾಗಿದೆ.

ಶಿರೋಲಿ ಶಿಖರ:

ದಾಂಡೇಲಿ ವನ್ಯಜೀವಿ ಅಭಯಾರಣ್ಯದೊಳಗೆ ಇರುವ ಇದು ಉತ್ತರ ಕನ್ನಡ ಪ್ರದೇಶದ ಅತಿ ಎತ್ತರದ ಸ್ಥಳವಾಗಿದೆ. ಸಹ್ಯಾದ್ರಿ ಶ್ರೇಣಿಯ ಅದ್ಭುತ ನೋಟವನ್ನು ಒದಗಿಸುವ ಶಿರೋಲಿ ಶಿಖರ, ಚಾರಣ ಪ್ರಿಯರು ಮತ್ತು ಪ್ರಕೃತಿ ಪ್ರಿಯರಿಗೆ ಉತ್ತಮ ಸ್ಥಳವಾಗಿದೆ.

dandeli_P9107

ಕಾಳಿ ನದಿ:

ಜೀವನದಲ್ಲಿ ಒಮ್ಮೆ ರಿವರ್ ರಾಫ್ಟಿಂಗ್‌ ಪ್ರಯತ್ನಿಸಬೇಕು ಎಂದು ಬಯಸಿದರೆ ದಾಂಡೇಲಿಯ ಕಾಳಿ ನದಿಗೆ ಹೋಗಿ. ಅರಣ್ಯದ ಮಧ್ಯೆ ಇರುವ ಕಾಳಿ ನದಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನ ಮೂಲವನ್ನು ಹೊಂದಿದೆ. ವೈಟ್ ವಾಟರ್ ರಾಫ್ಟಿಂಗ್, ನೇಚರ್ ವಾಕ್, ಕಯಾಕಿಂಗ್, ಕ್ಯಾನೋಯಿಂಗ್, ಪಕ್ಷಿವೀಕ್ಷಣೆಯನ್ನು ಇಲ್ಲಿ ಆನಂದಿಸಬಹುದು.

ಮಾಗೋಡು ಜಲಪಾತ:

ಮಾಗೋಡು ಜಲಪಾತ ದಾಂಡೇಲಿಯ ಅತ್ಯಂತ ಸೊಗಸಾದ ಪ್ರೇಕ್ಷಣೀಯ ಸ್ಥಳವಾಗಿದೆ. ದಾಂಡೇಲಿಯಂತಹ ಸ್ವರ್ಗದಲ್ಲಿ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಮಾಗೋಡು ಜಲಪಾತಕ್ಕೆ ಒಮ್ಮೆ ಭೇಟಿ ನೀಡಿ. ಸುಮಾರು 200 ಮೀಟರ್ ಎತ್ತರದಿಂದ ಸುಂದರವಾಗಿ ಬೀಳುವ ಈ ಜಲಪಾತವು ಹಚ್ಚಹಸಿರಿನ ಬೆಟ್ಟಗಳ ಮಧ್ಯದಲ್ಲಿ ಧುಮ್ಮಿಕ್ಕುತ್ತದೆ.

ಕವಾಲಾ ಗುಹೆಗಳು:

ದಾಂಡೇಲಿ ಪ್ರವಾಸದ ವೇಳೆ ಕವಾಲಾ ಗುಹೆಗಳಿಗೆ ಭೇಟಿ ನೀಡಲು ಮರೆಯಲೇಬೇಡಿ. ಯಾಕೆಂದರೆ ಇತಿಹಾಸ ಪೂರ್ವಕಾಲದಷ್ಟು ಹಳೆಯದಾದ ಇಲ್ಲಿನ ಗುಹೆಗಳು ಜ್ವಾಲಾಮುಖಿಯಿಂದ ನೈಸರ್ಗಿಕವಾಗಿ ರೂಪುಗೊಂಡಿದೆಯೆಂದೂ ಹೇಳಲಾಗುತ್ತದೆ.

KAVALA CAVES

ಸಾತೊಡ್ಡಿ ಫಾಲ್ಸ್:‌

ದಾಂಡೇಲಿಗೆ ಹೋಗುವ ವೇಳೆ ಸಿಗುವ ಜಲಪಾತಗಳ ಪೈಕಿ ಸಾತೊಡ್ಡಿ ಫಾಲ್ಸ್‌ ಪ್ರಮುಖವಾದುದು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ 22ಕಿ.ಮೀ ದೂರದಲ್ಲಿರುವ ಈ ಸುಂದರ ಜಲಪಾತವನ್ನು ಉತ್ತರ ಕನ್ನಡದ ಮಂದಿ ಮಿನಿ ನಯಾಗ್ರ ಫಾಲ್ಸ್‌ ಎಂದೇ ಕರೆಯುತ್ತಾರೆ.

