ಕೇರಳದ ಪ್ರವಾಸೋದ್ಯಮ ಎಷ್ಟು ಬಲಿಷ್ಟವಾಗಿ ಬೆಳೆದು ನಿಂತಿದೆ ಅಂದರೆ, ಆ ಸೈಜಿನ ಇನ್ಯಾವುದೇ ಚಿಕ್ಕ ರಾಜ್ಯವಾಗಿದ್ದರೂ ಪ್ರವಾಸಿಗರ ಸಂಖ್ಯೆ ನಿಯಂತ್ರಿಸುವ ಬಗ್ಗೆ ಯೋಚಿಸಿರುತ್ತಿತ್ತು. ಆದರೆ ಕೇರಳ ಪ್ರವಾಸೋದ್ಯಮದಲ್ಲೇ ಅತಿ ದೊಡ್ಡ ಆದಾಯವನ್ನು ಕಂಡುಕೊಂಡಿದೆ. ಹೀಗಾಗಿ ಯಾವತ್ತಿಗೂ ಮನೆಗೆ ಬರುತ್ತಿರುವ ಲಕ್ಷ್ಮಿಯನ್ನು ಬೇಡ ಹೋಗೆಂದು ಬಾಗಿಲು ಹಾಕಿಕೊಳ್ಳುತ್ತಿಲ್ಲ. ಮಳೆ ಎಂಬುದು ವಿಪರೀತಕ್ಕೆ ಹೋದರೆ ಮಾತ್ರ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಒಂದೆರಡು ದಿನಗಳ ತಾತ್ಕಾಲಿಕ ನಿರ್ಬಂಧ ಒಡ್ಡುತ್ತದೆಯೇ ಹೊರತು, ಮಿಕ್ಕಂತೆ ಪ್ರವಾಸಿಗರನ್ನು ಸ್ವಾಗತಿಸುತ್ತಲೇ ಇರುತ್ತದೆ. ಜತೆಗೆ ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ, ಕೇರಳ ಪ್ರವಾಸೋದ್ಯಮದ ಹಸಿವು ಎಂದಿಗೂ ನೀಗುವುದಿಲ್ಲ. ಎಷ್ಟೇ ಸಮೃದ್ಧವಾಗಿದ್ದರೂ ಬೇರೇನು ಮಾಡಬಹುದು ಎಂದು ಹೊಸತನದ ಕಡೆಗೆ ತುಡಿಯುತ್ತಲೇ ಇರುತ್ತದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಅಂದರೆ ಈಗ ಆಯೋಜನೆಗೊಂಡಿರುವ ಯಾನಂ 2025.

Varkala

ಯಾನಂ 2025

ಕೇರಳ ಪ್ರವಾಸೋದ್ಯಮ ಒಂದು ವಿಶಿಷ್ಟವಾದ ಈವೆಂಟ್ ಆಯೋಜಿಸಿದೆ. ವರ್ಕಳದಲ್ಲಿ ಅಕ್ಟೋಬರ್ ಹದಿನೇಳರಿಂದ ಹತ್ತೊಂಬತ್ತರ ವರೆಗೆ ಮೂರು ದಿನಗಳ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ. ಇದೊಂದು ರೀತಿಯಲ್ಲಿ ಲಿಟ್ ಫೆಸ್ಟ್ ಕೂಡ ಹೌದು. ಸಾಹಿತ್ಯ ಮತ್ತು ಪ್ರವಾಸದ ಸಮ್ಮಿಲನವೂ ಹೌದು. ಬರಹಗಾರರು, ಕಲಾವಿದರು, ಸಿನಿಮಾಕರ್ಮಿಗಳು, ಸಾಹಸಿ ಪ್ರವಾಸಿಗರು, ವೆಲ್ ನೆಸ್ ಇಂಡಸ್ಟ್ರಿಯವರು, ಫೊಟೋಗ್ರಫರ್ಸ್, ವಿಡಿಯೋಗ್ರಫರ್ಸ್, ಅಯ್ದ ಸೋಷಿಯಲ್ ಮೀಡಿಯಾ ಪ್ರಭಾವಿಗಳು, ಪತ್ರಕರ್ತರು ಹೀಗೆ ಎಲ್ಲರನ್ನೂಒಳಗೊಂಡ ಸಮ್ಮೇಳನ. ಮೇಲ್ನೋಟಕ್ಕೆ ಸಾಹಿತ್ಯೋತ್ಸವ ಅನಿಸುವ ಇದರ ಕೇಂದ್ರಬಿಂದು ಮಾತ್ರ ಪ್ರವಾಸೋದ್ಯಮ. ಸಿನಿಮಾದವರನ್ನು, ಸಾಹಿತಿಗಳನ್ನು, ಮಾಧ್ಯಮಗಳನ್ನೂ ಪ್ರವಾಸೋದ್ಯಮದ ಪರಿಧಿಗೆ ಎಳೆದುಕೊಂಡು ವ್ಯಾಪ್ತಿ ಹಿಗ್ಗಿಸಿಕೊಳ್ಳುವ ಐಡಿಯಾ ಇದು. ಮೆಚ್ಚದೇ ಇರಲು ಸಾಧ್ಯವೇ? ಕೇರಳ ರಾಜ್ಯದ ಪ್ರವಾಸೋದ್ಯಮದ ಸಾಧ್ಯತೆಗಳ ಕುರಿತಾಗಿ ಸಾಧ್ಯಂತ ಚರ್ಚೆ ಮತ್ತು ಸಂವಾದಗಳನ್ನು ನಡೆಸಿ ಎಲ್ಲ ವಿಭಾಗಗಳಿಂದ ಇನ್ ಪುಟ್ ಪಡೆಯುವುದು, ಜತೆಗೆ ಅವರ ಮೂಲಕ ಪ್ರವಾಸೋದ್ಯಮಕ್ಕೆ ಪ್ರಚಾರ ಗಳಿಸುವುದು ಪ್ರಮುಖ ಉದ್ದೇಶ.

