ಸಫಾರಿ ನಿರ್ಬಂಧ... ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ
ರಾಜ್ಯದ ಹೆಮ್ಮೆಯ ಅರಣ್ಯ ತಾಣಗಳನ್ನು ಪ್ರವಾಸಿಗರಿಂದ ಸಂಪೂರ್ಣವಾಗಿ ದೂರ ಇಡುವುದರಿಂದ ಸಂರಕ್ಷಣೆ ಸಾಧ್ಯವಿಲ್ಲ. ನಿಯಂತ್ರಿತ ಪ್ರವೇಶ, ವೈಜ್ಞಾನಿಕ ನಿರ್ಧಾರಗಳು ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವೇ ದೀರ್ಘಕಾಲೀನ ಪರಿಹಾರ.
ಬೇಸಗೆಯ ಸಮಯದಲ್ಲಿ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಚಟುವಟಿಕೆಗಳಿಂದ ಕಾಡ್ಗಿಚ್ಚು, ವನ್ಯಜೀವಿಗಳಿಗೆ ಅಪಾಯ ಎಂಬ ಕಾರಣ ನೀಡಿ ರಾಜ್ಯದ ಬಹುತೇಕ ಕಾಡು ಮೇಡುಗಳಲ್ಲಿ ನಿರ್ಬಂಧ ಹೇರಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮಕ್ಕೆ ತರ್ಕವಿದೆ. ಆದರೆ ವಿಚಿತ್ರವೆಂದರೆ, ಬೇಸಗೆಗೂ ಮುನ್ನವೇ ಡಿಸೆಂಬರ್ ತಿಂಗಳಿಂದಲೇ ಆರಂಭವಾಗುವ ಪ್ರವಾಸಿಗರ ಸೀಸನ್ ನಲ್ಲೇ — ಪ್ರವಾಸಿಗರ ಅತಿ ಪ್ರಿಯ ತಾಣಗಳಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಸುರಕ್ಷಿತ, ನಿಯಂತ್ರಿತ ಹಾಗೂ ಮೇಲ್ವಿಚಾರಣೆಯಲ್ಲಿರುವ ಅರಣ್ಯ ಸಫಾರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಎಷ್ಟರ ಮಟ್ಟಿಗೆ ವೈಜ್ಞಾನಿಕ? ಈ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಇದನ್ನೂ ಓದಿ: ಕೇಂದ್ರ ಅಯವ್ಯಯದಲ್ಲಿ ಜೈವಿಕ ಪ್ರವಾಸೋದ್ಯಮದಕ್ಕೆ ಸಿಕ್ಕಿದೆ ಹೆಚ್ಚಿನ ಅವಕಾಶ
ಇಲಿ ಜೀವಸಂಕಟದಲ್ಲಿ ಇದ್ದರೆ, ಬೆಕ್ಕಿಗೆ ಅದು ಆಟವಾದಂತೆ, ಈ ನಿರ್ಧಾರ ಪ್ರವಾಸೋದ್ಯಮದ ಮೇಲೆ ಅವಲಂಬಿತವಾದ ಸಾವಿರಾರು ಕುಟುಂಬಗಳಿಗೆ ಸಂಕಟ ತಂದಿದೆ ಆದರೆ ವ್ಯವಸ್ಥೆಗೆ ಮಾತ್ರ ಸಫಾರಿ ಬಂದ್ ಮಾಡುವುದೇ ಸುಲಭ ಪರಿಹಾರ ಎಂಬ ಭಾವನೆ ಇದೆ.
ಕರ್ನಾಟಕದ ಹೆಮ್ಮೆಯ ಈ ಪ್ರತಿಷ್ಠಿತ ಅರಣ್ಯ ತಾಣಗಳು ಕೇವಲ ಪ್ರವಾಸಿ ಆಕರ್ಷಣೆಗಳಲ್ಲ. ಅವು ಸಂರಕ್ಷಣೆ, ಸಂಶೋಧನೆ, ಸ್ಥಳೀಯ ಉದ್ಯೋಗ ಮತ್ತು ರಾಜ್ಯದ ಪರಿಸರ – ಆರ್ಥಿಕತೆಯ ಅವಿಭಾಜ್ಯ ಅಂಗಗಳು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಅರಣ್ಯ ಪ್ರವಾಸೋದ್ಯಮ ಗುರುತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಇಲ್ಲಿನ ನೀತಿಗಳಲ್ಲಿ ಈ ರೀತಿಯ ಮೌಢ್ಯ ಏಕೆ ಎಂಬ ಪ್ರಶ್ನೆ ಕೂಲಿಕಾರ್ಮಿಕರಿಂದ ಹಿಡಿದು ಪ್ರವಾಸೋದ್ಯಮ ಉದ್ಯಮಿಗಳವರೆಗೂ ಕಾಡುತ್ತಿದೆ.
ಇತಿಹಾಸ ಮತ್ತು ವ್ಯವಸ್ಥಿತ ಸಫಾರಿಯು ಅಂತಾರಾಷ್ಟ್ರೀಯ ಪ್ರವಾಸಿಗರ ಕೈಪಿಡಿಯಲ್ಲಿ ರಂಜಿತವಾದ ಸಫಾರಿಗೆ ಇತಿಹಾಸ ಇಲ್ಲವೆ?

ಬಂಡೀಪುರ: 1931ರಲ್ಲಿ ವೇಣುಗೋಪಾಲ ವನ್ಯಜೀವಿ ಉದ್ಯಾನವಾಗಿ ಆರಂಭವಾಗಿ, 1974ರಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿತವಾಯಿತು. 1970ರ ದಶಕದಿಂದಲೇ ಪರಿಸರ ಸ್ನೇಹಿ, ನಿಯಂತ್ರಿತ ಸಫಾರಿ ವ್ಯವಸ್ಥೆ ಇಲ್ಲಿ ರೂಪುಗೊಂಡಿದೆ.
