ರೈಲ್ವೇ ವಿಭಾಗ ವಿಭಜನೆ ವಿರೋಧಿಸಿ ಪ್ರತಿಭಟನೆ
ಪಾಲಕಾಡ್ನ ಒಲವಕ್ಕೋಡ್ನಲ್ಲಿರುವ ವಿಭಾಗೀಯ ರೈಲ್ವೇ ವ್ಯವಸ್ಥಾಪಕರ ಕಚೇರಿ ಬಳಿ ಡಿವೈಎಫ್ಐ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನಾ ಮಾರ್ಚ್ ನಡೆಸಿದರು.
ರೈಲ್ವೇ ಮಂಡಳಿಯು ದಕ್ಷಿಣ ರೈಲ್ವೇಯ ಪಾಲಕಾಡ್ ರೈಲ್ವೇ ವಿಭಾಗವನ್ನು ವಿಭಜಿಸುವ ಹಾಗೂ ಮಂಗಳೂರು-ಉಳ್ಳಾಲ ಪ್ರದೇಶವನ್ನು ದಕ್ಷಿಣ ಪಶ್ಚಿಮ ರೈಲ್ವೇಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ನಿರ್ಧಾರವನ್ನು ಕೈಗೊಂಡಿರುವುದನ್ನು ವಿರೋಧಿಸಿ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಕ್ರಮದ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ಹಾಗೂ ಯುವ ಸಂಘಟನೆಗಳು ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಆರಂಭಿಸಿವೆ.
ಇದನ್ನೂ ಓದಿ: ಇನ್ಮುಂದೆ ಉಬರ್ ಆ್ಯಪ್ನಲ್ಲೇ ರೈಲು ಟಿಕೆಟ್ ಬುಕಿಂಗ್
ಪಾಲಕಾಡ್ನ ಒಲವಕ್ಕೋಡ್ನಲ್ಲಿರುವ ವಿಭಾಗೀಯ ರೈಲ್ವೇ ವ್ಯವಸ್ಥಾಪಕರ ಕಚೇರಿ ಬಳಿ ಡಿವೈಎಫ್ಐ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನಾ ಮಾರ್ಚ್ ನಡೆಸಿದರು. ಪ್ರತಿಭಟನಾಕಾರರು ಕಚೇರಿಯ ಗೇಟ್ಗಳನ್ನು ಹತ್ತಿ ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ಪಡೆ ನಡುವೆ ತಳ್ಳಾಟ-ನೂಕಾಟ ಉಂಟಾಗಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಮಂಗಳೂರು ಭಾಗವನ್ನು ಪಾಲಕಾಡ್ ವಿಭಾಗದಿಂದ ಬೇರ್ಪಡಿಸುವುದರಿಂದ ಪಾಲಕಾಡ್ ವಿಭಾಗವು ಸರಕು ಸಾಗಣೆ ಮೂಲಕ ಬರುವ ಕನಿಷ್ಠ 600 ರು. ಕೋಟಿ ಆದಾಯವನ್ನು ಕಳೆದುಕೊಳ್ಳಲಿದೆ ಹಾಗೂ ಒಟ್ಟು ವಾರ್ಷಿಕ ಆದಾಯದಲ್ಲಿ ಶೇ. 70ರಷ್ಟು ಕುಸಿತವಾಗಲಿದೆ ಎಂದು ನಾಯಕರು ಆಪಾದಿಸಿದ್ದಾರೆ.
ಯಾವುದೇ ಮುನ್ಸೂಚನೆ ಅಥವಾ ಕೇರಳದ ಸಂಸ್ಥೆ/ರಾಜ್ಯ ಸರಕಾರದ ಸಮಾಲೋಚನೆ ಇಲ್ಲದೆ ಕೇಂದ್ರ ಸರಕಾರವು ಈ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ವಿವಿಧ ಪಕ್ಷಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಕೇರಳದ ವಿವಿಧ ಜಿಲ್ಲೆಗಳ ರೈಲ್ವೇ ನಿಲ್ದಾಣಗಳ ಮುಂದೆ ಪ್ರತಿಭಟನಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಭಾಗ ವಿಭಜನೆ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.