ನಶಿಸುತ್ತಿವೆ ಅಪೂರ್ವ ಸೌಂದರ್ಯದ ಶಿಲಾಬಾಲಿಕೆಗಳು
ಕಲ್ಲೇಶ್ವರ ಶಿವಾಲಯ ಶತಮಾನಗಳಷ್ಟು ಪುರಾತನದ್ದು. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿನ ಶಿಲಾಬಾಲಿಕೆಗಳಿಗೆ ಮತ್ತು ಶಿಲ್ಪಕಲಾಕೃತಿಗೆ ಮಾದರಿಯಾಗಿದೆ. ಕಲ್ಯಾಣ ಚಾಲುಕ್ಯ ದೊರೆ ಆರನೆ ವಿಕ್ರಮಾದಿತ್ಯನ ಕಾಲದಲ್ಲಿ ಕಟ್ಟಲಾದ ಈ ಮಂದಿರ ತನ್ನ ಕಲಾ ವೈಭವದಿಂದ ನೋಡುಗರ ತಣಿಸುತ್ತಿದೆ. ದೂರದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿ ಶಿಲಾಬಾಲಿಕೆಗಳ ಕೆತ್ತನೆ ಆರಂಭಕ್ಕಿಂತ ಸುಮಾರು ನೂರು ವರ್ಷಗಳಷ್ಟು ಮುಂಚಿತವಾಗಿಯೇ ಜಲಸಂಗ್ವಿ ಕಲ್ಲೇಶ್ವರ ಶಿವ ಮಂದಿರದ ಗೋಡೆಗಳ ಮೇಲೆ ಶಿಲಾಬಾಲಿಕೆಗಳು ನಿರ್ಮಾಣವಾಗಿವೆ!
- ಗುರುರಾಜ್ ಕುಲಕರ್ಣಿ
ಗಡಿ ಭಾಗದ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ಜಲಸಂಗ್ವಿ ಕಲ್ಲೇಶ್ವರ ಶಿವಾಲಯವಿದೆ. ಇದು ಶಿಲಾ ಬಾಲಿಕೆಯರ ಮೂಲಕ ಭಾರತೀಯ ಶಿಲ್ಪ ಕಲಾಕೃತಿ, ಪರಂಪರೆ ಮತ್ತು ವೈಭವವನ್ನು ಸಾದರಪಡಿಸುವ ಅಪರೂಪದ ದೇವಸ್ಥಾನ. ಇಂಥ ಮಹತ್ವದ ದೇವಾಲಯ ಇಂದಿಗೆ ಶಿಥಿಲಾವಸ್ಥೆಗೆ ತಲುಪಿದೆ. ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಜತೆಗೆ ಬೀದರ್ ಜಿಲ್ಲಾಡಳಿತವೂ ದಿವ್ಯ ನಿರ್ಲಕ್ಷ್ಯಾ ತಾಳಿವೆ. ಹಾಗಾಗಿ ಜಲಸಂಗ್ವಿ ಕಲ್ಲೇಶ್ವರ ಶಿವನ ಗುಡಿ ಪ್ರಾಂಗಣಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ.
ಜಲಸಂಗ್ವಿ, ಪುಟ್ಟ ಗ್ರಾಮ. ಗ್ರಾಮದ ಒಳಗಡೆ ಪ್ರವೇಶಿಸುತ್ತಿದ್ದಂತೆ ಶಿವ ಮಂದಿರ ಪ್ರವಾಸಿಗರನ್ನು ಮತ್ತು ಭಕ್ತಾದಿಗಳನ್ನು ತನ್ನತ್ತ ಕೈಬಿಸಿ ಕರೆಯುತ್ತದೆ. ದೂರದಿಂದ ನೋಡಿದಾಗ ಹಳೆಯ ಸ್ಮಾರಕದಂತೆ ಕಂಡುಬರುವ ಈ ಮಂದಿರದ ಬಳಿಗೆ ಹೋದಾಗ ಗುಡಿಯ ಗೋಡೆಗಳ ಮೇಲಿನ ಮನಮೋಹಕ ಶಿಲಾ ಬಾಲಿಕೆಯರ ಕಲಾಕೃತಿಗಳು ನೋಡುಗರ ಕಣ್ಮನ ತಣಿಸುತ್ತವೆ. ಮಂದಿರಕ್ಕೆ ಭೇಟಿ ನೀಡಿದವರ ಮನಸು ಗುಡಿಯ ಪ್ರಾಂಗಣದ ಸ್ಥಿತಿಯನ್ನು ನೋಡಿ ಇದೇ ಸಂದರ್ಭದಲ್ಲಿ ಮಮ್ಮಲ ಮರುಗುತ್ತದೆ. ಮಂದಿರದ ಪ್ರಾಂಗಣ ಪೊದೆಗಳಿಂದ ಆವೃತ್ತವಾಗಿದೆ. ಪಡ್ಡೆ ಹುಡುಗರ ಮತ್ತು ನಿರುದ್ಯೋಗಿಗಳ ಅಡ್ಡಾವಾಗಿದೆ. ತ್ಯಾಜ್ಯ ವಸ್ತುಗಳ ಕೂಪವಾಗಿದೆ.

