Wednesday, January 21, 2026
Wednesday, January 21, 2026

ಹೊಸವರ್ಷ: ಕರ್ನಾಟಕ ಪ್ರವಾಸೋದ್ಯಮಕ್ಕೆ ನವಚೈತನ್ಯದ ಕಾಲ

ಮಾನವ–ಕಾಡುಪ್ರಾಣಿ ಸಂಘರ್ಷವು ರಾಜ್ಯದಲ್ಲಿ ಇನ್ನೂ ಗಂಭೀರ ಸವಾಲಾಗಿಯೇ ಉಳಿದಿದೆ. ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳು ಈ ಸಮಸ್ಯೆಯ ತೀವ್ರತೆಯನ್ನು ಹೆಚ್ಚು ಅನುಭವಿಸುತ್ತಿವೆ. ಅರಣ್ಯ ಮಾರ್ಗಗಳ ಕುಗ್ಗುವಿಕೆ, ಮಾನವ ಆಕ್ರಮಣ ಹಾಗೂ ವಾಸಸ್ಥಳಗಳಿಗಾಗಿ ಹೋರಾಟ ಪ್ರಮುಖ ಕಾರಣಗಳಾಗಿದ್ದು, ವನ್ಯಜೀವಿ ಕಾರಿಡಾರ್ ಪುನರುಜ್ಜೀವನ ಮತ್ತು ವೈಜ್ಞಾನಿಕ ಭೂಬಳಕೆ ನೀತಿ ಅತ್ಯಾವಶ್ಯಕವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

  • ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ.)

ಕ್ರಿಸ್‌ಮಸ್ ಹಾಗೂ ಹೊಸವರ್ಷ 2025–26 ಅವಧಿಯಲ್ಲಿ ಕರ್ನಾಟಕವು ಹಲವು ವರ್ಷಗಳ ಬಳಿಕ ಪ್ರವಾಸೋದ್ಯಮದ ನಿಜವಾದ ಹಬ್ಬದ ವಾತಾವರಣವನ್ನು ಅನುಭವಿಸಿತು. ದೇಶೀಯ ಪ್ರವಾಸಿಗರ ಭಾರೀ ಹರಿವು, ಹೊಟೇಲ್‌ಗಳ ಶೇಕಡಾ 100ರ ಸಮೀಪದ ಭರ್ತಿ ಪ್ರಮಾಣ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕಂಡ ಉತ್ಸಾಹ—ಇವೆಲ್ಲವೂ ಪೋಸ್ಟ್-ಪಾಂಡೆಮಿಕ್ ಪರಿಸ್ಥಿತಿ ಮತ್ತು ಇತ್ತೀಚಿನ ಆರ್ಥಿಕ–ಭೌಗೋಳಿಕ ಅನಿಶ್ಚಿತತೆಯ ಬಳಿಕ ಪ್ರವಾಸೋದ್ಯಮ ಪುನಶ್ಚೇತನದ ಸ್ಪಷ್ಟ ಸೂಚಕಗಳಾಗಿ ಹೊರಹೊಮ್ಮಿದವು.

ಇದನ್ನೂ ಓದಿ: ಪಶ್ಚಿಮ ಘಟ್ಟದಿಂದ ‘ಸೆವೆನ್ ಸಿಸ್ಟರ್ಸ್’ವರೆಗೆ ಪ್ರವಾಸೋದ್ಯಮ ಅಭಿವೃದ್ಧಿಯ ಧ್ಯೇಯವಿರಲಿ

ಪ್ರಮುಖ ಪ್ರವಾಸಿ ಕೇಂದ್ರಗಳು

ಮೈಸೂರು-ಕೊಡಗು: ಮೈಸೂರು ಅರಮನೆಯ ಭವ್ಯ ಬೆಳಕಿನ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊಡಗಿನ ಕಾಫಿ ಎಸ್ಟೇಟ್ ಪ್ರವಾಸ, ಜಲಪಾತಗಳು ಮತ್ತು ಹಬ್ಬದ ಸಂಭ್ರಮಗಳು ಪ್ರವಾಸಿಗರನ್ನು ಅಪಾರ ಸಂಖ್ಯೆಯಲ್ಲಿ ಸೆಳೆದವು. ಮೈಸೂರು, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಹೋಟೆಲ್‌ಗಳು ಶೇಕಡಾ 95–100ರಷ್ಟು ಭರ್ತಿಯಾಗಿದ್ದು, ಪ್ರವಾಸೋದ್ಯಮದ ತೀವ್ರತೆಯನ್ನು ಸ್ಪಷ್ಟಪಡಿಸಿತು.

