ಭಾರತದ ಸುಪ್ರೀಂಕೋರ್ಟ್, ಹುಲಿಗಳ ವಾಸಸ್ಥಳಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಿದ್ದು, ದೇಶದಾದ್ಯಂತ ನಡೆಯುವ ಟೈಗರ್ ಸಫಾರಿಗಳು ಈಗ ಹೊಸ ನಿಯಮಗಳಿಗೆ ಒಳಪಡುವಂತಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಮುಂದಿನ ದಿನಗಳಲ್ಲಿ ‘ನಾನ್-ಫಾರೆಸ್ಟ್ ಲ್ಯಾಂಡ್’ ಅಥವಾ ಹಾಳಾಗಿರುವ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಟೈಗರ್ ಸಫಾರಿ ನಡೆಸಲು ಅನುಮತಿ ನೀಡಲಾಗಿದೆ. ಹುಲಿಗಳ ಪ್ರಮುಖ ವಾಸಸ್ಥಳವಾದ ‘ಕೋರ್ ಹ್ಯಾಬಿಟ್ಯಾಟ್’ ಪ್ರದೇಶದಲ್ಲಿ ಯಾವುದೇ ರೀತಿಯ ಸಫಾರಿ ನಡೆಸದಂತೆ ಆದೇಶ ನೀಡಲಾಗಿದೆ.

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ನೈಟ್‌ ಟೂರ್, ನೈಟ್ ಸಫಾರಿ ಮತ್ತು ಅತಿಯಾದ ಬೆಳಕು ಹಾಗೂ ಶಬ್ದದಿಂದ ಕೂಡಿದ ಚಟುವಟಿಕೆಗಳು ವನ್ಯಜೀವಿ ಪ್ರದೇಶಗಳಲ್ಲಿ ಗಂಭೀರವಾದ ಪರಿಣಾಮ ಬೀರುತ್ತಿರುವ ಕಾರಣದಿಂದ ಟೈಗರ್ ರಿಸರ್ವ್‌ಗಳ ಪ್ರಮುಖ ಭಾಗದಲ್ಲಿ ಇವುಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ ಎಂದು ಸ್ಟಷ್ಟಪಡಿಸಿದೆ.

Tiger safari


ಇದೇ ಸಂದರ್ಭದಲ್ಲಿ ನ್ಯಾಯಾಲಯವು ರಾಜ್ಯ ಸರಕಾರಗಳಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದೆ:

  • ಪ್ರತಿ ರಾಜ್ಯವೂ ಟೈಗರ್ ಕಾನ್ಸರ್ವೇಶನ್ ಪ್ಲಾನ್ ಅನ್ನು ತ್ವರಿತವಾಗಿ ಅಪ್‌ಡೇಟ್ ಮಾಡಬೇಕು.
  • ಪ್ರತಿ ಟೈಗರ್ ರಿಸರ್ವ್‌ನ ಕೋರ್ ಮತ್ತು ಬಫರ್ ಪ್ರದೇಶಗಳ ಗಡಿಗಳನ್ನು ಶೀಘ್ರದಲ್ಲಿ ಸ್ಪಷ್ಟಪಡಿಸಿ ಅಧಿಕೃತಗೊಳಿಸಬೇಕು.
  • ಸಫಾರಿ ನಡೆಯುವ ಪ್ರದೇಶಗಳಲ್ಲಿ ಗಾಯಗೊಂಡ ಅಥವಾ ರಕ್ಷಿಸಲಾದ ಹುಲಿಗಳಿಗೆ ರಿಸ್ಕ್ಯೂ–ರಿಹ್ಯಾಬಿಲಿಟೇಶನ್ ಕೇಂದ್ರವನ್ನು ಕಡ್ಡಾಯವಾಗಿ ತೆರೆಯಬೇಕು.

ಅದರ ಜತೆಗೆ, ಕೋರ್ ಪ್ರದೇಶದ ಸುತ್ತಲಿನ ಬಫರ್ ಮತ್ತು ಫ್ರಿಂಜ್ ವಲಯಗಳನ್ನು ಇಕೋ ಸೆನ್ಸಿಟೀವ್‌ ಜೋನ್‌ (Eco-Sensitive Zone) ಎಂದು ಪರಿಗಣಿಸಲು ನ್ಯಾಯಾಲಯ ಸೂಚಿಸಿದೆ. ಇದರಿಂದ ದೊಡ್ಡ ಪ್ರಮಾಣದ ಗಣಿಗಾರಿಕೆ, ಭಾರಿ ಕೈಗಾರಿಕೆ, ಅತಿಯಾದ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಜಾರಿಯಾಗಲಿದೆ.