ಶಿವ-ಪಾರ್ವತಿ ವಿವಾಹಿತರಾದ ದೇಗುಲ: ಅಂದಿನಿಂದ ಇಂದಿನವರೆಗೂ ಆರಿಲ್ಲ ಇಲ್ಲಿನ ಅಗ್ನಿಕುಂಡ!
ಮೂರು ಗಂಟು ಹಾಕಿದ ನಂತರ ಶಿವ-ಪಾರ್ವತಿಯರಂತೆಯೇ ಜೀವನ ನಡೆಸಬೇಕು, ವಿವಾಹವಾಗುವುದಾದರೆ ಶಿವ-ಪಾರ್ವತಿಯರ ವಿವಾಹಿತರಾದ ಸ್ಥಳ ಉತ್ತರಾಖಂಡದ ತ್ರಿಯುಗಿನಾರಾಯಣ ದೇವಾಲಯದಲ್ಲೇ ಆಗಬೇಕೆಂದುಕೊಳ್ಳುವ ಅನೇಕ ಜೋಡಿ, ಇಲ್ಲಿಗೆ ಬಂದು ಹಸೆಮಣೆ ಏರುತ್ತಾರೆ.
ದೇಗುಲಗಳ ನೆಲೆ ಬೀಡು ಭಾರತ. ಇಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳಿವೆ. ಒಂದಕ್ಕಿಂತ ಒಂದು ವಿಶೇಷ ಅನುಭವಗಳನ್ನು ನೀಡುವ, ಪವಾಡಗಳು, ದಂತಕಥೆಗಳು, ಹಳೆಯ ಇತಿಹಾಸವನ್ನು ಸಾರುವ ಪವಿತ್ರ ದೇವಾಲಯಗಳು ಸಾಕಷ್ಟಿವೆ. ಅಂತಹ ಪವಿತ್ರ ದೇವಾಲಯಗಳ ಪೈಕಿ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿಯಲ್ಲಿನ 'ತ್ರಿಯುಗಿನಾರಾಯಣ' ಎಂಬ ಈ ದೇವಾಲಯವನ್ನು ನೆನಪಿಸಿಕೊಳ್ಳಲೇಬೇಕು. ವಿಷ್ಣುವಿಗೆ ಅರ್ಪಿಸಲಾದ ಈ ದೇವಾಲಯವು ಧಾರ್ಮಿಕ ಪ್ರವಾಸದಲ್ಲಿ ಆಸಕ್ತಿ ಹೊಂದಿದವರಿಗೆ ಸೂಕ್ತ ತಾಣ.

ಹೌದು, ಐತಿಹ್ಯದ ಪ್ರಕಾರ, ಅದು ಶಿವ ಮತ್ತು ಪಾರ್ವತಿ ಮೂರು ಯುಗಗಳ ಹಿಂದೆ ಮದುವೆಯಾದ ಪವಿತ್ರ ಸ್ಥಳವಂತೆ. ಅವರ ವಿವಾಹದ ವೇಳೆ ಅಲ್ಲಿನ ಅಗ್ನಿಕುಂಡದಲ್ಲಿ ಉರಿಸಿದ ಜ್ವಾಲೆ ಇಂದಿಗೂ ಹಾಗೆಯೇ ಇದ್ದು, ಇನ್ನೂ ಪ್ರಕಾಶಮಾನವಾಗಿ ಉರಿಯುತ್ತಿದೆಯಂತೆ. ಇದನ್ನು 'ಅಖಂಡ ಧುನಿ' ಅಥವಾ ಶಾಶ್ವತ ಬೆಂಕಿ ಎಂದು ಕರೆಯಲಾಗುತ್ತದೆ ಎಂಬುದು ಇಲ್ಲಿನ ಸ್ಥಳ ಪುರಾಣದಿಂದ ತಿಳಿಯುವ ಮಾಹಿತಿ.
ಹೀಗೊಂದು ದಂತಕಥೆ
ತ್ರಿಯುಗಿ ಅಂದರೆ ಮೂರು ಯುಗಗಳ ಹಿಂದೆ ನಾರಾಯಣ ಅಂದರೆ ವಿಷ್ಣು ದೇವರಿಗೆ ಸಮರ್ಪಿತವಾದ ಈ ದೇಗುಲದಲ್ಲಿ ಶಿವ ಮತ್ತು ಪಾರ್ವತಿ ವಿವಾಹವಾದ ರು. ವಿವಾಹಕ್ಕೆ ಶಿವನನ್ನು ಒಪ್ಪಿಸುವುದಕ್ಕಾಗಿ ಕಠಿಣ ವೃತ, ತಪಸ್ಸುಗಳನ್ನು ಪಾರ್ವತಿ ಕೈಗೊಂಡಿದ್ದು, ವರ್ಷಗಳ ತಪಸ್ಸಿನ ಫಲವಾಗಿ ಶಿವ ಈ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದನಂತೆ. ಈ ದೈವಿಕ ಸಮಾರಂಭವು ಶ್ರೇಷ್ಠ ಗುರುಗಳು, ದೇವಾನು ದೇವತೆಗಳು ಸೇರಿದಂತೆ ಎಲ್ಲರೂ ಭಾಗವಹಿಸಿದ್ದ ಸಮಾರಂಭವಾಗಿತ್ತು.

ತ್ರಿಯುಗಿನಾರಾಯಣ ದೇಗುಲಕ್ಕೆ ದಾರಿ ಹೇಗೆ ?
ತ್ರಿಯುಗಿನಾರಾಯಣ ದೇವಾಲಕ್ಕೆ ತೆರಳಬೇಕಾದರೆ, ಸೋನ್ಪ್ರಯಾಗ್ನಿಂದ 12 ಕಿ.ಮೀ ದೂರ ರಸ್ತೆ ಮಾರ್ಗವಾಗಿ ಪ್ರಯಾಣಿಸಬಹುದು. ಇಲ್ಲವಾದರೆ ಮುಸ್ಸೂರಿ ಮೂಲಕ ತೆಹ್ರಿ, ಮಾಲಾ (ರೋಡ್ ಪಾಯಿಂಟ್), ಬೇಲಾಕ್ ಮತ್ತು ಬುಡಕೇದರ್-ಘುಟ್ಟು-ಪನ್ವಾಲಿ ಕಾಂತಾ, ತ್ರಿಯುಗಿನಾರಾಯಣ ಮತ್ತು ಕೇದಾರನಾಥ್ ಮೂಲಕ ಹಾದುಹೋಗುತ್ತದೆ. ಈ ಹಾದಿಯನ್ನು 17 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಬಹುದು.