Tuesday, July 1, 2025
Tuesday, July 1, 2025

ವಿಮಾನದ ತುರ್ತು ಭೂಸ್ಪರ್ಶ

ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಅಹಮದಾಬಾದಿನಲ್ಲಿ ಅಪಘಾತಕ್ಕೀಡಾದ ಬಳಿಕ, ಒಂದು ವಾರದ ಅವಧಿಯಲ್ಲಿ ಐದು ವಿಮಾನಗಳು ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಿದ ಘಟನೆಗಳು ವರದಿಯಾದವು. ವಿಮಾನಯಾನ ರಂಗದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡುವುದನ್ನು ಗಂಭೀರವಾಗಿಯೇ ಪರಿಗಣಿಸಲಾಗುತ್ತದೆ.

ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಅಹಮದಾಬಾದಿನಲ್ಲಿ ಅಪಘಾತಕ್ಕೀಡಾದ ಬಳಿಕ, ಒಂದು ವಾರದ ಅವಧಿಯಲ್ಲಿ ಐದು ವಿಮಾನಗಳು ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಿದ ಘಟನೆಗಳು ವರದಿಯಾದವು. ವಿಮಾನಯಾನ ರಂಗದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡುವುದನ್ನು ಗಂಭೀರವಾಗಿಯೇ ಪರಿಗಣಿಸಲಾಗುತ್ತದೆ.

ememrgency landing plane

ಸಾಮಾನ್ಯವಾಗಿ ವಿಮಾನ ಟೇಕಾಫ್ ಆದ ಬಳಿಕ ಅದು ನಿರ್ಧರಿತ ಸ್ಥಳವನ್ನು ತಲುಪಬೇಕು.‌ ಅದು ತುರ್ತು ಭೂಸ್ಪರ್ಶ ಮಾಡಿದರೆ, ಅದಕ್ಕೆ ಯಾವುದೋ ಗಂಭೀರ ಕಾರಣ ಇದೆಯೆಂದೇ ಅರ್ಥ. ಎಮರ್ಜೆನ್ಸಿ ಲ್ಯಾಂಡಿಂಗ್ ಅನ್ನು ಅಪಘಾತ ತಪ್ಪಿಸಿದ ಕ್ರಮ ಅಥವಾ ಅಪಘಾತವನ್ನು ತಡೆಗಟ್ಟಿದ ಹಿಂದಿನ ಕ್ರಮ ಎಂದೇ ಭಾವಿಸಲಾಗುತ್ತದೆ. ಅಷ್ಟಕ್ಕೂ ಎಮರ್ಜೆನ್ಸಿ ಲ್ಯಾಂಡಿಂಗ್ ಎಂದರೇನು? ಹಾಗೆಂದರೆ ವಿಮಾನವು ನಿರೀಕ್ಷಿತ ಗಮ್ಯಸ್ಥಾನಕ್ಕೆ ತಲುಪುವುದಕ್ಕಿಂತ ಮೊದಲೇ ತುರ್ತು ಪರಿಸ್ಥಿತಿ ಯಿಂದಾಗಿ ಅವಶ್ಯವಾಗಿ ಮತ್ತು ಅನಿವಾರ್ಯವಾಗಿ ಲ್ಯಾಂಡ್ ಮಾಡಬೇಕಾದ ಪರಿಸ್ಥಿತಿ. ಇದಕ್ಕೆ ಹಲವು ಸಂಗತಿಗಳು ಕಾರಣವಾಗಬಹುದು.

ಇದನ್ನೂ ಓದಿ: ವಿಮಾನ ಮತ್ತು ಬರ್ಡ್‌ ಹಿಟ್

ಮುಖ್ಯವಾಗಿ, ವಿಮಾನದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಾಗ, ಪೈಲಟ್ ತುರ್ತು ಭೂಸ್ಪರ್ಶ ಮಾಡುವ ನಿರ್ಧಾರ ಕೈಗೊಳ್ಳುತ್ತಾನೆ. ಕೆಲವು ಸಲ ಎಂಜಿನ್ ವೈಫಲ್ಯ ( Engine failure) ವೂ ಈ ನಿರ್ಧಾರಕ್ಕೆ ಕಾರಣವಾಗಬಹುದು. ಹೈಡ್ರಾಲಿಕ್ ಅಥವಾ ಇಲೆಕ್ಟ್ರಿಕ್ ವ್ಯವಸ್ಥೆಗಳ ದೋಷ ಕಂಡು ಬಂದಾಗ, ತುರ್ತು ಭೂಸ್ಪರ್ಶ ಮಾಡದೇ ಅನ್ಯ ಮಾರ್ಗವಿರುವುದಿಲ್ಲ.

ವಿಮಾನದೊಳಗೆ ಗಾಳಿಯ ಒತ್ತಡ ಕಮ್ಮಿಯಾದಾಗ (Cabin pressurization issue) ಲೂ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಪೈಲಟ್ ಮುಂದಾಗಬಹುದು. ಪ್ರಯಾಣಿಕರಿಗೆ ಅಥವಾ ಸಿಬ್ಬಂದಿಗೆ ಹೃದಯಾಘಾತವಾದರೆ, ಅಸಹನೀಯ ನೋವು ಕಂಡುಬಂದರೆ, ಅಸ್ವಸ್ಥತೆ ಮುಂತಾದ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಕಂಡುಬಂದಾಗಲೂ ಪ್ರಾಣ ಉಳಿಸಲು ತುರ್ತು ಭೂಸ್ಪರ್ಶ ಮಾಡಲು ತೀರ್ಮಾನಿಸಬಹುದು.

ವಿಮಾನದಲ್ಲಿ ಪ್ರಸವ ಅಥವಾ ಶಸಚಿಕಿತ್ಸೆ ಅಗತ್ಯವಾದಾಗ, ಹವಾಮಾನ ವೈಪರೀತ್ಯಗಳು ತಲೆದೋರಿದಾಗ, ಭಾರಿ ಮಳೆ, ಹಿಮಪಾತ, ಚಂಡಮಾರುತದಂಥ ಗಾಳಿ ಬೀಸಿದಾಗ, ವಿಮಾನ ಲೆಕ್ಕ ಮೀರಿ ಅದುರಲಾರಂಭಿಸಿದಾಗ ಪೈಲಟ್ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ವಿಮಾನ ನಿಲ್ದಾಣದ ರನ್‌ವೇ ಕತ್ತಲಾದಾಗ ಅಥವಾ ಭದ್ರತೆ ಇಲ್ಲದಿದ್ದಾಗ, ಗಮ್ಯಸ್ಥಾನಕ್ಕೆ ತಲುಪಲು ಸಾಕಷ್ಟು ಇಂಧನ ವಿಲ್ಲದ ಪರಿಸ್ಥಿತಿ (Fuel shortage ) ತ ದೋರಿದಾಗ, ಬಾಂಬ್ ಬೆದರಿಕೆ, ಹೈಜಾಕ್ ಆದಾಗ ತುರ್ತು ಭೂಸ್ಪರ್ಶ ಮಾಡುವುದುಂಟು.

ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವಾಗ ಪೈಲಟ್ ನಿರ್ಧಾರವೇ ಅಂತಿಮ. ಆತ ಅಥವಾ ಆಕೆ ಎಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯ. ಪೈಲಟ್ ವಿಮಾನದಲ್ಲಿನ ಸಮಸ್ಯೆಯನ್ನು ಗುರುತಿಸಿ ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ಮಾಹಿತಿ ನೀಡುತ್ತಾನೆ. ಸಮೀಪದ ವಿಮಾನ ನಿಲ್ದಾಣ ಯಾವುದು, ಅಲ್ಲಿ ವಿಮಾನ ಇಳಿಸುವುದಕ್ಕೆ ಬೇಕಾದ ಲಭ್ಯತೆ, ಅನುಕೂಲ ಮತ್ತು ಪರಿಸ್ಥಿತಿಯನ್ನು ಪರಾಂಬರಿಸಿ ಲ್ಯಾಂಡಿಂಗ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಎಟಿಸಿ ತಕ್ಷಣವೇ ಸದರಿ ವಿಮಾನಕ್ಕೆ ಪ್ರಥಮ ಆದ್ಯತೆ ನೀಡುತ್ತದೆ.

