ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೇರೆ ಬೇರೆ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ಕಾರಣ ಅ.17ರಿಂದ 20ರವರೆಗೆ ಕೆಎಸ್‌ಆರ್‌ಟಿಸಿ (KSRTC) ಕಡೆಯಿಂದ 2,500 ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಅ.20ರಂದು ನರಕ ಚತುರ್ದಶಿ ಮತ್ತು ಅ.22ರಂದು ಬಲಿಪಾಡ್ಯಮಿ ಹಬ್ಬವಿದೆ. ಅದರ ಜತೆಗೆ ಅ.18 ಮತ್ತು 19 ವಾರಾಂತ್ಯವಾಗಿದೆ. ಹೀಗಾಗಿ ಐದು ದಿನಗಳ ಸುದೀರ್ಘ ರಜೆ ಇರಲಿದ್ದು, ಭಾರಿ ಸಂಖ್ಯೆಯಲ್ಲಿ ರಾಜಧಾನಿಯ ಜನತೆ ಊರುಗಳತ್ತ ಧಾವಿಸಲಿದ್ದಾರೆ.

ksrtc 2

ಈ ಕಾರಣದಿಂದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆ ಮತ್ತು ಹೊರರಾಜ್ಯಗಳ ವಿವಿಧ ನಗರಗಳಿಗೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಹೆಚ್ಚುವರಿ ಬಸ್‌ಗಳು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಬಸ್‌ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳಲಿವೆ. ಈ ಹೆಚ್ಚುವರಿ ಬಸ್‌ಗಳು ವಿವಿಧ ನಗರಗಳಿಂದ ಬೆಂಗಳೂರಿಗೆ ಅ.22ಹಾಗೂ 26ರಂದು ಸೇವೆ ನೀಡಲಿವೆ.

ಬಸ್‌ಗಳ ಕಾರ್ಯಾಚರಣೆ ಕುರಿತು ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಟಿಕೆಟ್‌ ಕಾಯ್ದಿರಿಸಲು ನಿಗಮದ ವೆಬ್‌ಸೈಟ್‌ www.ksrtc.karnataka.gov.in ಗೆ ಭೇಟಿ ನೀಡಬಹುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.