Saturday, July 25, 2026
Saturday, July 25, 2026

ಗೋಕರ್ಣದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯ

ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 33ನೇ ಚಾತುರ್ಮಾಸ್ಯ ವ್ರತವನ್ನು ‘ಅನ್ನಬ್ರಹ್ಮʼ ಚಾತುರ್ಮಾಸ್ಯ ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗಿದೆ. ಆಹಾರದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದಷ್ಟೇ ಅಲ್ಲದೆ ಅನ್ನವನ್ನು ಗೌರವಿಸುವ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಈ ಬಾರಿಯ ಚಾತುರ್ಮಾಸ್ಯದ ಪರಿಕಲ್ಪನೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣವು ಈ ವರ್ಷ ಮತ್ತೊಮ್ಮೆ ಭಕ್ತಿ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗುತ್ತಿದೆ. ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 33ನೇ ಚಾತುರ್ಮಾಸ್ಯ ವ್ರತವು ಇದೇ ಜುಲೈ 29ರಿಂದ ಸೆಪ್ಟೆಂಬರ್‌ 26ರ ವರೆಗೆ 60 ದಿನಗಳ ಕಾಲ ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯಲಿದೆ. ಕಳೆದ ವರ್ಷ ʻಸ್ವಭಾಷಾ ಚಾತುರ್ಮಾಸʼ ಎಂಬ ಹೆಸರಿನಲ್ಲಿ ಮರೆತು ಹೋದ ಮನೆ ಮಾತನ್ನು ಮರಳಿ ನೆನಪಿಸುವ ಉದ್ದೇಶದೊಂದಿಗೆ ಚಾತುರ್ಮಾಸದ ಆಚರಣೆ ಮಾಡಲಾಗಿತ್ತು. ತಾಯ್ನುಡಿಯನ್ನು ತಪ್ಪಿಲ್ಲದೆ ಶುದ್ಧವಾಗಿ ಮಾತನಾಡಬೇಕು ಎಂಬ ಯೋಜನೆಯೊಂದಿಗೆ ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರಲಾಗಿತ್ತು. ಈ ಬಾರಿ ಹೊಸ ಸೂತ್ರದೊಂದಿಗೆ 33ನೆಯ ಚಾತುರ್ಮಾಸಕ್ಕೆ ವ್ರತಕ್ಕೆ ರಾಘವೇಶ್ವರ ಶ್ರೀಗಳು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹಿಮಾಲಯದ ಎದೆಯಲ್ಲಿ ಭಾರತೀಯ ವೀರರ ಅಮರ ತಾಣ

ಆಷಾಢ ಶುಕ್ಲ ಪೂರ್ಣಿಮೆಯಿಂದ ಭಾದ್ರಪದ ಶುಕ್ಲ ಪೂರ್ಣಿಮೆಯವರೆಗೆ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಾಂವತ್ಸರಿಕ ಆಚರಣೆಯಂತೆ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ. ತಮ್ಮ ಚಾತುರ್ಮಾಸ್ಯವನ್ನು ಸಮಾಜದ ಒಳಿತಿಗೆ ಅನುಕೂಲವಾಗುವಂತೆ ಸಂಯೋಜಿಸುತ್ತಾ ಬಂದಿರುವ ಶ್ರೀ ಸಂಸ್ಥಾನವರು, ಚಾತುರ್ಮಾಸ್ಯಗಳನ್ನು ನಿರ್ದಿಷ್ಟ ಪರಿಕಲ್ಪನೆಗೆ ಒಳಪಡಿಸಿ, ಅದರ ಮೂಲಕ ಜ್ಞಾನ ಜಾಗರಣ ಮಾಡುವುದಲ್ಲದೆ ಆ ಪುಣ್ಯಕಾರ್ಯಗಳಲ್ಲಿ ಶಿಷ್ಯ-ಭಕ್ತರು ಭಾಗಿಯಾಗುವಂತೆ ಮಾಡಿರುವುದು ಶ್ರೀ ಸಂಸ್ಥಾನದವರ ಗರಿಮೆ.

