ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಭಕ್ತರಿಗೆ ಮತ್ತು ಪ್ರವಾಸ ಆಸಕ್ತರಿಗೆ ಅನುಕೂಲವಾಗುವಂತೆ 6 ದಿನಗಳ ವಿಶೇಷ ಧಾರ್ಮಿಕ ಪ್ರವಾಸಿ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಮುರುಡೇಶ್ವರ ಸೇರಿದಂತೆ ಪ್ರಮುಖ ಪವಿತ್ರ ತಾಣಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಪ್ರವಾಸಿ ಪ್ಯಾಕೇಜ್ ಮೂಲಕ ಧಾರ್ಮಿಕ ದರ್ಶನದ ಜತೆಗೆ ಪ್ರವಾಸ ಅನುಭವವನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಕೆಎಸ್‌ಟಿಡಿಸಿ ತಿಳಿಸಿದೆ. ಪ್ರವಾಸದ ಅವಧಿಯಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮುರುಡೇಶ್ವರದ ಪ್ರಸಿದ್ಧ ಶಿವಾಲಯ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡಿರುತ್ತದೆ.

Murudeshwara (1)

ಒಬ್ಬರಿಗೆ 13,249 ರು. ವೆಚ್ಚ ನಿಗದಿಪಡಿಸಲಾಗಿದ್ದು, ಈ ಪ್ಯಾಕೇಜ್‌ನಲ್ಲಿ ಸಾರಿಗೆ ಹಾಗೂ ಅಗತ್ಯ ವ್ಯವಸ್ಥೆಗಳು ಒಳಗೊಂಡಿರುತ್ತವೆ. ಕಡಿಮೆ ಅವಧಿಯಲ್ಲಿ ಪ್ರಮುಖ ಧಾರ್ಮಿಕ ತಾಣಗಳನ್ನು ಸಮಗ್ರವಾಗಿ ಭೇಟಿ ಮಾಡುವ ಅವಕಾಶ ಇದರಿಂದ ದೊರೆಯಲಿದೆ ಎಂದು ನಿಗಮ ಹೇಳಿದೆ.

ಭಕ್ತರಿಗೆ ಸುಗಮ, ಸುರಕ್ಷಿತ ಮತ್ತು ವ್ಯವಸ್ಥಿತ ಪ್ರವಾಸ ಅನುಭವ ನೀಡುವ ಉದ್ದೇಶದಿಂದ ಈ ಪ್ಯಾಕೇಜ್ ರೂಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಬುಕ್ಕಿಂಗ್‌ಗಾಗಿ ಆಸಕ್ತರು ಕೆಎಸ್‌ಟಿಡಿಸಿ ಅಧಿಕೃತ ಚಾನಲ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.