Thursday, June 12, 2025
Thursday, June 12, 2025

ʻಕರ್ನಾಟಕದ ಕೊಲ್ಹಾಪುರʼ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇಗುಲ

ನಂಬಿದ ಭಕ್ತರಿಗೆ ಬೇಡಿದ ವರಗಳನ್ನು ಕರುಣಿಸುವ ತುಮಕೂರಿನ ಕೊರಟಗೆರೆಯ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯ ದೇಶೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಜನಪ್ರಿಯ ಕ್ಷೇತ್ರವೆನ್ನುವ ಹಿರಿಮೆಗೆ ಗೊರವನಹಳ್ಳಿ ಪಾತ್ರವಾಗಿದೆ.

ಧಾರ್ಮಿಕ ಪ್ರವಾಸ ಕೈಗೊಳ್ಳಬೇಕೆನ್ನುವವರಿಗೆ ಬೆಂಗಳೂರಿನ ಆಸುಪಾಸಿನಲ್ಲಿ ಅನೇಕ ದೇವಾಲಯಗಳಿದೆ. ಅದರಲ್ಲೂ ಜನಪ್ರಿಯವಾದ ಲಕ್ಷಿ ದೇವಾಲಯಗಳು ಹಲವು ದೇಶೀಯ ಮಟ್ಟದಲ್ಲೂ ಗಮನಸೆಳೆದಿವೆ. ಅಂಥ ದೇವಾಲಯಗಳ ಪೈಕಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನವು ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ. ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಜನಪ್ರಿಯ ಕ್ಷೇತ್ರವೆನ್ನುವ ಹಿರಿಮೆಗೆ ಗೊರವನಹಳ್ಳಿ ಪಾತ್ರವಾಗಿದ್ದು, ಕರ್ನಾಟಕದ ಕೊಲ್ಹಾಪುರ ಎಂದೇ ಖ್ಯಾತವಾಗಿದೆ. ಭಕ್ತಿಯಿಂದ ಬೇಡುವ ಭಕ್ತರನ್ನು ಕೈಹಿಡಿದು ನಡೆಸುವ ದೇವಿ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ

ಮಹಾಲಕ್ಷ್ಮಿ ಗೊರವನಹಳ್ಳಿಯಲ್ಲಿ ಬಂದು ನೆಲೆಸಿದ್ದರ ಹಿಂದೆ ಒಂದು ಇತಿಹಾಸವಿದೆ. ತುಮಕೂರಿನ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯಲ್ಲಿ ಅಬ್ಬಯ್ಯ ಅನ್ನುವವರಿಗೆ ಅಲ್ಲಿನ ಕೊಳದಿಂದ ಒಂದು ಹೆಣ್ಣಿನ ಅಶರೀರವಾಣಿ ಕೇಳಿಸಿತ್ತು. ನನ್ನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗು ಎಂಬ ಆ ಅಶರೀರ ವಾಣಿಯ ಮಾತಿನಂತೆ, ಅಬ್ಬಯ್ಯ ಲಕ್ಷ್ಮಿಯನ್ನು ಮನೆಗೆ ಕರೆದುಕೊಂಡಳು. ಅಂದಿನಿಂದ ಗೊರವನಹಳ್ಳಿ ಪವಿತ್ರ ಪುಣ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು.

IMG_4753

1925ರ ನಂತರದಲ್ಲಿ ಮಹಾಲಕ್ಷ್ಮಿಯ ದೇಗುಲ ಜೀರ್ಣೋದ್ಧಾರವಾಯಿತು. ಗ್ರಾಮಸ್ಥರ ಮನವೊಲಿಸಿ ಕಮಲಮ್ಮ ಎಂಬವರು ದೇಗುಲದ ನಿರ್ಮಾಣ ಮಾಡಿದರು. ಇದರಿಂದಾಗಿ ಮಹಾಲಕ್ಷ್ಮಿ ಸಂತುಷ್ಠಳಾದಳು. ಬೇಡಿ ಬಂದ ಲಕ್ಷಾಂತರ ಮಂದಿ ಭಕ್ತರನ್ನು ಅನುಗ್ರಹಿಸುವ ಮೂಲಕ, ಎಲ್ಲೆಡೆ ಮನೆ ಮಾತಾದಳು. ಕಮಲಮ್ಮನವರ ಮರಣಾ ನಂತರ ಅವರ ಪುತ್ರರಾದ ಪ್ರಸನ್ನರವರು ಆಡಳಿತ ನೋಡಿಕೊಳ್ಳುತ್ತಿದ್ದಾರೆ.

ದೇಗುಲದ ವಾಸ್ತುಶಿಲ್ಪ

1900ರ ದಶಕದ ವಿಶಿಷ್ಟವಾದ ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉತ್ತಮ ಉದಾಹರಣೆಯಾಗಿದೆ. ದೇವಾಲಯವು ದೊಡ್ಡದಾದ, ಬಹುವರ್ಣದ ಗೋಪುರವನ್ನು ಹೊಂದಿದೆ ಮತ್ತು ಎರಡೂ ಬದಿಗಳಲ್ಲಿ ಸಣ್ಣ ಕಮಾನುಗಳಿದ್ದು, ದೇವಾಲಯದ ಎರಡೂ ಬದಿಯಲ್ಲಿ ದೊಡ್ಡ ವರಾಂಡವಿದೆ. ದೇಗುಲದ ಅಧಿದೇವತೆ ಶ್ರೀ ಮಹಾಲಕ್ಷ್ಮಿ ವಿಗ್ರಹವು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಗಿದೆ. ಶ್ರೀ ನಾಗದೇವತೆ, ಶ್ರೀ ಮಾರಿಕಾಂಬಾ ದೇವತೆ ದೇಗುಲ ಕೂಡ ಇಲ್ಲಿದೆ.

