ವಾರಾಣಸಿಯ ವರ್ಚುವಲ್ ದರ್ಶನ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ 19 ಫೆಬ್ರವರಿ 2019ರಂದು ಲೋಕಾರ್ಪಣೆಗೊಂಡ ಈ ಮ್ಯೂಸಿಯಂ ವಾರಾಣಸಿಯ ಇತಿಹಾಸ, ಕಲೆ, ಸಂಸ್ಕೃತಿಯನ್ನು ಸ್ಥೂಲವಾಗಿ ಅರಿತುಕೊಳ್ಳಲು ನೆರವಾಗುತ್ತದೆ.
- ಮಂಜುನಾಥ ಡಿ. ಎಸ್.
ಕಾಶಿ ಅಥವಾ ವಾರಾಣಸಿ ಎಂದಾಕ್ಷಣ ಪ್ರವಾಸಿಗರ ಕಣ್ಮುಂದೆ ಬರುವುದು ಈ ಪುಣ್ಯಕ್ಷೇತ್ರದಲ್ಲಿನ ಮಂದಿರಗಳು, ಗಂಗಾತೀರದ ಘಟ್ಟಗಳು, ಮತ್ತು ಗಂಗಾ ಆರತಿ. ಆದರೆ ಕಾಶಿ ಇಷ್ಟಕ್ಕೇ ಸೀಮಿತವಾಗಿಲ್ಲ. ಇದರ ಇತಿಹಾಸ ವೈವಿಧ್ಯಮಯವೂ ಹಾಗೂ ಕುತೂಹಲಕಾರಿಯೂ ಆಗಿದೆ. ಅಲ್ಪ ಸಮಯದಲ್ಲಿ ಕಾಶಿಯ ಬಹುಮುಖಗಳ ಸಂಕ್ಷಿಪ್ತ ಪರಿಚಯ ನೀಡುವ ತಾಣವೇ ವರ್ಚುಯಲ್ ಎಕ್ಸ್ಪೀರಿಯನ್ಷಿಯಲ್ ಮ್ಯೂಸಿಯಂ.
ಇದನ್ನೂ ಓದಿ: ಜಿರಾಫ್ ಮ್ಯಾನರ್ : ಜಿರಾಫೆಯೊಂದಿಗೆ ಮಸ್ತ್ ಮೀಲ್ಸ್
ಏನಿದರ ವಿಶೇಷತೆ?
ಈ ಮ್ಯೂಸಿಯಂ ದಶಾಶ್ವಮೇಧ ಘಾಟ್ ಬಳಿ ಇರುವ ಮಾನ್ ಮಹಲಿನಲ್ಲಿದೆ. ಇದನ್ನು ಕಾಶಿಯ ಗಲ್ಲಿಗಳು, ಕಾಶಿಯ ಕಿರುನೋಟ, ನಾದ ನಗರಿ, ಸಾಹಿತ್ಯ ಮತ್ತು ಪತ್ರಿಕೋದ್ಯಮ, ಮೇಡ್ ಇನ್ ಬನಾರಸ್, ಕಾಶಿಯ ಪ್ರಸಿದ್ಧರು, ಹಬ್ಬಗಳು, ಆಯುರ್ವೇದ ಚಿಕಿತ್ಸೆಗಳು, ಆಸ್ಥೆ ಮತ್ತು ಆಧ್ಯಾತ್ಮಿಕತೆ, ಹಾಗು ಮುಕ್ತಿಧಾಮ - ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕಾಶಿಯ ಕಿರುನೋಟ ವಿಭಾಗದಲ್ಲಿ ಚಲನಚಿತ್ರ ಮಾಧ್ಯಮದ ಮೂಲಕ ಜ್ಞಾನ, ಸಂಸ್ಕೃತಿ, ಸಂಗೀತ, ಶಿಕ್ಷಣಗಳ ಸಂಗಮವಾದ ಈ ಅಪೂರ್ವ ಧಾಮದ ಇತಿಹಾಸವನ್ನು ಪರಿಚಯಿಸಲಾಗುತ್ತದೆ. ಇದರಲ್ಲಿ ಬೌದ್ಧ ಧರ್ಮದ ಪ್ರಭಾವವನ್ನೂ ಉಲ್ಲೇಖಿಸಲಾಗಿದೆ.