Litrature Festival

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಬೂಕರ್ ಅವಾರ್ಡೀ ಶಿಹಾನ್, ಗ್ರಾಮೀ ವಿಜೇಟ ಪ್ರಕಾಶ್ ಸೊಂಟಕ್, ಪತ್ರಕರ್ತೆ ಪಲ್ಲವಿ ಐಯ್ಯರ್, ಶ್ರೀಲಂಕಾದ ಫಿಡೆಲ್ ಫರ್ನಾಂಡೋ, ಪ್ರವಾಸಿ ಬರಹಗಾರ್ತಿ ನಥಾಲಿ, ಬೈಕರ್ ಪಿಯಾ ಬಹದೂರ್, ವ್ಲಾಗರ್ ಕೃತಿಕಾ ಗೋಯಲ್ ಹೀಗೆ ಎಲ್ಲರನ್ನೂ ಆಹ್ವಾನಿಸಿ ಚಿಂತನ ಮಂಥನ ಪ್ಲಾನ್ ಮಾಡಲಾಗಿದೆ. ಚರ್ಚೆಗಳು ಏನೇ ನಡೆದರೂ ಅದರ ಮೂಲ ಉದ್ದೇಶ ಮಾತ್ರ ಕೇರಳ ಪ್ರವಾಸೋದ್ಯಮವನ್ನು ದೇಶದ ಮತ್ತು ವಿಶ್ವದ ನಕ್ಷೆಯಲ್ಲಿ ಪ್ರಕಾಶಮಾನವಾಗಿ ಕಾಣುವಂತೆ ಮಾಡುವುದು. ಯಾನಂ 2025 ಉತ್ಸವದ ಬಗ್ಗೆ ಪ್ರಸ್ತಾಪಿಸುತ್ತಾ ಇರೋದಕ್ಕೆ ಬೇರೆ ಉದ್ದೇಶಗಳಿಲ್ಲ. ಕರ್ನಾಟಕದ ಪ್ರವಾಸೋದ್ಯಮ ಮತ್ತು ಸರಕಾರ ಒಮ್ಮೆ ಅತ್ತ ತಿರುಗಿ ನೋಡಲಿ ಎಂದು ಗಮನ ಸೆಳೆಯುವುದೊಂದೇ. ಇಲ್ಲಿ ಇಂಥ ಒಂದು ಫೆಸ್ಟ್ ಆಯೋಜಿಸಲು ಸಾಧ್ಯವಿಲ್ಲವೇ? ತಿಂಗಳಿಗೊಂದು ಸಾಹಿತ್ಯ ಮೇಳ ನಡೆಯುವ ಕರ್ನಾಟಕದಲ್ಲಿ ಒಂದು ಟೂರಿಸಂ ಲಿಟ್ ಫೆಸ್ಟ್ ಯಾಕಾಗಬಾರದು? ಇದು ಗೇಮ್ ಚೇಂಜರ್ ಆಗುವುದರಲ್ಲಿ ಸಂಶಯವೇ ಇಲ್ಲ. ಸರಕಾರ ಮನಸ್ಸು ಮಾಡಲಿ.