ಪ್ರವಾಸಿ ಪ್ರಪಂಚ ಕರ್ನಾಟಕದ ಹೆಮ್ಮೆ; ಸಿದ್ದರಾಮಯ್ಯ
ಯಾವುದೇ ಪ್ರವಾಸಿ ಸ್ಥಳಕ್ಕೆ ಉತ್ತಮ ಸಂಪರ್ಕ ಮತ್ತು ಅತಿಥಿ ಸತ್ಕಾರ ಅತ್ಯವಶ್ಯ. ಕರ್ನಾಟಕ ರಾಜ್ಯವು ಸುಧಾರಿತ ವಿಮಾನ ಸಂಪರ್ಕವನ್ನು ಹೊಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. - ಸಿದ್ದರಾಮಯ್ಯ
ಭಾರತ ಮತ್ತು ವಿಶ್ವದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ವಾಸೋದ್ಯಮ ತಾಣವೆಂಬ ಸ್ಥಾನವನ್ನು ಧೃಡೀಕರಿಸಿದೆ. ಕರ್ನಾಟಕ ಇಂದು ಅದ್ವಿತೀಯ ವೈವಿಧ್ಯತೆಗಳ ಸಂಗಮದೊಂದಿಗೆ ಅವಕಾಶಗಳ ಹೆಬ್ಬಾಗಿಲಾಗಿರುವುದು ವಿಶೇಷ.
ಇಲ್ಲಿ ಪುರಾತನ ಪರಂಪರೆಯು ಆಧುನಿಕ ನಾವೀನ್ಯತೆಯನ್ನು ಸಂಧಿಸುತ್ತದೆ. ನಮ್ಮ ಭವ್ಯ ಪರಂಪರೆಯ ಹಂಪಿ, ಬಾದಾಮಿ, ಮತ್ತು ಮೈಸೂರಿನಿಂದ ಹಿಡಿದು, ಕರಾವಳಿಯ ಸುಂದರ ಕಡಲತೀರಗಳವರೆಗೆ ನಮ್ಮ ರಾಜ್ಯವು ಪ್ರವಾಸಿಗರ ಸ್ವರ್ಗ. ಜೈನಬಸದಿಗಳ ಕೇಂದ್ರವಾಗಿ, ವೈವಿಧ್ಯಮಯ ವಿಚಾರಧಾರೆಗಳ ಸೂಫಿ ಸಂತರ ನೆಲೆಬೀಡಾಗಿ ,ಚಿಕ್ಕಮಗಳೂರಿನ ಕಾಫಿ ಕೃಷಿಯ ಘಮ, ನಾಗರಹೊಳೆಯ ವನ್ಯಜೀವಿ ಸಂಪತ್ತು, ಚಾರಣಿಗರನ್ನು ಕೈ ಬೀಸಿ ಕರೆಯುವ ಪಶ್ಚಿಮ ಘಟ್ಟಗಳ ರಮಣೀಯ ನಿಸರ್ಗ, ಸಾಹಸಮಯ ಜಲ ಕ್ರೀಡೆಗಳು ಹೀಗೆ ಎಲ್ಲವನ್ನೂ ಒಳಗೊಂಡು ಕರ್ನಾಟಕ ಹೆಮ್ಮೆಯ ತಾಣವಾಗಿದೆ.

ನಮ್ಮ ರಾಜ್ಯದ ನಾಲ್ಕು ತಾಣಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, 35 ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯ, ಗಿರಿಧಾಮಗಳು, ಆಧ್ಯಾತ್ಮಿಕ ಕೇಂದ್ರಗಳು, ಸಾಹಸ ತಾಣಗಳು ಹಾಗೂ ದೇಶದಲ್ಲಿಯೇ ಅತ್ಯುತ್ತಮ ಕ್ಷೇಮ ಕೇಂದ್ರಗಳನ್ನು ಹೊಂದಿದೆ. ಕರ್ನಾಟಕದ ಆರ್ಥಿಕ ಪ್ರಗತಿಗೆ ಪ್ರವಾಸೋದ್ಯಮ ವಲಯವು ಹೊಂದಿರುವ ಅಗಾಧ ಸಾಮರ್ಥ್ಯವನ್ನು ಸರ್ಕಾರ ಗುರುತಿಸಿದೆ. ಮೂಲಸೌಕರ್ಯ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳು ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೇಲೆ ಹೂಡಿಕೆ ಮಾಡುವ ಮೂಲಕ ಕರ್ನಾಟಕವು ಪ್ರಧಾನ ಪ್ರವಾಸ ತಾಣವಾಗಿ ಉಳಿಯುವಂತೆ ಮಾಡಲು ನಾವು ನಿರ್ಣಾಯಕ ಹೆಜ್ಜೆಗಳನ್ನು ಇರಿಸಿದ್ದೇವೆ.
ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರವು ರಾಜ್ಯದ ಪ್ರವಾಸೋದ್ಯಮ ವಲಯದಲ್ಲಿ ಮೂಲಸೌಕರ್ಯ, ಉತ್ಪನ್ನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ 440 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿ ಮಾಡಲಾಗಿದ್ದು, ಇದು ಅಭಿವೃದ್ಧಿ, ನಾವೀನ್ಯತೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಬುನಾದಿ ಹಾಕಿದೆ.
ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳಿಗೆ ಕರ್ನಾಟಕದಲ್ಲಿ ವ್ಯವಹಾರವನ್ನು ಸರಳಗೊಳಿಸಲು ನಾವು ಬದ್ಧರಾಗಿದ್ದೇವೆ. ಇದನ್ನು ಸಾಧ್ಯವಾಗಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆಯನ್ನು ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯ, ವಸತಿ ಮತ್ತು ನೂತನ ಪ್ರವಾಸೋದ್ಯಮ ಉತ್ಪನ್ನಗಳನ್ನು ನಾವು ಉತ್ತೇಜಿಸುತ್ತಿದ್ದೇವೆ.
ನಮ್ಮ ಪ್ರವಾಸೋದ್ಯಮ ನೀತಿಯನ್ನು ಅನುಷ್ಠಾನಗೊಳಿಸಲು ನಾವು 1350 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಮೀಸಲಿರಿಸಿದ್ದೇವೆ. ಇದು 8000 ಕೋಟಿ ರೂ.ಗಳ ನೇರ ಹೂಡಿಕೆಯನ್ನು ಆಕರ್ಷಿಸುವ ಹಾಗೂ 1.5 ಲಕ್ಷ ಉದ್ಯೋಗಾವಕಾಶಗಳನ್ನು ಸೃಜಿಸುವ ಗುರಿಯನ್ನು ಹೊಂದಿದೆ. ಈ ನೀತಿಯು ಪ್ರವಾಸೋದ್ಯಮ ಉದ್ಯಮಿಗಳು ಅಭಿವೃದ್ಧಿಹೊಂದಲು, ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು ಹಾಗೂ ಕರ್ನಾಟಕದ ಅಭಿವೃದ್ಧಿಗೆ ಬುನಾದಿಯಾಗಲಿದೆ.

ನಮ್ಮ ಪ್ರವಾಸೋದ್ಯಮ ವಲಯಕ್ಕೆ ಪ್ರಮುಖವಾಗಿರೋ KITE ಕಾರ್ಯಕ್ರಮದ ಮೂಲಕ 90 ಅಂತರರಾಷ್ಟ್ರೀಯ ಖರೀದಿದಾರರು, 15 ಅಂತರರಾಷ್ಟ್ರೀಯ ಮಾಧ್ಯಮಗಳು, 230 ಸ್ಥಳೀಯ ಖರೀದಿದಾರರು, 23 ಸ್ಥಳೀಯ ಮಾಧ್ಯಮಗಳು, 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಾಧ್ಯಮಗಳನ್ನು ಒಟ್ಟುಗೂಡಿಸಲಾಗುತ್ತಿದೆ. ಇಂಥ ಎಕ್ಸ್ ಪೋ ಗಳು ಜರುಗುವುದರಿಂದ ವ್ಯಾಪಾರ ಪಾಲುದಾರಿಕೆಗಳು, ನೂತನ ಪ್ರವಾಸಿ ಪ್ಯಾಕೇಜುಗಳು ಹಾಗೂ ಹೆಚ್ಚಿನ ಜಾಗತಿಕ ಅವಕಾಶಗಳು ಸೃಷ್ಟಿಯಾಗಲಿವೆ.