ನಾಗರಹೊಳೆ: 1955ರಲ್ಲಿ ವನ್ಯಜೀವಿ ಅಭಯಾರಣ್ಯವಾಗಿ ಆರಂಭಗೊಂಡು, 1983ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ರೂಪುಗೊಂಡಿತು. 1970–80ರ ದಶಕದಿಂದ ವ್ಯವಸ್ಥಿತ ಸಫಾರಿ ಮೂಲಸೌಕರ್ಯ ಬೆಳೆಯಿತು.
ಸಫಾರಿ ನಿರ್ವಹಣೆ: ಕರ್ನಾಟಕ ಅರಣ್ಯ ಇಲಾಖೆ ಬಸ್ ಸಫಾರಿಗಳನ್ನು ನಡೆಸುತ್ತಿದ್ದು, Jungle Lodges and Resorts ಜೀಪ್ ಸಫಾರಿಗಳನ್ನು ನಡೆಸುತ್ತಿದೆ — ಇವೆಲ್ಲವೂ ಕಟ್ಟುನಿಟ್ಟಿನ ಮಾರ್ಗಸೂಚಿ, ಮೇಲ್ವಿಚಾರಣೆ ಮತ್ತು ಜವಾಬ್ದಾರಿಯ ವ್ಯವಸ್ಥೆಯಡಿ ಜರುಗುತ್ತಿವೆ.
ಪ್ರಶ್ನೆ ಏನೆಂದರೆ, ಅರಣ್ಯಗಳು, ಸಫಾರಿಗಳು, ಕಡಲ ತೀರಗಳು, ಸಾಹಸ ಕ್ರೀಡಾ ಪ್ರದೇಶಗಳು ಎಲ್ಲವೂ ಮಾನವ ಮತ್ತು ಪ್ರಾಣಿ ಸಮುದಾಯಗಳ ಸಹ ಅಸ್ತಿತ್ವದಲ್ಲೇ ಬೆಳೆಯುತ್ತವೆ. ಹೀಗಿರುವಾಗ ಸಂಪೂರ್ಣ ನಿರ್ಬಂಧವೇ ಪರಿಹಾರ ಅಲ್ಲ.
ಹಾಗಾದರೆ ವೈಜ್ಞಾನಿಕ ಮತ್ತು ಸಮತೋಲನದ ಪರ್ಯಾಯ ದಾರಿ ಏನು?
ಸೀಸನಲ್ ಕ್ಯಾಪಿಂಗ್: ದಿನಕ್ಕೆ ನಿರ್ದಿಷ್ಟ ಸಂಖ್ಯೆಯ ವಾಹನಗಳು ಮತ್ತು ಪ್ರವಾಸಿಗರಿಗೆ ಮಾತ್ರ ಅವಕಾಶ ಕೊಡಲಿ.
ಟೈಮ್-ಸ್ಲಾಟ್ ಸಫಾರಿ: ಮಧ್ಯಾಹ್ನದ ಗರಿಷ್ಠ ಅಪಾಯ ಸಮಯದಲ್ಲಿ ಸಫಾರಿಗಳಿಗೆ ವಿರಾಮ ನೀಡಲಿ.
ಫೈರ್-ರಿಸ್ಕ್ ಪ್ರೋಟೋಕಾಲ್: ಅಗ್ನಿ ಅಪಾಯ ಹೆಚ್ಚಿರುವ ದಿನಗಳಲ್ಲಿ ಮಾತ್ರ ತಾತ್ಕಾಲಿಕ ನಿರ್ಬಂಧ ಘೋಷಿಸಲಿ.
ಕಡ್ಡಾಯ ತರಬೇತಿ ಮತ್ತು ದಂಡ: ಚಾಲಕರು ಹಾಗೂ ಗೈಡ್ ಗಳಿಗೆ ಅಗ್ನಿ ಸುರಕ್ಷತಾ ತರಬೇತಿ; ಉಲ್ಲಂಘನೆಗೆ ಕಠಿಣ ದಂಡ ವಿಧಿಸುವಂತಾಗಲಿ.
ಸ್ಥಳೀಯ ಪಾಲುದಾರಿಕೆ: ಗ್ರಾಮಸ್ಥರನ್ನು ವಾಚ್-ಅಂಡ್-ವಾರ್ಡ್, ಫೈರ್-ಲೈನ್ ನಿರ್ವಹಣೆಯಲ್ಲಿ ಸಕ್ರಿಯವಾಗಿ ಸೇರಿಸಿಕೊಳ್ಳುವಂತಾಗಲಿ.
ರಾಜ್ಯದ ಹೆಮ್ಮೆಯ ಅರಣ್ಯ ತಾಣಗಳನ್ನು ಪ್ರವಾಸಿಗರಿಂದ ಸಂಪೂರ್ಣವಾಗಿ ದೂರ ಇಡುವುದರಿಂದ ಸಂರಕ್ಷಣೆ ಸಾಧ್ಯವಿಲ್ಲ. ನಿಯಂತ್ರಿತ ಪ್ರವೇಶ, ವೈಜ್ಞಾನಿಕ ನಿರ್ಧಾರಗಳು ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವೇ ದೀರ್ಘಕಾಲೀನ ಪರಿಹಾರ. ಸುರಕ್ಷಿತ ಸಫಾರಿಗಳನ್ನು ನಿಲ್ಲಿಸುವುದರ ಬದಲು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಸಫಾರಿ ನಡೆಸುವ ಯೋಜನೆ ರೂಪುಗೊಳ್ಳಲಿ.