ಚಾರಣ + ತೀರ್ಥಯಾತ್ರೆ... ಭೀಮೇಶ್ವರ ನೀಡುವ ಟೂ ಇನ್ ಒನ್ ಆಫರ್!
ಅರ್ಜುನನು ಶಿವಲಿಂಗಕ್ಕೆ ಅಭಿಷೇಕ ಮಾಡಲು ಬಾಣದಿಂದ ಚಿಮ್ಮಿಸಿದ ನೀರೇ ಇಂದು "ಸರಳ ಹೊಳೆ"ಯಾಗಿ ಹರಿಯುತ್ತಿದೆ. ಈ ನದಿಯು ದೇವಾಲಯದ ಪಕ್ಕದಲ್ಲೇ ಹುಟ್ಟಿ, ನೂರಾರು ಅಡಿ ಎತ್ತರದಿಂದ ಬೃಹದಾಕಾರದ ಬಂಡೆಗಳ ನಡುವೆ ಜಲಪಾತವಾಗಿ ಎಲ್ಲಾ ಋತುಗಳಲ್ಲೂ ಮೈದುಂಬಿ ಧುಮ್ಮಿಕ್ಕುತ್ತದೆ. ಅತ್ಯಾಶ್ಚರ್ಯಕರ ಸಂಗತಿಯೆಂದರೆ, ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ಈ ಹೊಳೆಯ ನೀರಿನ ಹರಿವು ತನ್ನಷ್ಟಕ್ಕೆ ತಾನೇ ಹೆಚ್ಚಾಗುತ್ತದಂತೆ.
- ಮೃತ್ಯುಂಜಯ ಹೆಗಡೆ
ದಿನನಿತ್ಯದ ಜಂಜಾಟ ಏಕತಾನತೆಯಿಂದ ಹೊರ ಬಂದು ಹೊಸ ಹುರುಪು ಪಡೆಯಲು ಪ್ರವಾಸಗಳು ಅತ್ಯವಶ್ಯಕ. ನಾವು ಹೋಗಲು ಇಚ್ಛಿಸುವ ಸ್ಥಳ ಜನಸಂದಣಿಯಿಂದ ದೂರವಿರಬೇಕು, ಪ್ರಶಾಂತವಾಗಿರಬೇಕು, ಅಲ್ಲಿನ ಶುದ್ಧ ಗಾಳಿ, ಸುತ್ತಲಿನ ಹಚ್ಚ ಹಸಿರಿನ ಪ್ರಾಕೃತಿಕ ಸೌಂದರ್ಯವು ದೇಹ-ಮನಸ್ಸುಗಳಿಗೆ ಶಾಂತಿ ಮತ್ತು ಉಲ್ಲಾಸ ತುಂಬುವಂತಿರಬೇಕು. ಇಂಥ ಅಪರೂಪದ ಪ್ರವಾಸಕ್ಕೆ ಹೇಳಿಮಾಡಿಸಿದ ತಾಣವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೋಗಾರು ಎಂಬ ಪುಟ್ಟ ಹಳ್ಳಿಯ ಸಮೀಪದಲ್ಲಿದೆ. ಜಡ್ಡು ಹಿಡಿದ ಮೈ-ಮನಸ್ಸುಗಳಿಗೆ ವ್ಯಾಯಾಮ ನೀಡುವ, ಚಾರಣ ಮತ್ತು ತೀರ್ಥಯಾತ್ರೆ ಎರಡೂ ಸಾಧ್ಯವಾಗುವಂಥ ಆ ಪ್ರಶಸ್ತವಾದ ತಾಣವೇ “ಭೀಮೇಶ್ವರ.”