ಅತಿಥಿ ಸತ್ಕಾರ, ಸಂಪರ್ಕ ಮತ್ತು ಮೂಲಸೌಕರ್ಯ
ಯಾವುದೇ ಪ್ರವಾಸಿ ಸ್ಥಳಕ್ಕೆ ಉತ್ತಮ ಸಂಪರ್ಕ ಮತ್ತು ಅತಿಥಿ ಸತ್ಕಾರ ಅತ್ಯವಶ್ಯ. ಕರ್ನಾಟಕ ರಾಜ್ಯವು ಸುಧಾರಿತ ವಿಮಾನ ಸಂಪರ್ಕವನ್ನು ಹೊಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಗುಣಮಟ್ಟದ ರಸ್ತೆ ಮತ್ತು ರೈಲ್ಪೆ ಸಂಪರ್ಕಗಳು ಉತ್ತಮ ಪ್ರಯಾಣದ ಅನುಭವವನ್ನು ನೀಡುತ್ತದೆ.
ಗುಣಮಟ್ಟದ ರೆಸಾರ್ಟ್ ಗಳಿಂದ ಹೋಂಸ್ಟೇಗಳವರೆಗೂ ಹರಡಿರುವ ಅತಿಥಿಸತ್ಕಾರದ ವ್ಯವಸ್ಥೆ ಕರ್ನಾಟಕದ ನಿಜ ಸೊಬಗನ್ನು ಪ್ರಯಾಣಿಕರಿಗೆ ತೆರೆದಿಡುತ್ತಿದೆ.
ಪ್ರವಾಸೋದ್ಯಮದ ಸುಸ್ಥಿರ ಕ್ರಮಗಳು ಕರ್ನಾಟಕದ ಪ್ರಾಕೃತಿಕ ಸೌಂದರ್ಯವನ್ನು ಮುಂದಿನ ಪೀಳಿಗೆಗೂ ಕಾಪಿಡುತ್ತಿದೆ.
1.ಮೂಲಸೌಕರ್ಯ ಅಭಿವೃದ್ಧಿ:
ಉತ್ತಮ ಸಂಪರ್ಕ, ವಿಶ್ವದರ್ಜೆಯ ಸೌಕರ್ಯಗಳು, ವಿಸ್ತರಿಸಿದ ವಿಮಾನಸೌಲಭ್ಯ ಮತ್ತು ಸುಧಾರಿತ ಸಾರ್ವಜನಿಕ ಸಾರಿಗೆಗಳು ತಡೆರಹಿತ ಪ್ರಯಾಣಕ್ಕೆ ಸಹಕರಿಸುತ್ತದೆ.
2.ಕೌಶಲ್ಯಾಭಿವೃದ್ಧಿ
ಸ್ಥಳೀಯ ಮಟ್ಟದಲ್ಲಿ ಯುವಕ ಯುವತಿಯರಿಗೆ ಅತಿಥಿಸತ್ಕಾರ ಹಾಗೂ ಪ್ರವಾಸೋದ್ಯಮದ ಕ್ಷೇತ್ರದಲ್ಲಿ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಿದಂತಾಗುತ್ತದೆ.
3. ಸುಸ್ಥಿರ ಪ್ರವಾಸೋದ್ಯಮಕ್ಕೆ ಕ್ರಮ
ಪರಿಸರ ಪ್ರವಾಸೋದ್ಯಮ, ಸಮುದಾಯ ಆಧಾರಿತ ಪ್ರವಾಸೋದ್ಯಮ ಮತ್ತು ಜವಾಬ್ದಾರಿಯುತ ಪ್ರವಾಸಿ ಮಾದರಿಗಳಂತಹ ಸುಸ್ಥಿರ ಪ್ರವಾಸೋದ್ಯಮ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.’