ಇತರೆ ವಿಮಾನಗಳನ್ನು ಬೇರೆ ದಿಕ್ಕಿಗೆ ಕಳಿಸಿ ಅಥವಾ ಆಕಾಶದಲ್ಲಿ ಸುತ್ತು ಹಾಕುವಂತೆ ಸೂಚಿಸಿ, ಸಮಸ್ಯೆ ತಲೆದೋರಿದ ವಿಮಾನಕ್ಕೆ ಇಳಿಯಲು ದಾರಿ ತೆರವುಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಯಾಬಿನ್ ಸಿಬ್ಬಂದಿ ಪಾತ್ರ ನಿರ್ಣಾಯಕವಾದುದು. ಪ್ರಯಾಣಿಕರು ಆತಂಕಕ್ಕೀಡಾಗದಂತೆ, ಶಾಂತಿ ಯುತವಾಗಿ ಅವರನ್ನು ನಿಭಾಯಿಸುವುದು ದೊಡ್ಡ ಸವಾಲು. ಲ್ಯಾಂಡಿಂಗ್ ಆಗುವ ವಿಮಾನ ನಿಲ್ದಾಣದಲ್ಲಿ ಅಗ್ನಿ ಶಾಮಕ ವಾಹನ, ವೈದ್ಯಕೀಯ ತಂಡವನ್ನು ಮುನ್ನೆಚ್ಚರಿಕೆಗೆ ಸನ್ನದ್ಧವಾಗಿರು ವಂತೆ ಅಣಿಗೊಳಿಸುವುದು ಇನ್ನೊಂದು ಕ್ರಮ.

plane landing

ಎಲ್ಲ ತುರ್ತು ಭೂಸ್ಪರ್ಶಗಳೂ ಅಪಾಯದ ಸೂಚಕಗಳು ಎಂದೇನೂ ಭಾವಿಸಬೇಕಿಲ್ಲ. ಕೆಲವೊಮ್ಮೆ ತಕ್ಷಣದ ಅಪಾಯವಿಲ್ಲದಿದ್ದಾಗ ಮುನ್ನೆಚ್ಚರಿಕೆಯಾಗಿ ಲ್ಯಾಂಡ್ ಮಾಡುವುದೂ ಉಂಟು. ಎಂಜಿನ್ ಫೇಲ್ ಆದ ಸಂದರ್ಭದಲ್ಲಿ, ತಕ್ಷಣವೇ ಲ್ಯಾಂಡ್ ಮಾಡಬೇಕಾದ ಪರಿಸ್ಥಿತಿಯೂ ಉದ್ಭವಿಸ ಬಹುದು.

ಭೂಮಿ ಸಿಗದಿದ್ದರೆ, ಪೈಲಟ್ ನದಿ ಅಥವಾ ಸಮುದ್ರದ ಮೇಲೆ ವಿಮಾನ ಇಳಿಸಬೇಕಾದ ಸಂದರ್ಭವೂ ಬರಬಹುದು. ಎಮರ್ಜೆನ್ಸಿ ಲ್ಯಾಂಡಿಂಗ್ ಬಹಳ ಗಂಭೀರವಾದ ಹಾಗೂ ನಿಖರ ನಿರ್ಧಾರಗಳ ಅಗತ್ಯವಿರುವ ಪ್ರಕ್ರಿಯೆ. ಆದರೆ ಆಧುನಿಕ ವಿಮಾನಚಾಲನೆ ತಂತ್ರeನ, ಸೂಕ್ತ ತರಬೇತಿ ಪಡೆದ ಸಿಬ್ಬಂದಿ ಮತ್ತು ತುರ್ತು ಪ್ರೋಟೋಕಾಲ್‌ಗಳ ಕಾರಣದಿಂದ ಬಹುತೇಕ ಎಮರ್ಜೆನ್ಸಿ ಲ್ಯಾಂಡಿಂಗ್‌ಗಳು ಯಶಸ್ವಿಯಾಗುತ್ತವೆ.

Vishweshwar Bhat

Vishweshwar Bhat

Editor in Chief

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!