ಚಿಂತೆ ಮರೆಮಾಡುವ ಸುಂದರ ದೇವಾಲಯ - ತಾಡಿಪತ್ರಿಯ ಚಿಂತಲ ವೆಂಕಟರಮಣಸ್ವಾಮಿ
ಚಿಂತಲ ವೆಂಕಟರಾಯಸ್ವಾಮಿ..ಕಪ್ಪುಕಲ್ಲಿನಲ್ಲಿ ಕೆತ್ತಿರುವ ಮಂಟಪಗಳಿಂದಾಗಿ ಸದಾಕಾಲವೂ ತಂಪಾಗಿರುವ ಈ ದೇವಾಲಯದ ಶಿಲ್ಪಕಲೆಯ ಸೌಂದರ್ಯ ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ. ಮನಸ್ಸಿನ ಎಲ್ಲಾ ಚಿಂತೆಗಳು ಮರೆತು ಹೋಗುವಂತೆ ಮಾಡುತ್ತದೆ. - ಶಿವಪ್ರಕಾಶ್ ಭೋಗಣ್ಣ
ನಮ್ಮ ದೇಶದ ಅತ್ಯಂತ ಜನಪ್ರಿಯ ದೇವರು – ಶ್ರೀ ವೆಂಕಟೇಶ್ವರ ಸ್ವಾಮಿ. ಬೆಂಗಳೂರಿನಿಂದ ಪೂರ್ವಕ್ಕೆ ಸುಮಾರು ಐದುಗಂಟೆ (250 ಕಿ.ಮೀ) ಪ್ರಯಾಣಿಸಿದರೆ ವೆಂಕಟೇಶ್ವರನ ಪ್ರಸಿದ್ಧ ಕ್ಷೇತ್ರವಾದ ತಿರುಪತಿ ಸಿಗುತ್ತದೆ. ಇಲ್ಲಿಗೆ ಪ್ರತಿ ದಿನವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹಾಗಾಗಿ, ಸಮಾಧಾನವಾಗಿ ವೆಂಕಟೇಶ್ವರನ ದರ್ಶನ ಪಡೆಯುವುದು ಸಾಧ್ಯವಾಗದ ಮಾತು. ಹೆಚ್ಚು ಜನಸಂದಣಿ ಇಲ್ಲದ ಮತ್ತು ಪ್ರಶಾಂತವಾದ ವೆಂಕಟೇಶ್ವರನ ಸನ್ನಿಧಿ ನಿಮಗೆ ಬೇಕೆ? ಹಾಗಾದರೆ, ನೀವು ಬೆಂಗಳೂರಿನ ಉತ್ತರ ದಿಕ್ಕಿಗೆ ಅನಂತಪುರ ಮಾರ್ಗದಲ್ಲಿ ಸುಮಾರು ಐದುಗಂಟೆ (265 ಕಿ.ಮೀ.) ಪ್ರಯಾಣಿಸಿದರೆ, ಆಂಧ್ರಪ್ರದೇಶದ ತಾಡಿಪತ್ರಿಯನ್ನು ತಲುಪುತ್ತೀರಿ. ಅಲ್ಲಿರುವ ಅತ್ಯಂತ ಮನೋಹರವಾದ ಮತ್ತು ಪ್ರಶಾಂತವಾದ ವೆಂಕಟೇಶ್ವರನ ದೇವಾಲಯವೇ ʼಚಿಂತಲ ವೆಂಕಟರಾಯಸ್ವಾಮಿʼ ಅಥವಾ ʼಚಿಂತಲ ವೆಂಕಟರಮಣಸ್ವಾಮಿʼ ದೇವಾಲಯ.