ಕಾರವಾರ-ಗೋಕರ್ಣ: ಕರಾವಳಿ ವಲಯದಲ್ಲಿಯೂ ಗಮನಾರ್ಹ ಪ್ರವಾಸಿಗರ ಚಲನವಲನ ಕಂಡುಬಂದಿದ್ದು, ಕಡಲತೀರಗಳು ಹಾಗೂ ಧಾರ್ಮಿಕ–ವಿಶ್ರಾಂತಿ ಪ್ರವಾಸವು ಉತ್ತಮ ಪ್ರತಿಕ್ರಿಯೆ ಪಡೆದಿತು.

ಸಾರಿಗೆ ಹಾಗೂ ಬುಕ್ಕಿಂಗ್ ಸ್ಥಿತಿ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರವಾಸಿಗರ ಒತ್ತಡದಿಂದ ಸಂಚಾರ ದಟ್ಟಣೆ ಕಂಡುಬಂದಿತು. ಇದೇ ರೀತಿಯಾಗಿ ಬೆಂಗಳೂರಿನಿಂದ ದಾವಣಗೆರೆ ಮಾರ್ಗ ಹಾಗೂ ಕರಾವಳಿ ಜಿಲ್ಲೆಗಳಲ್ಲೂ ನಗರ ಕೇಂದ್ರದಿಂದ 10–15 ಕಿಲೋಮೀಟರ್ ದೂರದ ಪ್ರದೇಶಗಳಲ್ಲಿಯೂ ಹೊಟೇಲ್ ರೂಮ್‌ಗಳು ಮುಂಗಡವಾಗಿ ಬುಕ್ ಆಗಿದ್ದವು. ಆನ್‌ಲೈನ್ ವೇದಿಕೆಗಳು ಮತ್ತು ಸ್ಥಳೀಯ ಪ್ರವಾಸಿ ಸಂಸ್ಥೆಗಳ ಮಾಹಿತಿಯಂತೆ, ಮೈಸೂರು–ಕೊಡಗು–ಮಲೆನಾಡು–ಊಟಿ, ಕರಾವಳಿ ಮತ್ತು ಪರ್ವತ ವಲಯಗಳ ಪ್ಯಾಕೇಜ್‌ಗಳಿಗೆ ಹಿಂದಿನ ವರ್ಷದ ಹೋಲಿಕೆಯಲ್ಲಿ 25–30% ಹೆಚ್ಚುವರಿ ಬೇಡಿಕೆ ದಾಖಲಾಗಿದೆ.

ವನ್ಯಜೀವಿ ಪ್ರವಾಸೋದ್ಯಮದ ಪರಿಣಾಮ: ಬಂಡೀಪುರ ನ್ಯಾಷನಲ್‌ ಪಾರ್ಕ್‌ ಹಾಗೂ ನಾಗರಹೊಳೆ ನ್ಯಾಷನಲ್‌ ಪಾರ್ಕ್‌ಗಳಲ್ಲಿ ತಾತ್ಕಾಲಿಕ ಸಫಾರಿ ನಿರ್ಬಂಧ ಜಾರಿಯಾದ ಪರಿಣಾಮ, ಕೆಲವು ಪ್ರವಾಸಿಗರು ತಮಿಳುನಾಡು, ಮಧ್ಯಪ್ರದೇಶ, ಒಡಿಶಾ, ಕೇರಳ ಸೇರಿದಂತೆ ಇತರ ರಾಜ್ಯಗಳು ಅಥವಾ ವಿದೇಶಿ ತಾಣಗಳತ್ತ ಮುಖ ಮಾಡಿದರು. ಆದರೂ ಈ ಕೊರತೆಯನ್ನು ಕರಾವಳಿ ಮತ್ತು ಬೆಟ್ಟ ಪ್ರದೇಶಗಳ ಪ್ರವಾಸ ಭಾಗಶಃ ಪೂರೈಸಿತು.

