ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಮಧ್ಯಪ್ರದೇಶದ ಪ್ರಸಿದ್ದ 'ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶ'ಕ್ಕೆ ಪ್ರತಿಷ್ಠಿತ 'ಇಂಡಿಯಾ ಟುಡೇ ಪ್ರವಾಸೋದ್ಯಮ ಸಮೀಕ್ಷೆ ಮತ್ತು ಪ್ರಶಸ್ತಿಗಳು 2026 ರಲ್ಲಿ ʻಅತ್ಯುತ್ತಮ ವನ್ಯಜೀವಿ ಪ್ರವಾಸಿ ತಾಣʼ ಪ್ರಶಸ್ತಿ ಒಲಿದಿದೆ. ವನ್ಯಜೀವಿ ಸಂರಕ್ಷಣೆಯಲ್ಲಿನ ಗಮನಾರ್ಹ ಸಾಧನೆ, ಅತ್ಯುತ್ತಮ ಪ್ರವಾಸೋದ್ಯಮ ನಿರ್ವಹಣೆ, ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಸೌಲಭ್ಯ ಹಾಗೂ ಜೀವವೈವಿಧ್ಯದ ಸುಸ್ಥಿರ ರಕ್ಷಣೆಗಾಗಿ ಬಿಟಿಆರ್‌ಗೆ 'ಎಡಿಟರ್ಸ್‌ ಚಾಯ್ಸ್ ಅವಾರ್ಡ್' ವಿಭಾಗದಡಿ ಈ ಅತ್ಯುನ್ನತ ಗೌರವ ಸಂದಿದೆ.

ಇದನ್ನೂ ಓದಿ: ವಿಶ್ವದ 3ನೆಯ ಅತ್ಯಂತ ಕುಟುಂಬ ಸ್ನೇಹಿ ಏರ್‌ಪೋರ್ಟ್!

ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ ಬಿಟಿಆರ್ ಫೀಲ್ಡ್ ಡೈರೆಕ್ಟರ್ ಅನುಪಮ್ ಸಹಾಯ್ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಲ್. ಕೃಷ್ಣಮೂರ್ತಿ ಅವರು ಜಂಟಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಯು ಕೇವಲ ಬಾಂಧವಗಡಗೆ ಮಾತ್ರವಲ್ಲದೆ ಇಡೀ ಮಧ್ಯಪ್ರದೇಶ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ದೇಶದ ಪ್ರಮುಖ ವನ್ಯಜೀವಿ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮಧ್ಯಪ್ರದೇಶದ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.