ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ
ಶಂಖೋಧರ ಎಂದೂ ಕರೆಯಲ್ಪಡುವ ಬೆಟ್ ದ್ವಾರಕಾ, ದ್ವಾರಕಾದಲ್ಲಿ ಶ್ರೀಕೃಷ್ಣನ ಆಳ್ವಿಕೆಯ ವರ್ಷಗಳಲ್ಲಿ ಶ್ರೀಕೃಷ್ಣನ ನಿವಾಸವಾಗಿತ್ತು ಎಂದು ಹೇಳಲಾಗುತ್ತದೆ. ಇದು 'ಬೆಟ್' ಅಂದರೆ 'ಉಡುಗೊರೆ' ಎಂದಾಗುತ್ತದೆ. ಇದನ್ನು ಶ್ರೀಕೃಷ್ಣ ತನ್ನ ಆಪ್ತಸ್ನೇಹಿತನಾದ ಸುಧಾಮನಿಂದ ಉಡುಗೊರೆ ಪಡೆದನೆಂದು ನಂಬಲಾಗಿದೆ.
ಗೋಮತಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ಸ್ಥಳದಲ್ಲಿರುವ ದ್ವಾರಕಾ ಬಹಳ ಸುಂದರವಾದ ಹಾಗೂ ಹಿಂದೂಗಳಿಗೆ ಅಷ್ಟೇ ಪವಿತ್ರವಾದ ಸ್ಥಳ. ಇದು ಶ್ರೀಕೃಷ್ಣನ ರಾಜ್ಯವಾಗಿತ್ತು. ಸುತ್ತಲಿನ ಸಮುದ್ರ ತೀರ, ರುಕ್ಮಿಣಿಯ ದೇವಾಲಯ, ನಾಗೇಶ್ವರ ದ್ವಾದಶ ಜ್ಯೋತಿರ್ಲಿಂಗ, ಗೋಪಿ ತಳಾಹ ಮತ್ತು ಬೇಟ್ ದ್ವಾರಕಾವನ್ನು ನೋಡಲು ಎರಡು ದಿನಗಳೂ ಸಹ ಕಡಿಮೆ ಎಂದು ಹೇಳಬಹುದು.
ಬೇಟ್ ದ್ವಾರಕಾವು ದ್ವೀಪವಾಗಿದ್ದು, ಗುಜರಾತ ರಾಜ್ಯದ ದೇವಭೂಮಿ ದ್ವಾರಕಾ ಎಂಬ ಜಿಲ್ಲೆಯ ಓಖಾ ಎಂಬ ಪ್ರದೇಶದಲ್ಲಿದೆ. ಇದು ಸಹ ದ್ವಾರಕಾದ ದ್ವಾರಕಾಧೀಶನ ದೇವಾಲಯಕ್ಕೆ ಸಂಬಂಧಿಸಿದ ದೇವಾಲಯವಾಗಿದೆ.
ಇದಕ್ಕೆ ಶಂಖೋಧರ ಎಂಬ ಹೆಸರು ಕೂಡ ಇದೆ. ಅರಬ್ಬಿ ಸಮುದ್ರದ ಕಛ್ ಕೊಲ್ಲಿಯ ಮುಖಭಾಗದಲ್ಲಿ ಇರುವ ಜನವಸತಿ ಇರುವ ದ್ವೀಪ. 13 ಕಿ. ಮೀ. ಉದ್ದ ಹಾಗೂ 4 ಕಿ. ಮೀ. ಅಗಲ ಹೊಂದಿರುವ ದ್ವೀಪವು ದ್ವಾರಕಾದಿಂದ 30 ಕಿ. ಮೀ. ದೂರದಲ್ಲಿದೆ.
