Thursday, June 12, 2025
Thursday, June 12, 2025

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಪ್ರವಾಸ ಕಥನ ಬರೆಯೋದು ನನಗೆ ಚಿಕ್ಕಂದಿನಿಂದ ಆಸಕ್ತಿಕರ ವಿಚಾರ.. ಶಾಲೆಯಿಂದ ಪ್ರವಾಸಕ್ಕೆ ಹೋಗಿ ಬಂದಾಗ ನನ್ನ ಅನುಭವಗಳನ್ನು ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಆದರೆ ಪ್ರಕಟ ಮಾಡಿಲ್ಲ..ಮುಂದಿನ ದಿನಗಳಲ್ಲಿ ಪ್ರವಾಸ ಕಥನ ಬರೆಯುವ ಬಗ್ಗೆ ಯೋಚನೆ ಮಾಡಿಲ್ಲ. ಈಗ ಪ್ರವಾಸದ ಅನುಭವ ಗಾಢವಾಗಿ, ಬರೆಯಬೇಕು ಅನ್ನಿಸಿದರೆ ಮಾತ್ರ ಪ್ರವಾಸ ಕಥನ ಬರೆಯುತ್ತೇನೆ.

ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿಗಳ ಮೂಲಕ ಮನೆಮಾತಾಗಿ, ಹಿರಿತೆರೆಯಲ್ಲೂ ನಟನೆ, ಸದ್ಯ ನಿರ್ದೇಶನದ ಮೂಲಕವೂ ಸುದ್ದಿಯಲ್ಲಿರುವ ರಂಜನಿ ರಾಘವನ್ ಗೆ ಪ್ರವಾಸವೆಂದರೆ ಅಚ್ಚುಮೆಚ್ಚು. ಇತ್ತೀಚೆಗಷ್ಟೇ ತನ್ನ ಜೀವನ ಸಂಗಾತಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ಪರಿಚಯಿಸಿರುವುದಷ್ಟೇ ಅಲ್ಲದೆ, ಸೈಕ್ಲಿಸ್ಟ್, ಬೈಕರ್ ಆಗಿರುವ ತನ್ನ ಹುಡುಗ ಸಾಗರ್ ಭಾರದ್ವಾಜ್ ಜತೆಗೆ ಪ್ರವಾಸಕ್ಕೆ ಹೋಗಿದ್ದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

467401461_18367322776139111_8606176040475202573_n

ಪ್ರವಾಸಿ ಪ್ರಪಂಚ: ನಿಮ್ಮ ಜೀವನದಲ್ಲಿ ಪ್ರವಾಸ ಎಂಬುದು ಎಷ್ಟು ಮುಖ್ಯ ?

ರಂಜನಿ ರಾಘವನ್‌: ಒಂದೇ ಕಡೆ ಕುಳಿತರೆ ನಾವು ನಿಂತ ನೀರಾಗುತ್ತೇವೆ. ಹೊಸತನ್ನು ತಿಳಿಯುವುದಕ್ಕೆ, ಕಲಿಯುವುದಕ್ಕೆ ಪ್ರವಾಸ ಉತ್ತಮ ಆಯ್ಕೆ. ಹಾಗಾಗಿ, ಪ್ರವಾಸ ಮನುಷ್ಯನನ್ನು ಪುನಶ್ಚೇತನಗೊಳಿಸುತ್ತದೆ. ಅವನ ಬೆಳವಣಿಗೆಗೆ ಬೇರೆ ಬೇರೆ ಆಯಾಮದಲ್ಲಿ ಸಹಕಾರಿಯಾಗುತ್ತದೆ.

ಪ್ರವಾಸಿ ಪ್ರಪಂಚ: ಪ್ರವಾಸ ಅಂದರೆ ನೆನಪಾಗುವುದೇನು ?

ರಂಜನಿ ರಾಘವನ್‌: ಪ್ರವಾಸ ಅಂದರೆ ನನಗೆ ಮೊದಲು ನೆನಪಾಗುವುದು ನನ್ನ ಬಾಲ್ಯ ಕಾಲ. ಶಾಲೆಯಿಂದ ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಆ ದಿನಗಳ ಖುಷಿ, ಅನುಭವಗಳು ಈಗಲೂ ಹಸಿರಾಗಿಯೇ ಇದೆ.

ಪ್ರವಾಸಿ ಪ್ರಪಂಚ: ಸೋಲೋ ಟ್ರಾವೆಲ್ ಅಥವಾ ಕುಟುಂಬ, ಸ್ನೇಹಿತರ ಜತೆ ಸುತ್ತಾಟ, ಯಾವುದನ್ನು ಇಷ್ಟಪಡುತ್ತೀರಿ ?