4. ತಂತ್ರಜ್ಞಾನ ಆಧಾರಿತ ಕ್ರಮಗಳು:
ಡಿಜಿಟಲ್ ಫ್ಲಾಟ್ ಫಾರ್ಮ್ ಗಳನ್ನು ಬಳಸಿಕೊಳ್ಳುವ ಮೂಲಕ ಕರ್ನಾಟಕದ ಪ್ರವಾಸೋದ್ಯಮವನ್ನು ಹೆಚ್ಚು ಸುಲಭ ಹಾಗೂ ಗ್ರಾಹಕ ಸ್ನೇಹಿಯಾಗಿಸಬಹುದು.
ಕರ್ನಾಟಕ ಕೇವಲ ಗಮ್ಯವಲ್ಲ; ಅದು ನಿಮ್ಮೊಂದಿಗೆ ಸದಾ ಉಳಿಯಲಿರುವ ಅನುಭವ
ನಮ್ಮ ಪಾರಂಪರಿಕ ತಾಣಗಳು, ಕರಾವಳಿಯ ಸೌಂದರ್ಯ, ಗಿರಿಧಾಮಗಳು ಹಾಗೂ ರೋಮಾಂಚಕ ಸಾಂಸ್ಕೃತಿಕ ಕೇಂದ್ರಗಳನ್ನು ಭೇಟಿ ಮಾಡಿ. ಜನರ ಹುರುಪು, ನಮ್ಮ ಸಂಪ್ರದಾಯಗಳ ಶ್ರೀಮಂತಿಕೆ ಮತ್ತು ನಮ್ಮ ವಿಶಿಷ್ಟ ಅಡುಗೆ ತಿನಿಸುಗಳ ರುಚಿಯನ್ನು ಸವಿಯಬೇಕು
ಕರ್ನಾಟಕ ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಶ್ರೇಷ್ಠತೆಯಲ್ಲಿ ಮುಂಚೂಣಿಯಲ್ಲಿರಲಿದೆ. ಅನ್ವೇಷಣೆ, ಹೂಡಿಕೆ ಅಥವಾ ಪ್ರವಾಸೋದ್ಯಮಕ್ಕೆ ಉತ್ತೇಜನ ಈ ಯಾವ ಉದ್ದೇಶಗಳನ್ನು ನೀವು ಹೊಂದಿದ ಪ್ರತಿಯೊಬ್ಬರೂ, ಕರ್ನಾಟಕದ ಅದ್ಭುತ ಕಥೆಯ ಭಾಗವಾಗಬಹುದು.
ಸಾಹಸವನ್ನು ಅಪೇಕ್ಷಿಸುವ ಪ್ರತಿ ಪ್ರವಾಸಿಗನನ್ನು , ಶಾಂತಿಯನ್ನು ಅರಸುವ ಪ್ರತಿ ಆತ್ಮವನ್ನು, ಜ್ಞಾನವನ್ನು ಬೇಡುವ ಪ್ರತಿ ಮನಸ್ಸನ್ನು; ಕರ್ನಾಟಕ ತೆರೆದ ಬಾಹುಗಳಿಂದ ಸ್ವಾಗತಿಸುತ್ತದೆ.
ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಹೆಮ್ಮೆಯಾಗಿಸೋಣ, ವಿಶ್ವಕ್ಕೆ ನಮ್ಮ ಅಚ್ಚರಿಯ ನಾಡನ್ನು ಬಿಂಬಿಸೋಣ. ಕರ್ನಾಟಕವನ್ನು ಭಾರತದ ಪ್ರಮುಖ ಪ್ರವಾಸಿ ತಾಣವಾಗಿಸುವ ಉಜ್ವಲ ಭವಿಷ್ಯವನ್ನು ಕಟ್ಟೋಣ.
ನಿಮ್ಮ ಪಟ್ಟಿಯಲ್ಲಿ ನಮ್ಮ ತಾಣಗಳನ್ನು ಸೇರಿಸಿ ಹಾಗು ಹೆಚ್ಚು ಹೆಚ್ಚು ಪ್ರವಾಸಿಗರಿಗೆ ನಮ್ಮ ರಾಜ್ಯದ ಕೌತುಕಗಳನ್ನು ಪರಿಚಯಿಸಿ.

ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಕರ್ನಾಟಕ ಸರ್ಕಾರ ಅಗತ್ಯ ನೆರವು, ಪ್ರೋತ್ಸಾಹಗಳು, ಹಾಗೂ ಆಫ್ ಡೂಯಿಂಗ್ ಬ್ಯುಸಿನೆಸ್ ವ್ಯವಸ್ಥೆಗಳನ್ನು ಒದಗಿಸಲು ಬದ್ಧವಾಗಿದೆ.
ಕರ್ನಾಟಕದ ಜನತೆ ನಮ್ಮ ರಾಜ್ಯದ ರಾಯಭಾರಿಗಳಾಗಬೇಕು. ಅತಿಥಿಗಳಿಗೆ ಬೆಚ್ಚನೆಯ ಸ್ವಾಗತ ನೀಡಿ ನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸಬೇಕು.
ಭಾರತದಲ್ಲಿ ಕರ್ನಾಟಕವನ್ನು ಪ್ರಮುಖ ಪ್ರವಾಸೋದ್ಯಮ ತಾಣವಾಗಿಸಲು ಟೂರ್ ಆಪರೇಟರ್ ಗಳು ಮತ್ತು ಉದ್ಯಮದ ವೃತ್ತಿಪರರು, ಹೂಡಿಕೆದಾರರು, ಉದ್ಯಮಿಗಳು, ಮಾಧ್ಯಮಗಳು ನಮ್ಮೊಂದಿಗೆ ಕೈಜೋಡಿಸುವಂತೆ ನಾನು ಕೋರುತ್ತೇನೆ. ಸಂಪರ್ಕಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಒಟ್ಟಾಗಿ ಕಾರ್ಯನಿರ್ವಹಿಸೋಣ ಹಾಗೂ ಕರ್ನಾಟಕದ ಪ್ರವಾಸೋದ್ಯಮದ ಭವಿಷ್ಯವನ್ನು ಉಜ್ವಲಗೊಳಿಸೋಣ.
ಈ ದಿಸೆಯಲ್ಲಿ ಶ್ರೀ ವಿಶ್ವೇಶ್ವರ ಭಟ್ ರವರ ಪ್ರವಾಸಿ ಪ್ರಪಂಚ ಕರ್ನಾಟಕ ಪ್ರವಾಸೋದ್ಯಮಕ್ಕೆ ಪೂರಕವಾಗಿ ಇರುತ್ತದೆ ಎಂಬ ವಿಶ್ವಾಸ ನನ್ನದು. ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಚಾರಗಳನ್ನು ಒಳಗೊಂಡ ಬ್ರಾಡ್ ಶೀಟ್ ಮಾದರಿಯ ವರ್ಣಮಯ ಪತ್ರಿಕೆ ಅಂದರೆ ಅದು ಕನ್ನಡದ ಪ್ರವಾಸಿ ಪ್ರಪಂಚ. ಇದು ಕರ್ನಾಟಕಕ್ಕೆ ಹೆಮ್ಮೆ ತರುವ ಸಂಗತಿ. ಇಂಥ ಪತ್ರಿಕೆ ಹೊರತರುವುದಕ್ಕೆ, ದೇಶವಿದೇಶಗಳಲ್ಲಿ ಸವಿವರವಾದ ಪ್ರವಾಸಗಳನ್ನು ಕೈಗೊಂಡು ಅನುಭವ ಹೊಂದಿರುವ ಮತ್ತು ಪ್ರವಾಸಿ ವಿಷಯಗಳನ್ನು ಕುರಿತಾದ ಹಲವು ಪುಸ್ತಕಗಳನ್ನು ರಚಿಸಿರುವ ವಿಶ್ವೇಶ್ವರ ಭಟ್ ರವರಿಗಿಂತ ಸೂಕ್ತ ವ್ಯಕ್ತಿ ಇನ್ನೊಬ್ಬರಿಲ್ಲ. ಪ್ರವಾಸಿ ಪ್ರಪಂಚ ಪತ್ರಿಕೆಯು ರಾಜ್ಯ ಪ್ರವಾಸೋದ್ಯಮಕ್ಕೆ ಮತ್ತು ರಾಜ್ಯದ ಪ್ರವಾಸಿಪ್ರಿಯರಿಗೆ ಉಪಯುಕ್ತವಾದ ಪತ್ರಿಕೆಯಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸುತ್ತೇನೆ.