ಸಿಂಥೇರಿ ರಾಕ್ಸ್:‌

ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಕಾಳಿ ನದಿಯ ಬಳಿ ಇರುವ ಸಿಂಥೇರಿ ಬಂಡೆಯು ಈ ಪ್ರದೇಶದಲ್ಲಿ ಜ್ವಾಲಾಮುಖಿ ಚಟುವಟಿಕೆಗಳಿಂದಾಗಿ ಯುಗಗಳ ಹಿಂದೆ ರೂಪುಗೊಂಡ ಒಂದು ದೈತ್ಯಾಕಾರದ ಸುಣ್ಣದ ಕಲ್ಲಿನ ಬಂಡೆಯಾಗಿದೆ. ಈ ಏಕಶಿಲೆಯ ರಚನೆಯ ತುದಿಯನ್ನು ತಲುಪಲು ಸುಮಾರು 400 ಮೆಟ್ಟಿಲುಗಳನ್ನು ಹತ್ತಬೇಕು. ಇದು ದಾಂಡೇಲಿ ಕಣಿವೆಯ ವಿಹಂಗಮ ನೋಟವನ್ನು ಪಡೆಯಲು ಸೂಕ್ತ ಸ್ಥಳ.

ಉಳವಿ ದೇವಸ್ಥಾನ :

ಉಳವಿ ದೇವಸ್ಥಾನವು 12 ನೇ ಶತಮಾನದ ಭಾರತದಲ್ಲಿ ಲಿಂಗಾಯತ ಸಂತರಾಗಿದ್ದ ಚನ್ನಬಸವಣ್ಣನಿಗೆ ಸಮರ್ಪಿತವಾಗಿದ್ದು, ಲಿಂಗಾಯತ ಸಮುದಾಯಕ್ಕೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಭಾರತದ ಪಶ್ಚಿಮ ಘಟ್ಟಗಳಲ್ಲಿ, ಹಚ್ಚ ಹಸಿರಿನ ನೈಸರ್ಗಿಕ ಪರಿಸರದ ನಡುವೆ ನೆಲೆಗೊಂಡಿರುವ ಈ ದೇವಸ್ಥಾನವು ಒತ್ತಡದ ನಗರ ಜೀವನದಿಂದ ಹೊರಬರಲು ಸಹಾಯ ಮಾಡುತ್ತದೆ.

ಸೂಪಾ ಡ್ಯಾಮ್:‌

ಕಾಳಿ ನದಿಗೆ ಅಡ್ಡವಾಗಿ ಕಟ್ಟಲಾದ ಸೂಪಾ ಅಣೆಕಟ್ಟನ್ನು ಎಂಜಿನಿಯರಿಂಗ್ ಅದ್ಭುತವೆಂದೇ ಪರಿಗಣಿಸಲಾಗಿದೆ. 101 ಮೀಟರ್ ಎತ್ತರ, 330 ಮೀಟರ್ ಉದ್ದ ಮತ್ತು 1000 ಚದರ ಕಿಲೋಮೀಟರ್‌ಗಳಿಗಿಂತ ಹೆಚ್ಚು ಜಲಾನಯನ ಪ್ರದೇಶವನ್ನು ಹೊಂದಿದೆ. ಇದು ರಾಜ್ಯಕ್ಕೆ ವಿದ್ಯುತ್ ಪೂರೈಸಲು ಸುಮಾರು 100 ಮೆಗಾವ್ಯಾಟ್ ಶಕ್ತಿಯನ್ನು ಉತ್ಪಾದಿಸುವ ವಿದ್ಯುತ್ ಸ್ಥಾವರವನ್ನು ಹೊಂದಿದೆ.

supa-dam-dandeli-1280x720

ಸಂಪರ್ಕ ವ್ಯವಸ್ಥೆ:

ಈ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ, ಇಲ್ಲಿಗೆ ಹುಬ್ಬಳ್ಳಿಯು ಹತ್ತಿರದ ಪಟ್ಟಣ. ಹುಬ್ಬಳ್ಳಿಯಿಂದ ನೇರ ಬಸ್ ಸಂಪರ್ಕ ಸುಲಲಿತವಾಗಿದೆ. ಅತ್ತ ರಾಮನಗರದ ಮೂಲಕ ಗೋವಾದ ಕಡೆಗೂ ರಸ್ತೆ ಸಂಪರ್ಕವಿದೆ.

ವಸತಿ ಸೌಲಭ್ಯ:

ಈ ಊರಿನಲ್ಲಿ ಹಲವು ಖಾಸಗಿ ಹೋಟೆಲುಗಳಲ್ಲಿ ವಸತಿ ವ್ಯವಸ್ಥೆ ಲಭ್ಯವಿದ್ದು, ನಿಮ್ಮ ಬಜೆಟ್‌ ಗೆ ಅನುಸಾರವಾಗಿ ಮೊದಲೇ ಬುಕ್ಕಿಂಗ್‌ ಮಾಡಿಕೊಂಡರೆ ಸಾಹದ ಜೊತೆಗೆ ಸುಂದರವಾದ ಪ್ರಕೃತಿಯನ್ನು ಕಣ್ತುಂಬಿಕೊಳ್ಳಬಹುದು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..