ಭೀಮೇಶ್ವರವು ಸಾಗರ, ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದ ಘಟ್ಟ ಪ್ರದೇಶದ ನಡುವಿನಲ್ಲಿದೆ. ದಟ್ಟಕಾಡುಗಳಿಂದ ಕೂಡಿದ, ಪಶ್ಚಿಮಘಟ್ಟಗಳ ಭವ್ಯ ವನಸಿರಿಯ ಸಾಲುಸಾಲು ಪರ್ವತ ಶ್ರೇಣಿಯ ಬೃಹತ್ ಗಾತ್ರದ ಮರಗಳ ನಡುವಿನ ಕಡಿದಾದ ಇಳಿಜಾರಿನಲ್ಲಿ ಸಾಗುವ ಹಾದಿಯೇ ಒಂದು ಅದ್ಭುತ ಅನುಭವ ನೀಡುತ್ತದೆ. ಒಂದು ಬದಿಯು ಆಳವಾದ ಕಣಿವೆಯಿಂದ ಕೂಡಿದ್ದರೆ, ಇನ್ನೊಂದು ಭಾಗ ಆಕಾಶದೆತ್ತರಕ್ಕೆ ಚಾಚಿಕೊಂಡಿರುವ ಪರ್ವತದ ಕಡಿದಾದ ಎತ್ತರದ ಭಾಗವಾಗಿದೆ. ಇಲ್ಲಿ ಪ್ರತಿ ಹೆಜ್ಜೆಯನ್ನೂ ನಾಜೂಕಾಗಿ ಇಡಬೇಕು.

ಮುಖ್ಯ ರಸ್ತೆಯಿಂದ ಸುಮಾರು ಎರಡೂವರೆ ಕಿ.ಮೀ ಇದ್ದು, ರಸ್ತೆಯು ದಟ್ಟ ಕಾಡಿನ ಮೂಲಕ ಹಾದುಹೋಗುವ ಕಾರಣ ಸವಾಲಿನದ್ದಾಗಿದೆ. ಮಳೆಗಾಲದಲ್ಲಿ ದಾರಿಯುದ್ದಕ್ಕೂ ಕೆಸರು ತುಂಬಿ ಕೊಳ್ಳುವುದರಿಂದ ಎಚ್ಚರಿಕೆಯಿಂದ ನಡೆಯಬೇಕಾಗುತ್ತದೆ. ಕೆಲವು ಕಡೆ ಕಡಿದಾದ ಇಳಿಜಾರನ್ನು ಹೊಂದಿದ್ದು, ಕೆಲವು ಕಡೆ ಜಾರುದಾರಿಗಳಿವೆ. ಆದರೂ ದಾರಿಯ ಮಧ್ಯದ ಸುಂದರ ದೃಶ್ಯಗಳನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಒಂದು ವಿಧದಲ್ಲಿ ಇಲ್ಲಿಗೆ ಭೇಟಿ ನೀಡುವುದೆಂದರೆ, ಲೌಕಿಕ, ಅಲೌಕಿಕ, ಪ್ರಾಕೃತಿಕ ಸೌಂದರ್ಯ, ದೈವಿಕತೆಯ ಒಂದು ವಿಶಿಷ್ಟ ಚೈತನ್ಯವನ್ನು ಆನಂದಿಸಿದಂತೆ.
ಭೀಮೇಶ್ವರಕ್ಕೆ ಸಾಗುವ ದಾರಿಯುದ್ದಕ್ಕೂ ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಸಹ್ಯಾದ್ರಿಯ ಈ ಭಾಗವು ಅಪರೂಪದ ಸಸ್ಯ ಸಂಪತ್ತು, ವೈವಿಧ್ಯಮಯ ಪಕ್ಷಿ-ಪ್ರಾಣಿಗಳು ಮತ್ತು ಕೀಟಗಳಿಂದ ಕೂಡಿದ ಜೀವವೈವಿಧ್ಯದ ತಾಣವಾಗಿದೆ. ಅದೃಷ್ಟವಿದ್ದರೆ, ಕರಿಮೂತಿಯ ಸಿಂಗಳೀಕ, ಬಗೆಬಗೆಯ ಚಿಟ್ಟೆಗಳು, ವಿಶಿಷ್ಟ ಹೂಗಳು ಮತ್ತು ಇತರ ವನ್ಯಜೀವಿಗಳು ನಿಮಗೆ ಎದುರಾಗಬಹುದು. ಇಲ್ಲಿ ಕಳೆಯುವ ಒಂದಷ್ಟು ಸಮಯ ನಿಮ್ಮನ್ನು ನೀವು ಪ್ರಕೃತಿಯ ಮಡಿಲಲ್ಲಿ ಕಳೆದುಕೊಂಡ ಅನುಭವ ನೀಡುತ್ತದೆ, ಲೌಕಿಕ ಮತ್ತು ಅಲೌಕಿಕ ಸೌಂದರ್ಯದ ನಡುವೆ ವಿಶಿಷ್ಟ ಚೈತನ್ಯವನ್ನು ಆನಂದಿಸುವ ಅವಕಾಶ ಕಲ್ಪಿಸುತ್ತದೆ.