ಸಗರನ ಅಶ್ವಮೇಧ ಯಾಗದಿಂದ ಆರಂಭಿಸಿ, ಕಪಿಲ ಮಹರ್ಷಿಯ ಕೋಪಾಗ್ನಿಯಲ್ಲಿ ಸಗರನ ಮಕ್ಕಳು ಭಸ್ಮವಾಗಿದ್ದು, ತನ್ನ ಪೂರ್ವಜರ ಆತ್ಮಕ್ಕೆ ಮೋಕ್ಷ ಒದಗಿಸಲು ಭಗೀರಥ ಗಂಗೆಯನ್ನು ಭೂಮಿಗೆ ತಂದಿದ್ದು, ರಭಸದಿಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಶಿವ ತನ್ನ ಜಡೆಯಲ್ಲಿ ಗಂಗೆಯನ್ನು ಹಿಡಿದಿದ್ದು ಸೇರಿದಂತೆ ಗಂಗಾವತರಣ ಕಥೆಯನ್ನು ಲೇಸರ್ ಶೋ ಕಣ್ಮುಂದೆ ಮೂಡಿಸಿತು. ಅಂತ್ಯದಲ್ಲಿ ಗಂಗೆ ಭೂಮಿಗಿಳಿದಾಗ ಆ ಜಲಧಾರೆಯಲ್ಲಿ ಮಿಂದಂತೆ ಭಾಸವಾಯಿತು.
ನಾದ ಮತ್ತು ಸಾಹಿತ್ಯ:
ನಾದ ನಗರಿ ವಿಭಾಗದಲ್ಲಿ ಹಿಂದುಸ್ತಾನಿ ಸಂಗೀತ ಪ್ರಕಾರಗಳ, ಸಂಗೀತಕಾರರ, ಸಂಗೀತವಾದ್ಯಗಳ, ಮತ್ತು ಜಾನಪದ ಸಂಗೀತ ಪ್ರಕಾರಗಳ ವಿವರಗಳು ದೊರಕುತ್ತವೆ. ಹಲವಾರು ಸಂಗೀತ ವಾದ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಂತ ಕಬೀರ್, ಸಂತ ರೈದಾಸ್, ಸಂತ ತುಲಸೀ ದಾಸ್, ಮುನ್ಷಿ, ಪ್ರೇಮ್ ಚಂದ್, ಭರತೇಂದು ಹರಿಶ್ಚಂದ್ರ, ಜೈಶಂಕರ್ ಪ್ರಸಾದ್, ಮುಂತಾದವರ ಪರಿಚಯವಾಗುತ್ತದೆ. ಪುಸ್ತಕದ ಪ್ರತಿಕೃತಿಯ ಚಿತ್ರವನ್ನು ಮುಟ್ಟಿದಾಗ ಆ ಚಿತ್ರದಲ್ಲಿರುವ ಮಹಾಪುರುಷರ ವಿವರಗಳು ಅನಾವರಣಗೊಳ್ಳುತ್ತವೆ.

ಬನಾರಸ್ ವೈಶಿಷ್ಟ್ಯ:
ಮೇಡ್ ಇನ್ ಬನಾರಸ್ ವಿಭಾಗದಲ್ಲಿ ಇಲ್ಲಿನ ವಿಶಿಷ್ಟ ರೇಷ್ಮೆ ವಸ್ತ್ರಗಳ ಉತ್ಪಾದನೆಯ ಪರಿಕರಗಳು, ಮರದ ಬೊಂಬೆಗಳು, ಮೃದು ಕಲ್ಲಿನ ಕೆತ್ತನೆಗಳು, ಎನಾಮಲ್ ಕರಕುಶಲ ವಸ್ತುಗಳು, ಲೋಹದ ಶಿಲ್ಪಗಳು ಹಾಗೂ ಮುಂತಾದವುಗಳ ಮಾದರಿಯನ್ನು ನೋಡಬಹುದು. ಪರಿಚಯಕ್ಕೆ ಪರಿಪೂರ್ಣತೆ ನೀಡುವಂತೆ ಬನಾರಸಿ ಪಾನ್ ಭಂಡಾರ್ ಪ್ರತಿಕೃತಿಯನ್ನೂ ಪ್ರದರ್ಶಿಸಲಾಗಿದೆ. ಕಾಶಿಯ ಪ್ರಸಿದ್ಧರು ವಿಭಾಗದಲ್ಲಿ ಖ್ಯಾತನಾಮರ ಆಯತಾಕಾರದ ಫಲಕಗಳನ್ನು ಜೋಡಿಸಿದ್ದರು. ಆಯ್ದ ಫಲಕವನ್ನು ನಿಗದಿತ ಸ್ಥಳದಲ್ಲಿ ಇರಿಸಿದಾಗ, ಆ ಫಲಕದಲ್ಲಿನ ಪ್ರಸಿದ್ಧ ವ್ಯಕ್ತಿಯ ವಿವರಗಳು ಎದುರಿಗಿರುವ ಪರದೆಯ ಮೇಲೆ ಮೂಡಿಬಂದವು. ಹೀಗೆ ಇತರ ವ್ಯಕ್ತಿಗಳ ವಿವರಗಳನ್ನೂ ಅರಿತುಕೊಳ್ಳಬಹುದು.