ದೇವಾಲಯದ ಇತಿಹಾಸ
ಶಂಖೋಧರ ಎಂದೂ ಕರೆಯಲ್ಪಡುವ ಬೆಟ್ ದ್ವಾರಕಾ, ದ್ವಾರಕಾದಲ್ಲಿ ಶ್ರೀಕೃಷ್ಣನ ಆಳ್ವಿಕೆಯ ವರ್ಷಗಳಲ್ಲಿ ಶ್ರೀಕೃಷ್ಣನ ನಿವಾಸವಾಗಿತ್ತು ಎಂದು ಹೇಳಲಾಗುತ್ತದೆ. ಇದು 'ಬೆಟ್' ಅಂದರೆ 'ಉಡುಗೊರೆ' ಎಂದಾಗುತ್ತದೆ. ಇದನ್ನು ಶ್ರೀಕೃಷ್ಣ ತನ್ನ ಆಪ್ತಸ್ನೇಹಿತನಾದ ಸುಧಾಮನಿಂದ ಉಡುಗೊರೆ ಪಡೆದನೆಂದು ನಂಬಲಾಗಿದೆ. ಹಾಗೆಯೇ ಇಲ್ಲಿನ ಕೇಶವ ರೈಜಿ ಎಂಬ ಹೆಸರಿನ ಕೃಷ್ಣನ ವಿಗ್ರಹ ಶಂಖವನ್ನು ಹಿಡಿದುಕೊಂಡಿರುವುದರಿಂದ ಶಂಖೋಧರ್ ಎಂಬ ಹೆಸರು ಇದೆ.
ಪ್ರಾಚೀನ ಮಹಾಕಾವ್ಯ ಮಹಾಭಾರತದಲ್ಲಿ ಬೆಟ್ ದ್ವಾರಕಾವನ್ನು 'ಅಂತರ್ದ್ವಿಪ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಏಕೆಂದರೆ ಯಾದವ ಕುಲದ ಜನರು ದೋಣಿಯಲ್ಲಿ ಪ್ರಯಾಣಿಸಬೇಕಾಗಿತ್ತು.
ಅಂದಹಾಗೆ ಇಲ್ಲಿ ಹತ್ತು ಹಲವು ದೇವಾಲಯಗಳಿವೆ.
ಕೇಶವ ರೈಜಿ (ಕೃಷ್ಣನ ಮೂಲ) ದೇವಾಲಯ
ಇದು ಶ್ರೀಕೃಷ್ಣನ ದೇವಾಲಯವಾಗಿದ್ದು, ವಲ್ಲಭಾಚಾರ್ಯರಿಂದ ಸ್ಥಾಪಿತವಾಗಿದೆ. ಇದು 500 ವರ್ಷಗಳ ಹಿಂದಿನ ದೇವಾಲಯವಾಗಿದೆ. ಇಲ್ಲಿನ ಮೂಲ ಕೃಷ್ಣನ ವಿಗ್ರಹವನ್ನು ಕೃಷ್ಣನ ಹೆಂಡತಿ ರುಕ್ಮಿಣಿ ಸ್ಥಾಪಿಸಿದಳು ಎಂದು ಹೇಳಲಾಗುತ್ತದೆ. ದ್ವಾರಕಾದಲ್ಲಿರುವ ದ್ವಾರಾಧೀಶನ ವಿಗ್ರಹಕ್ಕೂ ಇದಕ್ಕೂ ಬಹಳ ಹೋಲಿಕೆ ಇದೆ. ಆದರೆ ಈ ವಿಗ್ರಹ ಕೈಯಲ್ಲಿ ಶಂಖ ಹಿಡಿದುಕೊಂಡಿರುವುದು ವ್ಯತ್ಯಾಸವಾಗಿದೆ.
ಇಲ್ಲಿ ಅಕ್ಕಿಯ ನೈವೇದ್ಯ ವಿಶೇಷವಾಗಿದೆ. ಸುಧಾಮ ಕೃಷ್ಣನಿಗಾಗಿ ಒಂದು ಹಿಡಿ ಅಕ್ಕಿ (ಅವಲಕ್ಕಿ) ತರುವ ಕಥೆ ಇದರ ಮೂಲವಾಗಿದೆ.