ಪೌರಾಣಿಕ ಹಿನ್ನೆಲೆ
ಭೀಮೇಶ್ವರ ದೇವಸ್ಥಾನವು ಶಿವನ ಕ್ಷೇತ್ರ. ಇಲ್ಲಿನ ಪ್ರಮುಖ ದೇವರು ಭೀಮೇಶ್ವರ ಸ್ವಾಮಿ. ಈ ದೇವಸ್ಥಾನಕ್ಕೆ ರೋಚಕ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯಿದೆ. ಸ್ಥಳ ಪುರಾಣಗಳ ಪ್ರಕಾರ, ದ್ವಾಪರಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ತಂಗಿದ್ದರಂತೆ. ಮಹಾಶಿವರಾತ್ರಿಯ ದಿನ, ಭೀಮನು ಕಾಶಿಯಿಂದ ತಂದ ಶಿವಲಿಂಗವನ್ನು ಧರ್ಮರಾಯನು ಇಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದನು. ಅಂದು ಅವರು ಪ್ರತಿಷ್ಠಾಪಿಸಿದ ದೇಗುಲವೇ ಇಂದು ನಾವು ಕಾಣುವ ಭೀಮೇಶ್ವರ ದೇವಸ್ಥಾನ. ಈ ಧಾರ್ಮಿಕ ಹಿನ್ನೆಲೆಯು ಈ ತಾಣಕ್ಕೆ ಮತ್ತಷ್ಟು ಪಾವಿತ್ರ್ಯವನ್ನು ನೀಡಿದೆ.
ಅರ್ಜುನನು ಶಿವಲಿಂಗಕ್ಕೆ ಅಭಿಷೇಕ ಮಾಡಲು ಬಾಣದಿಂದ ಚಿಮ್ಮಿಸಿದ ನೀರೇ ಇಂದು "ಸರಳ ಹೊಳೆ"ಯಾಗಿ ಹರಿಯುತ್ತಿದೆ. ಈ ನದಿಯು ದೇವಾಲಯದ ಪಕ್ಕದಲ್ಲೇ ಹುಟ್ಟಿ, ನೂರಾರು ಅಡಿ ಎತ್ತರದಿಂದ ಬೃಹದಾಕಾರದ ಬಂಡೆಗಳ ನಡುವೆ ಜಲಪಾತವಾಗಿ ಎಲ್ಲಾ ಋತುಗಳಲ್ಲೂ ಮೈದುಂಬಿ ಧುಮ್ಮಿಕ್ಕುತ್ತದೆ. ಅತ್ಯಾಶ್ಚರ್ಯಕರ ಸಂಗತಿಯೆಂದರೆ, ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ಈ ಹೊಳೆಯ ನೀರಿನ ಹರಿವು ತನ್ನಷ್ಟಕ್ಕೆ ತಾನೇ ಹೆಚ್ಚಾಗುತ್ತದಂತೆ. ಈ ಶುದ್ಧ ಸ್ಪಟಿಕಸದೃಶ ನೀರಿನಲ್ಲಿ ಸ್ನಾನ ಮಾಡಿದರೆ ಮೈ-ಮನಗಳ ದಣಿವು ಎಷ್ಟಿದ್ದರೂ ಶಮನವಾಗುತ್ತದೆ. ಪಾಂಡವರು ಇಲ್ಲಿಗೆ ಭೇಟಿ ನೀಡಿದ್ದಕ್ಕೆ ಸಾಕ್ಷಿಯಾಗಿ, ಕಲ್ಲಿನಲ್ಲಿ ಮೂಡಿದ ಭೀಮನ ಹೆಜ್ಜೆ ಗುರುತುಗಳನ್ನು ಇಲ್ಲಿ ಕಾಣಬಹುದು. ಇದು ಸ್ಥಳದ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಆಧ್ಯಾತ್ಮಿಕ ಮತ್ತು ಶಾಂತಿಯುತ ವಾತಾವರಣ