vk-facebook-live-of-goravanahalli-mahalakshmi-temple-59905494

ದೇಗುಲ ಭೇಟಿ

ಈ ದೇವಸ್ಥಾನವು ವರ್ಷದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಆದರೆ ಸೂರ್ಯ ಗ್ರಹಣ- ಚಂದ್ರ ಗ್ರಹಣ ಸಂದರ್ಭದಲ್ಲಿ ಮಾತ್ರ ಇಲ್ಲಿ ಬಾಗಿಲು ಹಾಕಲಾಗುತ್ತದೆ. ಉಳಿದಂತೆ, ಎಲ್ಲ ದಿನದಲ್ಲು ದೇಗುಲ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಮಂಗಳವಾರ ಮತ್ತು ಶುಕ್ರವಾರ ಶ್ರೀ ಮಹಾಲಕ್ಷ್ಮಿಗೆ ವಿಶೇಷ ದಿನ ಎಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸ (ನವೆಂಬರ್ ಕೊನೆ – ಡಿಸೆಂಬರ್ ತಿಂಗಳ ಮೊದಲ ವಾರ) ದಲ್ಲಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಜರಗುತ್ತದೆ.

ಗೊರವನಹಳ್ಳಿ ಸುತ್ತಲಿನ ಪ್ರವಾಸಿತಾಣಗಳು

ಓಣಿ ನಾಗಪ್ಪ ದೇವಾಲಯ ಮತ್ತು ರೇಣುಕಾಂಬ ದೇವಾಲಯದಂತಹ ಹಲವಾರು ದೇವಾಲಯಗಳು ಶ್ರೀ ಮಹಾಲಕ್ಷ್ಮಿ ದೇವಾಲಯದ ಸುತ್ತ ನಿರ್ಮಾಣಗೊಂಡಿವೆ. ಅಲ್ಲದೆ ಸುವರ್ಣಮುಖಿ ನದಿಗೆ ನಿರ್ಮಿಸಲಾದ ತೀತ ಜಲಾಶಯ ಇಲ್ಲಿಗೆ ಸಮೀಪದಲ್ಲಿದೆ. ಇನ್ನ ಗೊರವನಹಳ್ಳಿ ಯಿಂದ ಸುಮಾರು 300 ಕಿಲೋಮೀಟರ್‌ ದೂರದಲ್ಲಿ ಸುಂದರವಾದ ಬಂಕಾಪುರ ನವಿಲು ಅಭಯಾರಣ್ಯವಿದೆ. ಈ ಅಭಯಾರಣ್ಯವು 139 ಎಕರೆಗಳಲ್ಲಿ ಹರಡಿ ನಿಂತಿದೆ. ಬಂಕಾಪುರ ಕೋಟೆಯ ಅವಶೇಷಗಳು, ಸಾವಿರಾರು ನವಿಲುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಗೊರವನಹಳ್ಳಿಗೆ ಹೋಗುವುದು ಹೇಗೆ ?

ಗೊರವನಹಳ್ಳಿ ಈಗ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ ಗೊರವನಹಳ್ಳಿಗೆ ನೇರವಾಗಿ ಬಸ್ಸಿದೆ. ತುಮಕೂರಿಗೆ ಹೋಗಿ ಅಲ್ಲಿಂದ ಕೊರಟಗೆರೆ ಮೂಲಕವೂ ತೆರಳಬಹುದು. ಗೊರವನಹಳ್ಳಿಯ ವಸತಿಗೃಹಗಳಲ್ಲಿ ವಸತಿ ಸೌಕರ್ಯವೂ ಇದೆ. ಜೊತೆಗೆ, ರೈಲು ಅಥವಾ ವಿಮಾನದ ಮೂಲಕ ಕೂಡ ಈ ಕ್ಷೇತ್ರವನ್ನು ಸುಲಭವಾಗಿ ತಲುಪಬಹುದು.

ವಿಮಾನ ಸಂಪರ್ಕ : ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತರಾಷ್ಟ್ರೀಯ ಹೊಂದಿದೆ. ಇಲ್ಲಿಂದ ದೇವಾಲಯಕ್ಕೆ ಕೇವಲ 80 ಕಿ.ಮೀ ದೂರ.

ರೈಲು ಸಂಪರ್ಕ: ಗೊರವನಹಳ್ಳಿಗೆ ಹತ್ತಿರದ ರೈಲು ನಿಲ್ದಾಣ ತುಮಕೂರು ನಗರ ರೈಲ್ವೆ ನಿಲ್ದಾಣ. ಇಲ್ಲಿಂದ, ದೇವಸ್ಥಾನಕ್ಕೆ ಕೇವಲ 36 ಕಿಮೀ ದೂರ. ಬೆಂಗಳೂರು- ತುಮಕೂರು, ಹುಬ್ಬಳ್ಳಿ- ತುಮಕೂರು ನಡುವೆ, ದಿನ ಹತ್ತಾರು ರೈಲುಗಳು ಸಂಚರಿಸುತ್ತವೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