ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ
ಯಾವ ಸದ್ದುಗದ್ದಲಗಳಿಲ್ಲದೇ ಸುಮಾರು 500 ವರ್ಷಗಳಿಂದ (16ನೇ ಶತಮಾನ) ನೋಡುಗರ ಮನತಣಿಸುತ್ತಿರುವ ತಂಪಾದ ಕಲ್ಯಾಣಿಯೇ ‘ಪುಷ್ಕರಣಿ’ ಅಥವಾ ‘ಹೊಂಡ’. ವಿಜಯನಗರದ ಸಾಮ್ರಾಜ್ಯದಲ್ಲಿ ಪಾಳೆಯಗಾರನಾಗಿದ್ದ ಕೆಂಗ ಹನುಮಂತಪ್ಪ ನಾಯಕನು ಈ ಸರೋವರವನ್ನು ಕಟ್ಟಿಸಿದನಂತೆ.
ದಾವಣಗೆರೆಯ ಚೆನ್ನಗಿರಿ ತಾಲೂಕಿನಲ್ಲಿರುವ ಅತ್ಯಂತ ನಯನ ಮನೋಹರವಾದ ಕಲ್ಲಿನ ಕಲಾ ಕುಸುಮವೇ ಸಂತೆಬೆನ್ನೂರಿನ ಪುಷ್ಕರಣಿ. ಇದಕ್ಕೆ ರಾಮತೀರ್ಥ ಪುಷ್ಕರಣಿ, ಕಾರಂಜಿ ಮಂಟಪ ಎಂಬ ಹೆಸರುಗಳೂ ಇವೆ. ಸಂತೆಬೆನ್ನೂರಿಗೆ ಹೋಗಿ ಈ ಹೆಸರುಗಳನ್ನು ಹೇಳಿ ದಾರಿ ಕೇಳಿದರೆ ಯಾರೂ ನಿಮಗೆ ದಾರಿ ತೋರಿಸಲಾರರು! ಏಕೆಂದರೆ ಇಲ್ಲಿಯವರಿಗೆ ಇದು ‘ಹೊಂಡ’!
ದಾವಣಗೆರೆಯಿಂದ ಬಾಡ ಮಾರ್ಗವಾಗಿ ಸುಮಾರು 40 ಕಿ.ಮೀ. (ಬೆಂಗಳೂರಿನಿಂದ 250ಕಿ.ಮೀ.) ಸಾಗಿದರೆ ಸಂತೆಬೆನ್ನೂರು ಸಿಗುತ್ತದೆ. ಹಸಿರಿನ ಭತ್ತದ ಗದ್ದೆಗಳ ನಡುವೆ ಇರುವ ಈ ಪುಟ್ಟ ಊರಿನಲ್ಲಿ, ಯಾವ ಸದ್ದುಗದ್ದಲಗಳಿಲ್ಲದೇ ಸುಮಾರು 500 ವರ್ಷಗಳಿಂದ (16ನೇ ಶತಮಾನ) ನೋಡುಗರ ಮನ ತಣಿಸುತ್ತಿರುವ ತಂಪಾದ ಕಲ್ಯಾಣಿಯೇ ‘ಪುಷ್ಕರಣಿ’ ಅಥವಾ ‘ಹೊಂಡ’. ವಿಜಯನಗರದ ಸಾಮ್ರಾಜ್ಯದಲ್ಲಿ ಪಾಳೆಯಗಾರನಾಗಿದ್ದ ಕೆಂಗ ಹನುಮಂತಪ್ಪ ನಾಯಕನು ಈ ಸರೋವರವನ್ನು ಕಟ್ಟಿಸಿದನಂತೆ. ಸುಮಾರು 250 ಅಡಿಗಳಷ್ಟು ವಿಸ್ತಾರವಾದ ಚೌಕಾಕಾರದಲ್ಲಿರುವ ಕಲ್ಯಾಣಿಯ ನಾಲ್ಕೂ ಬದಿಯಿಂದಲೂ ನೀರಿನ ಬಳಿ ಸಾಗಲು