ದೇವಾಲಯದ ಆವರಣದಲ್ಲಿ ನೆಲೆಸಿರುವ ಶಾಂತ ಮತ್ತು ಉಲ್ಲಾಸದಾಯಕ ವಾತಾವರಣವು ಭಕ್ತರಿಗೆ ಧ್ಯಾನ ಮತ್ತು ಪ್ರಾರ್ಥನೆಗೆ ಅತ್ಯಂತ ಸೂಕ್ತವಾಗಿದೆ. ಇಲ್ಲಿ ವಿಶೇಷ ಪೂಜೆಗಳು ಮತ್ತು ಉತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಇದಲ್ಲದೇ, ಪ್ರತಿ ಹುಣ್ಣಿಮೆ, ಅಮಾವಾಸ್ಯೆ ಮತ್ತು ಸಂಕ್ರಾಂತಿ ದಿನಗಳಲ್ಲಿ ದೇವಾಲಯವು ಭಕ್ತರಿಂದ ತುಂಬಿರುತ್ತದೆ.
ಯಾವ ಸಮಯದಲ್ಲಿ ಭೇಟಿ ನೀಡಿದರೂ ಇಲ್ಲಿನ ಪರಿಸರವನ್ನು ಆನಂದಿಸಬಹುದಾದರೂ, ಮಳೆಗಾಲದಲ್ಲಿ ಭೇಟಿ ನೀಡಿದರೆ ಹಸಿರು ಮತ್ತು ನೀರಿನ ಸಮೃದ್ಧಿ ನಿಮ್ಮನ್ನು ಇನ್ನಷ್ಟು ಮುದಗೊಳಿಸುತ್ತದೆ. ದಟ್ಟ ಕಾಡಿನ ಮಧ್ಯದ ಶಾಂತ ಪರಿಸರದಲ್ಲಿರುವ ಈ ದೇವಾಲಯಕ್ಕೆ ಸಾಕಷ್ಟು ಬೆಳಕು ಇರುವ ಸಮಯದಲ್ಲಿ ಭೇಟಿ ನೀಡುವುದು ಹೆಚ್ಚು ಸೂಕ್ತ. ದೇವಾಲಯದ ಸಮೀಪದಲ್ಲೇ ಅರ್ಚಕರ ಮನೆಯಿದ್ದು, ಸಂದರ್ಶಕರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾರೆ.
ಸರಕಾರದ ಗಮನಕ್ಕೆ..
ದೇವಾಲಯದ ಮುಂಭಾಗದಲ್ಲಿರುವ ಬೃಹತ್ ಕಲ್ಲಿನ ನಂದಿ ಮತ್ತು ಅದರ ಮಂಟಪವು ಅತ್ಯಂತ ಆಕರ್ಷಕವಾಗಿದ್ದು, ಆ ಸುಂದರ ವಾತಾವರಣದಲ್ಲಿ ಒಂದಷ್ಟು ಹೊತ್ತು ಧ್ಯಾನಮಗ್ನರಾಗಿ ನಿಲ್ಲಬೇಕು ಎಂಬ ಭಾವನೆ ಮೂಡದೇ ಇರಲು ಸಾಧ್ಯವೇ ಇಲ್ಲ. ಇಂತಹ ಸುಂದರ ಪ್ರಕೃತಿ ಸೌಂದರ್ಯದ ನಡುವೆ ಇರುವ ಈ ದೇವಾಲಯವು ಕಾಲದ ಹೊಡೆತಕ್ಕೆ ಸಿಕ್ಕಿ ಕೊಂಚ ಜರ್ಜರಿತವಾಗಿದೆ. ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕಿದೆ.