ತಾಳಿಕೋಟೆಯ ಯುದ್ಧದ ನಂತರ ವಿಜಯನಗರದ ರಾಜಧಾನಿಯಾಗಿದ್ದ ಹಂಪಿ ದಾಳಿಗೆ ಸಿಕ್ಕಿ ಹಾಳಾಯಿತು. ಆಗ, ವಿಜಯನಗರ ಸಾಮ್ರಾಜ್ಯದಲ್ಲಿ ನಾಯಕರಾಗಿದ್ದ ಪೆಮ್ಮಸಾನಿ ನಾಯಕರು ಆಂಧ್ರದ ಗಂಡಿಕೋಟೆಯನ್ನು ರಾಜಧಾನಿಯಾಗಿ ಮಾಡಿಕೊಂಡು ವಿಜಯನಗರ ಸಾಮ್ರಾಜ್ಯವನ್ನು ಮುಂದುವರಿಸಿದರು. ಪೆಮ್ಮಸಾನಿ ವಂಶಕ್ಕೆ ಸೇರಿದ ಎರಡನೇ ತಿಮ್ಮನಾಯಕನು (ಅಥವಾ ತಿಮ್ಮನಾಯುಡು) ಚಿಂತಲ ವೆಂಕಟರಾಯಸ್ವಾಮಿ ದೇವಾಲಯವನ್ನು ನಿರ್ಮಿಸಿದನು. ಇಲ್ಲಿನ ಸ್ಥಳ ಪುರಾಣ ಹೇಳುವಂತೆ, ಇಲ್ಲಿದ್ದ ಒಂದು ಹುಣಸೆ ಮರದಿಂದ ವಿಚಿತ್ರವಾದ ಧ್ವನಿಗಳು ಕೇಳುತ್ತಿದ್ದವಂತೆ. ಆ ಸಮಯದಲ್ಲಿ ಒಂದುರಾತ್ರಿ ತಿಮ್ಮನಾಯಕನ ಕನಸಿನಲ್ಲಿ ಬಂದ ವೆಂಕಟೇಶ್ವರಸ್ವಾಮಿಯು, ಹುಣಸೆ ಮರದಲ್ಲಿರುವ ತನಗೆ ಒಂದು ದೇವಾಲಯವನ್ನು ನಿರ್ಮಿಸುವಂತೆ ಆದೇಶಕೊಟ್ಟನಂತೆ. ಅದರ ಪ್ರಕಾರ ತಿಮ್ಮ ನಾಯಕನು ಹುಣಸೆ ಮರದಲ್ಲಿ ಮುಚ್ಚಿ ಹೋಗಿದ್ದ ವೆಂಕಟೇಶ್ವರ ಸ್ವಾಮಿಯನ್ನು ಹೊರತೆಗೆದು ತಾಡಿಪತ್ರಿಯ ಈ ಸುಂದರ ದೇವಾಲಯವನ್ನು ನಿರ್ಮಿಸಿ, ಆ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿದನಂತೆ. ತೆಲುಗಿನಲ್ಲಿ ಹುಣಸೆ ಮರಕ್ಕೆ ʼಚಿಂತಲ ಚೆಟ್ಟುʼ ಎಂದು ಹೇಳುವುದರಿಂದ, ಅದರಲ್ಲಿದ್ದ ದೇವರಿಗೂ ʼಚಿಂತಲ ವೆಂಕಟರಾಯʼ ಅಥವಾ ʼಚಿಂತಲ ವೆಂಕಟರಮಣʼ ಎಂದೇ ಹೆಸರಾಯಿತು.
ಪೆನ್ನಾರ್ ನದಿಯ ತೀರದಲ್ಲಿರುವ ಪುಟ್ಟ ಪಟ್ಟಣವೇ - ತಾಡಿಪತ್ರಿ. ಪೆನ್ನಾರ್ ನದಿ ಹುಟ್ಟುವುದು ಬೆಂಗಳೂರಿನ ಹತ್ತಿರದ ನಂದಿಬೆಟ್ಟದಲ್ಲಿ. ಕರ್ನಾಟಕದಲ್ಲಿ ಇದರ ಹೆಸರು ಉತ್ತರ ಪಿನಾಕಿನಿ. ದೇವಸ್ಥಾನ ಯಾರ ದಾಳಿಗೂ ಸಿಗದಿದ್ದರಿಂದ ತನ್ನ ಸೌಂದರ್ಯವನ್ನು ಇನ್ನೂ ಬಹುಮಟ್ಟಿಗೆ ಉಳಿಸಿಕೊಂಡಿದೆ.