Wildlife tourism

ಇದರ ಜತೆಗೆ, ಮಾನವ–ಕಾಡುಪ್ರಾಣಿ ಸಂಘರ್ಷವು ರಾಜ್ಯದಲ್ಲಿ ಇನ್ನೂ ಗಂಭೀರ ಸವಾಲಾಗಿಯೇ ಉಳಿದಿದೆ. ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳು ಈ ಸಮಸ್ಯೆಯ ತೀವ್ರತೆಯನ್ನು ಹೆಚ್ಚು ಅನುಭವಿಸುತ್ತಿವೆ. ಅರಣ್ಯ ಮಾರ್ಗಗಳ ಕುಗ್ಗುವಿಕೆ, ಮಾನವ ಆಕ್ರಮಣ ಹಾಗೂ ವಾಸಸ್ಥಳಗಳಿಗಾಗಿ ಹೋರಾಟ ಪ್ರಮುಖ ಕಾರಣಗಳಾಗಿದ್ದು, ವನ್ಯಜೀವಿ ಕಾರಿಡಾರ್ ಪುನರುಜ್ಜೀವನ ಮತ್ತು ವೈಜ್ಞಾನಿಕ ಭೂಬಳಕೆ ನೀತಿ ಅತ್ಯಾವಶ್ಯಕವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರವಾಸೋದ್ಯಮ ವಿಸ್ತಾರದ ಆತುರದಲ್ಲಿ ಕಾಡುಪ್ರಾಣಿಗಳು, ಪಕ್ಷಿಗಳು ಹಾಗೂ ಸಹಜ ವಾಸಸ್ಥಾನಗಳಿಗೆ ಧಕ್ಕೆ ಆಗದಂತೆ ಜವಾಬ್ದಾರಿಯುತ ಪ್ರವಾಸೋದ್ಯಮ ಅನಿವಾರ್ಯ.

ಸರಕಾರದ ಪಾತ್ರ : ರಾಜ್ಯ ಸರಕಾರವು ಮುನ್ನೆಚ್ಚರಿಕಾ ಭದ್ರತಾ ಕ್ರಮಗಳು, ಪ್ರವಾಸಿಗರ ಸುರಕ್ಷತಾ ಮಾರ್ಗಸೂಚಿಗಳು ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ಜಾರಿಗೆ ತಂದ ಪರಿಣಾಮ, ಪಾರಂಪರಿಕ ಕೋಟೆ–ಕೊತ್ತಲುಗಳು, ದೇವಾಲಯಗಳು, ಹಿನ್ನೀರಿನ ಹಾಗೂ ಖಾಸಗಿ ಪ್ರವಾಸಿ ತಾಣಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಪ್ರವಾಸಿಗಳನ್ನು ಸ್ವೀಕರಿಸಲು ಸಾಧ್ಯವಾಯಿತು.

ಒಟ್ಟಾರೆಯಾಗಿ ಕ್ರಿಸ್‌ಮಸ್–ಹೊಸವರ್ಷ 2025–26 ಅವಧಿ ಕರ್ನಾಟಕ ಪ್ರವಾಸೋದ್ಯಮಕ್ಕೆ ನಂಬಿಕೆ ಮತ್ತು ಚೈತನ್ಯ ಮರಳಿಸಿದ ಮಹತ್ವದ ಕಾಲಘಟ್ಟವಾಗಿದೆ. ಉತ್ತಮ ಆಡಳಿತ, ಸುರಕ್ಷತೆಗೆ ನೀಡಿದ ಮಾರ್ಗಸೂಚಿಗಳು, ಮಾರುಕಟ್ಟೆ ಪ್ರತಿಕ್ರಿಯೆ ಮತ್ತು ಪ್ರವಾಸಿಗರ ವಿಶ್ವಾಸ—ಇವುಗಳ ಸಮನ್ವಯದಿಂದ ರಾಜ್ಯವು ಮುಂದಿನ ದಿನಗಳಲ್ಲಿ ಗುಣಮಟ್ಟದ, ಸುರಕ್ಷಿತ ಮತ್ತು ಸತತ ಪ್ರವಾಸೋದ್ಯಮ ಗಮ್ಯಸ್ಥಾನವಾಗಿ ಇನ್ನಷ್ಟು ಬಲಗೊಳ್ಳುವ ಸಾಧ್ಯತೆಯನ್ನು ಈ ಅವಧಿ ಸ್ಪಷ್ಟಪಡಿಸಿದೆ. ಇದರೊಂದಿಗೆ ಪ್ರವಾಸೋದ್ಯಮ ಹಾಗೂ ಅತಿಥ್ಯ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಸಬಲೀಕರಣ ಮತ್ತು ಹೂಡಿಕೆ ಪ್ರೋತ್ಸಾಹಕ್ಕೆ ಹೊಸ ವೇಗ ಸಿಗುವ ನಿರೀಕ್ಷೆಯಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?