ರಂಜನಿ ರಾಘವನ್‌: ನನಗೆ ಒಬ್ಬಳೇ ಇರುವುದು, ಸುತ್ತಾಡುವುದು ತುಂಬಾ ಕಷ್ಟ. ಸ್ಥಳಗಳನ್ನು ನೋಡುವ ಸಲುವಾಗಿ ಇದುವರೆಗೂ ಒಬ್ಬಳೇ ಆಗಿ ಪ್ರಯಾಣ ಮಾಡಿಯೇ ಇಲ್ಲ. ಕೆಲಸಕ್ಕೆ, ಕಾರ್ಯಕ್ರಮಗಳಿಗೆ ಓಡಾಡಿದ್ದೇನೆ.

ranjani raghavan 2

ಪ್ರವಾಸಿ ಪ್ರಪಂಚ: ನಿಮ್ಮ ಹುಡ್ಗ (ಸಾಗರ್ ಭಾರದ್ವಾಜ್) ಜೊತೆಯಾದ ಮೇಲೆ ಸಾಕಷ್ಟು ಕಡೆ ಭೇಟಿ ಮಾಡಿದ್ದೀರಿ, ಸುತ್ತಾಡಿದ್ದೀರಿ..ಅವರ ಜೊತೆಗೆ ಹೋಗಿರುವ ಬೆಸ್ಟ್ ಹಾಗೂ ಮೆಮೋರೆಬಲ್ ಪ್ರವಾಸ ಯಾವುದು ?

ರಂಜನಿ ರಾಘವನ್‌: ಎಲ್ಲರಿಗೂ ಅವರ ಲೈಫ್ ಪಾರ್ಟ್ನರ್ ಜೊತೆಗೆ ಎಲ್ಲಿಗಾದರೂ ಹೋದಾಗ ಹೆಚ್ಚಿನ ಖುಷಿಯಾಗುತ್ತದೆ. ನಾವಿಬ್ಬರೂ ನಮ್ಮ ದೇಶದೊಳಗೆ ಟ್ರಾವೆಲ್ ಮಾಡೋದಕ್ಕೆ ಹೆಚ್ಚು
ಇಷ್ಟಪಡುತ್ತೇವೆ. ನಾನು ನನ್ನ ಹುಡ್ಗನ ಜೊತೆಗೆ ಮುನ್ನಾರ್, ಮಂಚನಬೆಲೆ ಡ್ಯಾಮ್, ಕರ್ನಾಟಕದಲ್ಲಿ ಇನ್ನೂ ಅನೇಕ ಸ್ಥಳಗಳಿಗೆ ಹೋಗಿ ಬಂದಿದ್ದೇವೆ. ಮುನ್ನಾರ್ ಟ್ರಿಪ್ ನನಗೆ ಮೆಮೋರೆಬಲ್

ಪ್ರವಾಸಿ ಪ್ರಪಂಚ: ದೇಶದಲ್ಲಿ ಯಾವೆಲ್ಲಾ ರಾಜ್ಯಗಳನ್ನು ಸುತ್ತಿದ್ದೀರಿ, ಸುತ್ತುವವರಿದ್ದೀರಿ ?

ರಂಜನಿ ರಾಘವನ್‌: ರಾಜಸ್ತಾನ್, ಜೈಪುರ್, ಆಗ್ರಾ, ದೆಹಲಿ, ಹಿಮಾಚಲ ಪ್ರದೇಶ, ಮನಾಲಿ, ಆಂಧ್ರ ಪ್ರದೇಶ, ಚೆನ್ನೈ, ಕೇರಳದ ವಯನಾಡ್, ವಾಲ್ಪಾರೈ ಹೀಗೆ ಸುಮಾರು ಕಡೆ ಸುತ್ತಿದ್ದೇವೆ. ಹಿಲ್ ಸ್ಟೇಷನ್ಸ್ ಸುತ್ತಾಡಿದ್ದೇವೆ. ಸುತ್ತಾಡಬೇಕಿರುವುದು ಪ್ರದೇಶವೆಂದರೆ, ನಾರ್ಥ್ ಈಸ್ಟ್ ದೇಶಗಳು.

ಪ್ರವಾಸಿ ಪ್ರಪಂಚ: ಬೆಂಗಳೂರಿನಲ್ಲಿ ಸುತ್ತಾಡುವುದಕ್ಕೆ ನಿಮಗಿಷ್ಟವಾದ ಸ್ಥಳಗಳು ಯಾವುವು ?