ಐತಿಹಾಸಿಕ ಹಿನ್ನೆಲೆ
ಕಲ್ಲೇಶ್ವರ ಶಿವಾಲಯ ಶತಮಾನಗಳಷ್ಟು ಪುರಾತನದ್ದು. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿನ ಶಿಲಾಬಾಲಿಕೆಗಳಿಗೆ ಮತ್ತು ಶಿಲ್ಪಕಲಾಕೃತಿಗೆ ಮಾದರಿಯಾಗಿದೆ. ಕಲ್ಯಾಣ ಚಾಲುಕ್ಯ ದೊರೆ ಆರನೆ ವಿಕ್ರಮಾದಿತ್ಯನ ಕಾಲದಲ್ಲಿ ಕಟ್ಟಲಾದ ಈ ಮಂದಿರ ತನ್ನ ಕಲಾ ವೈಭವದಿಂದ ನೋಡುಗರ ತಣಿಸುತ್ತಿದೆ. ದೂರದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿ ಶಿಲಾಬಾಲಿಕೆಗಳ ಕೆತ್ತನೆ ಆರಂಭಕ್ಕಿಂತ ಸುಮಾರು ನೂರು ವರ್ಷಗಳಷ್ಟು ಮುಂಚಿತವಾಗಿಯೇ ಜಲಸಂಗ್ವಿ ಕಲ್ಲೇಶ್ವರ ಶಿವ ಮಂದಿರದ ಗೋಡೆಗಳ ಮೇಲೆ ಶಿಲಾಬಾಲಿಕೆಗಳು ನಿರ್ಮಾಣವಾಗಿವೆ ಎಂಬುದು ಹಲವರ ಮಾತು. ಶಾರದೆ, ನಾಟ್ಯ ಗಣಪ, ಗಿಣಿ ಸಂಗಡ ಸಂಭಾಷಣೆಯ ಸಂದೇಶ ಸಾರುವ 30ಕ್ಕೂ ಹೆಚ್ಚು ಶಿಲಾಬಾಲಿಕೆಗಳು ಇಲ್ಲಿವೆ. ಈ ದೇವಾಲಯದಲ್ಲಿನ ಶಿಲ್ಪಕಲೆಯನ್ನು ನೋಡುವುದೇ ಒಂದು ಅದ್ಭುತ ಅನುಭವ.
ಜತನ ಮಾಡಬೇಕಿದೆ
ಕಲ್ಲೇಶ್ವರ ಮಂದಿರದ ಪ್ರಾಂಗಣವನ್ನು ಚೊಕ್ಕವಾಗಿಡಬೇಕಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೂರಲು ಸಾಕಷ್ಟು ಆಸನಗಳು, ಶೌಚಾಲಯ, ದೇವಾಲಯದ ಇತಿಹಾಸ ಮತ್ತು ಮಹತ್ವವನ್ನು ತಿಳಿಸುವ ಫಲಕಗಳು, ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಬೇಕಿದೆ. ಉತ್ತಮ ಪ್ರಚಾರದೊಂದಿಗೆ ಈ ತಾಣವನ್ನು ಪ್ರವಾಸಿ ಆಕರ್ಷಿಸಬಹುದು. ʼಈ ಕುರಿತು ಅಧಿಕಾರಿಗಳಿಗೆ ಜಲಸಂಗ್ವಿ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೂ ಈವರೆಗೆ ಯಾರಿಂದಲೂ ಯಾವ ಸ್ಪಂದನೆಗಳೂ ಸಿಕ್ಕಿಲ್ಲʼ ಎನ್ನುತ್ತಾರೆ ಸ್ಥಳೀಯ ಅನಿರುದ್ಧ.
ಈ ಅಪರೂಪದ ದೇವಾಲಯದ ರಕ್ಷಣೆಗೆ ಸರಕಾರ ಮುತುವರ್ಜಿ ವಹಿಸಿಕೊಳ್ಳಬೇಕಿದೆ. ಮುಂದಿನ ಪೀಗಾಗಿ ಇದನ್ನು ಕಾಪಾಡಿಕೊಳ್ಳಬೇಕಿದೆ. ಜಲಸಂಗ್ವಿ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಜನ ಪ್ರತಿನಿದಿಗಳು ಈ ನಿಟ್ಟಿನಲ್ಲಿ ಸರಕಾರದ ಗಮನಸೆಳೆಯಬೇಕು.
ದಾರಿ ಹೇಗೆ?
ಹುಮನಬಾದ್ ಹತ್ತಿರದ ರೈಲು ನಿಲ್ದಾಣ. ಅಲ್ಲಿಂದ ಜಲಸಂಗ್ವಿ ಶಿವ ಮಂದಿರಕ್ಕೆ ಸ್ಥಳೀಯ ವಾಹನಗಳು, ಸರಕಾರಿ ಸಾರಿಗೆಗಳ ಮೂಲಕ ತಲುಪಬಹುದು.