“ಸಿಂಹಾನ ಫೊಟೋದಲ್ಲಿ ನೋಡಿರ್ತೀಯ, ಸಿನ್ಮಾದಲ್ಲಿ ನೋಡಿರ್ತೀಯ, ಟೀವಿಯಲ್ಲಿ ನೋಡಿರ್ತೀಯ ಅಷ್ಟೇ ಯಾಕೆ ಜೂ಼ನಲ್ಲೂ ನೋಡಿರ್ತೀಯ. ರಾಜಗಾಂಭೀರ್ಯದಿಂದ ಯಾವಾಗ್ಲಾದ್ರೂ ಕಾಡಲ್ಲಿ ಓಡಾಡೋದು ನೋಡಿದೀಯಾ? ಒಂಟಿಯಾಗಿ ರೋಷದಿಂದ ಬೇಟೆಯಾಡೋದು ಯಾವಾಗಾದ್ರೂ ನೋಡಿದೀಯಾ?” ಕೆಂಪೇಗೌಡ ಸಿನಿಮಾದಲ್ಲಿ ಖಾಕಿ ಹಾಕಿರೋ ಸುದೀಪ್, ಆರುಮುಗಂ ಪಾತ್ರಧಾರಿ ಎದುರು ಹೊಡೆಯೋ ಡೈಲಾಗನ್ನು ಇಲ್ಲೊಬ್ಬ ಪೊಲೀಸ್ ಆಫೀಸರ್ ಬಹಳ ಸೀರಿಯಸ್ಸಾಗಿ ತೆಗೆದುಕೊಂಡುಬಿಟ್ಟಿದಾರೆ. ಖಾಕಿ ಹಾಕಿರೋ ಮಾತ್ರಕ್ಕೆ ತಮ್ಮನ್ನು ತಾವು ಸಿಂಹ ಅಂದ್ಕೊಂಡುಬಿಟ್ಟಿರಬೇಕು.

ತಮ್ಮ ಫ್ಯಾಮಿಲಿಯನ್ನು ಲಯನ್ಸ್ ಕ್ಲಬ್ ಅಂದ್ಕೊಂಡಿರಬೇಕು. ಅದಕ್ಕೇ ಸೀದಾ ಬಂಡೀಪುರ ಅಭಯಾರಣ್ಯದೊಳಗೆ ಹೀರೋ ಥರ ಎಂಟ್ರಿ ಕೊಟ್ಟುಬಿಟ್ಟಿದ್ದಾರೆ. ಬಂಡೀಪುರಕ್ಕೆ ಹೋಗೋದು ತಪ್ಪಾ ಅಂತ ಕನ್ ಫ್ಯೂಸ್ ಆಗಬೇಡಿ. ಈವಣ್ಣ ಹೋಗಿರೋದು ನಿರ್ಬಂಧಿತ ಅರಣ್ಯ ಪ್ರದೇಶಕ್ಕೆ. ತಾನೊಬ್ಬನೇ ಅಲ್ಲ. ತನ್ನ ಇಡೀ ಫ್ಯಾಮಿಲಿ ಜತೆ ಹೋಗಿದ್ದಾನೆ. ಅದರಲ್ಲೂ ಖಾಸಗಿ ಓಪನ್ ಜೀಪ್ ನಲ್ಲಿ. ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾಗಿರೋದು, ಸಾಹೇಬ್ರು ಖಾಕಿ ಖದರ್ರಲ್ಲೇ ಹೋಗಿದಾರೆ. ಸಿಂಗಂ ರೇಂಜಲ್ಲಿ ಫೊಟೋಶೂಟು ರೀಲ್ಸು ಮಾಡೋದು ಬೇಡ್ವಾ?

Untitled design (2)

ಬಹುಶಃ ಸಿಂಹವೋ ಹುಲಿಯೋ ಎದುರು ಬಂದರೆ, ಖಾಕಿ ಹಾಕಿರೋ ಸಿಂಹ ಕಣೋ, ಪಂಜಾ ಎತ್ತಿ ಕೊಟ್ಟಾ ಅಂದ್ರೆ ಒಂದೂವರೆ ಟನ್ ಅಂತ ಬಾರಿಸಿಬಿಡ್ತಿದ್ರೋ ಏನೋ.. ಆದರೆ ಆ ಪ್ರಾಣಿಗಳ ಪುಣ್ಯ, ಈತನೆದುರು ಬಂದಿಲ್ಲ. ಆದರೆ ಈಗ ಈತನ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದ್ದ ಹಾಗೆ ಈತನಿಗೆ ವೈರಲ್ ಫೀವರ್ ಶುರುವಾಗಿದೆ. ನೆಟ್ಟಿಗರು ಇವನ ಖಾಕಿ ಕಳಚಬೇಕು, ಈ ಸಿಂಹವನ್ನು ಕಾನೂನಿನ ಬೋನೊಳಗೆ ಹಾಕಿ ತದುಕಬೇಕು ಅಂತೆಲ್ಲ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನಸಾಮಾನ್ಯರಿಗೊಂದು ರೂಲ್ಸು ಪೊಲೀಸರಿಗೊಂದು ರೂಲ್ಸಾ? ನಮಗೂ ರಿಸ್ಟ್ರಿಕ್ಟೆಡ್ ಫಾರೆಸ್ಟ್ ಒಳಗೆ ಹೋಗಲು ಪರ್ಮಿಷನ್ ಕೊಡ್ತೀರಾ? ಫೊಟೋಶೂಟ್ ಮಾಡೋಕೆ ಬಿಡ್ತೀರಾ ಅಂತ ಕೇಳ್ತಿದ್ದಾರೆ. ತಮ್ಮ ಸಿಂಗಂ ರೇಂಜ್ ತೋರಿಸೋಕೆ ಹೋಗಿ ಗುಂಡ್ಲುಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಪಾಡು ಈಗ ಗ್ರಾಮಸಿಂಹದ ಪಾಡಾಗಿದೆ. ಕಾನೂನು ಕಾಪಾಡುವವರೇ ಕಾನೂನು ಉಲ್ಲಂಘಿಸಿದರೆ, ತಾವು ಪೊಲೀಸರು ಏನು ಬೇಕಾದರೂ ಮಾಡಬಹುದು ಎಂದೆಲ್ಲ ಭಾವಿಸಿದ್ದರೆ ಸೋಷಿಯಲ್ ಮೀಡಿಯಾ ಯುಗದಲ್ಲಿ ಅದು ಅಸಾಧ್ಯ. ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಪೊಲೀಸರಿಗೇ ಹೇಳಿಕೊಡಬೇಕಾಗಿ ಬಂದಿರುವುದು ಬೇಸರದ ಸಂಗತಿ.