ರಂಜನಿ ರಾಘವನ್‌: ಮಲ್ಲೇಶ್ವರ..ಚಿಕ್ಕವಯಸ್ಸಿನಿಂದಲೂ ಅಪ್ಪನ ಜೊತೆ ಶಾಪಿಂಗ್ ಗೆ ಮಲ್ಲೇಶ್ವರಕ್ಕೆ ಹೋಗುತ್ತಿದ್ದೆವು....ಅಲ್ಲಿಗೆ ಹೋದರೆ ಮತ್ತೆ ನನ್ನ ಬಾಲ್ಯ ನೆನಪಾಗುತ್ತದೆ. ಜನತಾ ಹೊಟೇಲ್‌ ನಲ್ಲಿ ಬಜ್ಜಿ, ಬೋಂಡಾ ತಿಂದು, ಮಲ್ಲೇಶ್ವರದಲ್ಲಿ ಶಾಪಿಂಗ್ ಮಾಡುವ ಖುಷಿಯೇ ಬೇರೆ.

ranjani new

ಪ್ರವಾಸಿ ಪ್ರಪಂಚ: ಯುರೋಪ್ ಗೆ ಪ್ರವಾಸ ಹೋಗಿದ್ದ ಅನುಭವ ಹೇಗಿತ್ತು? ನಮ್ಮ ದೇಶಕ್ಕಿಂತ ಕ್ಲೀನ್ ಆಗಿರುವ ನಗರವದು ಅಂದಿದ್ದಿರಿ..

ರಂಜನಿ ರಾಘವನ್‌: ಹೌದು, ನಾನು ನನ್ನ ಬಾಲ್ಯದ ಗೆಳತಿಯ ಜೊತೆ ಯುರೋಪ್ ದೇಶವನ್ನು ಸುತ್ತಾಡಿ ಬಂದಿದ್ದೆ. ಈ ನಗರ ತುಂಬಾ ಸುಂದರವಾಗಿದೆ. ಕ್ಲೀನ್ ಹಾಗೂ ನೀಟ್ ಆಗಿದೆ. ನಾವಿಬ್ಬರೇ ದೇಶವನ್ನು ಸುತ್ತಾಡಿ ಬಂದ ಖುಷಿಯೇ ಬೇರೆಯಿತ್ತು. ಅದ್ರಲ್ಲೂ ಲೇಖಕ ವಸುಧೇಂದ್ರರವರ ತೇಜೋ ತುಂಗಭದ್ರಾ ಕಾದಂಬರಿಯಲ್ಲಿ ಲಿಸ್ಬನ್ ಕುರಿತಾಗಿ ಓದಿ, ಅದೇ ಪ್ರದೇಶಕ್ಕೆ ಹೋಗಿ ಬಂದಾಗ ಕಾದಂಬರಿ ಬೇಗನೆ ಕನೆಕ್ಟ್ ಆಯ್ತು. ಲಿಸ್ಬನ್ ಒಂದು ಐತಿಹಾಸಿಕ ಸ್ಥಳ. ಬರೀ ಚರ್ಚುಗಳಿವೆ.. ಅಲ್ಲಿನ ಊಟ ವಿಭಿನ್ನವಾದುದು. ಅಲ್ಲಿ ವೈನ್ ತಯಾರಿಸುತ್ತಾರೆ. ಅಲ್ಲಿನ ಸಮುದ್ರವಂತೂ ಎಷ್ಟು ಅದ್ಭುತವಾಗಿದೆಯೆಂದರೆ ಮರಳು ಕಾಣುವಷ್ಟು ತಿಳಿಯಾಗಿದೆ. ಅವೆಲ್ಲವು ವಿಶೇಷ ಅನುಭವ. ಆದರೆ ನಮ್ಮ ದೇಶದಲ್ಲೂ ಸಮುದ್ರಗಳು ಹೀಗೆ ಸ್ವಚ್ಛವಾಗಿರಬೇಕು ಎಂದು ನನಗನ್ನಿಸಿತು. ಜನಸಂಖ್ಯೆ ಹೆಚ್ಚಳದಿಂದ ಇದು ಸಾಧ್ಯವಿಲ್ಲ ಅಂದುಕೊಳ್ಳುವುದು ತಪ್ಪು..ಹಾಗೆ ನೋಡಿದರೆ ಜಪಾನ್ ಜನಸಂಖ್ಯೆ ಹೆಚ್ಚಿದ್ದರೂ ಸ್ವಚ್ಛ ನಗರವೆಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ. ನಾವು ಒಪ್ಪಿಕೊಂಡು, ಕಲಿಯಬೇಕಾದ ವಿಚಾರಗಳು ಅನೇಕವಿದೆ.