ವಿಜಯನಗರ ಶೈಲಿಯ ಹಲವು ಕಂಬಗಳ ವಿಶಾಲ ಪ್ರಾಂಗಣ. ಮಧ್ಯದಲ್ಲಿ ಹಲವು ಸುಂದರ ಕಂಬಗಳಿಂದ ನಿರ್ಮಿಸಿರುವ ಮಂಟಪಗಳು. ದೇವಾಲಯದ ಹೊರ ಭಾಗದ ಗೋಡೆಯ ತುಂಬಾ ರಾಮಾಯಣ ಮತ್ತು ಭಾಗವತದ ಮುಖ್ಯ ಘಟನೆಗಳ ದೃಶ್ಯಗಳನ್ನು ಉಬ್ಬುಶಿಲ್ಪಗಳಲ್ಲಿ ಬಹಳ ಸುಂದರವಾಗಿ ಕೆತ್ತಲಾಗಿದೆ. ದಶರಥನ ಪುತ್ರಕಾಮೇಷ್ಟಿ ಯಾಗದಿಂದ ಪ್ರಾರಂಭಿಸಿ, ಸೀತೆಯ ಅಗ್ನಿಪ್ರವೇಶದವರೆಗಿನ ಎಲ್ಲಾ ಘಟನೆಗಳನ್ನು ಇಲ್ಲಿ ಕೆತ್ತಲಾಗಿದೆ. ದೇವಸ್ಥಾನದ ಪ್ರದಕ್ಷಿಣೆ ಬಂದರೆ, ರಾಮಾಯಣದ ಅಮರಚಿತ್ರಕಥಾ ಪುಸ್ತಕವನ್ನು ಮೂರು ಆಯಾಮದಲ್ಲಿ(ತ್ರೀ-ಡಿ) ನೋಡಿದ ಅನುಭವವಾಗುತ್ತದೆ! ಸೂಕ್ಷ್ಮ ಕೆತ್ತನೆಯ ಸೌಂದರ್ಯ ಸ್ವಲ್ಪವೂ ಮಾಸದೇ ಇರುವುದು ಇಲ್ಲಿನ ವಿಶೇಷ. ಮುಖ್ಯ ಮಂಟಪವನ್ನು ನಲ್ವತ್ತು ಬೃಹತ್ ಕಂಬಗಳ ಆಧಾರದಲ್ಲಿ ಕಟ್ಟಲಾಗಿದೆ. ಪ್ರತೀ ಕಂಬದಲ್ಲೂ ವಿಜಯನಗರ ದೇಗುಲಗಳ ಗುರುತಾದ ʼಯಾಳಿʼ ಎಂಬ ಪ್ರಾಣಿಯ ಸವಾರಿ ಮಾಡುತ್ತಿರುವ ಶೂರರ ಶಿಲ್ಪಗಳಿವೆ. ಕಂಬದ ಸುತ್ತಲೂ ಹಲವು ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ. ಸ್ವಾಗತ ಮಂಟಪದ ಹೊರಭಾಗದ ಕಂಬಗಳಲ್ಲಿ ಸುಂದರವಾದ ಹದಿನಾರು ಸ್ತ್ರೀ ವಿಗ್ರಹಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹಲವು ಮೂಲೆಗಳ ಸುಂದರವಾದ ಒಂದು ಮಂಟಪ - ಏಕಾಂತ ವಂಟಪ. ಶ್ರೀಚಕ್ರದ ಆಕಾರದಲ್ಲಿರುವ ಮಂಟಪದ ಸುತ್ತಲೂ ಆಕರ್ಷಕವಾದ ಅಲಂಕಾರಿಕ ವಿಗ್ರಹಗಳ ಕೆತ್ತನೆಯನ್ನು ಮಾಡಲಾಗಿದೆ.

ರಾಮಾಯಣವಲ್ಲದೆ, ಭಾಗವತದ ವಿಷ್ಣು ಅವತಾರಗಳ ದೃಶ್ಯಾವಳಿಗಳನ್ನು ಕೂಡಾ ಬಹುಸುಂದರವಾಗಿ ಮೂಡಿಸಿದ್ದಾರೆ. ಉಗ್ರನರಸಿಂಹನು ಹಿರಣ್ಯಕಶಿಪುವಿನ ಜೊತೆಯಲ್ಲಿ ಮಲ್ಲಯುದ್ಧ ಮಾಡುತ್ತಿರುವಂತೆ ಬಹಳ ಅಪರೂಪದ ಶಿಲ್ಪವನ್ನು ಇಲ್ಲಿ ನೋಡಬಹುದು. ದೇವಾಲಯದ ಮುಖ್ಯ ದೇವರಾದ ಶ್ರೀ ವೆಂಕಟೇಶ್ವರನ ವಿಗ್ರಹವಂತೂ ಅತ್ಯಂತ ಮನಮೋಹಕವಾಗಿದೆ. ಇದಲ್ಲದೆ, ದೇವಾಲಯದ ಪ್ರಾಂಗಣದೊಳಗೆ ಆನಂದವಲ್ಲಿ ದೇಗುಲ, ಹನುಮಂತನ ದೇಗುಲ, ಭೂವರಾಹಸ್ವಾಮಿ ದೇಗುಲ, ಆಳ್ವಾರ್ ದೇಗುಲ ಮುಂತಾದ ಇತರ ಚಿಕ್ಕ ಉಪದೇಗುಲಗಳು ಕೂಡಾ ಇಲ್ಲಿವೆ. ಇಲ್ಲಿನ ತುಳಸಿ ಕಟ್ಟೆಯ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು. ದೇವಾಲಯದ ಮಾಡಿನ ಮೇಲೆ, ಆಟವಾಡುತ್ತಿರುವ ಕೋತಿಗಳ ಶಿಲ್ಪವನ್ನು ಕೆತ್ತಲಾಗಿದೆ!