ಆಯುರ್ವೇದ- ಅಧ್ಯಾತ್ಮ:
ಆಯುರ್ವೇದೀಯ ಚಿಕಿತ್ಸೆಗಳ ವಿಭಾಗದಲ್ಲಿ ಶಸ್ತ್ರಚಿಕಿತ್ಸೆಯ ಉಬ್ಬುಶಿಲ್ಪವಿದೆ. ಸುಶ್ರುತ ಮುನ್ನೂರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳ ಬಗ್ಗೆ ವಿವರಿಸಿರುವನೆಂಬ ಮಾಹಿತಿ ದೊರಕುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ನೂರೊಂದು ಮೊಂಡು ಮತ್ತು ಇಪ್ಪತ್ತು ಹರಿತ ಉಪಕರಣಗಳನ್ನು ಬಳಸುತ್ತಿದ್ದರೆಂದೂ ತಿಳಿಯುತ್ತದೆ. ಮಂದ ಬೆಳಕಿನ, ಆಸ್ಥೆ ಮತ್ತು ಆಧ್ಯಾತ್ಮಿಕತೆಯ ವಿಭಾಗದಲ್ಲಿ ಮೌನದಿಂದ ಕುಳಿತು ಧ್ಯಾನಿಸಿದಾಗ ಬೇರೊಂದು ಲೋಕಕ್ಕೆ ಹೋದ ಅನುಭವವಾಗುತ್ತದೆ. ಮುಕ್ತಿಧಾಮ ವಿಭಾಗ ವೀಕ್ಷಿಸುತ್ತಿದ್ದಂತೆ ಜೀವನದ ನಶ್ವರತೆಯ ಆಧ್ಯಾತ್ಮಿಕ ಆರಿವಾಗುತ್ತದೆ; ಎಲ್ಲ ಜೀವಿಗಳ ಅಂತಿಮ ಗುರಿ ಜೀವನ್ಮುಕ್ತಿ ಎಂಬುದು ನೆನಪಾಗುತ್ತದೆ; ವೈರಾಗ್ಯ ಭಾವ ಮೂಡುತ್ತದೆ.

ಇನ್ನೊಂದು ಮಹಡಿ:
ಜೈಪುರದ ಮಹಾರಾಜ ಸವಾಯ್ ಜೈ ಸಿಂಗ್ (ದ್ವಿತೀಯ) ನಿರ್ಮಿಸಿದ ಖಗೋಳ ವೀಕ್ಷಣಾಲಯ ಅಥವಾ ಜಂತರ್ ಮಂತರ್ ಈ ಮಹಲಿನ ಮೇಲ್ಮಹಡಿಯ ಮೇಲ್ಛಾವಣಿಯಲ್ಲಿದೆ. ಸಾಮ್ರಾಟ್ ಯಂತ್ರ, ಚಕ್ರ ಯಂತ್ರ, ದಿಗಂಶ ಯಂತ್ರ, ಇತ್ಯಾದಿ ಉಪಕರಣಗಳಿಂದ ಸಜ್ಜುಗೊಂಡಿರುವ ಈ ವೇದಶಾಲೆ ಹದಿನೆಂಟನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತು. ಇದು ಕೇವಲ ಖಗೋಳಶಾಸ್ತ್ರದ ಅಧ್ಯಯನಕ್ಕೆ ಮೀಸಲಾಗಿರದೆ ವಿಜ್ಞಾನ, ಆಧ್ಯಾತ್ಮಿಕತೆ, ಮತ್ತು ವಾರಾಣಸಿಯ ದೈನಂದಿನ ಜೀವನ ಇವುಗಳ ನಡುವಿನ ಸಾಮರಸ್ಯವನ್ನು ಬಿಂಬಿಸುತ್ತಿತ್ತೆಂಬುದು ಇಲ್ಲಿನ ಪೂರ್ವಿಕರ ಅಭಿಮತವಾಗಿದೆ. ಪ್ರಸ್ತುತ ಇದು ಬಳಕೆಯಲ್ಲಿಲ್ಲ.
ಲೇಖಕರು: ಹವ್ಯಾಸಿ ಬರಹಗಾರರು