Untitled design - 2026-07-25T200525.237

‘ಅನ್ನಬ್ರಹ್ಮʼ ಚಾತುರ್ಮಾಸ್ಯ

ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 33ನೇ ಚಾತುರ್ಮಾಸ್ಯ ವ್ರತವನ್ನು ‘ಅನ್ನಬ್ರಹ್ಮʼ ಚಾತುರ್ಮಾಸ್ಯ ಎಂಬ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗಿದೆ. ಆಹಾರದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದಷ್ಟೇ ಅಲ್ಲದೆ ಅನ್ನವನ್ನು ಗೌರವಿಸುವ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ʻಅನ್ನಂ ಬ್ರಹ್ಮʼ ಎಂಬ ತತ್ತ್ವಕ್ಕೆ ಅತ್ಯುನ್ನತ ಸ್ಥಾನವಿದೆ. ಅನ್ನವು ಕೇವಲ ಹಸಿವು ನೀಗಿಸುವ ಆಹಾರವಷ್ಟೇ ಅಲ್ಲದೆ ಅದು ಜೀವನದ ಆಧಾರವಾಗಿದೆ. ಅನ್ನವನ್ನು ಆರೋಗ್ಯದ ಮೂಲ ಮತ್ತು ದೈವಸ್ವರೂಪ ಎಂದು ನಮ್ಮ ಋಷಿಮುನಿಗಳು ಸಾರಿದ್ದಾರೆ. ಇದೇ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಈ ವರ್ಷದ ಚಾತುರ್ಮಾಸ್ಯಕ್ಕೆ ‘ಅನ್ನಬ್ರಹ್ಮ’ ಎಂಬ ಅರ್ಥಪೂರ್ಣ ಹೆಸರು ನೀಡಲಾಗಿದೆ.

ಚಾತುರ್ಮಾಸ್ಯದ ಅವಧಿಯಲ್ಲಿ ಆಹಾರದ ವೈಜ್ಞಾನಿಕತೆ, ಸಾತ್ವಿಕ ಆಹಾರದ ಮಹತ್ವ, ಸರಿಯಾದ ಸಮಯದಲ್ಲಿ ಭೋಜನ, ಜಲಪಾನದ ನಿಯಮಗಳು, ಉಪವಾಸದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಹತ್ವ, ಭೋಜನದ ನಂತರ ಪಾಲಿಸಬೇಕಾದ ಜೀವನಶೈಲಿ, ಆಹಾರವನ್ನು ವ್ಯರ್ಥ ಮಾಡದಿರುವುದು ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಕುರಿತು ವಿಶೇಷ ಪ್ರವಚನಗಳು ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಆಧುನಿಕ ಜೀವನಶೈಲಿಯಲ್ಲಿ ಹೆಚ್ಚುತ್ತಿರುವ ಅನಾರೋಗ್ಯ ಸಮಸ್ಯೆಗಳಿಗೆ ಸಾತ್ವಿಕ ಹಾಗೂ ಸಮತೋಲನ ಆಹಾರವೇ ಪರಿಹಾರ ಎಂಬ ಸಂದೇಶವನ್ನು ಈ ಕಾರ್ಯಕ್ರಮಗಳ ಮೂಲಕ ಸಾರಲಾಗುತ್ತಿದೆ.

ಇಂದಿನ ದಿನಗಳಲ್ಲಿ ಆಹಾರ ವ್ಯರ್ಥವಾಗುತ್ತಿರುವುದು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಕೇವಲ ಧಾರ್ಮಿಕ ಆಚರಣೆಯಾಗದೆ, ಆರೋಗ್ಯಕರ ಜೀವನ, ಪರಿಸರ ಸಂರಕ್ಷಣೆ ಮತ್ತು ಆಹಾರದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸುವ ಸಾಮಾಜಿಕ ಚಳವಳಿಯಾಗಿಯೂ ರೂಪುಗೊಳ್ಳುತ್ತಿದೆ. ʻಅನ್ನವೇ ಪರಮಾತ್ಮʼ ಎಂಬ ಶಾಶ್ವತ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುವ ಈ ಚಾತುರ್ಮಾಸ್ಯ, ಗೋಕರ್ಣದ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶಿಷ್ಟ ಉತ್ಸವವಾಗಿದೆ.