ಪ್ರವಾಸಿ ಪ್ರಪಂಚ: ಯುರೋಪ್ ಪ್ರವಾಸದ ವೇಳೆ ಆದ ಫಜೀತಿಯ ಬಗ್ಗೆ ಹೇಳುವಿರಾ ?

ರಂಜನಿ ರಾಘವನ್‌: ಪೋರ್ಚುಗಲ್ ಪ್ರವಾಸದ ನಡುವೆ ಅಲ್ಲೇ ಒಂದು ಪ್ರವಾಸಿ ತಾಣಕ್ಕೆ ಒಂದು ದಿನದ ಪ್ರಯಾಣ ಮಾಡಿದ್ದೆವು. ಅಲ್ಲಿ ಒಬ್ಬ ವ್ಯಕ್ತಿ ಬಂದು ನಮ್ಮ ಬಳಿ ಫೊಟೋ ತೆಗೆಯೋದಾಗಿ ಹೇಳಿ, ನನ್ನ ಫೋನ್ ಕೇಳಿದ. ಇಲ್ಲಿನ ಟೂರಿಸ್ಟ್‌ ಗಳು ತುಂಬಾ ಫ್ರೆಂಡ್ಲಿ ಎಂದು ಫೋನ್ ಕೊಟ್ಟರೆ, ಅಮೇಲೆ ಗೊತ್ತಾಯ್ತು ಅವರು ರಾತ್ರಿಯೆಲ್ಲ ಕುಡಿದು ಬಂದಿರುವ ವ್ಯಕ್ತಿ ಎಂದು. ತಮಾಷೆ ಎಂದರೆ ನಮ್ಮ ದೇಶದಲ್ಲಿ ಕುಡುಕರನ್ನು ಗುರುತಿಸಬಹುದು. ಆದರೆ ಅಲ್ಲಿನ ಕುಡುಕರ ಬಟ್ಟೆ, ಮಾತುಕತೆ ಯಾವುದರಲ್ಲೂ ಗುರುತಿಸುವುದು ಕಷ್ಟ. ಆತನಿಗೆ ಟೂರಿಸ್ಟ್ ಎಂದರೆ ಆಗುವುದಿಲ್ಲ..ಅವರ ಜಾಗಕ್ಕೆ ಬಂದು ಎಲ್ಲವನ್ನೂ ಹಾಳು ಮಾಡುತ್ತಾರೆ ಎಂಬ ಭಾವನೆ ಅವನದ್ದು. ಆಮೇಲೆ ಅವರ ಬಳಿಯಿದ್ದ ನಮ್ಮ ಫೋನ್ ಹಿಂಪಡೆಯಲು ನಮ್ಮ ಜೊತೆಗಿದ್ದ ಗುಂಪಿನವರು ಸಾಕಷ್ಟು ಕಷ್ಟಪಡಬೇಕಾಯಿತು.

ಪ್ರವಾಸಿ ಪ್ರಪಂಚ: ಮಧುರೈ ಮೀನಾಕ್ಷಿ ದೇವಾಲಯ, ಲೇಪಾಕ್ಷಿ, ಗದಗದ ವೀರನಾರಾಯಣ ದೇವಸ್ಥಾನಗಳನ್ನು ಸುತ್ತಿದ್ದೀರಿ..? ಧಾರ್ಮಿಕ ಪ್ರವಾಸವನ್ನು ಎಷ್ಟರ ಮಟ್ಟಿಗೆ ಇಷ್ಟಪಡ್ತೀರಿ ?

ರಂಜನಿ ರಾಘವನ್‌: ಪುರಾತನ ದೇವಸ್ಥಾನಗಳೆಂದರೆ ತುಂಬಾ ಇಷ್ಟ ನನಗೆ. ಆ ದೇವಾಲಯಗಳ ಸ್ಥಳ ಮಹಾತ್ಮೆ, ಹಿನ್ನೆಲೆ ಎಲ್ಲವನ್ನೂ ತಿಳಿಯುವ ಖುಷಿಯೇ ಬೇರೆ. ಆದರೆ ಈಗಂತೂ ಜಾಗವನ್ನು ಉಳಿಸಿಕೊಳ್ಳುವುದಕ್ಕಾಗಿ, ಯಾವುದೋ ರಸ್ತೆ ಬರುತ್ತದೆ ಎನ್ನುವ ಕಾರಣಕ್ಕೆ, ರಾತ್ರೋ ರಾತ್ರಿ ದೇವಸ್ಥಾನಗಳು ತಲೆ ಎತ್ತುತ್ತವೆ.