ಐದುಹಂತಗಳಲ್ಲಿ 44 ಮೆಟ್ಟಿಲುಗಳಿವೆ. ಪಶ್ಚಿಮದ ಮುಖ್ಯದ್ವಾರದಿಂದ ಇಳಿಯಲು ಅನುಕೂಲವಾಗುವಂತೆ 52 ಚಿಕ್ಕ ಮೆಟ್ಟಿಲುಗಳಿವೆ. ಪುಷ್ಕರಣಿಯ ಸುತ್ತಲೂ ವಿವಿಧ ಅಳತೆಯ 8 ಮಂಟಪಗಳಿವೆ. ನಾಲ್ಕು ದಿಕ್ಕಿನಲ್ಲಿಯೂ ಇರುವ ಮಂಟಪಗಳು ದೊಡ್ಡ ಅಳತೆಯನ್ನು ಹೊಂದಿದ್ದು ಕುಳಿತುಕೊಳ್ಳಲು ಅನುಕೂಲವಾಗಿವೆ. ಜೊತೆಗೆ ನೀರಿನ ಸ್ವಲ್ಪ ಸಮೀಪದಲ್ಲಿ ಚಿಕ್ಕಮಂಟಪಗಳನ್ನು ಕಟ್ಟಲಾಗಿದೆ. ಬಲಭಾಗದ ಒಂದು ಮಂಟಪವನ್ನು ಎರಡು ಅಂತಸ್ತುಗಳಲ್ಲಿ ಕಟ್ಟಿದ್ದು, ಅದರ ಕಂಬಗಳಲ್ಲಿ ಆಕರ್ಷಕವಾದ ಕೆತ್ತನೆಗಳನ್ನು ನೋಡಬಹುದು.
ಎಲ್ಲ ಮಂಟಪಗಳಿಗಿಂತಲೂ ಆಕರ್ಷಕವಾಗಿರುವ ಮುಖ್ಯ ಮಂಟಪ, ಪುಷ್ಕರಣಿಯ ಮಧ್ಯ ಭಾಗದಲ್ಲಿರುವ ‘ವಸಂತ ಮಂಟಪ’. ಪುಷ್ಕರಣಿಯ ನಡುವೆ ನೀರಿನಮೇಲೆ ತೇಲುವಂತೆ ಕಾಣುವ ಇಂಡೋ-ಅರೇಬಿಕ್ ಶೈಲಿಯಲ್ಲಿರುವ ವಸಂತ ಮಂಟಪವು ಮೂರು ಅಂತಸ್ತುಗಳನ್ನು ಹೊಂದಿದೆ. ಸುಮಾರು ಐವತ್ತು ಅಡಿಗಳಷ್ಟು ಎತ್ತರವಿದೆ. ನೆಲ ಅಂತಸ್ತಿನ ನಾಲ್ಕುದಿಕ್ಕಿನಲ್ಲೂ ಕಲ್ಲಿನ ಗೋಡೆಗಳಿದ್ದು, ಮಧ್ಯದಲ್ಲಿ ಪ್ರವೇಶದ್ವಾರಗಳಿವೆ. ಎರಡನೇ ಅಂತಸ್ತಿನ ನಾಲ್ಕುಬದಿಗೂ ವೀಕ್ಷಣಾಮಾಡು(ಬಾಲ್ಕನಿ)ಗಳನ್ನು ನಿರ್ಮಿಸಿದ್ದಾರೆ. ಮೂರನೇ ಅಂತಸ್ತಿನಲ್ಲಿ ಕಲ್ಲಿನ ಕಂಬಗಳ ವಿಶಾಲವಾದ ತೆರೆದಮಂಟಪವಿದೆ. ಮೂರನೇ ಮಾಳಿಗೆಯಮೇಲೆ ಆಕರ್ಷಕವಾದ ಗೋಪುರವಿದೆ. ಮಂಟಪದ ಕೆಳಗೆ ವರ್ಷಪೂರ್ತಿ ಕಲ್ಯಾಣಿಗೆ ನೀರನ್ನು ಒದಗಿಸುವ ಕಾರಂಜಿಯಿದೆಯಂತೆ. ಅದರಿಂದಲೇ ಇದಕ್ಕೆ ಕಾರಂಜಿ ಮಂಟಪವೆನ್ನುವ ಹೆಸರು ಬಂದಿದೆ.
