ಪ್ರವಾಸಿಗರಿಗೆ ವಿಭಿನ್ನ ಹಾಗೂ ಆರಾಮದಾಯಕ ಯಾತ್ರಾ ಅನುಭವ ಒದಗಿಸುವ ಉದ್ದೇಶದಿಂದ ಒಡಿಶಾ ಸರಕಾರ ಆಧುನಿಕ ಕ್ಯಾರವಾನ್ ಪ್ರವಾಸೋದ್ಯಮ ಸೇವೆಯನ್ನು ಆರಂಭಿಸಿದೆ. ಈ ಸೇವೆಯನ್ನು ಉಪಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವೆ ಪ್ರವಾತಿ ಪರಿಡಾ ಅವರು ಧೌಳಿಗಿರಿ ಪ್ರವಾಸಿ ಪ್ರದೇಶದಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.

ಈ ಕ್ಯಾರವಾನ್ ಪ್ರವಾಸೋದ್ಯಮ ಸೇವೆಯಡಿ ಪ್ರವಾಸಿಗರು ಸುಧಾರಿತ ಸೌಲಭ್ಯಗಳಿಂದ ಸುಸಜ್ಜಿತ ವಾಹನಗಳಲ್ಲಿ ಒಡಿಶಾದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಚರಿಸಬಹುದಾಗಿದೆ. ಕ್ಯಾರವಾನ್ ಗಳಲ್ಲಿ ಮಲಗುವ ವ್ಯವಸ್ಥೆ, ಆನ್‌ಬೋರ್ಡ್ ಶೌಚಾಲಯ, ಅಡುಗೆ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

New Caravan Tourism Initiative Rolled Out in Odisha

ಈ ಯೋಜನೆಯನ್ನು ಒಡಿಶಾ ಪ್ರವಾಸೋದ್ಯಮ ಇಲಾಖೆ ಮತ್ತು ಖಾಸಗಿ ಸಂಸ್ಥೆ ಸ್ಯಾಂಡ್ ಪೆಬಲ್ಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಸಹಯೋಗದಲ್ಲಿ ಜಾರಿಗೆ ತರಲಾಗಿದೆ. ಈ ಸೇವೆಯ ಮೂಲಕ ಹಿರಾಕುಡ್, ದೇಬ್ರಿಗಢ್, ಸಿಮಿಲಿಪಾಲ್, ಚಿಲಿಕಾ ಸರೋವರ, ಭಿತರ್‌ಕರ್ಣಿಕಾ ಸೇರಿದಂತೆ ರಾಜ್ಯದ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡ ಪ್ರವಾಸ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಈ ನೂತನ ಸೇವೆಯು ಪ್ರವಾಸಿಗರಿಗೆ ತೊಂದರೆರಹಿತ ಹಾಗೂ ವಿಶಿಷ್ಟ ಪ್ರವಾಸ ಅನುಭವ ನೀಡುವುದರ ಜತೆಗೆ, ಒಡಿಶಾದ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿನ ಜನರಿಗೆ ಪರಿಚಯಿಸುವಲ್ಲಿ ಸಹಕಾರಿಯಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಸರಕಾರದ ಈ ಮುಂದಾಳತ್ವದಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಉತ್ತೇಜನ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.