Untitled design - 2026-07-25T200516.483

ಪ್ರಮುಖ ದಿನಗಳ ಮಾಹಿತಿ

29-07-2026

ಶ್ರೀವ್ಯಾಸಪೂಜೆ

30-07-2026

ಶ್ರೀಪರಿವಾರ ದಿನ

01-08-2026

ಶ್ರೀ ವರ್ಧಂತಿ

02-08-2026

ಗುರಿಕಾರ ದಿನ

04-09-2026

ಶ್ರೀಕೃಷ್ಣಜನ್ಮಾಷ್ಟಮಿ

14-09-2026

ಶ್ರೀಗಣೇಶಚತುರ್ಥಿ

26-09-2026

ಸೀಮೋಲ್ಲಂಘನ

27-09-2026

ಅನ್ನಬ್ರಹ್ಮ ಮಹಾಸಮಾರೋಪ

--

ಪ್ರತಿ ವರ್ಷ ಚಾತುರ್ಮಾಸ್ಯ ಮಾಡುವಾಗಲೂ ಒಂದು ಸೂತ್ರವನ್ನು ತೆಗೆದುಕೊಳ್ಳುತ್ತೇವೆ. ಕಳೆದ ವರ್ಷ ಸ್ವಭಾಷಾ ಚಾತುರ್ಮಾಸ್ಯ ಎನ್ನುವ ಹೆಸರಿನಲ್ಲಿ ತಾಯ್ನುಡಿಯನ್ನು ತಪ್ಪಿಲ್ಲದೆ ಶುದ್ಧವಾಗಿ ಮಾತನಾಡಬೇಕು ಎಂಬ ಯೋಜನೆಯೊಂದಿಗೆ ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರಿದ್ದೇವೆ. ಈ ಬಾರಿ ಚಾತುರ್ಮಾಸ್ಯದಲ್ಲಿ ಆಹಾರವೇ ಸೂತ್ರ. ಅದಕ್ಕಾಗಿಯೇ ʻಅನ್ನಬ್ರಹ್ಮʼ ಚಾತುರ್ಮಾಸವೆಂದು ಹೆಸರಿಟ್ಟಿದ್ದೇವೆ. ಅನ್ನಬ್ರಹ್ಮವೆಂಬುದು ವೈದಿಕ ಪ್ರಯೋಗ. ʻಅನ್ನಂ ಬ್ರಹ್ಮೇತಿ ವ್ಯಜಾನಾತ್‌ʼ ಎನ್ನುತ್ತದೆ ಉಪನಿಷತ್ತು. ಭೃಗು ಮಹರ್ಷಿ ಪರಮಾತ್ಮ ಎಂದರೆ ಯಾವುದು ಎಂದು ಅನ್ವೇಷಣೆ ಮಾಡುತ್ತಾ ಹೋದಾಗ ಮೊದಲಿಗೆ ಆತನಿಗೆ ಸ್ಪುರಿಸಿದ್ದು ಅನ್ನವೇ ಬ್ರಹ್ಮ ಎಂಬುದಾಗಿದೆ. ಹಾಗಾಗಿ ಅದನ್ನೇ ಇಲ್ಲಿ ಬಳಕೆ ಮಾಡಿಕೊಂಡು ʻಅನ್ನಬ್ರಹ್ಮʼ ಚಾತುರ್ಮಾಸ್ಯವನ್ನು ಆಯೋಜನೆ ಮಾಡಲಾಗಿದೆ. ಅನ್ನವು ಬ್ರಹ್ಮವಾಗುವುದು ಹೇಗೆ ಎಂಬುದನ್ನು ಈ 60 ದಿನಗಳ ಚಾತುರ್ಮಾಸ್ಯದಲ್ಲಿ ತಿಳಿದುಕೊಳ್ಳಲಾಗುತ್ತದೆ.

- ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

--

ಬಾಕ್ಸ್‌ ಕೋಟ್:

ಜೀವದಾನವೆನಿಸಿದ ಅನ್ನದಾನ ಮಾಡುವ ಮೂಲಕ ಪುಣ್ಯಭಾಗಿಗಳಾಗಲು ಎಲ್ಲರಿಗೂ ಅವಕಾಶವಿದೆ. ಅನ್ನಬ್ರಹ್ಮ ಚಾತುರ್ಮಾಸದ ಸಂದರ್ಭದಲ್ಲಿ ಅನ್ನದಾನದಲ್ಲಿ ನಿಮ್ಮ ಕೊಡುಗೆ ನೀಡಬಯಸಿದರೆ ಸ್ಕ್ಯಾನರ್‌ ಬಳಸಿ ಹಣ ಪಾವತಿ ಮಾಡಬಹುದು. ಅಥವಾ ನೇರ ಭೇಟಿ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

ANNABRAHMA CHATURMASYA

(A Unit Of SriRamachandrapura Matha)

KARNATAKA BANK, SRINAGAR BRANCH, BENGALURU

ACCOUNT NUMBER: 0099252600012401

IFSC CODE: KARB0000099

ಅಂಚೆ: ಗೋಕರ್ಣ, ತಾ: ಕುಮಟಾ, ಉತ್ತರ ಕನ್ನಡ - 581326

+91 94814 88680 | +919448560687

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