ಪ್ರಕೃತಿಯ ಮಡಿಲಲ್ಲಿ ಒಂದು ಅದ್ಭುತ ಅನುಭವ:
ದಟ್ಟಾರಣ್ಯದ ಹಸಿರು ಸೌಂದರ್ಯವನ್ನು ಆಸ್ವಾದಿಸುತ್ತಾ, ಪಕ್ಷಿಗಳನ್ನು ವೀಕ್ಷಿಸುತ್ತಾ, ಜಲಪಾತದ ನೀರಿನಲ್ಲಿ ಮೋಜು ಮಾಡುವುದು ಮಕ್ಕಳು ಮತ್ತು ದೊಡ್ಡವರಿಗೆ ಅಮ್ಯೂಸ್ಮೆಂಟ್. ನಿರಂತರ ನೀರಿನ ಹರಿವಿನಿಂದಾಗಿ ಕಲ್ಲುಗಳು ಪಾಚಿಗಟ್ಟಿರುವುದರಿಂದ ಪ್ರತಿ ಹೆಜ್ಜೆಯನ್ನೂ ಬಹಳ ಎಚ್ಚರಿಕೆಯಿಂದ ಇಡಬೇಕು.
ಪ್ರಕೃತಿಯ ಮಡಿಲಲ್ಲಿರುವ ಭೀಮೇಶ್ವರ ದೇವಾಲಯಕ್ಕೆ ಭೇಟಿ ನೀಡುವುದು ಒಂದು ಸಾಹಸಮಯ ಅನುಭವ. ಇಲ್ಲಿಗೆ ತಲುಪುವ ಮಾರ್ಗವು ವಾಹನಗಳಿಗೆ ನಿಜವಾದ ಸವಾಲನ್ನು ಒಡ್ಡುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕವಾದ, ಕಡಿದಾದ ಮತ್ತು ಒರಟಾದ ಮಣ್ಣಿನ ಹಾದಿಯಾಗಿದ್ದು, ಬಂಡೆಗಳಿಂದ ಕೂಡಿದೆ. ಚಾಲಕರ ನೈಪುಣ್ಯತೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ.
ಮುಖ್ಯ ರಸ್ತೆಯಿಂದ ಸುಮಾರು ಎರಡೂವರೆ ಕಿ.ಮೀ ದೂರದಲ್ಲಿರುವ ದೇವಾಲಯವನ್ನು ತಲುಪಲು, ನಿಮ್ಮ ಕಾರನ್ನು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ, ಅಲ್ಲಿಂದ ವಿಶೇಷವಾಗಿ ಈ ಮಾರ್ಗಕ್ಕಾಗಿರುವ ಬಾಡಿಗೆ ಜೀಪ್ಗಳಲ್ಲಿ ಪ್ರಯಾಣಿಸುವುದು ಉತ್ತಮ. ಇಲ್ಲವೇ, ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಾ ಕಾಲ್ನಡಿಗೆಯಲ್ಲಿ ಸಾಗುವ ಆಯ್ಕೆಯೂ ಇದೆ.
ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ; ಭೀಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದು ಕೇವಲ ಚಾರಣವೋ, ಯಾತ್ರೆಯೋ ಅಲ್ಲ. ಬದಲಿಗೆ ಪ್ರಕೃತಿಯ ವಿಸ್ಮಯಗಳು ಮತ್ತು ದೈವಿಕ ಶಕ್ತಿಯನ್ನು ಒಟ್ಟಾಗಿ ಅನುಭವಿಸುವ ಒಂದು ಅನನ್ಯ ಅವಕಾಶ. ಲವಲವಿಕೆಯನ್ನು ರೀಚಾರ್ಜ್ ಮಾಡುವ ಪ್ರಕೃತಿಯ ವಿಸ್ಮಯ ತಾಣ.