ಪ್ರವಾಸಿ ಪ್ರಪಂಚ: ನೀವು ಚಾರಣ ಪ್ರಿಯರೂ ಹೌದು..ಬೆಂಗಳೂರು ಸುತ್ತ ಅನೇಕ ಸ್ಥಳಗಳಲ್ಲಿ ಚಾರಣ ಮಾಡಿದ್ದೀರಿ..? ಚಾರಣದ ಅನುಭವ ಹೇಳಿ ?

ರಂಜನಿ ರಾಘವನ್‌: ಟ್ರೆಕ್ಕಿಂಗ್ ಮಾಡುವುದೆಂದರೆ ನನಗಿಷ್ಟ. ನಾನು ಸುಮಾರು ಕಡೆ ಕ್ಕಿಂಗ್ ಮಾಡಿದ್ದೇನೆ.. ವಯನಾಡು, ದೇವರಾಯನ ದುರ್ಗ, ಬಿಳಿಕಲ್ ಬೆಟ್ಟ ಹೀಗೆ..ಆದರೆ ಮುಂದೊಂದು ದಿನ ಕುಮಾರ ಪರ್ವತಕ್ಕೆ ಚಾರಣ ಮಾಡುವ ಆಸೆಯಿದೆ.

ranjani

ಪ್ರವಾಸಿ ಪ್ರಪಂಚ: ಕಥಾಸಂಕಲನವಾಯಿತು..ಪ್ರವಾಸಿ ಕಥನ ಯಾವಾಗ ?

ರಂಜನಿ ರಾಘವನ್‌: ಪ್ರವಾಸ ಕಥನ ಬರೆಯೋದು ನನಗೆ ಚಿಕ್ಕಂದಿನಿಂದ ಆಸಕ್ತಿಕರ ವಿಚಾರ.. ಶಾಲೆಯಿಂದ ಪ್ರವಾಸಕ್ಕೆ ಹೋಗಿ ಬಂದಾಗ ನನ್ನ ಅನುಭವಗಳನ್ನು ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಆದರೆ ಪ್ರಕಟ ಮಾಡಿಲ್ಲ..ಮುಂದಿನ ದಿನಗಳಲ್ಲಿ ಪ್ರವಾಸ ಕಥನ ಬರೆಯುವ ಬಗ್ಗೆ ಯೋಚನೆ ಮಾಡಿಲ್ಲ. ಈಗ ಪ್ರವಾಸದ ಅನುಭವ ಗಾಢವಾಗಿ, ಬರೆಯಬೇಕು ಅನ್ನಿಸಿದರೆ ಮಾತ್ರ ಪ್ರವಾಸ ಕಥನ ಬರೆಯುತ್ತೇನೆ.

ಪ್ರವಾಸಿ ಪ್ರಪಂಚ: ಪ್ರವಾಸದ ಬಗ್ಗೆ ನೀವು ಓದಿದ ಬೆಸ್ಟ್ ಪುಸ್ತಕ ಯಾವುದು ?

ರಂಜನಿ ರಾಘವನ್‌: ಯಾವತ್ತಿದ್ದರೂ ನನಗೆ ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಮತ್ತು ವಂಡೂರಿನ ಹವಳದ ದಂಡೆಗಳು ಪ್ರವಾಸಿ ಕಥನ ಇಷ್ಟವಾಗುತ್ತದೆ. ಅದರಲ್ಲಿ ಹಡಗಿನಲ್ಲಿ ಅಂಡಮಾನ್ ಗೆ ಹೋದ ಅನುಭವವಂತೂ ಆಪ್ತವಾಗಿತ್ತು.

ಪ್ರವಾಸಿ ಪ್ರಪಂಚ: ನೀವು ನೋಡಿದ ಬೆಸ್ಟ್ ಟ್ರಾವೆಲ್ ಸಿನೆಮಾ ?

ರಂಜನಿ ರಾಘವನ್‌: ಸಾಕಷ್ಟು ಸಿನಿಮಾಗಳನ್ನು ನೋಡುತ್ತಿರುತ್ತೇನೆ. ಪ್ರವಾಸದ ಬಗೆಗೆ ಬಂದಿರುವ ಸಿನಿಮಾವೆಂದರೆ ನನಗೆ ಮೊದಲಿಗೆ ನೆನಪಾಗುವುದು 2011ರಲ್ಲಿ ತೆರೆಕಂಡ ಹಿಂದಿ ಸಿನಿಮಾ ʼಜಿಂದಗಿ ನಾ ಮಿಲೇಗಿ ದುಬಾರಾʼ..

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.