ಸೋನೆ ಕಿ ದ್ವಾರಕಾ - ಪಾವನಧಾಮ (ಗೋಲ್ಡನ್ ದ್ವಾರಕಾ)
ಇದು ಇತ್ತೀಚೆಗಷ್ಟೇ ನಿರ್ಮಾಣಗೊಂಡ ದೇವಾಲಯವಾಗಿದೆ. ಕೃಷ್ಣನ ಬಾಲ್ಯ, ರಾಕ್ಷಸರ ಸಂಹಾರ, ಸತ್ಯಭಾಮ-ರುಕ್ಮಿಣಿ, ಸುಧಾಮ ಹಾಗೂ ಮಹಾಭಾರತಕ್ಕೆ ಸಂಬಂಧಿಸಿದ ಪಾಂಡವರು, ಕೌರವರು, ಭೀಷ್ಮ, ಕೃಷ್ಣನ ವಿಶ್ವರೂಪ ದರ್ಶನ ಇವುಗಳ ಪ್ರತಿಮೆ ಇದೆ. ವಿಷ್ಣುವಿನ ಅವತಾರಗಳು ಹಾಗೂ ಎಲ್ಲ ದೇವರ ಅತ್ಯಂತ ಸುಂದರ ಪ್ರತಿಮೆಗಳಿವೆ. ಈ ದೇವಾಲಯದ ಪ್ರವೇಶ ದರ 30 ರೂ.ಗಳಾಗಿದೆ.
ಹನುಮಾನ ದಾಂಡಿ ದೇವಾಲಯ :
ಹನುಮಂತ ಹಾಗೂ ಹನುಮಂತನ ಬೆವರಿನಿಂದ ಮೀನಿನ ಹೊಟ್ಟೆಯಿಂದ ಜನಿಸಿದ ಆತನ ಮಗ ಮಕರಧ್ವಜನ ವಿಗ್ರಹವನ್ನು ಹೊಂದಿದೆ.
ದಕ್ಷಿಣದ ಮೂಲೆಯಲ್ಲಿರುವ ಅಭಯ ಮಾತಾ ದೇವಾಲಯ, ರುಕ್ಮಿಣಿ, ಜಾಂಬವತಿ, ಸತ್ಯಭಾಮ, ಲಕ್ಷ್ಮೀ ದೇವಾಲಯಗಳು ಇವೆ. ಚೌರಸಿ ದೂನಿ (84 ಹೋಮಕುಂಡ) ಎಂಬ ಸ್ಥಳ ಕೂಡ ಪ್ರಶಾಂತವಾಗಿ ನೋಡುಗರ ಮನ ಸೆಳೆಯುತ್ತದೆ.
ತಲುಪುವುದು ಹೇಗೆ?
ಓಖಾ ತೀರದಿಂದ ಕೇವಲ 3 ಕಿ. ಮೀ. ದೂರದಲ್ಲಿರುವ ಬೇಟ್ ದ್ವಾರಕಾವನ್ನು ಓಖಾದಿಂದ ದೋಣಿಯ ಮೂಲಕ ತಲಾ 20 ರೂ. ವೆಚ್ಚದಲ್ಲಿ ತಲುಪಬಹುದು. ಗುಜರಾತ್ನ ಮೊದಲ ಸಮುದ್ರ ಸೇತುವೆ ಓಖಾ ಮತ್ತು ಬೆಟ್ ದ್ವಾರಕಾ ನಡುವೆ ನಿರ್ಮಾಣ ಹಂತದಲ್ಲಿದೆ. 2 ಕಿಮೀ (1 ಮೈಲಿ) ಉದ್ದದ ಸಮುದ್ರ ಸೇತುವೆಗೆ ₹ 400 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.