ಇಲ್ಲಿನ ಇನ್ನೊಂದು ವಿಶೇಷವೆಂದರೆ, ಮುಖ್ಯ ಗುಡಿಯ ಎದುರುಗಡೆ ನಿರ್ಮಿಸಿರುವ ʼಗರುಡ ಮಂಟಪʼ. ಹಂಪಿಯ ಕಲ್ಲಿನ ರಥದ ಪ್ರತಿ ರೂಪದಂತಿರುವ ಗರುಡ ಮಂಟಪವು ಅತ್ಯಾಕರ್ಷಕವಾಗಿದೆ. ಇದರ ಸುಂದರವಾದ ಗೋಪುರದ ಭಾಗ ಮತ್ತು ಚಕ್ರಗಳನ್ನು ನೋಡಿದರೆ, ಹಂಪಿಯ ರಥ ಹಿಂದೆ ಹೇಗಿದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಗರುಡಮಂಟಪದ ಪೂರ್ವ ಭಾಗದಲ್ಲಿ ಎರಡು ಸಣ್ಣ ಕಿಂಡಿಗಳನ್ನು ಅಳವಡಿಸಲಾಗಿದೆ. ಮಾಘ ಮಾಸದ ಏಕಾದಶಿ, ದ್ವಾದಶಿ ಮತ್ತು ತ್ರಯೋದಶಿಯ ದಿನಗಳಲ್ಲಿ, ಮುಂಜಾನೆಯ ಸೂರ್ಯಕಿರಣಗಳು ಈ ಕಿಂಡಿಗಳ ಮುಖಾಂತರ ಪ್ರವೇಶಿಸಿ ವೆಂಕಟೇಶ್ವರನ ಪಾದಗಳ ಮೇಲೆ ಬೀಳುತ್ತವೆ. ಆದ್ದರಿಂದ ಈ ಕ್ಷೇತ್ರಕ್ಕೆ ʼಭಾಸ್ಕರ ಕ್ಷೇತ್ರʼ ಎಂದು ಹೇಳಲಾಗುತ್ತದೆ.

ಹಬ್ಬ ಮತ್ತು ಜಾತ್ರೆಯ ದಿನಗಳನ್ನು ಬಿಟ್ಟರೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಬಹಳ ಕಡಿಮೆ. ಆದ್ದರಿಂದ, ದೇವಾಲಯವು ಪ್ರಶಾಂತವಾಗಿರುತ್ತದೆ. ಕಪ್ಪುಕಲ್ಲಿನಲ್ಲಿ ಕೆತ್ತಿರುವ ಮಂಟಪಗಳು ಸದಾಕಾಲವೂ ತಂಪಾಗಿರುತ್ತವೆ. ದೇವಾಲಯದ ಪ್ರಶಾಂತತೆ ಮತ್ತು ಶಿಲ್ಪಕಲೆಯ ಸೌಂದರ್ಯ ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ ಮತ್ತು ಶಾಂತವಾಗಿಸುತ್ತವೆ. ಮನಸ್ಸಿನ ಎಲ್ಲಾ ಚಿಂತೆಗಳು ಮರೆತು ಹೋಗುತ್ತವೆ. ಇದರಿಂದಲೂ, ʼಚಿಂತಲʼ ವೆಂಕಟರಮಣ ಎಂಬ ಹೆಸರು ಇದಕ್ಕೆ ಅತ್ಯಂತ ಸೂಕ್ತ ಎನಿಸುತ್ತದೆ. ಇಲ್ಲಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ, ಇದಕ್ಕಿಂತಲೂ ಪುರಾತನವಾದ ʼಬುಗ್ಗ ರಾಮಲಿಂಗೇಶ್ವರʼ ದೇವಸ್ಥಾನವಿದೆ. ಇದು ಕೂಡ ನೀವು ನೋಡಲೇಬೇಕಾದ ಸುಂದರ ದೇಗುಲ. ನಿಮ್ಮ ಚಿಂತೆಗಳನ್ನು ಮರೆತು ಹೊಸ ಉತ್ಸಾಹವನ್ನು ತುಂಬಿಕೊಳ್ಳಲು ಒಮ್ಮೆಯಾದರೂ ತಾಡಿಪತ್ರಿಯ ಈ ದೇವಾಲಯಗಳಿಗೆ ನೀವು ಹೋಗಿ ಬರಬೇಕು.