ಪುಷ್ಕರಣಿಯ ಎದುರುಗಡೆಯಲ್ಲಿ ಸುಮಾರು 150 ಅಡಿ ಉದ್ದ ಮತ್ತು 40 ಅಡಿ ಅಗಲದ ಕಲ್ಲಿನ ಒಂದು ಕಟ್ಟಡವಿದೆ. ಇದನ್ನು 17ನೇ ಶತಮಾನದಲ್ಲಿ ಸಂತೆಬೆನ್ನೂರನ್ನು ಆಕ್ರಮಿಸಿದ ಬಿಜಾಪುರ ಸುಲ್ತಾನರು ಸೈನಿಕರ ತಂಗುದಾಣವಾಗಿ ಕಟ್ಟಿಸಿದರಂತೆ. ಇದನ್ನು ‘ಮುಸಾಫಿರ್ ಖಾನಾ’ (ಅತಿಥಿಗೃಹ) ಎನ್ನುತ್ತಾರೆ. ಮುಂಭಾಗದಲ್ಲಿ 8 ಸಣ್ಣ ಮತ್ತು ಮಧ್ಯದಲ್ಲಿ ಒಂದು ದೊಡ್ಡದಾದ, ಒಟ್ಟು 9 ಕಮಾನುಗಳಿರುವ ಈ ಕಲ್ಲಿನ ಕಟ್ಟಡವನ್ನು ರಣದುಲ್ಲಾ ಖಾನ್ ಕಟ್ಟಿಸಿದನಂತೆ.
ಪುಷ್ಕರಣಿಯ ನೀರಿನಲ್ಲಿ ದಪ್ಪದಪ್ಪ ಮೀನುಗಳಿವೆ! ನೀರಿಗೆ ಇಳಿಯುವಂತಿಲ್ಲ. ವರ್ಷದ ಸದಾಕಾಲವೂ ನೀರಿರುವುದು ಈ ಕಲ್ಯಾಣಿಯ ಇನ್ನೊಂದು ವಿಶೇಷ. ಸರೋವರದ ಸುತ್ತಲೂ ಉದ್ಯಾನವನ್ನು ಮಾಡಿದ್ದಾರೆ. ಮೆಚ್ಚಬೇಕಾದ ವಿಷಯವೆಂದರೆ, ಕೊಳವನ್ನು ಮತ್ತು ಕೊಳದ ಸುತ್ತಲಿನ ಜಾಗವನ್ನು ತುಂಬಾ ಸ್ವಚ್ಛವಾಗಿಟ್ಟಿರುವುದು. ಆದರೆ ಎಲ್ಲೂ ಮಾಹಿತಿ ಫಲಕಗಳಿಲ್ಲ. ಮುಖ್ಯರಸ್ತೆಯಿಂದ ಕಲ್ಯಾಣಿಗೆ ದಾರಿಯನ್ನು ತೋರಿಸುವ ಸೂಚನಾ ಫಲಕಗಳೂ ಇಲ್ಲ.
ಬಿಸಿಲಿನ ಝಳವನ್ನು ಮರೆಸಿ, ದೇಹಕ್ಕೆ ಮತ್ತು ಮನಸ್ಸಿಗೆ ತಂಪನ್ನು ನೀಡುವ ಸಂತೆಬೆನ್ನೂರಿನ ಈ ಸುಂದರ ಕಲ್ಲಿನಕುಸುಮವನ್ನು ನೋಡಿ ಆನಂದಿಸಲು ಸಂಜೆಯ ಸಮಯದಲ್ಲಿ ಹೋಗುವುದು ಹೆಚ್ಚುಸೂಕ್ತ. ತನ್ನ ಸೌಂದರ್ಯ ಮತ್ತು ಪ್ರಶಾಂತತೆಯಿಂದ ಪುಷ್ಕರಣಿಯು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಉತ್ಸಾಹವನ್ನು ತುಂಬುತ್ತದೆ.